ಡಯಾಬಿಟಿಸ್ ನಿಯಂತ್ರಣಕ್ಕೆ ಈ ಮಾರ್ಗಗಳನ್ನು ಅನುಸರಿಸಿ
ಈಗ ಅತ್ಯಂತ ಸಾಮಾನ್ಯ ಕಾಯಿಲೆಗಳಲ್ಲಿ ಡಯಾಬಿಟಿಸ್ ಮತ್ತು ಬಿಪಿ ಇವೆ. ಎರಡೂ ಕೂಡ ಕ್ರೋನಿಕ್ ಕಾಯಿಲೆಗಳೇ ಆಗಿವೆ. ಅಂದರೆ ಬಹಳ ದೀರ್ಘಾವಧಿ ಇರುವ ಕಾಯಿಲೆಗಳು. ಒಮ್ಮೆ ವಕ್ಕರಿಸಿತೆಂದರೆ ಅವು ಖಾಯಂ ನಮ್ಮೊಡನೆ ಉಳಿದುಹೋಗುತ್ತವೆ.
ಡಯಾಬಿಟಿಸ್ ಅಥವಾ ಮಧುಮೇಹ ಎಂಬುದು ಬಹಳ ಗಂಭೀರ ಸ್ವರೂಪವಾಗಿ ಕಾಡಬಲ್ಲ ರೋಗ. ಇದನ್ನು ಸರಿಯಾಗಿ ನಿಯಂತ್ರಿಸದೇ ಇದ್ದರೆ ನಮ್ಮ ದೇಹದ ಹಲವು ಅಂಗಗಳಿಗೆ ಹಾನಿ ಮಾಡಬಲ್ಲುದು.
ಶುಗರ್ ಸಾಮಾನ್ಯವಾಗಿ ಅನುವಂಶಿಕವಾಗಿ ಬರಬಹುದು ಅಥವಾ ನಮ್ಮ ಜೀವನ ಶೈಲಿಯ ಕಾರಣದಿಂದ ಬರಬಹುದು. ಬಹುತೇಕ ಸಂದರ್ಭದಲ್ಲಿ ಜೀವನ ಶೈಲಿಯೇ ವಿಲನ್ ಆಗಿರುತ್ತದೆ. ನಮ್ಮ ಜಡ ಜೀವನ ಶೈಲಿಯಿಂದಾಗಿ ಸಕ್ಕರೆ ಕಾಯಿಲೆ ಬಹಳ ಬೇಗ ವಕ್ಕರಿಸುತ್ತದೆ.
ನಾಲ್ವರಲ್ಲಿ ಒಬ್ಬರಿಗೆ ಹೈ ಬಿಪಿ, ಏಮ್ಸ್ನಿಂದ ಗಂಭೀರ ಮಾಹಿತಿ
ಈ ಸಕ್ಕರೆ ಕಾಯಿಲೆಯ ಮೂಲೋತ್ಪಾಟನ ಮಾಡಲು ಅಸಾಧ್ಯವಿದ್ದರೂ ಅದನ್ನು ನಿಯಂತ್ರಿಸಲು ಸಾಧ್ಯ. ಈ ಕಾರ್ಯಕ್ಕೆ ಯಾವ ಶಾರ್ಟ್ ಕಟ್ ಅಂತೂ ಇಲ್ಲ. ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳದೇ ಬೇರೆ ವಿಧಿ ಇಲ್ಲ.
ವ್ಯಾಯಾಮ
ದೈಹಿಕ ಚಟುವಟಿಕೆ ಬಹಳ ಮುಖ್ಯ. ಶುಗರ್ ಅಂತ ಅಲ್ಲ ನಮ್ಮ ಸಾಮಾನ್ಯ ಆರೋಗ್ಯ ಪಾಲನೆಗೆ ನಿತ್ಯದ ವ್ಯಾಯಾಮ ಅತಿ ಅಗತ್ಯ. ನೀವು ದಿನಕ್ಕೆ ಮುಕ್ಕಾಲು ಗಂಟೆ ವಾಕಿಂಗ್ ಮಾಡಿದರೂ ಸಾಕು, ಎಷ್ಟೋ ಕಾಯಿಲೆಗಳನ್ನು ನಿಯಂತ್ರಿಸಬಹುದು.
ನಿಮ್ಮ ಬಿಡುವಿಲ್ಲದ ದಿನಚರಿಯಲ್ಲಿ ಹೇಗಾದರೂ ಸಮಯ ಹೊಂದಿಸಿಕೊಂಡು ವ್ಯಾಯಾಮಕ್ಕೆ ಆಸ್ಪದ ಕೊಡಬೇಕು. ಕಚೇರಿಗೆ ನಡೆದುಕೊಂಡೇ ಹೋಗುವುದೋ, ಅಥವಾ ಸೈಕಲ್ ಇದ್ದರೆ ಅದರಲ್ಲೇ ಹೋಗುವುದೋ ಮಾಡಬಹುದು. ಜಾಗಿಂಗ್ ಸಾಧ್ಯವಿದ್ದರೆ ಮಾಡಿ. ಕ್ರಿಕೆಟ್, ಬ್ಯಾಡ್ಮಿಂಟನ್, ಬ್ಯಾಸ್ಕೆಟ್ಬಾಲ್ ಹೀಗೆ ಯಾವುದಾದರೂ ಆಟದಲ್ಲಿ ತೊಡಗಿಸಿಕೊಳ್ಳಿ. ಈ ರೀತಿ ನೀವು ದಿನಕ್ಕೆ ಒಂದು ಗಂಟೆಯಾದರೂ ದೈಹಿಕ ಚಟುವಟಿಕೆಯಲ್ಲಿ ತೊಡಗಿದರೆ ಮಧುಮೇಹವನ್ನು ಸುಲಭವಾಗಿ ದೂರ ಮಾಡಬಹುದು.
ತೂಕ ಇಳಿಸಿ
ನಿಮ್ಮ ದೇಹದ ತೂಕ ಮಿತಿಮೀರಿದ್ದರೆ ಮಧುಮೇಹ ವಕ್ಕರಿಸಬಹುದು. ಅದಕ್ಕಾಗಿ ನಿಮ್ಮ ಎತ್ತರಕ್ಕೆ ತಕ್ಕಂತೆ ತೂಕ ಇಳಿಸಿ. ನಿತ್ಯ ವ್ಯಾಯಾಮ ಮಾಡುತ್ತಿದ್ದರೆ ತೂಕ ಇಳಿಸುವುದು ಸುಲಭ. ವ್ಯಾಯಾಮದ ಜೊತೆಗೆ ಪೌಷ್ಟಿಕಾಂಶ ಭರಿತ ಆಹಾರ ಸೇವಿಸುವುದರಿಂದ ಮನಸೋಯಿಚ್ಛೆ ತೂಕ ಇಳಿಸಬಹುದು.
ಆಹಾರ ಕ್ರಮ
ಸಕ್ಕರೆ ಕಾಯಿಲೆ ನಿಯಂತ್ರಿಸಲು ಆಹಾರದ ಪಾತ್ರ ಬಹಳ ಮುಖ್ಯ. ಜಿಡ್ಡು ಹೆಚ್ಚಿರುವ ಪದಾರ್ಥಗಳ ಸೇವನೆ ಕಡಿಮೆ ಮಾಡಬೇಕೆಂದು ಮತ್ತು ಫೈಬರ್ಯುಕ್ತ ಆಹಾರ ಹೆಚ್ಚಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.
ದಿನಕ್ಕೆ ಎರಡು ಅಥವಾ ಮೂರು ಬಾರಿ ಊಟ ಮಾಡುವ ಬದಲು ಹೆಚ್ಚೆಚ್ಚು ಬಾರಿ ಊಟ ಮಾಡಿ. ಆದರೆ, ಊಟದ ಪ್ರಮಾಣ ಸ್ವಲ್ಪ ಇರಲಿ. ಉದಾಹರಣೆಗೆ ನೀವು ಮಧ್ಯಾಹ್ನ ನಾಲ್ಕು ಚಪಾತಿ ತಿನ್ನುವ ಅಭ್ಯಾಸ ಇದ್ದರೆ ಮಧ್ಯಾಹ್ನ ೧ ಮತ್ತು ೪ ಗಂಟೆಗೆ ಎರಡೆರಡು ಚಪಾತಿ ತಿನ್ನಿ. ಈ ರೀತಿ ನೀವು ಆಹಾರವನ್ನು ಭಾಗ ಮಾಡಿಕೊಂಡು ತಿನ್ನುವುದು ಉತ್ತಮ ಎಂಬ ಸಲಹೆಯನ್ನು ತಜ್ಞರು ನೀಡುತ್ತಾರೆ.
ಮಾಂಸಾಹಾರ ಸೇವಿಸುವವರಾಗಿದ್ದರೆ ಸಂಸ್ಕರಿತ ಮಾಂಸದ ಗೋಜಿಗೆ ಹೋಗಬೇಡಿ. ಕೋಳಿಯನ್ನು ಸ್ಕಿನ್ ಮಾಡಿಸಿ ತನ್ನಿ. ಮಟನ್ ಕೂಡ ಅಷ್ಟು ಒಳ್ಳೆಯದಲ್ಲ ಎನ್ನುತ್ತಾರೆ. ಗ್ರಿಲ್ ಮಾಡಿದ ಮತ್ತು ಸ್ಟೀಮ್ ಮಾಡಿದ ಮಾಂಸವನ್ನು ತಿನ್ನಬಹುದು.
ಒತ್ತಡ ನಿವಾರಿಸಿ
ನಮ್ಮ ಅನೇಕ ಅರೋಗ್ಯ ಸಮಸ್ಯೆಗಳಿಗೆ ಒತ್ತಡ ಒಂದು ಕಾರಣ. ಸ್ಟ್ರೆಸ್ಗೆ ಕಾರಣವಾಗುವ ಹಾರ್ಮೋನುಗಳು ಬಿಪಿ ಮತ್ತು ಶುಗರ್ ಹೆಚ್ಚಳಕ್ಕೂ ಕಾರಣವಾಗುತ್ತವೆ. ನಿರಂತರವಾಗಿ ಒತ್ತಡ ಇದ್ದರೆ ಸಕ್ಕರೆ ಮಟ್ಟ ತೀರಾ ಹೆಚ್ಚಾಗಿ ಹೋಗುತ್ತದೆ. ಹೀಗಾಗಿ, ಒತ್ತಡ ನಿವಾರಣೆಗೆ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ.
ದಿನಕ್ಕೆ ಏಳೆಂಟು ಗಂಟೆ ಮಲಗುವುದನ್ನು ರೂಢಿಸಿಕೊಳ್ಳಿ. ಸರಿಯಾದ ಪ್ರಮಾಣದಲ್ಲಿ ನಿದ್ರೆ ಮಾಡುವುದು ನಮ್ಮ ದೇಹಕ್ಕೆ ಬಹಳ ಅಗತ್ಯ. ಮನಸ್ಸನ್ನು ಸದಾ ಹಗುರವಾಗಿರಿಸಿಕೊಳ್ಳಿ. ಸಮಸ್ಯೆಗಳಿಗೆ ಕುಗ್ಗಿಹೋಗದ ರೀತಿಯಲ್ಲಿ ನಿಮ್ಮ ಆಲೋಚನೆಯನ್ನು ಒಗ್ಗಿಸಿಕೊಳ್ಳಿ. ಒತ್ತಡ ಹೆಚ್ಚಾದರೆ ವಾಕಿಂಗ್ ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳಿ.
(ಒನ್ಇಂಡಿಯಾ ಸುದ್ದಿ)