ಲಂಕಾ ಪ್ರಧಾನಿ ದಿನೇಶ್- ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಕುಟುಂಬ ಅವರದ್ದು
ಶ್ರೀಲಂಕಾದ ನೂತನ ರಾಷ್ಟ್ರಪತಿಯಾಗಿ ರಾನಿಲ್ ವಿಕ್ರಮಸಿಂಘೆ ಪದಗ್ರಹಣ ಮಾಡಿದ ಬೆನ್ನಲ್ಲೇ ಶುಕ್ರವಾರ ನೂತನ ಪ್ರಧಾನಿಯಾಗಿ ದಿನೇಶ್ ಗುಣವರ್ದನ ಅಧಿಕಾರ ಸ್ವೀಕರಿಸಿದ್ದಾರೆ.
ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಮಹತ್ವದ ಸಂದರ್ಭದಲ್ಲಿ ಪ್ರಧಾನಿಯಾಗಿರುವ ದಿನೇಶ್ ಗುಣವರ್ದನ ಅವರ ಮುಂದೆ ಅಗಣಿತ ಸವಾಲುಗಳಿವೆ. ಹಿಂದೆ ವಿದೇಶಾಂಗ ಸಚಿವ ಮತ್ತು ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ ಅನುಭವ ಇರುವ ದಿನೇಶ್ ಗುಣವರ್ದನ ದೇಶ ಮುನ್ನಡೆಸಲು ಸಮರ್ಥರಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
Breaking; ಶ್ರೀಲಂಕಾದ ಅಧ್ಯಕ್ಷರಾಗಿ ವಿಕ್ರಮಸಿಂಘೆ ಅಧಿಕಾರ ಸ್ವೀಕಾರ
ರಾಜಪಕ್ಸೆ ಕುಟುಂಬಕ್ಕೆ ನಿಷ್ಠರಾಗಿರುವ 73 ವರ್ಷದ ದಿನೇಶ್ ಬಹಳ ನೇರ ನಡೆ ನುಡಿಯ ಸ್ವಭಾವದವರು. ಸಚಿವರಾಗಿ ದಕ್ಷತೆಯಿಂದ ಕರ್ತವ್ಯ ನಿಭಾಯಿಸಿದ್ಧಾರೆ. ವಿರೋಧ ಪಕ್ಷದ ನಾಯಕನಾಗಿಯೂ ಬಹಳ ಪ್ರಖರವಾಗಿ ಟೀಕೆ ಟಿಪ್ಪಣಿ ಮಾಡಿ ಸೈ ಎನಿಸಿದ್ದಾರೆ.
ಹಿಂದೆ ರಾನಿಲ್ ವಿಕ್ರಮಸಿಂಘೆ ಪ್ರಧಾನಿಯಾಗಿದ್ದಾಗ ದಿನೇಶ್ ಗುಣವರ್ದನ ವಿರೋಧ ಪಕ್ಷದ ನಾಯಕರಾಗಿದ್ದರು. ಸರಕಾರದ ವಿರುದ್ಧ ವಿಪಕ್ಷಗಳನ್ನು ಒಗ್ಗೂಡಿಸಿ ಕಟು ಟೀಕೆಗಳನ್ನು ಮಾಡಿದ್ದರು. ದಶಕಗಳ ಕಾಲ ವಿಕ್ರಮಸಿಂಘೆಯನ್ನು ವಿರೋಧಿಸಿಕೊಂಡು ಬಂದಿದ್ದ ಗುಣವರ್ದನ ಇದೀಗ ಅದೇ ವಿಕ್ರಮಸಿಂಘೆ ಅಡಿಯಲ್ಲಿ ಪ್ರಧಾನಿಯಾಗುತ್ತಿರುವುದು ವಿಚಿತ್ರ.
ಶ್ರೀಲಂಕಾ; ಪ್ರತಿಭಟನಾಕಾರರ ಶಿಬಿರವನ್ನೇ ಕೆಡವಿದ ಭದ್ರತಾ ಸಿಬ್ಬಂದಿ
ಸಮಾಜವಾದಿ ಹಿನ್ನೆಲೆ
ದಿನೇಶ್ ಗುಣವರ್ದನ ಶ್ರೀಲಂಕಾದ ಪ್ರಧಾನಿಯಾಗುತ್ತಿರುವುದು ಭಾರತಕ್ಕೂ ಮಹತ್ವದ್ದು. ವೈಯಕ್ತಿಕವಾಗಿ ಮತ್ತು ಭಾವನಾತ್ಮಕವಾಗಿ ದಿನೇಶ್ ಗುಣವರ್ದನ ಭಾರತದೊಂದಿಗೆ ಬೆಸೆದುಕೊಂಡಿದ್ದಾರೆ. ಇವರ ಕುಟುಂಬಕ್ಕೆ ಭಾರತವೆಂದರೆ ಪ್ರೀತಿ.
ದಿನೇಶ್ ಗುಣವರ್ದನ ಅವರ ತಂದೆ ಫಿಲಿಪ್ ಗುಣವರ್ದನ ಶ್ರೀಲಂಕಾದಲ್ಲಿ ಸಮಾಜವಾದದ ಪಿತಾಮಹ ಎಂದು ಪರಿಗಣಿಸಲಾಗಿದೆ. ಭಾರತದ ಸಮಾಜವಾದದ ಕ್ರಾಂತಿ ಹುಟ್ಟುಹಾಕಿದ ಜಯಪ್ರಕಾಶ್ ನಾರಾಯಣ್ ಅವರ ಸಹಪಾಠಿಯಂತೆ.
ಅಮೆರಿಕದ ವಿಸ್ಕಾನ್ಸಿನ್ ಯೂನಿವರ್ಸಿಟಿಯಲ್ಲಿ ಫಿಲಿಪ್ ಗುಣವರ್ದನ, ಜಯಪ್ರಕಾಶ್ ನಾರಾಯಣ, ವಿಕೆ ಕೃಷ್ಣ ಮೆನನ್ ಈ ಮೂವರೂ ಒಂದೇ ತರಗತಿಯಲ್ಲಿ ಓದಿದವರು. ಅಮೆರಿಕದ ರಾಜಕೀಯದಲ್ಲಿದ್ದ ಸಾಮ್ರಾಜ್ಯಶಾಹಿತನದ ವಿರುದ್ಧ ಹೋರಾಟದಲ್ಲಿ ಇವರ ಪಾಲ್ಗೊಂಡಿದ್ದರು. ಬಳಿಕ ಲಂಡನ್ನ ಭಾರತೀಯ ಸಾಮ್ರಾಜ್ಯಶಾಹಿ ವಿರೋಧಿ ಕೂಟದ ನಾಯಕತ್ವ ವಹಿಸಿ ಹೋರಾಡಿದ್ದರು.
ಭಾರತದ ಸ್ವಾತಂತ್ರ್ಯ ಹೋರಾಟ
ದಿನೇಶ್ ಗುಣವರ್ದನ ತಂದೆ ಫಿಲಿಪ್ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಪಾಲ್ಗೊಂಡಿದ್ದರೆಂದು ಹೇಳಲಾಗುತ್ತದೆ. ಅವರ ಕಟುಂಬದ ಬಹುತೇಕ ಮಂದಿ ಭಾರತದ ಪರ ಒಲವು ಹೊಂದಿರುವವರೇ ಆಗಿದ್ದರು. ಫಿಲಿಪ್ ಗುಣವರ್ದನ ಮತ್ತು ಅವರ ಪತ್ನಿ ಕುಸುಮಾ ಎರಡನೇ ಮಹಾಯುದ್ಧದ ವೇಳೆ ಶ್ರೀಲಂಕಾದಿಂದ ತಪ್ಪಿಸಿಕೊಂಡು ಭಾರತಕ್ಕೆ ಹೋಗಿದ್ದರು.
ಭಾರತದಲ್ಲಿ ಆಗ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟಗಳಿಗೆ ಫಿಲಿಪ್ ಮತ್ತು ಕುಸುಮಾ ಕೈ ಜೋಡಿಸಿದ್ದರು. 1943ರಲ್ಲಿ ಬ್ರಿಟನ್ ಗುಪ್ತಚರರ ಸಹಾಯದಿಂದ ಅವರಿಬ್ಬರನ್ನು ಬಂಧಿಸಿ ಆಗಿನ ಬಾಂಬೆಯ ಆರ್ಥರ್ ರೋಡ್ ಜೈಲಿನಲ್ಲಿ ಇರಿಸಲಾಗಿತ್ತು. ಒಂದು ವರ್ಷದ ಬಳಿಕ ಅವರನ್ನು ಶ್ರೀಲಂಕಾಗೆ ಸಾಗಿಸಲಾಯಿತು. ಯುದ್ಧ ಮುಗಿಯುವವರೆಗೂ ಅವರು ಲಂಕಾದಲ್ಲಿ ಬಂಧನದಲ್ಲೇ ಉಳಿದಿದ್ದರು.
ದಿನೇಶ್ಗೂ ಭಾರತವೆಂದರೆ ಅಭಿಮಾನ
ತಮ್ಮ ತಂದೆ ಹಾಗು ಕುಟುಂಬದವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ವಿಚಾರದ ಬಗ್ಗೆ ದಿನೇಶ್ ಗುಣವರ್ದನ ಹೆಮ್ಮೆ ಪಡುತ್ತಾರೆ. ಬ್ರಿಟಿಷರನ್ನು ಇಡೀ ದಕ್ಷಿಣ ಏಷ್ಯಾದಿಂದ ಕಾಲ್ತೆಗೆಯುವಂತೆ ಮಾಡುವ ಮಹಾ ಹೋರಾಟದ ಭಾಗವಾಗಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕುಟುಂಬ ಭಾಗಿಯಾಗಿತ್ತು. ದಿನೇಶ್ ಈಗಲೂ ಇದನ್ನು ಸ್ಮರಿಸಿಕೊಳ್ಳುತ್ತಾರೆ.
ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕರೆ, ಶ್ರೀಲಂಕಾ ಒಂದು ವರ್ಷದ ಬಳಿಕ ಸ್ವಾತಂತ್ರ್ಯ ಪಡೆಯಿತು. ದಿನೇಶ್ ತಂದೆ ಮತ್ತು ತಾಯಿ ಫಿಲಿಪ್ ಮತ್ತು ಕುಸುಮಾ ಇಬ್ಬರೂ ಸಂಸದರಾದರು. ಫಿಲಿಪ್ ಗುಣವರ್ದನಾ 1956ರಲ್ಲಿ ಪೀಪಲ್ಸ್ ರೆವಲ್ಯೂಶನ್ ಪಕ್ಷ ಸ್ಥಾಪಿಸಿ ಅಧಿಕಾರಕ್ಕೆ ತಂದರು.
ಭಾರತದ ಜೊತೆ ಬಾಂಧವ್ಯ
ತಮ್ಮ ತಂದೆ, ತಾಯಿಯಂತೆ ದಿನೇಶ್ ಗುಣವರ್ದನ ಕೂಡ ದೇಶಪ್ರೇಮಿಯೂ ಹೌದು ಭಾರತ ಪ್ರೇಮಿಯೂ ಹೌದು. ಹಾಗೆಯೇ, ಯಾವುದೇ ಕಳಂಕ ಇಲ್ಲದ ವ್ಯಕ್ತಿತ್ವ ಅವರದ್ದು. ಭಾರತ ಮತ್ತು ಶ್ರೀಲಂಖಾ ನಡುವೆ ಉತ್ತಮ ಬಾಂಧವ್ಯ ನಿರ್ಮಾಣಕ್ಕಾಗಿ ಅವರು ಬಹಳ ಶ್ರಮಿಸಿದ್ದಾರೆ. ಈಗ ಅವರು ಪ್ರಧಾನಿಯಾಗುತ್ತಿರುವುದು ಭಾರತಕ್ಕೆ ಮಹತ್ವದ್ದಾಗಿರುತ್ತದೆ.
"ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ಶ್ರೀಲಂಕಾ ಮತ್ತು ಭಾರತ ನಿಕಟವಾಗಿರುವ ನೆರೆದೇಶಗಳಾಗಿವೆ. ಪೌರಾಣಿಕವಾಗಿಯೂ ಜೋಡಿತವಾಗಿರುವ ದೇಶಗಳಾಗಿವೆ. ಈ ಹಿನ್ನೆಲೆಯಲ್ಲಿ ಎರಡೂ ದೇಶಘಳ ಮಧ್ಯೆ ಒಳ್ಳೆಯ ಸಂಬಂಧ ಇರುವುದು ಮುಖ್ಯ. ಮುಂದಿನ ದಿನಗಳಲ್ಲಿ ಈ ಬಾಂಧವ್ಯ ವೃದ್ಧಿಗೆ ಸಾಕಷ್ಟು ಕೆಲಸ ಮಾಡುವುದಿದೆ" ಎಂದು ದಿನೇಶ್ ಗುಣವರ್ದನ ಅವರ ಆಪ್ತರು ಹೇಳುತ್ತಾರೆ.
ಆದರೆ, ದಿನೇಶ್ ಮುಂದೆ ಪ್ರಬಲ ಸವಾಲು ಇದೆ. ಅಧಿಕಾರ ಉಳಿದಿರುವ ಎರಡು ವರ್ಷದಲ್ಲಿ ಆರ್ಥಿಕ ಸುಧಾರಣೆಗಳನ್ನು ತರುವುದು ಕಷ್ಟದ ಕೆಲಸ. ತೀರಾ ನೆಲಕಚ್ಚಿರುವ ಆರ್ಥಿಕತೆಯನ್ನು ಬೇಗ ಮೇಲೆತ್ತಲು ಪವಾಡವೇ ಆಗಬೇಕು.
(ಒನ್ಇಂಡಿಯಾ ಸುದ್ದಿ)
Recommended Video