ಅಂದು ರಾಮನಗರದಲ್ಲಿ, ಈಗ ಶಿಗ್ಗಾಂವ್ ನಲ್ಲಿ 'ಅಧಿಕಾರ ಶಾಶ್ವತವಲ್ಲ' ಹೇಳಿಕೆ: ಮುಂದಾ?
ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾದ ಒಂದು ವಾರದ ಹಿಂದಿನ ಹೇಳಿಕೆಗೂ, ವಾರದ ನಂತರ ನಡೆದ ರಾಜಕೀಯ ವಿದ್ಯಮಾನಕ್ಕೂ ಅಜಗಜಾಂತರವಿತ್ತು. ಹಾಗಾಗಿ, 'ಸತ್ಯ' ಎನ್ನುವುದು ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಉಳಿದುಕೊಂಡಿದೆ ಎನ್ನುವುದು ಎದೆ ಮುಟ್ಟಿಕೊಂಡು ಹೇಳಲು ರಾಜಕೀಯದವರಿಗೆ ಕಷ್ಟವಾಗಬಹುದು.
ಪೂರ್ಣಾವಧಿಗೆ ನಾನೇ ಸಿಎಂ ಎಂದು ಯಡಿಯೂರಪ್ಪನವರು ಹೇಳಿದ್ದರು, ಅದೇ ಮಾತನ್ನು ಕೇಂದ್ರ ಸಂಸದೀಯ ವ್ಯವಹಾರ ಖಾತೆಯ ಸಚಿವ ಪ್ರಲ್ಹಾದ್ ಜೋಷಿ ಕೂಡಾ, ಬೊಮ್ಮಾಯಿಯವರೇ ಸಿಎಂ ಬದಲಾವಣೆ ಇಲ್ಲ ಎಂದು ಹೇಳುತ್ತಿದ್ದಾರೆ.
'ಜೆಡಿಎಸ್ ಜಟ್ಟಿಗಳನ್ನು ಸೃಷ್ಟಿಸುವ ಪಕ್ಷ. ಜಟ್ಟಿಗಳನ್ನು ಎಗರಿಸಿಕೊಂಡು ಹೋಗುವ ಬ್ರೋಕರ್ ಸಿದ್ದರಾಮಯ್ಯ'
ಹಾಗಾದರೆ, ಮುಖ್ಯಮಂತ್ರಿ ಬದಲಾವಣೆ ಎನ್ನುವ ವಿಚಾರ ಬೆಂಕಿಯಿಲ್ಲದೇ ಹೊಗೆಯಾಡುತ್ತಾ ಎನ್ನುವುದಕ್ಕೆ ಕಾಲವೇ ಉತ್ತರಿಸುತ್ತದೆ ಎನ್ನುವುದು ಬಹಳ ದೂರದ ಮಾತು. ಕಾಲ ಒಂದೆರಡು ತಿಂಗಳಲ್ಲೇ ಉತ್ತರಿಸಲಿದೆ ಎನ್ನುವುದು ಬಲವಾಗಿ ಕೇಳಿ ಬರುತ್ತಿರುವ ಮಾತು.
ಕಳೆದ ಏಳೆಂಟು ವರ್ಷದ ರಾಜಕೀಯವನ್ನು ನೋಡುವುದಾದರೆ, ವಿರೋಧ ಪಕ್ಷಗಳು ಚಾಪೆ ಕೆಳಗೆ ನುಗ್ಗಿದರೆ, ಬಿಜೆಪಿಯವರು ರಂಗೋಲಿಯೊಳಗೆ ನುಗ್ಗುತ್ತಿದ್ದಾರೆ. ರಾಜಕೀಯ ಚಾಣಾಕ್ಷತನ, ತಂತ್ರಗಾರಿಕೆ, ಹೈಕಮಾಂಡ್ ಪವರ್ ಏನು ಅನ್ನುವುದನ್ನು ಬಿಜೆಪಿ ಅಕ್ಷರಸಃ ಕಾಂಗ್ರೆಸ್ಸಿನಿಂದ ಹೈಜಾಕ್ ಮಾಡಿಕೊಂಡಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಅಂತದ್ದೇ ಚುನಾವಣೆ ಗೆಲ್ಲುವ ತಂತ್ರಗಾರಿಕೆ ಬಿಜೆಪಿ ವರಿಷ್ಠರು ಹಣೆದಿದ್ದಾರೆ ಎನ್ನುವುದು ದೆಹಲಿ ವಲಯದಿಂದಲೇ ಕೇಳಿ ಬರುತ್ತಿರುವ ಮಾತು. ರಾಮನಗರದಲ್ಲಿ ಅಂದು, ಅಂದಿನ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಎರಡ್ಮೂರು ದಿನಗಳ ಕೆಳಗೆ ಶಿಗ್ಗಾಂವ್ ನಲ್ಲಿ ಬಸವರಾಜ ಬೊಮ್ಮಾಯಿಯವರ ಮಾತಿನಲ್ಲೂ ಅದೇ ನೋವು ಕಾಡುತ್ತಿತ್ತೇ?
ಕುಮಾರಸ್ವಾಮಿ ಸರಕಾರ ಪತನಗೊಳ್ಳುವುದು ಬಹುತೇಕ ಖಚಿತವಾಗಿತ್ತು
"ಪ್ರತಿ ದಿನವೂ ನಾನು ನೋವಿನಲ್ಲಿಯೇ ಕಳೆಯುತ್ತಿದ್ದೇನೆ. ನಾನೆಷ್ಟು ನೋವು ಅನುಭವಿಸಿಕೊಂಡು ಸರ್ಕಾರ ನಡೆಸುತ್ತಿದ್ದೇನೆ ಎಂದು ಹೇಳಲಾರೆ. ನಿಮ್ಮೊಂದಿಗೆ ನನ್ನ ನೋವು ಹಂಚಿಕೊಳ್ಳಬೇಕೆಂಬ ಆಸೆ ಇದ್ದರೂ ಸಹ ನಾನು ಹೇಳುವ ಪರಿಸ್ಥಿತಿಯಲ್ಲಿ ಇಲ್ಲ. 12 ವರ್ಷದ ಹಿಂದೆ ಇದ್ದಂತಹಾ ಶಕ್ತಿ ಈಗ ಇಲ್ಲ, ಆದರೆ ಉತ್ಸಾಹ ಇದೆ. ಆರೋಗ್ಯದ ಸಮಸ್ಯೆ ಇದ್ದರೂ ಬದಿಗೊತ್ತಿ ಜನರ ಸೇವೆ ಮಾಡುತ್ತಿದ್ದೇನೆ. ನಾನು ಏನೇ ಆಗಿರಲಿ, ಈ ಮಣ್ಣಿನ ಮಗ, ಮುಖ್ಯಮಂತ್ರಿ ಅಲ್ಲದೇ ಇದ್ದರೂ ನಿಮ್ಮ ಮಗನ ಮೇಲೆ ನಿಮ್ಮ ಆಶೀರ್ವಾದವಿರಲಿ" ಎಂದು ರಾಮನಗರದಲ್ಲಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಇದು ಅವರು ರಾಜೀನಾಮೆ ನೀಡಿದ್ದ (ಜುಲೈ 23, 2019) ಕೆಲವು ದಿನಗಳ ಹಿಂದೆ ಅಲ್ಲಿ ಆಡಿದ್ದ ಮಾತು. ಆ ವೇಳೆಗೆ ಕುಮಾರಸ್ವಾಮಿ ಸರಕಾರ ಪತನಗೊಳ್ಳುವುದು ಬಹುತೇಕ ಖಚಿತವಾಗಿತ್ತು.
ವೇದಿಕೆಯಲ್ಲಿ ಬೊಮ್ಮಾಯಿ ಅಕ್ಷರಶಃ ಕಣ್ಣೀರು ಹಾಕಿದ್ದರು
ಇದೇ ರೀತಿಯ ನೋವಿನ ಮಾತನ್ನು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಲವು ದಿನಗಳ ಹಿಂದೆ ಶಿಗ್ಗಾಂವ್ ನಲ್ಲಿ ಆಡಿದ್ದರು. "ನಿಮ್ಮೆಲ್ಲರ ಆಶೀರ್ವಾದದಿಂದ ಈ ರಾಜ್ಯದ ಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಬಸವರಾಜ ಬೊಮ್ಮಾಯಿ ಅನ್ನೋದು ಶಾಶ್ವತವೇ ಹೊರತು, ಅದರ ಹಿಂದಿರೋ ಪದನಾಮಗಳು ಶಾಶ್ವತವಲ್ಲ. ಈ ಬದುಕು ಶಾಶ್ವತವಲ್ಲ. ನಾವು ಎಷ್ಟು ದಿನ ಇರುತ್ತೇವೆ ಎಂದು ಗೊತ್ತಿಲ್ಲ, ಸ್ಥಾನಮಾನಗಳು ಶಾಶ್ವತವಲ್ಲ" ಎಂದು ಹೇಳಿದ್ದರು. ಆ ವೇಳೆ ವೇದಿಕೆಯಲ್ಲಿ ಬೊಮ್ಮಾಯಿ ಅಕ್ಷರಸಃ ಕಣ್ಣೀರು ಹಾಕಿದ್ದರು.
ಬೊಮ್ಮಾಯಿಯವರ ತಾಯಿ ಹೃದಯವನ್ನು ತೋರಿಸುತ್ತದೆ
ಬೊಮ್ಮಾಯಿಯವರ ನೋವಿನ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ಕುಮಾರಸ್ವಾಮಿ, "ಬೊಮ್ಮಾಯಿಯವರ ಕಣ್ಣಲ್ಲಿ ನೀರು ಬಂದಿರುವುದು ಅವರ ಹೃದಯ ವೈಶ್ಯಾಲ್ಯತೆ, ತಾಯಿ ಹೃದಯವನ್ನು ತೋರಿಸುತ್ತದೆ. ನಾನು ಕೂಡಾ ನನ್ನ ಕರ್ಮಭೂಮಿಯಲ್ಲಿ ಭಾವೋದ್ವೇಗಕ್ಕೆ ಒಳಗಾಗಿ ಮಾತನಾಡಿದ್ದೇನೆ. ಆಗ ಕುಮಾರಸ್ವಾಮಿಯವರು ಗ್ಲಿಸರಿನ್ ಹಾಕಿ ಮಾತನಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ಕಾರಣ ನಮ್ಮ ಕರ್ಮಭೂಮಿಯ ಜನತೆ ನಮ್ಮನ್ನು ಮನೆಮಕ್ಕಳಿಗಿಂತ ಹೆಚ್ಚು ಕಾಣುತ್ತಾರೆ"ಎಂದು ಬೊಮ್ಮಾಯಿ ಪರವಾಗಿ ಕುಮಾರಸ್ವಾಮಿ ನಿಂತಿದ್ದಾರೆ.
ಬೊಮ್ಮಾಯಿಯವರ ಮಾತಿನಲ್ಲಿ ಸ್ಪಷ್ಟ ರಾಜಕೀಯ ಪಲ್ಲಟದ ಮುನ್ಸೂಚನೆ
ಜನತಾ ಪರಿವಾರದಿಂದಲೇ ರಾಜಕೀಯದಲ್ಲೇ ಉತ್ತುಂಗಕ್ಕೆ ಏರಿರುವ ಬೊಮ್ಮಾಯಿಯವರ ಮಾತಿನಲ್ಲಿ ಸ್ಪಷ್ಟ ರಾಜಕೀಯ ಪಲ್ಲಟದ ಮುನ್ಸೂಚನೆಯಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಪ್ರಲ್ಹಾದ್ ಜೋಶಿಯವರ ಹೇಳಿಕೆ ಏನೇ ಇದ್ದರೂ, ಅದು ಒಂದೆರಡು ತಿಂಗಳ ಮಟ್ಟಿನ ತೇಪೆ ಹಚ್ಚುವ ಕೆಲಸ ಮಾತ್ರ. ತಮ್ಮಮ್ಮ ಸ್ವಕ್ಷೇತ್ರದಲ್ಲಿ ಅಂದು ಕುಮಾರಸ್ವಾಮಿ ಆಡಿದ್ದು ಇಂದು ಬಸವರಾಜ ಬೊಮ್ಮಾಯಿಯವರು ಆಡಿದ್ದು ರಾಜಕೀಯದ ಚದುರಂಗದಾಟದಲ್ಲಿ ಎಲ್ಲರೂ ಚೆಕ್ ಮೇಟ್ ಎನ್ನುವುದು ಸಾರುವಂತಿದೆ.
Recommended Video