ಕನ್ನಡ ಭಾಷೆಯ ಗುಣಮಟ್ಟವನ್ನು ಹೆಚ್ಚಿಸುವುದೇ ಕನ್ನಡದ ಅಭಿವೃದ್ಧಿ
ಕನ್ನಡ ಭಾಷೆಗೆ ತನ್ನದೇ ಆದ ಪ್ರಾಮುಖ್ಯತೆ, ಐತಿಹಾಸಿಕ ಹಿನ್ನಲೆ ಇದೆ. ಕನ್ನಡ ಭಾಷೆ ಸರಳ, ಸಹಜ, ಇಂಪು ಸಹ. ಜಾಗತೀಕರಣದ ಪ್ರಭಾವದಿಂದ ಇಂದು ಎಷ್ಟೋ ಸಾಂಪ್ರದಾಯಿಕ ಕಲೆಗಳು, ವಸ್ತುಗಳು, ತಮ್ಮತನ್ನವನ್ನು ಕಳೆದುಕೊಳ್ಳುತ್ತಿವೆ.
ಅದರಂತೆ ಜಾಗತೀಕರಣ ಹೊಡೆತ ಪ್ರಾಂತೀಯ ಭಾಷೆಗಳು ಮೇಲೂ ಆಗಿದೆ. ಇದರ ಜೊತೆಗೆ ನಮ್ಮ ದೇಶದ 7 ರಾಜ್ಯಗಳಲ್ಲಿ ಬಳಕೆಯಲ್ಲಿರುಯವ ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿಸುವ ಹುನ್ನಾರ ಇರುವುದರಿಂದ ಪ್ರಾದೇಶಿಕ ಭಾಷೆಗಳ ಮೇಲೆ ವ್ಯಾವಸ್ಥಿಕವಾದ ಪ್ರಹಾರ ನಡೆಯುತ್ತಲೇ ಇದೆ.
ಕರ್ನಾಟಕ ಹೆಸರು ಬಂದಿದ್ದರ ಹಿಂದಿದೆ ರೋಚಕ ಇತಿಹಾಸ
ಇಂತಹ ವ್ಯವಸ್ಥೆಯಲ್ಲಿ ಸಿಕ್ಕಿರುವರು ನಮ್ಮ ಕನ್ನಡ ಭಾಷೆಯನ್ನು ಯಾವ ರೀತಿಯಾಗಿ ಉಳಿಸಿ ಬೆಳಸಬೇಕು ಎಂಬುದರ ಬಗ್ಗೆ ಚಿಂತಿಸುವ ಅಗತ್ಯವಿದೆ. ಪ್ರಾರಂಭದಲ್ಲಿ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಕನ್ನಡದ ಕಂಪು ಕಡಿಮೆಯಾಗುತ್ತಾ ಬಂದು ಈಗ ಹಳ್ಳಿಗಳಲ್ಲಿಯೂ ಸಹಾ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳ ಪ್ರಭಾವ ಹೆಚ್ಚಾಗಿರುವುದನ್ನು ಗಮನಿಸಬಹುದು. ನಮ್ಮ ಕನ್ನಡ ನೆಲದಲ್ಲಿಯೇ ಕನ್ನಡಕ್ಕೆ ನೆಲೆ ಇಲ್ಲದ ಉದಾಹರಣೆಗಳು ಕಂಡುಬರುತ್ತಿವೆ.
ಜಾಲತಾಣಗಳಲ್ಲಿ ಕನ್ನಡ
ಅಮೆಜಾನ ಫ್ರೈಮ್ ವಿಡಿಯೋ : ಅಮೆಜಾನದ ಮುಖ್ಯ ಕಛೇರಿ ಇರುವುದು ನಮ್ಮ ರಾಜ್ಯದ ರಾಜಧಾನಿ ಯಾದ ಬೆಂಗಳೂರಿನಲ್ಲಿ ಆದರೇ ಅಮೆಜಾನ ಪ್ರೈಮ್ ವಿಡಿಯೋದಲ್ಲಿ ನಮಗೆ ಸಿಗುವುದು 5-6 ಕನ್ನಡ ಸಿನಿಮಾಗಳು ಮಾತ್ರ, ಆದರೇ ಉಳಿದ ಭಾಷೆಗಳ ಸಿನಿಮಾಗಳು ಸಾಕಷ್ಟು ಇದೆ.
ಅಮೆಜಾನ ಕಿಂಡಲ್ : ಕಿಂಡಲ್ ಇ ಪುಸ್ತಕಗಳ ಸಂಗ್ರಹದಲ್ಲಿ ಕನ್ನಡ ಭಾಷೆಯ ಪುಸ್ತಕಗಳು ಸಹ ತುಂಬಾ ಕಡಿಮೆ ಇರುವುದನ್ನು ಕಾಣಬಹುದಾಗಿದೆ.
ನಮ್ಮ ರಾಜ್ಯದ ದೊಡ್ಡ ದೊಡ್ಡ ಮಾಲ್ ಗಳಲ್ಲಿ ಇರುವ ಸಿನಿಮಾ ಮಂದಿರಗಳಲ್ಲಿ ಮುಖ್ಯವಾಗಿ ಬೇರೆ ಭಾಷೆಯ ಸಿನಿಮಾಗಳು ಪ್ರದರ್ಶಿಸಲ್ಪಡುವುದು. ಕನ್ನಡ ಸಿನಿಮಾ ಕೇವಲ ಕಾಟಾಚಾರಕ್ಕೆ ಮಾತ್ರ ಪ್ರದರ್ಶನವಾಗುತ್ತಿರುವುದು. ಈ ರೀತಿಯಾದ ಹತ್ತಾರು ಉದಾಹರಣೆಗಳನ್ನು ನಾವು ಗುರುತಿಸಬಹುದಾಗಿದೆ.
ಭಾಷೆಯನ್ನು ಕಟ್ಟುವ ಕೆಲಸವಾಗಿಲ್ಲ
ಕನ್ನಡ ಭಾಷೆಯ ಏಳ್ಗೆಗಾಗಿ ಸರ್ಕಾರ, ಹತ್ತು ಹಲವಾರು ಸಂಘಟನೆಗಳು. ರಾಜಕೀಯ ಪಕ್ಷಗಳು, ಸಾಹಿತಿಗಳು ಹೀಗೆ ಅನೇಕರು ಅವರದೇ ಆದ ರೀತಿಯಲ್ಲಿ ಪ್ರಯತ್ನ ಪಡುತ್ತಲೇ ಇರುವರು. ಕನ್ನಡ ಭಾಷೆಯ ಬಗ್ಗೆ ನಾವು ಜಾಗ್ರತವಾಗುವುದು ಒಂದು ಕಾವೇರಿ ನೀರು, ಕನ್ನಡ ರಾಜ್ಯೋತ್ಸವ, ಸಾಹಿತ್ಯ ಸಮ್ಮೆಳನ, ಉಳಿದಂತೆ ಸಭೆ ಸಮಾರಂಭಗಳಲ್ಲಿ ಮಾತ್ರವಾಗಿದೆ. ನಮ್ಮಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ನಿರಂತರ ಕಟ್ಟುವ ಕಾರ್ಯ ನಡೆದಿಲ್ಲ ಎಂಬುದು ಅಕ್ಷರಶಃ ಸತ್ಯವಾಗಿದೆ.
ಭಾಷೆಯ ಅಭಿರುಚಿಯನ್ನು ಜನರಲ್ಲಿ ಹೆಚ್ಚಿಸಿ ಅದನ್ನು ಉಳಿಸಿಕೊಳ್ಳಬೇಕು ಬದಲಾಗಿ ಯಾವುದೇ ಕಾನೂನು, ನಿಯಮದಿಂದ, ಬಲವಂತದಿಂದ ಭಾಷೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಿರುವುದಿಲ್ಲ. ಮುಖ್ಯವಾಗಿ ಭಾಷೆಯ ಪ್ರಭಾವಶಾಲಿ ಚಲನೆ ಇರುವುದು ವಿವಿಧ ಮಾಧ್ಯಮ ಮತ್ತು ಶಾಲೆಯಲ್ಲಿ ಆಗಿರುವುದು. ಆದ್ದರಿಂದ ಮಾಧ್ಯಮ ಮತ್ತು ಶಾಲೆಯಲ್ಲಿ ಕನ್ನಡದ ಬಗ್ಗೆ ಅಭಿರುಚಿ ಮೂಡಿಸುವಂತಹ ಕಾರ್ಯವನ್ನು ಮಾಡಬೇಕಾಗಿದೆ.
ಈ ವರ್ಷದ ಕನ್ನಡ ರಾಜ್ಯೋತ್ಸವ ದಿನದಿಂದಲಾದರೂ ಹೀಗಾಗಲಿ...
ವ್ಯವಸ್ಥೆಗೆ ನಂಬಿಕೆ ಇಲ್ಲ
ನಮ್ಮ ರಾಜ್ಯದಲ್ಲಿ 50 ಸಾವಿರಕ್ಕೂ ಅಧಿಕ ಶಾಲೆಗಳಿವೆ ಕನ್ನಡ ಭಾಷೆಯನ್ನು ಏನಾದರೂ ಅಭಿವೃದ್ಧಿ ಪಡಿಸಬೇಕೆಂದರೆ ಮುಂಚೆ ಆ ಶಾಲೆಗಳಿಂದಲ್ಲೇ ಕಾರ್ಯ ಪ್ರಾರಂಭವಾಗಬೇಕಾಗಿದೆ. ಆದರೇ ದುರದೃಷ್ಟವಶಾತ್ ನಮ್ಮ ಸರ್ಕಾರಿ ಶಾಲೆಗಳ ಬಗ್ಗೆ ನಮಗೆ ನಂಬಿಕೆ ಇಲ್ಲವಾಗಿದೆ. ಕನ್ನಡದ ಬಗ್ಗೆ ಹೋರಾಟ ಮಾಡುವ ಪಕ್ಷ, ಸಂಘಟನೆ, ಕವಿಗಳು, ಸಾಹಿತಿಗಳು, ರಾಜಕಾರಣಿಗಳು ಒಟ್ಟಾರೆ ಭಾಷಣ ಮಾಡುವ ಎಲ್ಲಾ ಅರ್ಹತೆ ಮತ್ತು ಹುದ್ದೆ ಪಡೆದವರ ಮಕ್ಕಳು ಮೊಮ್ಮಕ್ಕಳು 90 ಶೇಕಡಾಕ್ಕೂ ಅಧಿಕ ಮಂದಿ ಇಂಗ್ಲೀಷ ಅಥವಾ ಖಾಸಗಿ ಶಾಲೆಯಲ್ಲಿಯೇ ಇರುವುರು.
ಸರ್ಕಾರಿ ಶಾಲೆಯಲ್ಲಿ ಪಾಠ ಮಾಡುತ್ತಿರುವ 90 ಶೇಕಡಾ ಶಿಕ್ಷಕರ ಮಕ್ಕಳು ಓದುತ್ತಿರುವುದು ಖಾಸಗಿ ಶಾಲೆಯಲ್ಲಿಯೇ ಆಗಿರುವುದು. ವ್ಯವಸ್ಥೆಯಲ್ಲಿ ಪ್ರಮುಖ ಹುದ್ದೆಯಲ್ಲಿರುವವರಿಗೆ ವ್ಯವಸ್ಥೆ ಬಗ್ಗೆ ನಂಬಿಕೆ ಇಲ್ಲದ ಮೇಲೆ ವ್ಯವಸ್ಥೆಯ ಪ್ರಮುಖ ಭಾಗೀದಾರರಾದ ಸಾಮಾನ್ಯ ಜನರಿಗೆ ಹೇಗೆ ತಾನೇ ನಂಬಿಕೆ ಬರಲು ಸಾಧ್ಯ? ದಿನ ಕಳೆದಂತೆ ಸಮಸ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ. ಕನ್ನಡ ಭಾಷೆಯ ಶಿಕ್ಷಣ, ಸರ್ಕಾರಿ ಶಾಲೆ ಬಗ್ಗೆ ಪ್ರಶ್ನೆಗಳು ಬರುತ್ತಲ್ಲೇ ಇವೆ.
ಸಿನಿಮಾಗಳ ಗುಣಮಟ್ಟ ಹೆಚ್ಚಾಗಬೇಕಾಗಿದೆ
ತೆಲಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಿಗೆ ಹೋಲಿಕೆ ಮಾಡಿದರೇ ಕನ್ನಡ ಸಿನಿಮಾಗಳ ಗುಣಮಟ್ಟ ಕಡಿಮೆ ಇರುವುದನ್ನು ನಾವು ಒಪ್ಪಿಕೊಂಡು ಅದರ ಗುಣಮಟ್ಟವನ್ನು ಹೆಚ್ಚಿಸುವ ಕಡೆ ಗಮನ ಹರಿಸಬೇಕಾಗಿದೆ. ಆದರೇ ನಾವುಗಳು ಅದರ ಬದಲಾಗಿ ಡಬ್ಬಿಂಗ್ ಪರ-ವಿರೋಧದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಗುಣಮಟ್ಟ ಹೆಚ್ಚಿಸುವ ಕಾರ್ಯಗಳು ಮಾತ್ರ ನಡೆಯುತ್ತಿಲ್ಲ. ನಮ್ಮ ಭಾಷೆಯ ಬೆಳವಣಿಗೆಗೆ ನಾವೇ ತೊಡಕಾಗಿರುವೆವು.
ಕನ್ನಡ ಸಿನಿಮಾ ಬೇರೆ ಭಾಷೆಯಲ್ಲಿ ಬರಬಹುದು ಆದರೇ ಬೇರೆ ಬೇರೆ ಭಾಷೆಯ ಪ್ರಸಿದ್ಧ ಸಿನಿಮಾವನ್ನು ಕನ್ನಡದಲ್ಲಿ ನೋಡಬೇಕೆಂದರೆ ಅದಕ್ಕಾಗಿ ಆರು ತಿಂಗಳು ಕಾಯಬೇಕು ಎಂಬ ನಿಯಮವನ್ನು ಮಾಡಿಕೊಂಡಿರುವೆವು. ಪರಿಣಾಮವಾಗಿ ಕನ್ನಡಿಗರು ಬೇರೆ ಭಾಷೆಯಲ್ಲಿಯೇ ಸಿನಿಮಾ ನೋಡಲು ಪ್ರಾರಂಭಿಸಿರುವರು. ಕ್ರಮೇಣ ಕನ್ನಡ ಸಿನಿಮಾವನ್ನು ನೋಡುವುದನ್ನೇ ನಿಲ್ಲಿಸುತ್ತಿರುವುದನ್ನು ಗಮನಿಸಬಹುದಾಗಿದೆ.
ಕನ್ನಡದ ಶ್ರೇಷ್ಠ ಕೃತಿಗಳು ಬ್ರೈಲ್ ಲಿಪಿಯಲ್ಲಿ, ಅಂಧರ ಈ ಸಾಧನೆ ಅತ್ಯದ್ಭುತ
ಕಲಿಕೆಯ ಭಾಷೆಯಾಗಲಿ ಕನ್ನಡ
ನಮ್ಮ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಭಾಷೆಯ ಬೋಧನೆಯ ಬಗ್ಗೆ ಗಮನಿಸುವ ಅಗತ್ಯವಿದೆ. ನಮ್ಮ ಎಲ್ಲಾ ಕನ್ನಡ ಶಾಲೆಗಳಲ್ಲಿ ಜಗತ್ತಿನ ಎಲ್ಲಾ ಬಗ್ಗೆಯ ಮಾಹಿತಿಗಳು ಕನ್ನಡ ಪುಸ್ತಕದಲ್ಲಿಯೇ ಸಿಗುವಂತಹ ವ್ಯವಸ್ಥೆ ಆಗ ಬೇಕಾಗಿದೆ. ಇಂಗ್ಲೀಷ್, ಹಿಂದಿ ಇತರ ಅನೇಕ ಭಾಷೆಗಳಲ್ಲಿ ಇರುವ ವಿಜ್ಞಾನ, ಗಣಿತ, ಸಾಹಿತ್ಯ, ತಂತ್ರಜ್ಞಾನ ಹೀಗೆ ಎಲ್ಲಾ ಬಗೆಯ ಪುಸ್ತಕಗಳು ಕನ್ನಡಕ್ಕೆ ಅನುವಾದಿಸುವ ಕಾರ್ಯ ಹೆಚ್ಚು ಹೆಚ್ಚು ಆಗಬೇಕಾಗಿದೆ ಅದರ ವಿತರಣೆ ಎಲ್ಲಾ ಸರ್ಕಾರಿ ಶಾಲೆಗಳಿಗೂ ಕಡ್ಡಾಯವಾಗಿ ಆಗಬೇಕಾಗಿದೆ.
ನಮ್ಮ ಶಾಲೆ, ಗ್ರಂಥಾಲಯ ಕನ್ನಡ ಭಾಷೆಯಲ್ಲಿಯೇ ಜಗತ್ತಿನ ಬಗ್ಗೆ ತಿಳಿಸುವ ಮಾಹಿತಿ ಕೇಂದ್ರಗಳಾಗುವಂತೆ ಗಮನಹರಿಸಬೇಕಾಗಿದೆ. ನಮ್ಮ ಪ್ರತಿ ಬಾರಿಯ ರಾಜ್ಯೋತ್ಸವಕ್ಕೆ ಪ್ರತಿ ಶಾಲೆಗೂ ಅನೇಕ ಪುಸ್ತಕಗಳು ಸಿಗುವಂತ ವ್ಯವಸ್ಥೆ ಆಗಬೇಕಾಗಿದೆ. ಮಾದ್ಯಮಗಳು ಕೂಡ ದೇಶ ವಿದೇಶದ ಮಾಹಿತಿಯನ್ನು ಕನ್ನಡದಲ್ಲಿ ತಿಳಿಸುವಂತೆ ಮಾಡಬೇಕು. ಯಾರು ಏನೇ ಓದಲು ತಿಳಿಯಲು ಪ್ರಯತ್ನಿಸಿದರೂ ಅದೂ ಕನ್ನಡದಲ್ಲಿ ಸಿಗುವಂತೆ ಮಾಡಬೇಕಾಗಿದೆ.
ಕೀನ್ಯಾದಲ್ಲಿ ಕನ್ನಡ ಡಿಂಡಿಮ ಬಾರಿಸಿದ ಕಾರ್ಕಳದ ವಿಷ್ಣು ಮಾಧವ್ ಪೈ
ಬಳಕೆಯಲ್ಲಿರುವ ಭಾಷೆ ಬದುಕುತ್ತದೆ!
ಕನ್ನಡ ತಂತ್ರಾಶದ ಬಗ್ಗೆ ವ್ಯಾಪಕ ಪ್ರಚಾರ, ವಿವಿಧ ಕನ್ನಡ ವೆಬ್ತಾಣಗಳ ರಚನೆ ಆಗಬೇಕಾಗಿದೆ. ಕನ್ನಡ ಭಾವುಟ ಹಾರಿಸುವುದು, ಕೂಗುವುದು, ಎಮ್ಮೆಗಳ ಮೆರವಣಿಗೆ ಮಾಡುವುದು, ಎಡಬಿಡಂಗಿ ರಾಜಕಾರಣಗಳ ಮಾತಿಗೆ ವಿರೋಧ ವ್ಯಕ್ತಪಡಿಸಿ ಹರತಾಳ, ಮೆರವಣಿಗೆ ಮಾಡುವುದು ಇವುಗಳಿಂದ ತಾತ್ಕಾಲಿಕವಾದ ಕನ್ನಡ ಟಿವಿಯಲ್ಲಿ ಸುದ್ದಿ ಬರಬಹುದೇ ವಿನಂ ಭಾಷೆಯ ಅಭಿವೃದ್ಧಿ ಖಂಡಿತಾ ಸಾಧ್ಯವಿಲ್ಲ.
ಒಂದು ಭಾಷೆಯ ಬೆಳವಣಿಗೆ ಆಗಬೇಕು ಎಂದರೆ ಅದು ಆ ಭಾಷೆಯನ್ನು ಹೆಚ್ಚು ಹೆಚ್ಚು ಜನರು ಬಳಸಿದರೆ ಮಾತ್ರ ಸಾಧ್ಯವಿರುವುದು. ಬದಲಾಗಿ ಇನ್ನೊಂದು ಭಾಷೆಯನ್ನು ವಿರೋಧಿಸುವುದು, ಅನ್ಯ ಭಾಷೆಯನ್ನಾಡುವ ಜನರನ್ನು ವಿರೋಧಿಸುವುದು ಇದು ನಮಗೆ ನಮ್ಮ ಭಾಷೆ ಮತ್ತು ರಾಜ್ಯದ ಬಗ್ಗೆ ಇರುವ ಭಯವನ್ನು ಸೂಚಿಸುವುದೇ ವಿನಹ ಇದರಿಂದ ಯಾವುದೇ ಬದಲಾವಣೆ ಖಂಡಿತಾ ಆಗುವುದಿಲ್ಲ. ನಾವು 'ರಾಷ್ಟ್ರಕವಿ ಕುವೆಂಪು' ಆಶಿಸಿರುವಂತೆ ವಿಶ್ವಮಾನವರಾಗಿ ಕನ್ನಡ ಉಳಿಸಿ ಬೆಳಸುವ ಕಾರ್ಯವನ್ನು ಮಾಡಬೇಕಾಗಿದೆ.
ಬದಲಾಗಿ ಕುವೆಂಪು, ಬಸವಣ್ಣ, ಕನಕದಾಸ ಇಂತಹ ವ್ಯಕ್ತಿಗಳನ್ನೇ ನಮ್ಮ ಜಾತಿಯ ವ್ಯಕ್ತಿಗಳೆಂದು ಹೇಳುತ್ತಾ ಅವರನ್ನು ರಾಜ್ಯಕ್ಕೆ, ಒಂದು ಧರ್ಮಕ್ಕೆ, ಜಾತಿಗೆ, ಪಂಗಡಕ್ಕೆ ಸೀಮಿತಪಡಿಸುವುದರಲ್ಲಿ ಯಾವ ಪ್ರಯೋಜನವು ಇಲ್ಲ. ಬದಲಾಗಿ ನಾವೆಲ್ಲರೂ ಒಟ್ಟಾಗಿ ಕನ್ನಡವನ್ನು ಸಕಾರಾತ್ಮಕವಾಗಿ ಬೆಳಸುವ ದಿಶೆಯಲ್ಲಿ ನಿರಂತರವಾಗಿ ಪ್ರಯತ್ನಿಸಬೇಕಾಗಿದೆ. ಭಾಷೆಯ ಗುಣಮಟ್ಟವನ್ನು ಹೆಚ್ಚಿಸಲು ಚಿಂತಿಸುವ ಅಗತ್ಯವಿದೆ.