ಜೆಡಿಎಸ್ ನಲ್ಲಿ ಅಸಮಾಧಾನ; ದೇವೇಗೌಡರದು ಬೆಂಗಳೂರು 'ಉತ್ತರ'!
Recommended Video
ಜೆಡಿಎಸ್ ವರಿಷ್ಠ- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಯಾವ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಬೆಂಗಳೂರು ಉತ್ತರದಿಂದ ಸ್ಪರ್ಧಿಸುವ ಸಾಧ್ಯತೆಯೇ ಹೆಚ್ಚು ಎನ್ನುತ್ತಿವೆ ಮೂಲಗಳು. ಆದರೆ ಪಕ್ಷದೊಳಗೆ ಹಲವು ಮುಖಂಡರಿಗೆ ಅಸಮಾಧಾನ ಇರುವುದರಿಂದ ಈಗಿನ ಪರಿಸ್ಥಿತಿ ಹೇಗೆ ಸಂಭಾಳಿಸುತ್ತಾರೋ ಎಂಬ ಪ್ರಶ್ನೆಯೇ ದೊಡ್ಡದಾಗಿದೆ.
ಉದಾಹರಣೆಗೆ ನೋಡಿ, ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ ಆರ್ಯ ವೈಶ್ಯ ಸಮಾಜದವರು. ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಸಚಿವರೇ ಆಗುತ್ತಾರೆ ಎಂಬ ಪರಿಸ್ಥಿತಿ ಇತ್ತು. ಆದರೆ ಮೈತ್ರಿ ಸರಕಾರ ಬಂತು. ಸಚಿವ ಸ್ಥಾನ ಸಿಗುವುದು ಅನುಮಾನ ಎಂಬುದು ಸ್ವತಃ ಶರವಣ ಅವರಿಗೆ ಖಾತ್ರಿ ಆದಾಗ ತಾವೇ ಸುಮ್ಮನಾದರು.
ಸ್ಫೋಟವಾಯಿತು ಶರವಣ ಅಸಮಾಧಾನ, ಜೆಡಿಎಸ್ ನಲ್ಲಿ ಭಾರೀ ಕಂಪನ
ಆ ನಂತರ ಸರಕಾರದ ಮುಖ್ಯ ಸಚೇತಕ ಹುದ್ದೆಯೋ ಅಥವಾ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆಗಿಯೋ ತಮ್ಮನ್ನು ನೇಮಿಸಬಹುದು ಎಂಬುದು ಶರವಣ ನಿರೀಕ್ಷೆ ಆಗಿತ್ತು. ಆದರೆ ಅದು ಯಾವುದೂ ಆಗಲಿಲ್ಲ. ಮೂಲಗಳ ಪ್ರಕಾರ, ಶರವಣ ಅವರು ದೇವೇಗೌಡರ ಬಳಿಯೇ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ನಿನಗೇ ಕೈ ಕೊಟ್ಟರೇನಪ್ಪ?
ನಾನು ಒಳಗೊಂಡಂತೆ ಇಡೀ ಕುಟುಂಬ ನಿನ್ನ ಜತೆಗಿದೆ. ನೀನು ಮನೆ ಮಗ ಇದ್ದಂತೆ. ನಿನಗೆ ಸ್ಥಾನ ಸಿಕ್ಕೇ ಸಿಗುತ್ತದೆ. ನಿನ್ನ ಹೆಸರನ್ನು ಕೂಡ ಕುಮಾರಸ್ವಾಮಿಗೆ ಕಳುಹಿಸಿದ್ದೀನಿ ಎಂದು ದೇವೇಗೌಡರು ಹೇಳುತ್ತಾರೆ. ಆದರೆ ಶರವಣ ಅವರಿಗೆ ಯಾವ ಹುದ್ದೆಯೂ ಸಿಕ್ಕಿಲ್ಲ. ಇಂದಿರಾ ಕ್ಯಾಂಟೀನ್ ಗೂ ಮುಂಚೆ ಹನುಮಂತ ನಗರದಲ್ಲಿ ಶುರು ಮಾಡಿದ ಅಪ್ಪಾಜಿ ಕ್ಯಾಂಟೀನ್ ನಲ್ಲಿ ಮಾತ್ರ ನಿತ್ಯವೂ ಕಡಿಮೆ ದರದಲ್ಲಿ ಆಹಾರ ವಿತರಿಸುವುದು ನಿಂತಿಲ್ಲ. ಇದು ಎಲ್ಲಿಗೆ ಬಂದು ನಿಂತಿದೆ ಅಂದರೆ, ಶರವಣ ಅವರು ಯಾವುದೇ ಪ್ಯಾನಲ್ ಡಿಸ್ಕಷನ್ ನಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಮುನಿಸು ಅಂದುಕೊಳ್ಳಬೇಕೋ ಅಥವಾ ಇದೆಲ್ಲ ಸಹಜ ಎಂದುಕೊಳ್ಳಬೇಕೋ ಗೊತ್ತಾಗುವುದಿಲ್ಲ. ಏಕೆಂದರೆ ದೇವೇಗೌಡರ ಕುಟುಂಬಕ್ಕೂ ಶರವಣ ಅವರಿಗೂ ಇರುವ ನಂಟು ಎಲ್ಲರಿಗೂ ಗೊತ್ತಿರುವಂಥದ್ದು. ಆದರೆ ಅವರು ಹೋದಲ್ಲಿ-ಬಂದಲ್ಲಿ, ಸಮುದಾಯದ ಕಾರ್ಯಕ್ರಮಗಳಲ್ಲಿ, ನಿನಗೇ ಕೈ ಕೊಟ್ಟರೇನಪ್ಪ ಎಂಬ ಪ್ರಶ್ನೆ ಬರುತ್ತಿದೆ. ಪಕ್ಷದ ಬಗ್ಗೆ ಯಾವುದೇ ಮಾಹಿತಿ ಬೇಕೆಂದರೆ ಫೋನ್ ನಲ್ಲಿ ಸಿಕ್ಕುತ್ತಿದ್ದ ಶರವಣ ಕೂಡ ತಣ್ಣಗಾದಂತೆ ಅನಿಸುತ್ತಿದೆ.
ಮಧು ಬಂಗಾರಪ್ಪಗೆ ಸ್ಪರ್ಧೆಗೆ ಮನಸಿಲ್ಲ
ಇನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿ ನಿಂತು, ಸೋತ ಮಧು ಬಂಗಾರಪ್ಪ ಅವರದು ಕೂಡ ಅದೇ ಕಥೆ. ಅವರಿಗೆ ಈ ಬಾರಿ ಕೂಡ ಚುನಾವಣೆಗೆ ನಿಲ್ಲಬೇಕಾ ಎಂಬುದೊಂದು ಪ್ರಶ್ನೆ ಇದೆ. ಜತೆಗೆ ಪಕ್ಷದಿಂದ ತಮಗೆ ಒಂದು ಸ್ಥಾನ-ಮಾನ, ಹುದ್ದೆ ಸಿಗಲಿಲ್ಲ ಎಂಬ ಅಸಮಾಧಾನವೂ ಇದೆ ಎಂದು ಅವರ ಆಪ್ತ ಮೂಲಗಳು ಅಲ್ಲಿಲ್ಲಿ ಖಾಸಗಿಯಾಗಿ ಹೇಳಿಕೊಳ್ಳುತ್ತವೆ. ಪಕ್ಷದೊಳಗೆ ಸಮಾನ ದುಃಖಿಗಳ ಸಂಖ್ಯೆ ಹೆಚ್ಚಾಗಿದ್ದು, ಮೈತ್ರಿ ಸರಕಾರ ಅಧಿಕಾರಕ್ಕೆ ಬರುವ ವೇಳೆ ಇದ್ದ ಉತ್ಸಾಹ, ಭರವಸೆ ಈಗ ಇಳಿದು ಹೋಗಿದೆ. ದೇವೇಗೌಡರ ಬಳಿ ಇದನ್ನೆಲ್ಲ ಹೇಳಿಕೊಂಡರೆ, ಕುಮಾರಸ್ವಾಮಿಗೆ ಅದೇನು ಒತ್ತಡವೋ ಗೊತ್ತಾಗುತ್ತಿಲ್ಲ ಎನ್ನುತ್ತಾರೆ. ಇನ್ನು ಸ್ವತಃ ಕುಮಾರಸ್ವಾಮಿ ಅವರನ್ನೇ ಕೇಳಿದರೆ, ನಮ್ಮ ಪಾಲಿನ ನಿಗಮ- ಮಂಡಳಿ ಸ್ಥಾನಗಳು ಇನ್ನೂ ಉಳಿದಿವೆ. ಆ ಸಂದರ್ಭದಲ್ಲಿ ಖಂಡಿತಾ ಗುರುತಿಸುವುದಾಗಿ ಹೇಳುತ್ತಾರೆ.
ಬಸವರಾಜ ಹೊರಟ್ಟಿ ಕಣ್ಣೀರು ಹಾಕಿದ್ದರು
ಬಸವರಾಜ ಹೊರಟ್ಟಿ ಅವರ ಸ್ಥಿತಿ ಎಲ್ಲರಿಗೂ ಗೊತ್ತಿರುವಂಥದ್ದೇ. ಸಾರ್ವಜನಿಕವಾಗಿಯೇ ತಮ್ಮ ನೋವನ್ನು ಹೊರಹಾಕಿ ಕಣ್ಣೀರು ಹಾಕಿದ್ದರು. ಜೆಡಿಎಸ್ ನಲ್ಲಿರುವ ಲಿಂಗಾಯತ ಸಮುದಾಯದ ಪ್ರಮುಖ ನಾಯಕರು ಬಸವರಾಜ ಹೊರಟ್ಟಿ. ತಾವು ಬಯಸಿದ ಹುದ್ದೆಯಿಂದ ಕೆಳಗೆ ಇಳಿದಾಗ ಅಕ್ಷರಶಃ ಕಣ್ಣೀರಾದರು. ಈ ಮಧ್ಯೆ ಉತ್ತರ ಕರ್ನಾಟಕದ ಬಗ್ಗೆ ಕುಮಾರಸ್ವಾಮಿ ಅವರ ಹೇಳಿಕೆಗಳಿಂದ ಎಂಥ ಡ್ಯಾಮೇಜ್ ಆದರೂ ಸಂಭಾಳಿಸುವಂಥ ಹೊರಟ್ಟಿ, ಕೊನೆಗೆ ಕಾಂಗ್ರೆಸ್ ವಿರುದ್ಧ ಕೂಡ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಆದರೆ ಏನಾದರೂ ಪ್ರಯೋಜನ ಆಯಿತಾ ಅಂತ ನೋಡಿದರೆ ಏನೇನೂ ಇಲ್ಲ. ಹೀಗೆ ಜೆಡಿಎಸ್ ನಲ್ಲಿನ ಅಸಮಾಧಾನಿತರ ಸಂಖ್ಯೆ ಹಾಗೂ ಅವರ ಅಸಮಾಧಾನಕ್ಕೆ ಕಾರಣಗಳು ಬೆಳೆಯುತ್ತಾ ಹೋಗುತ್ತದೆ. ಎಷ್ಟೋ ಕಡೆ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿರುವುದಕ್ಕೆ ಆಕ್ಷೇಪಗಳು ಕೇಳಿಬರುತ್ತಿವೆ.
ಬೆಂಗಳೂರು ಉತ್ತರದಿಂದ ದೇವೇಗೌಡರ ಸ್ಪರ್ಧೆ ಸಾಧ್ಯತೆ
ಈ ಮಧ್ಯೆ ದೇವೇಗೌಡರು ಬೆಂಗಳೂರು ಉತ್ತರದಿಂದಲೇ ಸ್ಪರ್ಧಿಸುವ ಸಾಧ್ಯತೆ ಹೆಚ್ಚು. ಹೆಚ್ಚೆಂದರೆ ಇನ್ನೆರಡು ದಿನದಲ್ಲಿ ಆ ಬಗ್ಗೆ ಘೋಷಣೆ ಆಗಲಿದೆ ಎಂಬುದು ಪಕ್ಷದ ಒಳಗಿನ ಮಾಹಿತಿ. ಈ ಮಧ್ಯೆ ಹಾಸನ ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಿದರೆ ಜೆಡಿಎಸ್ ಗೆ ಗೆಲುವು ಕಷ್ಟ ಆಗಬಹುದು ಎನ್ನುವವರು ಕೂಡ ಇದ್ದಾರೆ. ಮಾಜಿ ಸಚಿವ- ಕಾಂಗ್ರೆಸ್ ಮುಖಂಡ ಎ.ಮಂಜು ಅಂಥವರು ಪ್ರಜ್ವಲ್ ಸ್ಪರ್ಧೆಗೆ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕಳೆದ ಬಾರಿಯ ವಿಧಾನಸಭಾ ಚುನಾವಣೆ ಫಲಿತಾಂಶದ ಆಧಾರದಲ್ಲಿ ಹೇಳುವುದಾದರೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಹಾಗೂ ಗೆಲುವು ಎರಡೂ ಸಲೀಸಾಗ ಬೇಕಿತ್ತು. ಆದರೆ ಅಲ್ಲೂ ಸುಮಲತಾ ಅಂಬರೀಶ್ ಅವರ ಪ್ರವೇಶದಿಂದ ಜಿದ್ದಾಜಿದ್ದಿ ಪೈಪೋಟಿ ಕಾಣಿಸಿಕೊಳ್ಳಬಹುದು. ಹೀಗೆ ಯಾವ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲುವ ಸಾಧ್ಯತೆ ಇದೆಯೋ ಅಲ್ಲೆಲ್ಲ ಸಮಸ್ಯೆಗಳು ಎದ್ದುನಿಂತಿವೆ. ಇವೆಲ್ಲವನ್ನೂ ಮೀರಿ ದೇವೇಗೌಡರು- ಕುಮಾರಸ್ವಾಮಿ ಏನು ಮಾಡಬಹುದು ಎಂಬ ಕುತೂಹಲ ಇದ್ದೇ ಇದೆ.