ಮೈತ್ರಿಪಕ್ಷಗಳಲ್ಲಿ ಅಸಮಾಧಾನ ಭುಗಿಲೆದ್ದಷ್ಟು ಬಿಜೆಪಿಗೆ ಲಾಭ!
Recommended Video
ಮೈತ್ರಿ ಸರ್ಕಾರದ ನಾಯಕರೊಳಗಿನ ಮುಸುಕಿನ ಗುದ್ದಾಟಗಳು ಒಂದರ ಮೇಲೊಂದರಂತೆ ನಡೆಯುತ್ತಲೇ ಇದೆ. ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿದ್ದು ಹೊಂದಾಣಿಕೆಯಿಂದ ಆಡಳಿತ ನಡೆಸುತ್ತಿದ್ದೇವೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳುತ್ತಾ ಬರುತ್ತಿದ್ದಾರೆಯಾದರೂ ಒಳಗಿನ ಭಿನ್ನಾಭಿಪ್ರಾಯಗಳು ಮಾತ್ರ ಆಗಾಗ್ಗೆ ಒಂದೊಂದಾಗಿ ಹೊರ ಬರುತ್ತಲೇ ಇದೆ.
ಸದ್ಯದ ಮಟ್ಟಿಗೆ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಪಟ್ಟಿಯನ್ನು ಹೈಕಮಾಂಡ್ ಸಮ್ಮುಖದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಾಡಲಾಗಿತ್ತು. ಆ ಮೂಲಕ ಕಾಂಗ್ರೆಸ್ನ ಒಂದಷ್ಟು ಅತೃಪ್ತ ಶಾಸಕರಿಗೆ ಅಧ್ಯಕ್ಷ ಗಿರಿಯನ್ನು ನೀಡಿ ಅವರ ಅಸಮಾಧಾನವನ್ನು ಶಮನಗೊಳಿಸುವ ಕೆಲಸವನ್ನು ಮಾಡಲಾಗಿತ್ತು.
ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅದನ್ನು ಬದಿಗಿಟ್ಟಿರುವುದು ಇದೀಗ ಮೈತ್ರಿ ಸರ್ಕಾರದಲ್ಲಿ ಒಂದಷ್ಟು ಅಸಮಾಧಾನಕ್ಕೆ ಕಾರಣವಾಗಿದ್ದು, ಒಳಗೊಳಗೆ ಅತೃಪ್ತಿಯ ಹೊಗೆಯಾಡ ತೊಡಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಡಿಸಿಎಂ ಡಾ.ಜಿ.ಪರಮೇಶ್ವರ್ ಗೆ ಆಡಳಿತ ನಡೆಸುವುದಕ್ಕಿಂತಲೂ ಮೈತ್ರಿ ಸರ್ಕಾರವನ್ನು ಮುನ್ನಡೆಸುವುದೇ ದೊಡ್ಡದೊಂದು ಸಾಧನೆಯಾಗಿ ಕಾಣುತ್ತಿದೆ.
ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ಹಿಂದಿದೆ ದೇವೇಗೌಡರ ತಂತ್ರ!
ಜತೆಗೆ ಅಂದುಕೊಂಡಂತೆ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬುದು ಕುಮಾರಸ್ವಾಮಿ ಅವರಿಗೂ ಗೊತ್ತಾಗಿದೆ. ಇದನ್ನು ಅವರು ಸುದ್ದಿಗೋಷ್ಠಿಗಳಲ್ಲಿ, ಪಕ್ಷದ ಕಾರ್ಯಕ್ರಮಗಳಲ್ಲಿ, ಸಭೆಗಳಲ್ಲಿ ಹೇಳುತ್ತಾ ಕಣ್ಣೀರಿಡುತ್ತಾ ಬಂದಿದ್ದಾರೆ.
ಕಾಂಗ್ರೆಸ್ಗೆ ಪ್ರತಿಷ್ಠೆಯ ಚುನಾವಣೆ
ಅವತ್ತಿನ ಮಟ್ಟಿಗೆ ಬೇಸರತ್ ಬೆಂಬಲ ನೀಡುವ ಮೂಲಕ ಜೆಡಿಎಸ್ ನ್ನು ತೆಕ್ಕೆಗೆ ಎಳೆದುಕೊಂಡಿದ್ದ ಕಾಂಗ್ರೆಸ್ನ ನಾಯಕರಿಗೆ ಎಲ್ಲ ಅವರಿಗೆ ನೀಡಿ ನಾವು ತೆಪ್ಪಗೆ ಕುಳಿತು ಬಿಟ್ಟರೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಸ್ತಿತ್ವ ಕಂಡುಕೊಳ್ಳುವುದು ಕಷ್ಟ ಎಂಬುದು ಜ್ಞಾನೋದಯವಾಗ ತೊಡಗಿದ್ದು ಹೀಗಾಗಿ ತಿರುಗಿ ಬೀಳತೊಡಗಿದ್ದಾರೆ. ಇದರಿಂದಾದ ಹಲವು ಬೆಳವಣಿಗೆಗಳು ನಮ್ಮ ಕಣ್ಣ ಮುಂದೆಯೇ ಇದೆ. ಈಗ ಲೋಕಸಭಾ ಚುನಾವಣೆಯ ಸಮಯ. ಈ ಚುನಾವಣೆ ಕಾಂಗ್ರೆಸ್ಗೆ ಪ್ರತಿಷ್ಠೆಯ ಚುನಾವಣೆಯೂ ಹೌದು. ಪಂಚರಾಜ್ಯ ಚುನಾವಣೆಯ ಗೆಲುವಿನ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಕರ್ನಾಟಕದಿಂದ ಹೆಚ್ಚಿನ ಸ್ಥಾನವನ್ನು ಗೆದ್ದು ತರಬಹುದು ಎಂಬ ನಿರೀಕ್ಷೆಯಲ್ಲಿದೆ. ಇಲ್ಲಿಂದ ಹೆಚ್ಚಿನ ಸ್ಥಾನವನ್ನು ಗೆಲ್ಲಿಸಿಕೊಟ್ಟರೆ ರಾಜ್ಯ ನಾಯಕರಿಗೂ ಹೈಕಮಾಂಡ್ ನಲ್ಲಿ ಹೆಚ್ಚಿನ ಗೌರವ ಪ್ರಾಪ್ತಿಯಾಗಲಿದೆ.
ಐವರಲ್ಲಿ ಮೂರು ಶಾಸಕರಿಗೆ ನಿಗಮ ಮಂಡಳಿ ಸ್ಥಾನ,ಇಬ್ಬರ ಸ್ಥಿತಿ ತ್ರಿಶಂಕು
ಬಿಜೆಪಿಗೆ ಹೆಚ್ಚಿನ ಲಾಭ
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸೇರಿದಂತೆ ಆ ಪಕ್ಷದ ಪ್ರಮುಖ ನಾಯಕರು ದಿನದಿಂದ ದಿನಕ್ಕೆ ನೀಡುತ್ತಿರುವ ಹೇಳಿಕೆಗಳು ಮತ್ತು ನಮಗೆ 12 ಕ್ಷೇತ್ರಗಳನ್ನು ನೀಡಲೇಬೇಕೆಂಬ ಹಠಕ್ಕೆ ಬಿದ್ದಿರುವುದು ಕಾಂಗ್ರೆಸ್ ನಾಯಕರನ್ನು ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಈಗಿನ ಪರಿಸ್ಥಿತಿಯನ್ನು ನೋಡಿದರೆ ರಾಜ್ಯದಲ್ಲಿ ಬಿಜೆಪಿ ಪ್ರಾಬಲ್ಯ ಜಾಸ್ತಿಯಿದೆ. ಇನ್ನು ಜೆಡಿಎಸ್ ಗೆ ಹಳೆ ಮೈಸೂರು ಭಾಗವನ್ನು ಹೊರತು ಪಡಿಸಿದರೆ ಉಳಿದ ಪ್ರದೇಶಗಳಲ್ಲಿ ಅಷ್ಟೊಂದು ಪ್ರಾಬಲ್ಯವಿಲ್ಲ. ಹೀಗಿರುವಾಗ 12 ಸ್ಥಾನವನ್ನು ಅವರಿಗೇನಾದರೂ ನೀಡಿದರೆ ಕಾಂಗ್ರೆಸ್ ಪಕ್ಷದ ಹಲವು ನಾಯಕರು ತಿರುಗಿ ಬೀಳುವ ಸಂಶಯವಿದೆ. ಜತೆಗೆ ಬಂಡಾಯವಾಗಿ ಸ್ಪರ್ಧೆಗಿಳಿಯುವ ಸಾಧ್ಯತೆಯೂ ಇಲ್ಲದಿಲ್ಲ. ಇದರಿಂದ ಅವರಿಬ್ಬರ ಜಗಳದಲ್ಲಿ ಬಿಜೆಪಿಗೆ ಹೆಚ್ಚಿನ ಲಾಭವಾಗಲಿದೆ.
ಆಡಳಿತ ನನ್ನ ಕೈಯಲಿಲ್ಲ, ಕಾಂಗ್ರೆಸ್ ಕೈಯಲ್ಲಿದೆ: ಕುಮಾರಸ್ವಾಮಿ ಅಸಮಾಧಾನ
ಈ ಭಯ ಕಾಂಗ್ರೆಸ್ನವರಿಗಿದೆ
ಕಾಂಗ್ರೆಸ್ ಸಹಕಾರದೊಂದಿಗೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಸುಲಭವಾಗಿ ಗೆಲ್ಲಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ದೇವೇಗೌಡರದ್ದಾಗಿದೆ. ಆದರೆ ದೇವೇಗೌಡರ ಒತ್ತಾಯಕ್ಕೆ ಮಣಿದು 12 ಸ್ಥಾನಗಳನ್ನು ಅವರಿಗೆ ಬಿಟ್ಟು ಕೊಟ್ಟರೆ ಅದರಿಂದ ತಮ್ಮ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದು ಕಾಂಗ್ರೆಸ್ ನಾಯಕರ ಚಿಂತೆಯಾಗಿದೆ. ಇತ್ತೀಚೆಗಷ್ಟೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜೆಡಿಎಸ್ ಅನ್ನು 12 ಸ್ಥಾನದಲ್ಲಿ ಗೆಲ್ಲಿಸಿಕೊಟ್ಟರೆ ಪ್ರಧಾನಿ ಮೋದಿ ಅವರು ದೇವೇಗೌಡರ ಮನೆ ಮುಂದೆ ಬಂದು ನಿಲ್ಲುತ್ತಾರೆ ಎಂಬ ಹೇಳಿಕೆ ನೀಡಿರುವುದು ಸ್ವಲ್ಪ ಮಟ್ಟಿಗೆ ಗೊಂದಲಕ್ಕೀಡು ಮಾಡಿದೆ. ಜೆಡಿಎಸ್ ಯಾವಾಗ ಬೇಕಾದರೂ ತಮ್ಮ ಸಿದ್ಧಾಂತ ಬದಲಿಸಬಹುದು ಎಂಬ ಭಯವೂ ಕಾಂಗ್ರೆಸ್ನವರಿಗಿದೆ.
ರಾಜಕೀಯ ತಂತ್ರ ಹೆಣೆಯಲು ಬಿಜೆಪಿ ಪ್ರಯತ್ನ
ಈ ನಡುವೆ ಕಾಂಗ್ರೆಸ್ ಜೆಡಿಎಸ್ ಪಕ್ಷಗಳ ಎಲ್ಲಾ ವಿಷಯದಲ್ಲೂ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದ್ದು, ಈ ಬಗ್ಗೆ ಮೇಲ್ಮನೆ ಕಾಂಗ್ರೆಸ್ ಸದಸ್ಯ ಹೆಚ್.ಎಂ.ರೇವಣ್ಣ ತಮ್ಮ ಆಕ್ರೋಶವನ್ನು ಬಹಿರಂಗವಾಗಿಯೇ ಹೊರ ಹಾಕಿದ್ದಾರೆ. ಬಹುಶಃ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಎರಡು ಪಕ್ಷಗಳ ನಾಯಕರ ಹೇಳಿಕೆಗಳು ಯಾವ ಮಟ್ಟಕ್ಕೆ ತಂದು ನಿಲ್ಲಿಸುತ್ತದೆಯೋ ಗೊತ್ತಿಲ್ಲ. ಎರಡು ಪಕ್ಷಗಳು ಒಗ್ಗೂಡಿ ಲೋಕಸಭಾ ಚುನಾವಣೆಯನ್ನು ಎದುರಿಸುವ ಪಣ ತೊಟ್ಟಿದ್ದರೂ ಕೊನೆಗಳಿಗೆಯಲ್ಲಿ ಏನೂ ಬೇಕಾದರೂ ಆಗಬಹುದು ಎಂಬುದನ್ನು ತಳ್ಳಿಹಾಕುವಂತಿಲ್ಲ. ಮೈತ್ರಿ ಪಕ್ಷಗಳ ನಡುವಿನ ಅಸಮಾಧಾನವನ್ನು ಉಪಯೋಗಿಸಿಕೊಂಡು ರಾಜಕೀಯ ತಂತ್ರ ಹೆಣೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಹೀಗಿರುವಾಗ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಅತೃಪ್ತಿ ಅದರಿಂದ ಉಂಟಾಗಬಹುದಾದ ಪರಿಸ್ಥಿತಿಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಬಿಜೆಪಿ ನಾಯಕರು ಸದಾ ಸಿದ್ಧರಿರುತ್ತಾರೆ. ಏನೆಲ್ಲ ಆಗಬಹುದು ಎಂಬುದನ್ನು ಕಾಲವೇ ಹೇಳಬೇಕಾಗಿದೆ.