ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಎಲ್ಲರ ಲಕ್ಷ್ಯ ನೈಸರ್ಗಿಕ ಐಸ್ಕ್ರೀಂ ಕಡೆಗೆ
ಧರ್ಮಸ್ಥಳದ ಲಕ್ಷದೀಪೋತ್ಸವ ಕಳೆದ ವಾರಾಂತ್ಯದಲ್ಲಿ ಆರಂಭವಾಗಿದ್ದು, ಶುಕ್ರವಾರ ಸಂಜೆ ಉಜಿರೆಯಿಂದ ಧರ್ಮಸ್ಥಳದವರೆಗೆ ಈ ಭಕ್ತ ಯಾತ್ರೆಯದ್ದೇ ಸೊಗಸಾಗಿತ್ತು. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಹಲವರು ಧರ್ಮಸ್ಥಳದೆಡೆಗಿನ ಭಕ್ತಿಭಾವದ ನಡಿಗೆಯನ್ನು ಸಂಭ್ರಮಿಸಿದರು. ಈ ಮೂಲಕ ಏಳನೇ ವರ್ಷದ ಪಾದಯಾತ್ರೆಯು ಭಿನ್ನವೆನ್ನಿಸಿತು.
ನಂತರ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ತಿಕ ಮಾಸದ ಮಂಗಳಪರ್ವದಲ್ಲಿ ವೈಭವೋಪೇತವಾಗಿ ನೆರವೇರುವ ಹೊಸಕಟ್ಟೆ ಉತ್ಸವದೊಂದಿಗೆ ಲಕ್ಷದೀಪೋತ್ಸವದ ಧಾರ್ಮಿಕ ಪೂಜಾ ಕಾರ್ಯಗಳು ಪ್ರಾರಂಭಗೊಂಡವು. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಹೊಸಕಟ್ಟೆ ಉತ್ಸವದ ಪೂಜಾಕಾರ್ಯದ ವಿಧಿ-ವಿಧಾನಗಳು ನೆರವೇರಿದವು.
ನೈಸರ್ಗಿಕ ಐಸ್ಕ್ರೀಂ ಪಾರ್ಲರ್: ಅಲ್ಲಿಗೆ ಜನ ಸಾಗರವೇ ಹರಿದುಬಂದಿತ್ತು. ದಾವಣಗೆರೆ ಬೆಣ್ಣೆದೋಸೆ, ಚುರುಮುರಿ, ಚಿಪ್ಸ್, ಮೆಕ್ಕೆಜೋಳ ಮುಂತಾದ ಬಗೆ ಬಗೆಯ ತಿಂಡಿಗಳು ಜನರನ್ನು ಆಕರ್ಷಿಸುತ್ತಿದ್ದವು. ಇವೆಲ್ಲವುಗಳ ನಡುವೆ ನೈಸರ್ಗಿಕ ಐಸ್ಕ್ರೀಂ ಪಾರ್ಲರ್ನತ್ತ ನಾ ಮುಂದೆ ತಾ ಮುಂದೆ ಎಂದು ಐಸ್ಕ್ರೀಂ ಪ್ರಿಯರು ನೂಕು ನುಗ್ಗಲಿನಿಂದ ಖರೀದಿಸುತ್ತಿದ್ದರು.
ಕಡಲ ನಗರಿಯಲ್ಲಿ ಸದ್ದು ಮಾಡುತ್ತಿದೆ ಬೊಂಡ ಐಸ್ ಕ್ರೀಮ್!
ಒಂದು ಕಡೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಇನ್ನೊಂದೆಡೆ ವಸ್ತು ಪ್ರರ್ದಶನ ಮತ್ತು ಅಂಗಡಿ ಮುಂಗಟ್ಟುಗಳ ನಡುವೆಯೂ ಈ ನೈಸರ್ಗಿಕ ಐಸ್ಕ್ರೀಂ ಪಾರ್ಲರ್ ಜನರ ಗಮನ ಸೆಳೆದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನ.22 ರಿಂದ ನ.26ವರೆಗೆ ಹಮ್ಮಿಕೊಂಡ ಲಕ್ಷದೀಪೋತ್ಸವದಲ್ಲಿ ಕಂಡು ಬಂದ ದೃಶ್ಯವಿದು.(ಚಿತ್ರಗಳು: ಚಂದನ ಎಸ್.)
ಉಪ್ಪಿನಂಗಡಿಯ ಆದರ್ಶ ಸೂತ್ರಾಯ
ಮೂಲತಃ ಉಪ್ಪಿನಂಗಡಿಯ ಆದರ್ಶ ಸೂತ್ರಾಯ ಹಾಗೂ ತಂದೆ ಗಣಪತಿ ಭಟ್ ಸುಮಾರು ಒಂದೂವರೆ ವರ್ಷದಿಂದ ಜನರ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ನೈಸರ್ಗಿಕ ಐಸ್ಕ್ರೀಂ ಅನ್ನು ತಯಾರಿಸುತ್ತಿದ್ದಾರೆ. ಗಾಂಧಾರಿ ಮೆಣಸು. ಅಡಿಕೆ, ತೆಂಗಿನಕಾಯಿ, ಹಲಸಿನ ಹಣ್ಣು, ಖರ್ಜೂರ, ಮಾವಿನಹಣ್ಣು ಸೇರಿದಂತೆ ಹಲವು ಹಣ್ಣುಗಳಿಂದ ತಯಾರಿಸಿದ ಐಸ್ಕ್ರೀಂ ಅನ್ನು ಉಡುಪಿ, ಮಂಗಳೂರು ಮುಂತಾದನಗರಗಳಲ್ಲಿ ಮಾರಾಟ ಮಾಡುತ್ತಾರೆ.
ಇಂಜಿನಿಯರಿಂಗ್ ಪದವಿಧರ
ಆದರ್ಶ ಅವರು ಕರ್ನಾಟಕದ ಪ್ರಸಿದ್ಧ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಎರಡು ವರ್ಷ ಬೆಂಗಳೂರಿನಲ್ಲಿ ಮತ್ತೆರಡು ವರ್ಷ ಬಾಂಬೆಯ ಐಟಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಬಾಂಬೆಯ ಐಸ್ಕ್ರೀಂ ಪಾರ್ಲರ್ನಲ್ಲಿ ತೆಂಗಿನಕಾಯಿಂದ ತಯಾರಿಸಿದ ಐಸ್ಕ್ರೀಂ ಸವಿದ ನಂತರ ಮೂಲತಃ ಕೃಷಿ ಕುಟುಂಬದವರಾಗಿದ್ದರಿಂದ ಕೃಷಿ ಉತ್ಪನ್ನಗಳನ್ನು ಬಳಸಿ ಐಸ್ಕ್ರೀಂ ಉತ್ಪನ್ನಗಳನ್ನು ತಯಾರಿಸಬಹುದು ಎನ್ನುವ ಯೋಚನೆ ಹೊಳೆಯಿತು. ಆ ಉದ್ದೇಶದಿಂದ ವಿದೇಶದಿಂದ ಅರಸಿ ಬಂದ ಉದ್ಯೋಗವಕಾಶಗಳು ತ್ಯಜಿಸಿದೆ ಎಂದು ಅವರು ತಿಳಿಸಿದರು.
ಯಾವ ಸೀಸನ್ ನಲ್ಲೂ ಮಂಗಳೂರಿನ ಐಡಿಯಲ್ ಐಸ್ ಕ್ರೀಂ ಅಂದರೆ... ಆಹಾ!
ಕೈ ಹಿಡಿದ ತೋಟಗಾರಿಕೆ
ನಮ್ಮ ತೋಟದಲ್ಲಿ ಹಲಸು, ಮಾವು, ತೆಂಗು, ಅಡಿಕೆ ಮೆಣಸಿಕಾಯಿ ಸೇರಿದಂತೆ ವಿವಿಧ ಹಣ್ಣುಗಳನ್ನು ಸಹ ಬೆಳೆಯುತ್ತೇವೆ. ಈ ಬೆಳೆಗಳಿಗೆ ಯಾವುದೇ ರಸಾಯನಿಕಗಳನ್ನು ಬಳಸದೇ, ಸಾವಯವ ಗೊಬ್ಬರವನ್ನು ಬಳಸುತ್ತೇವೆ. ಹಣ್ಣುಗಳು ಬೆಳೆದ ಸಮಯದಲ್ಲಿ ಮಾರುಕಟ್ಟೆಯ ಬೆಲೆ ಕುಸಿದಿರುತ್ತದೆ, ಉತ್ತಮ ಬೆಲೆ ರೈತರಿಗೆ ಸಿಗುವುದಿಲ್ಲ. ಬಹಳಷ್ಟು ಸಮಯದಲ್ಲಿ ಹಣ್ಣುಗಳು ಕೊಳೆತು ಹೋಗಿ ಕೃಷಿಯಲ್ಲಿ ನಷ್ಟವಾಗುತ್ತದೆ ಎಂದು ಅವರು ಹೇಳುತ್ತಾರೆ.
ಹಣ್ಣುಗಳ ಐಸ್ ಕ್ರೀಂ ಆರೋಗ್ಯಕರ
ಈ ಐಸ್ಕ್ರೀಂಗೆ ಯಾವುದೇ ಬಣ್ಣಗಳಾಗಲಿ, ರಾಸಾಯನಿಕ ಪದಾರ್ಥಗಳನ್ನಾಗಲಿ ಸೇರಿಸುವುದಿಲ್ಲ. ಪ್ರಕೃತಿಯಲ್ಲಿ ಸಿಗುವಂತಹ ಹಣ್ಣುಗಳ ಮೂಲಕ ಇದನ್ನು ತಯಾರಿಸುತ್ತಾರೆ. ನೈಸರ್ಗಿಕ ಮೌಲ್ಯವನ್ನು ಜನರಿಗೆ ಸಾರುವಲ್ಲಿ ಯಶಸ್ವಿಯಾಗಿದ್ದಾರೆ. ಹಾಲನ್ನು ಕುದಿಸಿ, ಸಕ್ಕರೆಯೊಂದಿಗೆ ಬೆರಸಿ ವಿವಿಧ ಹಣ್ಣುಗಳನ್ನು ಮಿಶ್ರಣಗೊಳಿಸಿ ನಾನಾ ಬಗೆಯ ರುಚಿಕರ ಐಸ್ಕ್ರೀಂ ತಯಾರಿಸುತ್ತಾರೆ. ಅಡಿಕೆ ಹಾಳೆಯ ಕಪ್ಗಳಲ್ಲಿ ಖರೀದಿದಾರರಿಗೆ ನೈಸರ್ಗಿಕ ಐಸ್ಕ್ರೀಂ ಅನ್ನು ಕೊಡುವುದು ಇವರ ಪರಿಸರ ಸ್ನೇಹಿ ವಿಧಾನವಾಗಿದೆ. ಪ್ಲಾಸ್ಟಿಕ್ ನಿರ್ಮೂಲನದ ಉದ್ದೇಶದಿಂದ ಈ ಬಗೆಯ ತೀರ್ಮಾನ ಕೈಗೊಂಡಿದ್ದಾರೆ.
ಇಲ್ಲಿ ಕೇವಲ ಐಸ್ಕ್ರೀಂಗಳಲ್ಲದೇ, ಆದರ್ಶ ಅವರ ತಂದೆ ಸುಮಾರು ವರ್ಷಗಳಿಂದ ತಯಾರಿಸುವ ಗಿಡಮೂಲಿಕೆಗಳ ಔಷಧಗಳೂ ಲಭ್ಯವಿವೆ. ಸಕ್ಕರೆ ಕಾಯಿಲೆ, ಕಿಡ್ನಿ ಸ್ಟೋನ್, ಕೆಲ್ಲುಗುರು, ಗಜಕರ್ಣ, ತುರಿಕೆ, ಚರ್ಮರೋಗ, ಹಲ್ಲುನೋವು, ತಲೆನೋವುಗಳಂತಹ ಮುಂತಾದ ಖಾಯಿಲೆಗಳಿಗೆ ಸೂಕ್ತವಾದ ಅನೇಕ ಗಿಡಮೂಲಿಕೆಗಳಿಂದ ತಯಾರಿಕೆಯಾದ ನಾಟಿ ಔಷಧಿಗಳು ಕಂಡುಬಂದವು.