ಈ ಸಂದರ್ಭ: ನೊಬೆಲ್ ವಿಜೇತ ಬಹುಮುಖ ಪ್ರತಿಭೆ ಗುಂಥರ್ ಗ್ರಾಸ್
ವಿವಿಧ ಕ್ಷೇತ್ರಗಳಲ್ಲಿ ಬಹು ಅಮೂಲ್ಯ ಕೊಡುಗೆ ನೀಡಿದ ಸಾಧಕರಿಗೆ ಪ್ರಸಕ್ತ ಸಾಲಿನ ನೊಬೆಲ್ ಗೌರವಗಳು ಒಲಿದಿವೆ. ಇಥಿಯೋಪಿಯಾ ಅಧ್ಯಕ್ಷ ಅಬಿ ಅಹ್ಮದ್ ಅಲಿ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ, ವಿಲಿಯಂ ಕಯ್ಲಿನ್, ಸರ್ ಪೀಟರ್ ರಾಟ್ಕ್ಲಿಫ್ ಮತ್ತು ಗ್ರೆಗ್ ಸೆಮೆಂಜಾ ಅವರಿಗೆ ವೈದ್ಯಕೀಯ ನೊಬೆಲ್, ಜಾನ್ ಬಿ. ಗುಡೆನೊ, ಎಂ. ಸ್ಟ್ಯಾನ್ಲಿ ವಿಟ್ಟಿಂಗ್ಹ್ಯಾಮ್ ಮತ್ತು ಅಕಿರಾ ಯೋಶಿನೋ ಅವರಿಗೆ ರಸಾಯನ ಶಾಸ್ತ್ರ ನೊಬೆಲ್ ಮತ್ತು ಓಲ್ಗಾ ಟೊಕರ್ಕುಜ್ ಹಾಗೂ ಪೀಟರ್ ಹಂಡ್ಕೆ ಅವರಿಗೆ ಸಾಹಿತ್ಯ ನೊಬೆಲ್ ದೊರಕಿದೆ. ಈ ಹಿನ್ನೆಲೆಯಲ್ಲಿ ಲಿಂಗದೇವರು ಹಳೆಮನೆ ಅವರು ಬರೆದ 'ಸಾಹಿತ್ಯ-ಸಂದರ್ಭ' ಕೃತಿಯ ನೊಬೆಲ್ ವಿಜೇತ ಬಹುಮುಖ ಪ್ರತಿಭೆ ಗುಂಥರ್ ಗ್ರಾಸ್ ಅವರ ಕುರಿತಾದ ಬರಹವನ್ನು 'ಒನ್ ಇಂಡಿಯಾ' ಓದುಗರೊಂದಿಗೆ ಹಂಚಿಕೊಳ್ಳುತ್ತಿದೆ.
ನೊಬೆಲ್ ಪ್ರಶಸ್ತಿಗಳು ಆರಂಭವಾದದ್ದು 1904ರಲ್ಲಿ . ಶತಮಾನದ ಆರಂಭದ ವರ್ಷದಲ್ಲಿ. ಆಗ ಎರಡನೇ ವರ್ಷದ ಸಾಹಿತ್ಯಿಕ ನೊಬೆಲ್ ಪ್ರಶಸ್ತಿ ಪಡೆದವನು ಜರ್ಮನಿಯ ಲೇಖಕ ಥಿಯೋಡರ್ ಮಾಮ್ ಸೆನ್. ಇದು ಜರ್ಮನಿಗೆ ಸಂದ ಪ್ರಥಮ ಸಾಹಿತ್ಯಿಕ ನೊಬೆಲ್. 1999ರ ಸಾಹಿತ್ಯ ನೊಬೆಲ್ ಪ್ರಶಸ್ತಿ ಪಡೆದವನು ವಿಲ್ ಹೆಲ್ಮ್ ಗುಂಥರ್ ಗ್ರಾಸ್. ಇದು ಜರ್ಮನಿಗೆ ಸಂದ ಒಂಬತ್ತನೇ ಸಾಹಿತ್ಯಿಕ ನೊಬೆಲ್.
ಇಥಿಯೋಪಿಯಾ ಪ್ರಧಾನಿಗೆ 2019ರ ನೊಬೆಲ್ ಶಾಂತಿ ಪುರಸ್ಕಾರ
ಗುಂಥರ್ ಗ್ರಾಸ್ ದು ಬಹುಮುಖ ಪ್ರತಿಭೆ, ಕಾದಂಬರಿಕಾರ, ಕವಿ, ನಾಟಕಕಾರ, ಚಿತ್ರ ಕಲಾವಿದ ಮತ್ತು ಶಿಲ್ಪಿ ಹೀಗೆ ಅನೇಕ ಸೃಜನಶೀಲ ವ್ಯಕ್ತಿತ್ವ ಹೊಂಡಿದವರು. ಆದರೂ ಅವರು ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವುದು ಕಾದಂಬರಿಕಾರನಾಗಿ, ಅವರ ಕಾದಂಬರಿಗಳು ನಾಜಿಯೋತ್ತರ ಜರ್ಮನಿಯ ಗುಣ ಸ್ವರೂಪವನ್ನು ಅತ್ಯಂತ ವ್ಯಂಗ್ಯವಾಗಿ ವಿಂಡಬಿಸುತ್ತಾ ಹೋಗುತ್ತದೆ. ಜರ್ಮನಿಯಲ್ಲಿ ಹಿಟ್ಲರನ ಅಧಿಕಾರದ ಅವಧಿಯಲ್ಲಿ ಯಹೂದಿಗಳ ಮೇಲೆ ನಡೆದ ಜನಾಂಗಿಕ ಹತ್ಯೆ ಅನೇಕ ಪ್ರಜ್ಞಾವಂತರನ್ನು ಕಾಡುತ್ತಲೇ ಬಂದಿದೆ. ನಾಜಿಯೋತ್ತರ ಅವಧಿಯಲ್ಲಿ ರೂಪುಗೊಂಡ ಅನೇಕ ಯುವ, ವೈಚಾರಿಕ, ಕ್ರಾಂತಿಕಾರ ಮನೋಭಾವದ ವ್ಯಕ್ತಿಗಳಲ್ಲಿ ಗುಂಥರ್ ಗ್ರಾಸ್ ಸಹ ಒಬ್ಬರು.
ಅವರ ಕಾದಂಬರಿಗಳು ಅತ್ಯಂತ ಕಟುವಾಗಿ ಆದರೆ ಅಷ್ಟೇ ಕಾಲ್ಪನಿಕ ಸೃಷ್ಟಿಯಲ್ಲಿ ಜರ್ಮನಿಯ ವಿಕೃತ ಹಾಗೂ ವಿಕಾರ ಸ್ವರೂಪವನ್ನು ತೆರೆದಿಡುತ್ತಾ ಹೋಗುತ್ತವೆ. ಇವರ ಕಾದಂಬರಿಗಳು ಅಶ್ಲೀಲ ಎಂಬ ಟೀಕೆಯೂ ಇದೆ. ಎರಡನೆಯ ಮಹಾಯುದ್ಧದ ನಂತರ ಜರ್ಮನಿ ತನ್ನ ಯುದ್ಧದ ಅನುಭವದಿಂದ ಯಾವ ಪಾಠವನ್ನೂ ಕಲಿತಿಲ್ಲ ಎಂಬ ಕೊತಗು ಗ್ರಾಸ್ ನದು. ಸಂಪತ್ತು ಮತ್ತು ಆಸ್ತಿಯ ಬಗೆಗಿನ ಮೋಹ ಜರ್ಮನ್ನರನ್ನು ಆಕ್ರಮಿಸಿಕೊಂಡಿದೆ. ಅಲ್ಲದೆ ಆಧುನಿಕ ಜರ್ಮನ್ನರ ಮನೋಭಾವ ನಯ ವಂಚಕತನದಿಂದ ಕೂಡಿದ್ದು, ಅವರು ಹಿಟ್ಲರನ ಅವಧಿಯಲ್ಲಿ ನಡೆದ ನರಮೇಧವನ್ನು ಒಪ್ಪಿಕೊಂಡು ಅದನ್ನು ಬಹಿರಂಗವಾಗಿ ಖಂಡಿಸುವುದು ಕಡಿಮೆ ಅವರ ಇಮ್ಥ ಮನೋಭಾವದಿಂದ 'ನವ ನಾಜಿಝಂ' ತಲೆ ಎತ್ತುವ ಲಕ್ಷಣ ಕಂಡು ಬರುತ್ತಿವೆ ಎಂದು ಗ್ರಾಸ್ ಭಾವಿಸುತ್ತಾರೆ.
ಗ್ರಾಸ್ ನ ಈ ರೀತಿಯ ತಿಳುವಳಿಕೆಯಿಂದಾಗಿ ಅವರನ್ನು ಎರಡನೇ ಮಹಾಯುದ್ಧಾನಂತರದಲ್ಲಿ ಬಂದ ಯುವ ಚಿಂತಕರ ವಕ್ತಾರರೆಂದು ಗುರುತಿಸಲಾಗಿದೆ.
ರಸಾಯನಶಾಸ್ತ್ರ ಮತ್ತು ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಕಟ
ಗುಂಥರ್ ಗ್ರಾಸ್ ಹುಟ್ಟಿದ್ದು 1927ರ ಅಕ್ಟೋಬರ್ ಹದಿನಾರರಂದು, ಅವರು ಹುಟ್ಟಿದ್ದು, ಡ್ಯಾನ್ ಜಿಂಗ್ ಎಂಬ ಪಟ್ಟಣದಲ್ಲಿ ಅದು ಆಗ ಜರ್ಮನಿಯ ಭಾಗವಾಗಿದ್ದರೂ ಈಗ ಪೋಲೆಂಡಿನಲ್ಲಿದೆ. ವಿಸ್ಟುಲಾ ನದಿಯ ಪ್ರದೇಶದಲ್ಲಿರುವ ಈ ಸ್ಥಳ ಗ್ರಾಸ್ ಗೆ ಅತ್ಯಂತ ಪ್ರಿಯವಾದ ಸ್ಥಳ. ಅವರ ಬಹುತೇಕ ಕಾದಂಬರಿಯ ಹಿನ್ನೆಲೆಗೆ ಬೇಕಾದ ವಿವರಗಳನ್ನು ಈ ಪ್ರದೇಶ ಒದಗಿಸಿಕೊಟ್ಟಿದೆ. ಯುರೋಪಿನ ಚರಿತ್ರೆಯಲ್ಲಿ ಜರ್ಮನಿ ಮತ್ತು ಪೋಲೆಂಡ್ ಗಲ ಮಧ್ಯದ ಸಂಬಂಧ ಮತ್ತು ವಿರಸ ಅತ್ಯಂತ ಮಹತ್ವವಾದದ್ದು, ಹಿಟ್ಲರ್ ಸ್ಕ್ಯಾಂಡಿನೇವಿಯನ್ ದೇಶಗಳ ಮೇಲೆ ತನ್ನ ಆಕ್ರಮಣವನ್ನು ಮಾಡಿದಾಗ ಅವನ ಆಕ್ರಮಣಕ್ಕೆ ತುತ್ತಾಗಿ ನಲುಗಿ ಹೋದ ದೇಶಗಳಲ್ಲಿ ಪೋಲೆಂಡ್ ಕೂಡಾ ಒಂದು. ಜರ್ಮನ್ ತಂದೆ ಮತ್ತು ಪೋಲಿಷ್ ತಾಯಿಗೆ ಹುಟ್ಟಿದ ಗ್ರಾಸ್ ಗೆ ಮಾನವೀಯತೆಗೆ ಕಳಂಕ ಹಚ್ಚಿದ ನಾಜೀ ಅವಧಿಯ ಬರ್ಬರ ಕೃತ್ಯಗಳು ಅವರ ಮನಸ್ಸಿನ ಮೇಲೆ ಗಾಢವಾದ ಪ್ರಭಾವ ಬೀರಿದ್ದವು.
ಗ್ರಾಸ್ ಹದಿಮೂರನೇ ವಯಸ್ಸಿನವರಾಗಿದ್ದಾಗಲೇ ಕಾದಂಬರಿ ಬರೆಯಲು ಪ್ರಾರಂಭಿಸಿದರು. ಆದರೆ ಆಗ ಅವರು ಬರೆದ ಕಾದಂಬರಿ ಪ್ರಕಟವಾಗಲಿಲ್ಲ. ಆ ಕಾದಂಬರಿಯಲ್ಲೇ ಬಾಲಕ ಗಾಸ್ ತನ್ನ ಕೃತಿಯಲ್ಲಿ ಜರ್ಮನಿಯ ವಿಕೃತ, ಕರಾಳ ಚಿತ್ರಣ ಕೊಡುವ ಚಿತ್ರಣ ಮಾಡಿದ್ದ. ಅಂದರೆ ಅತಿ ಚಿಕ್ಕ ವಯಸ್ಸಿನಿಂದಲೇ ಗಾಸ್ ನ ಮನಸ್ಸಿನ ಮೇಲೆ ಜರ್ಮನಿಯ ಆಗು ಹೋಗುಗಳ ಚಿತ್ರಣ ಅತ್ಯಂತ ಗಾಢವಾಗಿ ನೆಲೆಯೂರಿತ್ತು. ನಮ್ಮ ದೇಶದಲ್ಲಿ ಇಂದು ಸಮಾಜವಾದ ಮಾತನಾಡುವ ಅನೇಕ ಜನ ಚಿಕ್ಕ ವಯಸ್ಸಿನಲ್ಲಿ ಆರ್ .ಎಸ್ .ಎಸ್. ಗೆ ಸೇರಿ ತಾಲೀಮು ಮಾಡಿದವರೇ. ಅದೇ ರೀತಿ ಗಾಸ್ ಕೂಡಾ ತನ್ನ ಯೌವನದಲ್ಲಿ ಹಿಟ್ಲರನ ಯುವ ಪಡೆಯ ಸದಸ್ಯನಾಗಿದ್ದ. ಎರಡನೇ ಮಹಾಯುದ್ಧದ ಸಮಯದಲ್ಲಿ ಯುದ್ಧ ಕೈದಿಯಾದ. ಬಿಡುಗಡೆಯಾದ ಮೇಲೆ ಕಲ್ಲು ಕತ್ತರಿಸುವ ತರಬೇತಿ ಪಡೆದುಕೊಂಡ. ಕೆಲವು ಕಾಲ ಬಾರ್ ಗಳಲ್ಲಿ ಕ್ಲಬ್ ಗಳಲ್ಲಿ ತಾನೆ ಹಾಡು ಬರೆದು, ಡ್ರಮ್ ಬಾರಿಸುತ್ತಾ ಕಾಲಕಳೆದ. ಬಡಿದು ಜಗತ್ತಿಗೆ ಅದರ ನಿರರ್ಥಕತೆಯ ಪರಿಚಯ ಮಾಡಿಕೊಡಲು ಯತ್ನಿಸುತ್ತಾನೆ. ಇಂದಿಗೂ 'ಟಿನ್ ಡ್ರಮ್' ಗ್ರಾಸ್ ನ ಅತ್ಯಂತ ಪ್ರಭಾವ ಶಾಲಿ ಕೃತಿಯಾಗಿ ಉಳಿದಿದೆ.
'ಟಿನ್ ಡ್ರಮ್' ನ ಮುಂದುವರಿದ ಭಾಗಗಳಂತೆ ಕಾಣುವ ಅವನ ಇನ್ನೆರಡು ಕಾದಂಬರಿಗಳೆಂದರೆ 'ದಿ ಫ್ಲೌಂಡರ್' ಮತ್ತು 'ದಿ ರ್ಯಾಟ್' ಎಂಬ ಕಾದಂಬರಿಗಳು. ಈ ಕಾದಂಬರಿಗಳಲ್ಲೂ 'ಮೀನು' ಮತ್ತು 'ಇಲಿ' ಇಲ್ಲಿಯ ಪ್ರಧಾನ ವಕ್ತಾರರು. ಗ್ರಾಸ್ ಗೆ ತನ್ನ ಕಾದಂಬರಿಯಲ್ಲಿ ಮನುಷ್ಯರ ಮುಖಾಂತರ ಮಾತನಾಡುವುದು ಕಷ್ಟ ಅನ್ನಿಸಿದೆ. ಇದನ್ನೇ ಅವರು ಮತ್ತೆ ಮತ್ತೆ ತಮ್ಮ ಕೃತಿಗಳಲ್ಲಿ ತರುತ್ತಾ ಹೋಗುತ್ತಾರೆ. ಅವರ ಇನ್ನಿತರ ಗಮನಾರ್ಹ ಕೃತಿಗಳೆಂದರೆ, ಕ್ಯಾಟ್ ಅಂಡ್ ಮೌಸ್ (1995), 'ದಿ ಡಾಗ್ ಇಯರ್ಸ್'(1963), 'ಎಡಿಸ್ಟೆಂಟ್ ಫೀಲ್ಡ್'(1995), 'ಮೈ ಸೆಂಚುರಿ'(1999) ಅವರ ನಾಟಕ ಅಂಕಲ್ 1958), ದಿ ವಿಕೆಡ್ ಕುಕ್ಸ್ (1961), 'ಅಪ್ ರೈಸಿಗ್', ಇದಲ್ಲದೆ ಅವರು ತಮ್ಮ ಪದ್ಯಗಳ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಗ್ರಾಸ್ ಗೆ ರಾಜಕೀಯ ಬದಲಾವಣೆಯ ಬಗ್ಗೆ ತೀವ್ರ ಆಸಕ್ತಿ, ಈ ಆಸಕ್ತಿಯೇ ಅವರನ್ನು ಆಧುನಿಕ ಜರ್ಮನಿಯ ರಾಜಕೀಯದಲ್ಲಿ ಗಣನೀಯ ಪಾತ್ರ ವಹಿಸುವಂತೆ ಪ್ರೇರೇಪಿಸಿತು. ಆಧಿಕ ಜರ್ಮನಿಯನ್ನು ರೂಪಿಸುವಲ್ಲಿ ಗಣನೀಯ ಪಾತ್ರವಹಿಸಿದ ಚಾನ್ಸಲರ್ ವಿಲ್ಲಿ ಬ್ರಾಂಡ್ ನ ಅತ್ಯಂತ ಆಪ್ತ ಗೆಳೆಯರಾಗಿದ್ದ ಗ್ರಾಸ್, ವಿಲ್ಲಿ ಬ್ರಾಂಡ್ ತೆಗೆದುಕೊಂಡ ಅನೇಕ ಪ್ರಮುಖ ನಿರ್ಧಾರಗಳ ಹಿಂದೆ ಇದ್ದಾರೆ. ಅದರಲ್ಲಿ ಬಹಳ ಮುಖ್ಯವಾದದ್ದು ಜರ್ಮನಿಯ ನೆಲದಲ್ಲಿ ಅಣು ಸ್ಥಾವರವನ್ನು ಸ್ಥಾಪಿಸಬಾರದೆಂಬುದು, ವಿಲ್ಲಿ ಬ್ರಾಂಡ್ ಅವರ ಉಪನ್ಯಾಸಗಳನ್ನು ತಾವು ಬರೆದುಕೊಡುವ ಮೂಲಕ ಸೋಷಿಯಲಿಸ್ಟ್ ಡೆಮೊಕ್ರಾಟಿಕ್ ಪಕ್ಷಕ್ಕೆ ಒಂದು ಸಜ್ಜನಿಕೆಯ ಸ್ವರೂಪವನ್ನು ತಂದುಕೊಟ್ಟರು. ಆದರೆ ಈಗ ಮತ್ತೆ ಜರ್ಮನಿಯಲ್ಲಿ ಹೊಸ ನಾಜಿವಾದ ತಲೆ ಎತ್ತುತ್ತಿದೆ ಎಂದು ಗ್ರಾಸ್ ಕೊರಗುತ್ತಿದ್ದೆರ್. ಆ ಪೆಡಂಭೂತದ ವಿರುದ್ಧ ಪ್ರಜ್ಞಾವಂತರೆಲ್ಲಾ ಜಾಗೃತರಾಗಿರಬೇಕೆಂಬುದು ಅವರ ಆಶಯ.
1980ರ ದಶಕದಲ್ಲಿ ಭಾರತಕ್ಕೆ ಗ್ರಾಸ್ ಬಂದಿದ್ದರು. ಆಗ ಅವರು ಕಲ್ಕತ್ತದಲ್ಲಿ ಸುಮಾರು ಎಂಟು ತಿಂಗಳ ಕಾಲ ತಂಗಿದ್ದರು. ಅಲ್ಲ್ದೆ ಆ ಸಮಯದಲ್ಲಿ ತಮ್ಮದೇ ಒಂದು ನಾಟಕವನ್ನು ಕಲ್ಕತ್ತದ ಒಂದು ತಂಡಕ್ಕೆ ನಿರ್ದೇಶಿಸಿದ್ದರು ಕೂಡಾ. ಕಲ್ಕತ್ತದ ತಮ್ಮ ಅನುಭವವನ್ನು ಕುರಿತು ಅವರು 'ಶೋ ಯುವರ್ ಟಂಗ್' ಎಂಬ ಕೃತಿಯೊಂದನ್ನು ರಚಿಸಿದ್ದಾರೆ. ಬಹುಶಃ ಕಲ್ಕತ್ತದ ಬಗ್ಗೆ ಕಟುವಾಗಿ ಬರೆದಿರುವ ಕೃತಿ ಇದೊಂದೇ. ಕಲ್ಕತ್ತದ ಬಗ್ಗೆ ಬಂದಿರುವ ಅನೆಕ ಕೃತಿಗಳು ಆ ನಗರವನ್ನು ಅತ್ಯಂತ ರಮ್ಯವಾಗಿ ವರ್ಣಿಸಲು ಯತ್ನಿಸಿವೆ. ಆದರೆ ಕಲ್ಕತ್ತದ ನೋವು, ಅವಮಾನ, ಸಂಕಟಗಳನ್ನು ಅತ್ಯಂತ ನಿರ್ವಿಕಾರವಾಗಿ ಗ್ರಾಸ್ ಇಲ್ಲಿ ವರ್ಣಿಸಿದ್ದಾರೆ.
ಗ್ರಾಸ್ ತನ್ನ ಅನ್ಯೋಕ್ತಿಯ ಶೈಲಿಯ ಮೂಲಕ ಆಧುನಿಕ ಜರ್ಮನಿಯ ಕಟುವಾಸ್ತವ ಚಿತ್ರಣ ನೀಡಲು ಪ್ರಯತ್ನಿಸಿದ್ದಾರೆ. ಸ್ವೀಡಿಷ್ ಅಕಾಡೆಮಿ ಗ್ರಾಸ್ ಗೆ ಸಾಹಿತ್ಯದ ನೊಬೆಲ್ ಪ್ರಶಸ್ತಿಯನ್ನು ಪ್ರದಾನ ಮಾಡಲು ನಿರ್ಧಾರ ತೆಗೆದುಕೊಂಡು ಹೀಗೆ ಹೇಳಿದೆ. 'ಕಪ್ಪು ಅಧ್ಯಾಯದ ಶಕ್ತ ಕಥೆ ಹೇಳುವ ಕಲೆಗಾರಿಕೆ' ಗಾಗಿ ಗ್ರಾಸ್ ಗೆ ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದೆ ಎಂದು. ಅಕಾಡೆಮಿ ಈ ಮಾತು ಹೇಳುವಾಗ ಗ್ರಾಸ್ ನ ಒಟ್ಟಾರೆ ಸಾಹಿತ್ಯಿಕ ಪ್ರತಿಭೆಯನ್ನು ಗಮನಕ್ಕೆ ತೆಗೆದುಕೊಂಡಿರುವುದು ಸ್ಪಷ್ಟ. ಗ್ರಾಸ್ ಜರ್ಮನಿಯಲ್ಲಿ ವಿವಾದ ಸೃಷ್ಟಿಸಿದ ವ್ಯಕ್ತಿ ನಿಜ. ಆದರೆ ಆ ವಿವಾದವನ್ನು ಆತ ಸೃಷ್ಟಿಸಿದ್ದು ಕಲೆಗಾರಿಕೆಯ ಚೌಕಟ್ಟಿನಲ್ಲಿ. ಅಂಥ ಕಲೆಗಾರಿಕೆಯ ಸೃಜನಶೀಲತೆಯನ್ನು ನೊಬೆಲ್ ಪ್ರಶಸ್ತಿ ಪ್ರದಾನ ಮಾಡಿರುವವರು ಗಮನಿಸಿರುವುದು ಗಮನಾರ್ಹ. ಬಹುಶಃ ಇನ್ಮುಂದೆ 'ಶುದ್ಧ ಸಾಹಿತ್ಯ' ಎಂಬ ಮಾತು ದೂರ ಸರಿದು 'ಅರ್ಥ ಪೂರ್ಣ' ಸಾಹಿತ್ಯ ಮುಂದೂಡಲ್ಪಡಬಹುದು. ಅದನ್ನು ಸಾಧಿಸಿ ತೋರಿಸಿದ ಗ್ರಾಸ್ ಗೆ ನೊಬೆಲ್ ಬಹುಮಾನ ಬಂದಿದೆ. ಅವರು ಅದಕ್ಕೆ ಅರ್ಹರು.