Independence Day : ಆ. 15ಕ್ಕೆ ಧ್ವಜ ಏರಿಸೋದ್ಯಾಕೆ, ಜ. 26 ಬಿಚ್ಚೋದ್ಯಾಕೆ?
ರಾಷ್ಟ್ರಧ್ವಜ ಹಾರಿಸುವುದು ಯಾವಾಗಲೂ ಮನಸಿಗೆ ದೇಶಪ್ರೇಮ, ರೋಚಕತೆ ಹುಟ್ಟಿಸುವ ಘಟನೆ. ನಮ್ಮ ದೇಶ, ನಮ್ಮ ನಾಡಿನ ಬಗ್ಗೆ ಹೆಮ್ಮೆ ಮೂಡಿಸುವ ಪ್ರಸಂಗ. ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನೋತ್ಸವದಂದು ತ್ರಿವರ್ಣ ಧ್ವಜ ಹಾರುವುದನ್ನು ನಾವು ಪ್ರತೀ ವರ್ಷವೂ ಕಾಣುತ್ತೇವೆ.
ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನಗಳಂದು ಕಾರ್ಯಕ್ರಮಗಳು ವಿಭಿನ್ನವಾಗಿರುವುದನ್ನು ನೀವು ಗಮನಿಸಿರಬಹುದು. ಹಾಗೆಯೇ, ರಾಷ್ಟ್ರಧ್ವಜ ಹಾರಾಟ ವಿಚಾರದಲ್ಲೂ ಈ ದಿನಗಳಲ್ಲಿ ಭಿನ್ನತೆ ಇರುವುದು ಗಮನಕ್ಕೆ ಬಂದಿರಬಹುದು.
ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಹಾರಲಿದೆ ತ್ರಿವರ್ಣ ಧ್ವಜ
ಭಾರತಕ್ಕೆ 1947, ಆಗಸ್ಟ್ 15ರಂದು ಸ್ವಾತಂತ್ರ್ಯ ಸಿಕ್ಕಿತು. 1950, ಜನವರಿ 26ರಂದು ಭಾರತವನ್ನು ಗಣತಂತ್ರ ದೇಶವೆಂದು ಘೋಷಿಸಲಾಯಿತು. ಭಾರತಕ್ಕೆ ಅಂದು ಸಂವಿಧಾನದ ರಚನೆಯಾಯಿತು. ಹಾಗೆಯೆ, ಬ್ರಿಟನ್ ದೊರೆಯ ಅಧೀನದಲ್ಲಿ ಸ್ವತಂತ್ರ ದೇಶವಾಗಿದ್ದ ಭಾರತ ಸಂಪೂರ್ಣ ಸ್ವತಂತ್ರ ದೇಶವಾಗಿ ಮಾರ್ಪಟ್ಟ ದಿನ 1950, ಜನವರಿ 26.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷವಾಗಿದೆ. ಈ ನಿಮಿತ್ತ ಈ ವರ್ಷಾದ್ಯಂತ ಅಮೃತಮಹೋತ್ಸವ ಆಚರಿಸಲಾಗುತ್ತಿದೆ. ಪ್ರತಿಯೊಬ್ಬರೂ ರಾಷ್ಟ್ರಧ್ವಜ ಹಾರಿಸಿ ದೇಶಭಕ್ತಿಯ ಸಂಭ್ರಮ ತೋರ್ಪಡಿಸುತ್ತಾರೆ. ಜನಸಾಮಾನ್ಯರು ರಾಷ್ಟ್ರಧ್ವಜ ಹೇಗೆ ಬಳಸಬೇಕು, ಹೇಗೆ ಬಳಸಬಾರದು ಎಂಬ ನಿಯಮಗಳು ಇವೆ. ಹಾಗೆಯೇ, ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣತಂತ್ರ ದಿನಾಚರಣೆಯಲ್ಲಿ ಧ್ವಜ ಹಾರಾಟ ಮತ್ತಿತರ ಕಾರ್ಯಕ್ರಮಗಳಲ್ಲಿ ಕೆಲ ಪ್ರಮುಖ ವ್ಯತ್ಯಾಸಗಳಿವೆ.
ಸ್ವಾತಂತ್ರ್ಯೋತ್ಸವದಂದು ರಾಷ್ಟ್ರಧ್ವಜದ ಆರೋಹಣ ಆಗುತ್ತದೆ. ಗಣರಾಜ್ಯೋತ್ಸವದಂದು ರಾಷ್ಟ್ರಧ್ವಜದ ಅನಾವರಣ ಆಗುತ್ತದೆ. ಯಾಕೆ ಹೀಗೆ? ಇದಷ್ಟೇ ಅಲ್ಲ, ಆ ದಿನಗಳ ಕೆಲ ಕಾರ್ಯಕ್ರಮಗಳಲ್ಲೂ ಗಮನಾರ್ಹ ಬದಲಾವಣೆ ಇದೆ.
ಧ್ವಜ ಹಾರಾಟ ಹೇಗೆ?
ಸ್ವಾತಂತ್ರ್ಯ ದಿನಾಚರಣೆ ವೇಳೆ ಧ್ವಜಾರೋಹಣ ಮಾಡಲಾಗುತ್ತದೆ. ಇಂಗ್ಲೀಷ್ನಲ್ಲಿ ಫ್ಲ್ಯಾಗ್ ಹಾಯ್ಸ್ಟಿಂಗ್ (Flag Hoisting) ಎನ್ನುತ್ತಾರೆ. ಇಲ್ಲಿ ಧ್ವಜ ಸ್ತಂಭದ ಕೆಳಗೆ ಬಾವುಟ ಕಟ್ಟಿ ಬಿಡಲಾಗಿರುತ್ತದೆ. ದಾರದಿಂದ ಬಾವುಟವನ್ನು ಮೇಲಕ್ಕೆ ಏರಿಸಲಾಗುತ್ತದೆ. ಇದನ್ನೇ ಧ್ವಜಾರೋಹಣ ಎನ್ನುವುದು. ಆರೋಹಣ ಎಂದರೆ ಮೇಲೇರುವುದು ಎಂದರ್ಥ.
ಇನ್ನು, ಗಣರಾಜ್ಯೋತ್ಸವದಂದು ಧ್ವಜಸ್ತಂಬದ ತುದಿಯಲ್ಲಿ ಮೊದಲೇ ರಾಷ್ಟ್ರಧ್ವಜವನ್ನು ಸುತ್ತಿ ಕಟ್ಟಿರಲಾಗುತ್ತದೆ. ಅದರೊಳಗೆ ಹೂವುಗಳನ್ನು ಸೇರಿಸಲಾಗಿರುತ್ತದೆ. ದಾರದಿಂದ ಎಳೆದು ಕಟ್ಟನ್ನು ಬಿಚ್ಚಿದಾಗ ಧ್ವಜ ಅನಾವರಣಗೊಳ್ಳುತ್ತದೆ. ಪುಷ್ಪಮಳೆಯಾಗುತ್ತದೆ. ಇದು ಧ್ವಜ ಅನಾವರಣ ಅಥವಾ ಧ್ವಜ ಬಿಚ್ಚುವಿಕೆ ಎನ್ನಬಹುದು. ಇಂಗ್ಲೀಷ್ನಲ್ಲಿ ಇದನ್ನು ಅನ್ಫರ್ಲಿಂಗ್ ದಿ ಫ್ಲ್ಯಾಗ್ ಎನ್ನುತ್ತಾರೆ.
75ನೇ ಸ್ವಾತಂತ್ರ್ಯ ಸಂಭ್ರಮ: 75 ಮೀಟರ್ ರಾಷ್ಟ್ರಧ್ವಜ ಹೊತ್ತು ನಡೆದ ಬೆಂಗಳೂರು ನಾಗರಿಕರು
ಯಾಕೆ ಈ ವ್ಯತ್ಯಾಸ?
ಆಗಸ್ಟ್ 15 ನಮಗೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕ ದಿನ. ಮೊದಲ ಬಾರಿಗೆ ರಾಷ್ಟ್ರಧ್ವಜ ಹಾರಿಸಿದ ಕ್ಷಣ. ಬ್ರಿಟಿಷರ ಧ್ವಜ ಇಳಿಸಿ ಭಾರತದ ಹೊಸ ಬಾವುಟ ಹಾರಿಸಿದ ದಿನ. ಹೀಗಾಗಿ, ಆ ದಿನದಂದು ಬಾವುಟವನ್ನು ಕೆಳಗಿನಿಂದ ಮೇಲಕ್ಕೆ ಆರೋಹಣ ರೀತಿಯಲ್ಲಿ ಬಾವುಟವನ್ನು ಹಾರಿಸಲಾಗುತ್ತದೆ.
ಇನ್ನು, ಗಣರಾಜ್ಯೋತ್ಸವ ದಿನದಂದು ಭಾರತಕ್ಕೆ ಅದಾಗಲೇ ಸ್ವಾತಂತ್ರ್ಯ ಬಂದಾಗಿತ್ತು. ಹೀಗಾಗಿ, ತಳದಿಂದ ಮೇಲಕ್ಕೆ ಬಾವುಟ ಹಾರಿಸಬೇಕಿಲ್ಲ. ಇದು ಪ್ರಮುಖ ವ್ಯತ್ಯಾಸ.
ಆ. 15 ಪ್ರಧಾನಿ, ಜ. 26 ರಾಷ್ಟ್ರಪತಿ
ಆಗಸ್ಟ್ 15ರಂದು ದೇಶದ ಪ್ರಧಾನಿಗಳು ರಾಷ್ಟ್ರಧ್ವಜ ಹಾರಿಸುತ್ತಾರೆ. ಅಂದು ನವದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ನಿಂತು ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ.
ಜನವರಿ 26, ಗಣರಾಜ್ಯೊತ್ಸವ ದಿನದಂದು ದೇಶದ ಮೊದಲ ಪ್ರಜೆಯಾಗಿ ಹಾಗೂ ಸಂವಿಧಾನ ಮುಖ್ಯಸ್ಥರಾಗಿ ರಾಷ್ಟ್ರಪತಿಗಳು ಧ್ವಜ ಅನಾವರಣಗೊಳಿಸುತ್ತಾರೆ. ಇದು ಆಗುವುದು ನವದೆಹಲಿಯ ರಾಜಪಥ್ನಲ್ಲಿ.
ಕಾರ್ಯಕ್ರಮಗಳು ವಿಭಿನ್ನ
ಸ್ವಾತಂತ್ರ್ಯ ದಿನಾಚರಣೆ ದಿನದಂದು ಧ್ವಜಾರೋಹಣದ ಬಳಿಕ ಪ್ರಧಾನಿ ಭಾಷಣ ಇರುತ್ತದೆ. ನಂತರ ಮಕ್ಕಳ ಕಾರ್ಯಕ್ರಮಗಳು ನಡೆಯುತ್ತವೆ.
ಗಣರಾಜ್ಯೋತ್ಸವ ದಿನದಂದು ರಾಷ್ಟ್ರಪತಿಗಳಿಂದ ಧ್ವಜ ಅನಾವರಣವಾದ ಬಳಿಕ ಆಕರ್ಷಕ ಕಾರ್ಯಕ್ರಮಗಳು ನಡೆಯುತ್ತವೆ. ಭಾರತದ ಮೂರು ಸೇನೆಗಳಿಂದ ಪಥಸಂಚಲನ ಆಗುತ್ತದೆ. ಪೊಲೀಸ್ ಇಲಾಖೆಗಳಿಂದಲೂ ಪಥ ಸಂಚಲನ ನಡೆಯುತ್ತದೆ. ದೇಶದ ವಿವಿಧ ರಾಜ್ಯಗಳಿಂದ ಸ್ತಬ್ಧಚಿತ್ರಗಳ ಪ್ರದರ್ಶನ ಆಗುತ್ತದೆ. ನಂತರ ದೇಶದ ವೈವಿಧ್ಯತೆ ತೋರಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.
ಆದರೆ, ಗಮನಿಸಬೇಕಾದ ಅಂಶವೆಂದರೆ ಗಣರಾಜ್ಯೋತ್ಸವ ದಿನಕ್ಕೆ ಒಂದು ದಿನ ಮುನ್ನ ರಾಷ್ಟ್ರಪತಿಗಳು ದೇಶವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ.
(ಒನ್ಇಂಡಿಯಾ ಸುದ್ದಿ)
Recommended Video