ವಿಡಿಯೋ: ಅಕಟಕಟಾ... ಕುಡುಕರ ಅಳಲು ಕೇಳುವರಾರು?
ಸ್ವಾತಂತ್ರ್ಯ ಬಂದಂದಿನಿಂದಲೂ ಎಷ್ಟೋ ಸರ್ಕಾರಗಳು ಬದಲಾಗಿವೆ, ಹಲವು ನಾಯಕರು ಖುರ್ಚಿ ಏರಿದ್ದಾರೆ, ಇಳಿದಿದ್ದಾರೆ ಆದರೆ ಸಮಾಜದ ಒಂದು ವರ್ಗದ ಬಗ್ಗೆ ಮಾತ್ರ ಎಲ್ಲ ಪಕ್ಷಗಳು, ನಾಯಕರು ನಿರ್ಲಕ್ಷ್ಯವನ್ನೇ ತೋರಿವೆ. ಅದೇ ಗೌರವಾನ್ವಿತ ಕುಡುಕ ವರ್ಗ.
ಮಳೆ ಇರಲಿ, ಬಿಸಿಲಿರಲಿ, ಹಗಲಿರಲಿ, ಇರುಳಿರಲಿ, ಖುಷಿಯೋ, ದುಃಖಯೋ, ಋತುಬೇದ ಮಾಡದೆ, ವರ್ಣಭೇದ ಮಾಡದೆ, ಒಮ್ಮೊಮ್ಮೆ ಗುಣಮಟ್ಟ ಭೇದವನ್ನೂ ಮಾಡದೇ ಸಮಾನತೆಯ ಸಂದೇಶ ಸಾರುತ್ತಾ ಸತತವಾಗಿ ಕುಡಿಯುತ್ತಲೇ ಇರುವ, ಆ ಮೂಲಕ ದೇಶೋದ್ಧಾರಕ್ಕೆ ಸತತವಾಗಿ ಕಾಣ್ಕೆಯನ್ನು ಕೊಡುತ್ತಲೇ ಬರುತ್ತಿರುವ ಕುಡುಕರೆಡೆಗೆ ಸರ್ಕಾರಗಳಿಗೆ ಏಕೀ ದಿವ್ಯ ನಿರ್ಲಕ್ಷ?.
ಅಂದು ಇದು ಕುಡುಕರ ಹಳ್ಳಿ, ಇಂದು ರಾಷ್ಟ್ರೀಯ ಪ್ರಶಸ್ತಿ
ಇಲ್ಲ, ಇನ್ನು ನಾವು ಸಹಿಸಲಾರೆವು ನಮಗೊಬ್ಬ ನಾಯಕ ಬೇಕಾಗಿದ್ದಾನೆ. ಎಷ್ಟೆ ಕುಡಿದರೂ ಮಾತು ತೊದಲದ, ಕುಡಿದ ಮತ್ತಿನಲ್ಲಿಯೂ ಕೈಕೊಟ್ಟ ಗೆಳತಿಯ ಬಗ್ಗೆಯೋ, ಕಾಡುವ ಹೆಂಡತಿಯ ಬಗ್ಗೆಯೋ ಯೋಚಿಸದೆ ಕುಡುಕರ ಕಲ್ಯಾಣದ ಬಗ್ಗೆ ಮಾತ್ರವೇ ಚಿಂತಿಸುವ ಅಪ್ರತಿಮ ಕುಡುಕನೊಬ್ಬನನ್ನು ನಾವು ಆಯ್ಕೆ ಮಾಡಿಕೊಳ್ಳಲೇಬೇಕಿದೆ. ಅಸಂಘಟಿತ ಕುಡುಕರನ್ನು ಒಂದೇ ಸೂ(ಬಾ)ರಿನಡಿ ಒಂದುಗೂಡಿಸಬಲ್ಲ ಕುಡುಕ ನಾಯಕನೊಬ್ಬನ ತುರ್ತು ಅವಶ್ಯಕತೆ ನಮಗೀಗಿದೆ.
ಹುಬ್ಬಳ್ಳಿಯ ಕುಡುಕನೊಬ್ಬ ಕುಡುಕ ವರ್ಗಕ್ಕೆ ನಾಯಕನಾಗುವ ಎಲ್ಲ ಅರ್ಹತೆಗಳನ್ನೂ ತೋರಿದ್ದಾನೆ. ಕುಡುಕರ ತಂಡದ ನಾಯಕತ್ವ ಹೊರಲು ಬೇಕಾದ ಪ್ರಥಮ ಅರ್ಹತೆಯಾದ ಹಗಲು ಕುಡುಕುತನ ಆತನಲ್ಲಿದೆ. ಕುಡಿದ ಮತ್ತಿನಲ್ಲೂ ಕುಡುಕರ ಬಗ್ಗೆಯೇ ಯೋಚಿಸುವ ನಶೆ ತುಂಬಿದ ವಿಶಾಲ ಮನಸ್ಸಾತನದು.
ಯಾರೋ ಅ-ಕುಡುಕರು ನಮ್ಮ ಭಾವಿ ನಾಯಕನ ಕುಡುಕರಾಭಿವೃದ್ಧಿ ಭಾಷಣವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಮದಿರೆಯ ಸ್ವಾದ ಅದರ ಮತ್ತಿನ ಆಧ್ಯಾತ್ಮಿಕತೆ ಅರಿಯದ ಅವರು ವ್ಯಂಗ್ಯಕ್ಕೆಂದು ವಿಡಿಯೋ ಮಾಡಿದ್ದಾರಾದರೂ ಅವರ ಈ ಹುಡುಕುತನದಿಂದ ನಮಗೆ ನಮ್ಮ ನಾಯಕ ದೊರೆತಿದ್ದಾನೆ. ಸುತ್ತಲಿರುವವರು ನಗುತ್ತಲಿದ್ದರು ಅಲಕ್ಷಿಸಿ ತಮ್ಮ ಕಾಯಕದೆಡೆಗೇ ತಮ್ಮ ಅಮಲು ದೃಷ್ಟಿ ನೆಟ್ಟು ಭಾಷಣ ಮಾಡಿದ ನಮ್ಮ ನಾಯಕನನ್ನು ನಾವು ಮತ್ತು ಬಿಯರು ತುಂಬಿದ ಎದೆಯಿಂದ ಗೌರವಿಸುತ್ತೇವೆ.
ನಮ್ಮ ಕುಡುಕ ನಾಯಕ ತನ್ನ ಭಾಷಣದಲ್ಲಿ ಕುಡುಕ ಸಮಾಜದ ಒಳಿತಿಗೆ ತಾನು ತೆಗೆದುಕೊಳ್ಳುವ ದಿಟ್ಟ ನಿರ್ಧಾರಗಳನ್ನು ಅಸ್ಪಷ್ಟವಾಗಿ (ಎಣ್ಣೆಯ ಎಫೆಕ್ಟ್) ಮಂಡಿಸಿದ್ದಾರೆ. ಅವರ ಮೊದಲ ಪ್ರಾಶಸ್ತ್ಯವೇ ಕುಡುಕರ ಕಲ್ಯಾಣ. ಕುಡಿಯುವಂತಹಾ ಪರಮ ಪುಣ್ಯದ ಕಾರ್ಯ ಮಾಡುವ ಕುಡುಕರ ಮನೆಗೆಲ್ಲಾ 10000 ಮಾಶಾಸನ ನೀಡುತ್ತಾರಂತೆ. ಬೇಡವೇ ಮತ್ತೆ, ಕುಡಿತಕ್ಕೆ ತಮ್ಮ ಸಕಲವನ್ನೂ ಅರ್ಪಿಸುವ ಕುಡುಕರಿಗೆ ಮಾಶಾಸನದ ಅವಶ್ಯಕತೆ ಎಲ್ಲರಿಗಿಂತಲೂ ಹೆಚ್ಚಿದೆ.
ಪ್ರತಿ ಹಳ್ಳಿಗಳಿಗೂ 3 ಬಾರುಗಳನ್ನು ಕರುಣಿಸುತ್ತಾರಂತೆ ನಮ್ಮ ಕುಡುಕ ನಾಯಕ. ಇದಲ್ಲವೋ ಯೋಜನೆ ಎಂದರೆ. ಮನೆಯಲ್ಲೇ ಮಾಡಿ ಕುಡಿಯಬಹುದಾದ ಚಹಾಕ್ಕೆ ಅಂಗಡಿಯೇಕೆ ಬೇಕು. ಹಾಗಾಗಿಯೇ ನಮ್ಮ ನಾಯಕರು ಈ ದಿಟ್ಟ ನಿರ್ಧಾರ ತಳೆದಿದ್ದಾರೆ. ಮದ್ಯದ ಮತ್ತಿನಲ್ಲಿನ ಆಧ್ಯಾತ್ಮ, ಅದು ನೀಡುವ ಯೋಗ ಸ್ಥಿತಿಯ ಅನುಭವಿರುವುದರಿಂದಲೇ, ದೇವಸ್ಥಾನಗಳು ತೆರೆಯುವುದಕ್ಕಿಂತಲೂ ಮೆಂಚೆಯೇ ಬಾರುಗಳು ತೆರೆದಿರಲಿ ಎಂಬ ನಿಯಮವನ್ನೂ ಹೊರಡಿಸುತ್ತಾರಂತೆ ನಮ್ಮ ನಾಯಕ.
ಕುಡುಕರು ನಿಯಮ ಮುರಿಯುತ್ತಾರೆ ನಿಜ ಆದರೆ ಕುಡಿಯದವರು ನಿಯಮಗಳನ್ನು ಮುರಿಯುವುದು ಅವರಿಗೆ ಅಪಥ್ಯ, ತಮ್ಮ ಗುಂಡು ನಿಯಮಗಳ ಸರಿಯಾದ ಜಾರಿಗೆಂದು ಪ್ರತಿ ಹಳ್ಳಿಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ನೇಮಿಸುವ ಇರಾದೆ ಸಹ ನಮ್ಮ ನಾಯಕರಿಗಿದೆ.
ಇಷ್ಟಕ್ಕೆ ಮುಗಿದಿಲ್ಲ, ಕುಡುಕರ ಸಮುದಾಯವನ್ನು ದೊಡ್ಡದು ಮಾಡುವ ದೂರಾಲೋಚನೆಯೂ ನಮ್ಮ ನಾಯಕರ ನಶೆ ಹೊತ್ತ ತಲೆಯಲ್ಲಿದೆ. ಹಾಗಾಗಿಯೇ ಅವರು ಯಾರು ಕುಡಿಯುವುದಿಲ್ಲವೋ ಅವರಿಗೆ 30000 ರೂಪಾಯಿ ದಂಡ ಹಾಕುವ ಯೋಚನೆ ಮಾಡಿದ್ದಾರೆ. ಕುಡಿಯದವರು ಕಟ್ಟಿದ ದಂಡ ಕುಡುಕರ ಕಲ್ಯಾಣಕ್ಕೆ ಮೀಸಲು, ದಂಡ ಕಟ್ಟಲು ಇಷ್ಟವಿಲ್ಲದವರು ಕುಡುಕರ ಕುಟುಂಬ ಸೇರಿಕೊಂಡು ದೇಶಸೇವೆಯಲ್ಲಿ ತೊಡಗಬಹುದು ಅಬ್ಬಾ.. ಎಂಥಹಾ ಐಡಿಯಾ.
ನಮ್ಮ ಕುಡುಕ ಸಮಾಜ ಮಾಡಬೇಕಿರುವುದು ಇಷ್ಟೆ, ಮತ್ತೊಂದು ಮದ್ಯ ತುಂಬಿದ ಗ್ಲಾಸಿಗೆ ಕೈಚಾಚುವ ಮುನ್ನಾ ಒಮ್ಮೆ ಮತ್ತು ತುಂಬಿದ ನಮ್ಮ ಮೆದುಳಿಗೆ ಕೆಲಸ ಕೊಡೋಣ. ಸತತವಾಗಿ ಅಬಕಾರಿ ಸುಂಕಗಳು ಏರುತ್ತಲೇ ಇವೆ, ಕುಡುಕರ ಮೇಲೆ ಅಧಿಕಾರಶಾಹಿಗಳ ದರ್ಪ ಹೆಚ್ಚುತ್ತಲೇ ಇದೆ, ರಸ್ತೆಯಲ್ಲಿ ಕುಡಿದು ತೂರುವ ಹಾಗಿಲ್ಲ ತೆರಿಗೆದಾರರೆಂಬ ಕನಿಷ್ಟ ಗೌರವೂ ಇಲ್ಲದೆ ಪೊಲೀಸರು ಲಾಠಿ ಬೀಸುತ್ತಿದ್ದಾರೆ, ಕ್ಯಾನ್ಸರ್ ಮತ್ತಿತರೆ ಖಾಯಿಲೆಗಳಿಂದ ನಮ್ಮ ಸಹೋದರರ ಸಂಖ್ಯೆ ಕಡಿಮೆ ಆಗುತ್ತಲೇ ಇದೆ. ಹೀಗೆ ಸಾಗಿದರೆ ನಾವು ಮುಂದೊಂದು ದಿನ ಶೋಕೇಸಿನಲ್ಲಿ ಕೂತ ಖಾಲಿ ಬಾಟಲಿಯಂತೆ ಪಳೆಯುಳಿಕೆಗಳಾಗಬೇಕಾಗುತ್ತದೆ. ಕುಡಿತಕ್ಕೆ ಕೂತ ಗುಂಡು ಪ್ರೇಮಿಗಳೆ ಏಳಿ, ನಿಧಾನಕ್ಕೆ ಏಳಿ, ಗೋಡೆ ಹಿಡಿದುಕೊಂಡು ಏಳಿ, ನಮಗೆ ಸಿಕ್ಕ ಈ ನಾಯಕನನ್ನು ನಾವು ಅಧಿಕಾರಕ್ಕೆ ತರೋಣ, ಕುಡುಕ ಸಂತತಿಯನ್ನು ಉಳಿಸಿಕೊಳ್ಳೋಣ.
(ಎಲ್ಲಾ ತಮಾಷೆಗಾಗಿ)