ನೀಚ ಮಟ್ಟಕ್ಕೆ ಇಳಿದ ರಾಜಕೀಯ, ತಿಥಿ ಕಾರ್ಡ್ ಟ್ರೆಂಡಿಂಗ್
ರಾಜ್ಯಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ರಾಜ್ಯ ರಾಜಕೀಯದಲ್ಲಿ ಹೊಸ ಸಮೀಕರಣದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇನ್ನೊಂದು ಕಡೆ, ಜೆಡಿಎಸ್ ಮುಖಂಡರು ಕಾಂಗ್ರೆಸ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ದ ತಿರುಗಿ ಬಿದ್ದಿದ್ದಾರೆ.
ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದಿಂದಾಗಿ ಜೆಡಿಎಸ್ಸಿನ ಇಬ್ಬರು ಶಾಸಕರ ವಿರುದ್ದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದು ಕಡೆ ಇಬ್ಬರು ಶಾಸಕರ ಅಭಿಮಾನಿಗಳು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ವಿರುದ್ದ ಬಳಸಬಾರದ ಪದವನ್ನೆಲ್ಲಾ ಪ್ರಯೋಗಿಸುತ್ತಿದ್ದಾರೆ.
ಜೆಡಿಎಸ್ ಶಾಸಕರ ವೈಕುಂಠ ಸಮಾರಾಧನೆ ಪೊಸ್ಟರ್ ವೈರಲ್!
ರಾಜಕಾರಣದಲ್ಲಿ ಆರೋಪ, ಪ್ರತ್ಯಾರೋಪ, ಏಕವಚನ ಪದಬಳಕೆ ಸಹಜ. ಆದರೆ, ಎರಡೂ ಕಡೆಯವರು ಬದುಕ್ಕಿದ್ದವರನ್ನೇ ಸಾಯಿಸಿ ಕೈಲಾಸ ಸಮಾರಾಧನೆ ಮಾಡಲು ಹೊರಟಿರುವುದು ರಾಜಕಾರಣದ ಅಧಃಪತನ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರು, ಹಿಂದೊಮ್ಮೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರ ಪ್ರತಿಕೃತಿ ದಹನ, ಚಪ್ಪಲಿ ಹಾರ ಹಾಕಿದ್ದಕ್ಕೆ ತಮ್ಮ ಕಾರ್ಯಕರ್ತರು ಮತ್ತು ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಕೋಲಾರದ ಶಾಸಕ ಶ್ರೀನಿವಾಸ ಗೌಡ
ರಾಜ್ಯಸಭಾ ಚುನಾವಣೆಯಲ್ಲಿ ಕೋಲಾರದ ಶಾಸಕ ಶ್ರೀನಿವಾಸ ಗೌಡ ಮತ್ತು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅಡ್ಡಮತದಾನ ಮಾಡಿದ್ದಾರೆಂದು ಜೆಡಿಎಸ್ ಶಾಸಕರು ಅವರಿಬ್ಬರ ಕೈಲಾಸ ಸಮಾರಾಧನೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು. ಈಗ, ಆ ಇಬ್ಬರು ಶಾಸಕರ ಅಭಿಮಾನಿಗಳ ಸರದಿ. ಈಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಅದೇ ರೀತಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅಡ್ಡಮತದಾನ
ಅಡ್ಡ ಮತದಾನದ ವಿರುದ್ದ ಜೆಡಿಎಸ್ ಮುಖಂಡರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಕೆಟ್ಟ ಪದಪುಂಜಗಳು ಪುಂಖಾನುಪುಂಖವಾಗಿ ಕೇಳಿ ಬಂದಿದ್ದವು. ಲೋಫರ್.. ಬೆಂಗಳೂರಿಗೆ ಬಾ..ನೋಡ್ಕೋತೀನಿ.. ನಾವೂ ಅಪ್ಪಅಮ್ಮನಿಗೆ ಹುಟ್ಟಿದ್ದು.. ಎನ್ನುವ ಪದಗಳು ನಾಯಕರ ಬಾಯಿಯಿಂದ ಉದುರುತ್ತಿದ್ದರೆ, ಕಾರ್ಯಕರ್ತರು ಅದಕ್ಕೆ ಉಘೇ..ಉಘೇ.. ಎನ್ನುತ್ತಿದ್ದರು.
'ಏ ಗುಬ್ಬಿ ಶ್ರೀನಿವಾಸ್ ಬೆಂಗಳೂರಿಗೆ ಬಂದಿದ್ದೇನೆಂದು ಹೇಳು, ಸಾಕು'
ಶ್ರೀನಿವಾಸ ದ್ವಯರ ಬೆಂಬಲಗರೂ ಅದೇ ದಾರಿಯನ್ನು ಹಿಡಿದರು
ಇದಕ್ಕೆ, ತಾವೂ ಯಾವುದಕ್ಕೂ ಕಮ್ಮಿ ಇಲ್ಲ ಎನ್ನುವಂತೆ ಶ್ರೀನಿವಾಸ ದ್ವಯರ ಬೆಂಬಲಗರೂ ಅದೇ ದಾರಿಯನ್ನು ಹಿಡಿದರು. ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅಂತೂ ಮಾಜಿ ಮುಖ್ಯಮಂತ್ರಿ ಅನ್ನೋದನ್ನೇ ಮರೆತು ಏಕವಚನದಲ್ಲಿ ಕುಮಾರಸ್ವಾಮಿ ವಿರುದ್ದ ಹರಿಹಾಯ್ದಿದರು. ಅವರ ಮನೆಯ ಮುಂದೆ ಜೆಡಿಎಸ್ ಬೆಂಬಲಿಗರು ನಡೆಸಿದ ಪ್ರತಿಭಟನೆಯ ವೇಳೆ, ಶ್ರೀನಿವಾಸ್ ಬೆಂಬಲಿಗರ ನಡುವೆ ಮಾರಾಮಾರಿ ಆಗುವುದೊಂದು ಬಾಕಿ. ಜೆಡಿಎಸ್ ಅಭಿಮಾನಿಗಳು ಹರಿಯ ಬಿಟ್ಟಿದ್ದ ಕೈಲಾಸ ಸಮಾರಾಧನೆ ಪೋಸ್ಟಿಗೆ ಇಬ್ಬರು ಶಾಸಕರ ಬೆಂಬಲಿಗರು ತಮ್ಮ ಎಡಿಟಿಂಗ್ ಕರಾಮತ್ತನ್ನು ತೋರಿಸಿದ್ದಾರೆ.
ಬದುಕ್ಕಿದ್ದವರನ್ನೇ ಸಾಯಿಸಿ ಕೈಲಾಸ ಸಮಾರಾಧನೆ
ಶ್ರೀನಿವಾಸ ಗೌಡ, ಎಸ್.ಆರ್.ಶ್ರೀನಿವಾಸ್, ಎಚ್.ಡಿ.ಕುಮಾರಸ್ವಾಮಿಯ ಹೆಸರಿನ ಸಮಾರಾಧನೆಯ ಪೋಸ್ಟ್ ನಲ್ಲಿ ಬದಲಾಗಿರುವುದು ದಿನಾಂಕ, ಫೋಟೋ, ಸ್ಥಳ ಮಾತ್ರ, ಮಿಕ್ಕೆಲ್ಲವೂ ಸೇಮ್. ಬದುಕಿದ್ದಾಗಲೇ ಈ ರೀತಿಯ ಫೋಟೋ ನೋಡಲು ಅವರವರ ಕುಟುಂಬದವರಿಗೆ, ಆಪ್ತವರ್ಗಕ್ಕೆ ಎಷ್ಟು ಕಷ್ಟವಾಗಬಹುದು ಎನ್ನುವುದನ್ನೂ ಅರಿಯದ ಇಂತವರಿಂದ ರಾಜಕೀಯ ಇನ್ನಷ್ಟು ಹೊಲಸಾಗುವುದೋ? ಈಗಲೇ ಹೀಗಾದರೆ, ಮುಂಬರುವ ಚುನಾವಣೆಯ ಹೊತ್ತಿಗೆ ಯಾವ ಮಟ್ಟಿಗೆ ದ್ವೇಷ ತಾಂಡವವಾಡಬಹುದು ಎನ್ನುವುದು ಚಿಂತಿಸ ಬೇಕಾದಂತಹ ವಿಚಾರ.
Recommended Video