ಭಿಕ್ಷಾಟನೆಯಿಂದ ಡುಂಗ್ರಿ ಗರಾಸಿ ಸಮುದಾಯಕ್ಕೆ ಮುಕ್ತಿ ಯಾವಾಗ?
ಮಂಡ್ಯ, ನವೆಂಬರ್ 23: ವಾಸಿಸಲು ಇರುವುದು ಹರಕು ಮುರುಕು ಗುಡಿಸಲು... ತಾತ್ಕಾಲಿಕ ಶೆಡ್ ಗಳೇ ಸ್ನಾನದ ಮನೆ... ಚಿಂದಿ ಆಯುವುದು, ಭಿಕ್ಷಾಟನೆಯೇ ವೃತ್ತಿ. ಇದು ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅನುವಿನಕಟ್ಟೆ ಗ್ರಾಮದಲ್ಲಿರುವ ಡುಂಗ್ರಿ ಗರಾಸಿಯ ಸಮುದಾಯದ ವ್ಯಥೆಯ ಕಥೆ.
ಒಂದಷ್ಟು ಮಟ್ಟಿಗೆ ಎಲ್ಲ ಸಮುದಾಯಗಳ ಜನರ ಬದುಕು ಬದಲಾಗಿದೆ. ಆದರೆ ಅದ್ಯಾಕೋ ಗೊತ್ತಿಲ್ಲ ಡುಂಗ್ರಿ ಸಮುದಾಯದ ಜನ ಮಾತ್ರ ಅಭಿವೃದ್ಧಿಯಾಗಿಲ್ಲ. ಇವತ್ತಿಗೂ ಚಿಂದಿ ಆಯ್ದುಕೊಂಡು, ಭಿಕ್ಷಾಟನೆ, ಛತ್ರಿ, ಬಕೆಟ್ ರಿಪೇರಿ ಮಾಡಿಕೊಂಡು ಕಡುಬಡತನದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಇವರು ವಾಸಿಸುವ ಗ್ರಾಮಕ್ಕೆ ಭೇಟಿ ನೀಡಿದರೆ ಇವರ ಸ್ಥಿತಿ ಮರುಕ ಹುಟ್ಟಿಸುತ್ತದೆ. ಒಂದು ಚಿಕ್ಕ ಗುಡಿಸಲಲ್ಲಿ ಇಪ್ಪತ್ತರಿಂದ ಮೂವತ್ತು ಜನ ವಾಸಿಸುತ್ತಾರೆ. ಬೇಸಿಗೆಯಲ್ಲಿ ಬೀದಿಯಲ್ಲಿ ಮಲಗುತ್ತಾರೆ. ತಾತ್ಕಾಲಿಕ ಶೆಡ್ ಗಳೇ ಇವರ ಸ್ನಾನದ ಮನೆ, ಕಡ್ಡಿಪುಳ್ಳೆಗಳೇ ಅಡುಗೆಗೆ ಸಾಧನವಾಗಿದ್ದು, ಇವರ ಕಷ್ಟ ಕಾರ್ಪಣ್ಯದ ಬದುಕಿನ ಚಿತ್ರಣ ಕಣ್ಣಿಗೆ ರಾಚುತ್ತದೆ. ಮುಂದೆ ಓದಿ...
ಭಿಕ್ಷುಕನ ಬಳಿ ಲಕ್ಷಾಂತರ ಹಣ, ನಾಣ್ಯ ಎಣಿಸಲು ಬೇಕಾಯ್ತು ಎಂಟು ಗಂಟೆ!
ಪುಟ್ಟ ಮನೆಯಲ್ಲಿ ನಾಲ್ಕು ಕುಟುಂಬದ ವಾಸ
ಒಂದೇ ಮನೆಯಲ್ಲಿ ಮೂರರಿಂದ ನಾಲ್ಕು ಕುಟುಂಬಗಳು ಮತ್ತು ಹದಿನೈದರಿಂದ ಇಪ್ಪತ್ತು ಜನ ವಾಸಿಸುತ್ತಿದ್ದು, ಹೆಚ್ಚಿನವರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇವರು ಪಂಚರಂಗಿ ಭಾಷೆಯನ್ನು ಮಾತನಾಡುತ್ತಿದ್ದು, ಸಮುದಾಯ ಅವಸಾನದಂಚಿಗೆ ತಲುಪುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗೆನೋಡಿದರೆ ನಮ್ಮ ರಾಜ್ಯದಲ್ಲಿ ಡುಂಗ್ರಿ ಸಮುದಾಯ ಕೇವಲ 6204 ಜನಸಂಖ್ಯೆಯನ್ನು ಹೊಂದಿದ್ದು, ಹುಣಸೂರು, ಪಿರಿಯಾಪಟ್ಟಣ, ಕುಶಾಲನಗರ ಮುಂತಾದ ಕಡೆಗಳಲ್ಲಿ ಇವರ ಸಂಬಂಧಿಕರಿಗೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡಲಾಗಿದೆ. ಆದರೆ ಅನುವಿನಕಟ್ಟೆಯಲ್ಲಿ ವಾಸಿಸುವ ಮಂದಿಗೆ ಜಾತಿ ದೃಢೀಕರಣ ಪತ್ರ ನೀಡಿಲ್ಲ ಎನ್ನಲಾಗುತ್ತಿದ್ದು, ಇದರಿಂದ ಸರ್ಕಾರದ ವಿವಿಧ ಯೋಜನೆಗಳು ಅವರಿಗೆ ತಲುಪುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಇವರಲ್ಲಿ ಬಾಲ್ಯ ವಿವಾಹ ಇನ್ನೂ ಜೀವಂತ
ಇಷ್ಟೇ ಅಲ್ಲದೆ, ಅನುವಿನಕಟ್ಟೆ ಗ್ರಾಮದಲ್ಲಿ ಐದು ಬಾಡಿಗೆ ಮನೆಗಳಲ್ಲಿ 24 ಕುಟುಂಬಗಳು ವಾಸಿಸುತ್ತಿದ್ದು, ಸುಮಾರು 110 ಜನರ ಪೈಕಿ ಯಾರೊಬ್ಬರೂ ಉತ್ತಮ ವಿದ್ಯಾಭ್ಯಾಸ ಮಾಡಿಲ್ಲ. ಬಹುತೇಕ ಮಂದಿ ಶಾಲೆಯ ಮುಖವನ್ನೇ ನೋಡಿಲ್ಲ, ಬ್ಯಾಂಕ್ ಖಾತೆಯನ್ನು ಹೊಂದಿಲ್ಲ. ಇವರಲ್ಲಿ ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿರುವುದು ವಿಷಾದದ ಸಂಗತಿಯಾಗಿದೆ.
ಲಾಕ್ ಡೌನ್: ದೇವಸ್ಥಾನದಲ್ಲಿ ಭಿಕ್ಷೆ ಬೇಡುತ್ತಿದ್ದ ಅಜ್ಜಿ ಬೀದಿಗೆ
ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರಕ್ಕೆ ವಿನಂತಿ
ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತಿನ ರಾಜ್ಯಾಧ್ಯಕ್ಷ ಎಂ.ಕೃಷ್ಣಯ್ಯ ಅವರು ಅನುವಿನಕಟ್ಟೆ ಗ್ರಾಮಕ್ಕೆ 2019 ಜನವರಿ 18ರಲ್ಲಿ ಭೇಟಿ ನೀಡಿ ಈ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಜಾತಿ ಪ್ರಮಾಣ ಪತ್ರ ನೀಡಲು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಹೀಗಾಗಿ ಕೂಡಲೇ ಕಾರ್ಯಪ್ರವೃತ್ತರಾದ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮನುಕುಮಾರ್ ಅವರು 2019 ಫೆಬ್ರವರಿ 4ರಂದು ಸ್ಥಳ ಪರಿಶೀಲನೆ ನಡೆಸಿ ಅವರ ಇರುವಿಕೆ, ಅವರ ಆಚಾರ ವಿಚಾರಗಳ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಕನಿಷ್ಠ ಸೌಲಭ್ಯಗಳು ಇಲ್ಲದಿರುವ ಇವರನ್ನು ಗುರುತಿಸಿ ಎಲ್ಲರಂತೆ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಉದ್ದೇಶದಿಂದ 2019 ಮಾರ್ಚ್ 22ರಲ್ಲಿ ತಹಸೀಲ್ದಾರ್ ಅವರಿಗೆ ಪತ್ರ ಬರೆದು ಡುಂಗ್ರಿ ಗರಾಸಿಯ ಸಮುದಾಯಕ್ಕೆ ಜಾತಿ ಪ್ರಮಾಣಪತ್ರ ನೀಡಲು ವಿನಂತಿಸಿದ್ದರು.
ಸಮುದಾಯದ ಅಸಮಾಧಾನ
ಆದರೆ ಇದೆಲ್ಲ ಪ್ರಕ್ರಿಯೆಗಳು ನಡೆದು ಒಂದೂವರೆ ವರ್ಷಗಳು ಕಳೆದರೂ ಈ ಸಮುದಾಯದ ಜನರಿಗೆ ಜಾತಿ ಪ್ರಮಾಣಪತ್ರ ಸಿಕ್ಕಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಸಮುದಾಯದ ರಾಜಮ್ಮ, ಸರೋಜ, ವಸಂತ, ಕುಮಾರ, ರತನ್, ಯುವರಾಜ ಮೊದಲಾದವರು ಕೂಡಲೇ ಜಾತಿ ಪ್ರಮಾಣಪತ್ರ ನೀಡಬೇಕೆಂದು ಆಗ್ರಹಿಸಿದ್ದಾರೆ.