ಐಟಿ ದಾಳಿ: ಘನ ತಾಜ್ಯ ಕಂಪನಿಗಳಿಂದ 70 ಕೋಟಿ ರೂ. ಅಕ್ರಮ ವಹಿವಾಟು ಬಯಲಿಗೆ
ಬೆಂಗಳೂರು, ಅ. 17: ಕೆಲ ದಿನಗಳ ಹಿಂದೆ ಐಟಿ ದಾಳಿಗೆ ತುತ್ತಾಗಿದ್ದ ಡಿಜಿಟಲ್ ಮಾರ್ಕೆಟಿಂಗ್ ಮತ್ತು ಕ್ಯಾಂಪೇನ್ ಮ್ಯಾನೇಜ್ಮೆಂಟ್ ಕಂಪನಿಗಳು ಹವಾಲ ದಂಧೆ ನಡೆಸಿರುವ ಸ್ಫೋಟಕ ಸಂಗತಿ ಹೊರ ಬಿದ್ದಿದೆ.
ಬೆಂಗಳೂರು, ಸೂರತ್ ಮತ್ತು ಮೊಹಾಲಿ ಸೇರಿದಂತೆ ಏಳು ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಂಗಳೂರಿನ ಡಿಸೈನ್ ಬಾಕ್ಸ್ ಕಂಪನಿ ಕೂಡ ದಾಳಿ ನಡೆದಿತ್ತು. ಡಿ. ಕೆ. ಶಿವಕುಮಾರ್ ಸೇರಿದಂತೆ ಹಲವು ಪ್ರಭಾವಿ ರಾಜಕಾರಣಿಗಳ ಪ್ರಭಾವವನ್ನು ಸಾಮಾಜಿಕ ಜಾಲ ತಾಣದಲ್ಲಿ ಹೆಚ್ಚಿಸುವ ನಿಟ್ಟಿನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕಂಪನಿಗಳು ಹುಟ್ಟಿಕೊಂಡಿವೆ. ಬೆಂಗಳೂರು ಡಿಸೈನ್ ಬಾಕ್ಸ್ ಕಂಪನಿ ಕೂಡ ದಾಳಿಗೆ ಒಳಗಾಗಿತ್ತು.
ಹವಾಲ ದಂಧೆ: ಬೆಂಗಳೂರಿನ ಡಿಸೈನ್ ಕಂಪನಿ ಸೇರಿದಂತೆ ಡಿಜಿಟಲ್ ಮಾರ್ಕೆಟಿಂಗ್ ಕಂಪನಿಗಳು ಹವಾಲ ಆಪರೇಟರ್ ಗಳ ಮೂಲಕ ಹಣ ವರ್ಗಾವಣೆ ಮಾಡಿರುವ ಸಂಬಂಧ ಐಟಿ ಅಧಿಕಾರಿಗಳು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ತಮ್ಮ ವೈಯಕ್ತಿಕ ಖುರ್ಚುಗಳನ್ನು ಬ್ಯುಸಿನೆಸ್ ಅಡಿ ತೋರಿಸಿ ಕಂಪನಿ ಸಂಸ್ಥಾಪಕರು ಅಕ್ರಮ ಎಸಗಿದ್ದಾರೆ. ಈ ಬಗ್ಗೆ ಇನ್ನಷ್ಟು ವಿವರ ಮುಂದಿದೆ...
ಐಷಾರಾಮಿ ಕಾರುಗಳ ಖರೀದಿ
ಕಂಪನಿಗಳ ನಿರ್ದೇಶಕರು ಮತ್ತು ಕುಟುಂಬ ಸದಸ್ಯರ ಹೆಸರಿನಲ್ಲಿ ಐಷಾರಾಮಿ ಕಾರುಗಳನ್ನು ಖರೀದಿ ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಕಂಪನಿಯ ಹೆಸರು ಪ್ರಸ್ತಾಪಿಸದೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ" ಕಂಪನಿಯೊಂದರ ಮೇಲೆ ದಾಳಿ ನಡೆಸಿದಾಗ ಸುಮಾರು ಏಳು ಕೋಟಿ ರೂಪಾಯಿ ಹಣ ಹವಾಲ ಮೂಲಕ ವರ್ಗಾವಣೆ ಮಾಡಿರುವುದಕ್ಕೆ ಸಾಕ್ಷಿಗಳು ಸಿಕ್ಕಿವೆ. ಲೆಕ್ಕಕ್ಕೆ ಸಿಗದ ಹಣವನ್ನು ಹವಾಲಾ ಆಪರೇಟರ್ಗಳ ಮೂಲಕ ವರ್ಗಾವಣೆ ಆಗಿದೆ.
ಘನ ತಾಜ್ಯ ನಿರ್ವಹಣೆ ಕಂಪನಿಯ ಅಕ್ರಮ
ಘನ ತಾಜ್ಯ ನಿರ್ವಹಣೆ ಮಾಡುವ ಸಂಬಂಧ ಹಲವು ಕಂಪನಿಗಳ ಮೇಲೆ ದಾಳಿ ಮಾಡಿದ್ದು, ಘನ ತಾಜ್ಯ ವರ್ಗಾವಣೆ, ಘನ ತಾಜ್ಯ ಸಂಗ್ರಹ ಕುರಿತು ದೇಶದ ಮುನಿಸಿಪಾಲಿಟಿಗಳಲ್ಲಿ ಕಾರ್ಯ ನಿರ್ವ ಹಿಸುತ್ತಿರುವ ಕಂಪನಿಗಳು ಅಕ್ರಮ ಎಸಗಿವೆ. ನಕಲಿ ಬಿಲ್ ಸೃಷ್ಟಿ ಜತೆಗೆ ಉಪ ಗುತ್ತಿಎ ನಿಡಿ ಸುಮಾರು 70 ಕೋಟಿ ರೂ. ವಂಚನೆ ಮಾಡಿರುವ ಸಂಬಂಧ ಮಹತ್ವದ ದಾಖಲೆಗಳು ಜಪ್ತಿಯಾಗಿವೆ.
ಘನ ತ್ಯಾಜ್ಯ ನಿರ್ವಹಣೆ ಸಂಬಂಧ ಐಟಿ ದಾಳಿಗೆ ಒಳಗಾದ ಕಂಪನಿಗೆ ಸೇರಿದ ಏಳು ಕೋಟಿ ರೂಪಾಯಿ ಮೊತ್ತದ ಬೇನಾಮಿ ಆಸ್ತಿ ಪತ್ತೆಯಾಗಿದೆ. ಅಲ್ಲದೇ , 1.95 ಕೋಟಿ ರೂ. ಮೌಲ್ಯದ ಅಕ್ರಮ ನಗದು, 65 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಐಟಿ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಇಡಿ ಎಂಟ್ರಿ ಪಕ್ಕಾ
ರಾಜ್ಯದ ಪ್ರಭಾವಿ ರಾಜಕಾರಣಿಗಳ ವರ್ಚಸ್ಸು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಡಿಜಿಟಲ್ ಮಾರ್ಕೆಟಿಂಗ್ ಕಂಪನಿಗಳು ಐಟಿ ದಾಳಿಗೆ ತುತ್ತಾಗಿವೆ. ಅದರಲ್ಲಿ ಮಾಡಬಾರದ ಅಕ್ರಮ ಮಾಡುವ ಜತೆಗೆ ಹಣದ ಅಕ್ರಮ ವಹಿವಾಟು ನಡೆಸಿರುವುದು ಪತ್ತೆಯಾಗಿದೆ. ಹೀಗಾಗಿ ಹವಾಲ ದಂಧೆ ನಡೆಸಿದ ಆರೋಪಕ್ಕೆ ಗುರಿಯಾಗಿರುವ ಕಂಪನಿಗಳ ಅಕ್ರಮದ ಬಗ್ಗೆ ತನಿಖೆ ನಡೆಸಲು ಜಾರಿ ನಿರ್ದೆಶನಾಲಯ ಎಂಟ್ರಿ ಕೊಡಲಿದೆ. ಹಣದ ಬೇನಾಮಿ ವಹಿವಾಟಿನ ಬಗ್ಗೆ ಇಡಿ ಅಧಿಕಾರಿಗಳೇ ತನಿಖೆ ನಡೆಸಲಿದ್ದು, ಕೆಲ ಜನ ಪ್ರತಿನಿಧಿಗಳಿಗೂ ತಲೆ ಬಿಸಿ ಉಂಟು ಮಾಡಿದೆ.
ಜಲ ಸಂಪನ್ಮೂಲ ಅಕ್ರಮ
ರಾಜ್ಯದ ಜಲ ಸಂಪನ್ಮೂಲ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯಲ್ಲಿನ ಗುತ್ತಿಗೆ ಕಾಮಗಾರಿಗಳಲ್ಲಿನ ಅಕ್ರಮ ಸಂಬಂಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರಾಜ್ಯದಲ್ಲಿ50 ಕ್ಕೂ ಹೆಚ್ಚು ಕಡೆ ದಾಳಿ ಮಾಡಿದ್ದರು. ಡಿ. ವೈ. ಉಪ್ಪಾರ್ ಕಂಪನಿ, ಬಿ. ಎಸ್. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ ಆಪ್ತರು ಸೆರಿದಂತೆ ಪ್ರಮುಖರು ಐಟಿ ದಾಳಿಗೆ ತುತ್ತಾಗಿದ್ದರು. ದಾಳಿ ವೇಳೆ ಸುಮಾರು 700 ಕೋಟಿ ರೂ. ಗೂ ಅಧಿಕ ಮೊತ್ತದ ಅಕ್ರಮ ವಹಿವಾಟಿನ ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಕೊರೊನಾ ಸೋಂಕಿನ ಬಳಿಕ ನಡೆದಿದ್ದ ಬಹುದೊಡ್ಡ ಐಟಿ ದಾಳಿ ಇದಾಗಿದ್ದು, ಈ ಕಂಪನಿಗಳ ಜತೆ ಒಡನಾಟ ಹೊಂದಿದ ಪ್ರಭಾವಿ ರಾಜಕಾರಣಿಗಳಿಗೆ ನಿದ್ದೆಗೆಡಿಸಿದೆ. ಈ ಎರಡೂ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಪ್ರಕರಣ ದಾಖಲಿಸಿ ತನಿಖೆ ನಡೆಸುವ ಸಾಧ್ಯತೆಯಿದೆ.