ಸಿದ್ದರಾಮಯ್ಯ ದಾಳಕ್ಕೆ ದೇವೇಗೌಡರ ಪ್ರತಿದಾಳ, ರಾಹುಲ್ ಗಾಂಧಿ ತಳಮಳ!
Recommended Video
ಕರ್ನಾಟಕದ ಮೈತ್ರಿ ಸರ್ಕಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಶಕ್ತಿ ಹೆಚ್ಚಿದರೆ ಮತ್ತೊಂದು ಕಡೆ ಕೈ ಪಾಳೆಯದ ಹೈಕಮಾಂಡ್ ಶಕ್ತಿ ರಾಷ್ಟ್ರ ಮಟ್ಟದಲ್ಲಿ ಕುಗ್ಗುವ ವಿಚಿತ್ರ ಸನ್ನಿವೇಶ ಸೃಷ್ಟಿಯಾಗುತ್ತದೆ.
ಅಂದ ಹಾಗೆ ರಾಜ್ಯ ಮಟ್ಟದಲ್ಲಿ ಒಬ್ಬ ನಾಯಕ ಪಕ್ಷದ ಮೇಲೆ ಹಿಡಿತ ಸಾಧಿಸಿದರೆ ಸಹಜವಾಗಿಯೇ ಅದರಿಂದ ಆ ಪಕ್ಷದ ಹೈಕಮಾಂಡ್ ಬಲಿಷ್ಠವಾಗಬೇಕು. ಅಂದರೆ ಸಿದ್ದರಾಮಯ್ಯ ಬಲಿಷ್ಠರಾದರು ಎಂದರೆ ಸಹಜವಾಗಿಯೇ ಅದು ಕೈ ಪಾಳೆಯದ ವರಿಷ್ಠರ ಬಲವನ್ನು ಹೆಚ್ಚಿಸಬೇಕು.
ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ತಂತ್ರವೇನಿರಬಹುದು?
ಆದರೆ ಹಾಗಾಗುತ್ತಿಲ್ಲ ಎಂಬುದೇ ಸದ್ಯದ ವಿಶೇಷ. ಮತ್ತು ಒಂದು ಕಡೆ ಪಕ್ಷವನ್ನು ಬಲಿಷ್ಠಗೊಳಿಸಲು ಹೋದರೆ ಮತ್ತೊಂದು ಕಡೆ ಅದು ದುರ್ಬಲವಾಗುವ ಸನ್ನಿವೇಶ ಸೃಷ್ಟಿಯಾಗಲು ಒಂದು ಕಾರಣವಿದೆ. ಅದೆಂದರೆ, ದೇಶದ ಪ್ರಸಕ್ತ ರಾಜಕೀಯ ಸನ್ನಿವೇಶ.
ಈ ಸನ್ನಿವೇಶವನ್ನು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರಷ್ಟು ಚೆನ್ನಾಗಿ ಬಲ್ಲ ನಾಯಕ ಮತ್ತೊಬ್ಬರಿಲ್ಲ. ಹೀಗಾಗಿ ಅವರು ಟೈಮು ಟೈಮಿಗೆ ಕಾಂಗ್ರೆಸ್ ಹೈಕಮಾಂಡ್ ಅನ್ನು ಬೆದರಿಸುತ್ತಾರೆ.
ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ನಲ್ಲಿ ಭಿನ್ನಮತದ ಜ್ವಾಲೆ ಸ್ಪೋಟ?
ಈ ಸಲ ಕುಮಾರಸ್ವಾಮಿ ಸರ್ಕಾರದಲ್ಲಿದ್ದ ತಮ್ಮ ಇಬ್ಬರು ಸಚಿವರನ್ನು ಕೈ ಬಿಟ್ಟು ಕಾಂಗ್ರೆಸ್ ಪಕ್ಷ ಎಂಟು ಮಂದಿಯನ್ನು ಕ್ಯಾಬಿನೆಟ್ಟಿಗೆ ಸೇರ್ಪಡೆ ಮಾಡಿತಲ್ಲ? ಈ ಬೆಳವಣಿಗೆಯಲ್ಲಿ ಸಂಪೂರ್ಣವಾಗಿ ಮೇಲುಗೈ ಸಾಧಿಸಿದ್ದು ಮಾಜಿ ಸಿಎಂ ಸಿದ್ದರಾಮಯ್ಯ.
ಸಿದ್ದರಾಮಯ್ಯ ಗ್ಯಾಂಗು ಉಲ್ಟಾ ಹೊಡೆಯಿತು
ಹೀಗೆ ಸಿದ್ದರಾಮಯ್ಯ ತಮ್ಮ ಪಕ್ಷದ ಮಟ್ಟದಲ್ಲಿ ಬಲಿಷ್ಠರಾಗಿದ್ದನ್ನು ದೇವೇಗೌಡರು ಅಸಹನೆಯಿಂದ ನೋಡಿದರಾದರೂ, ತಕ್ಷಣಕ್ಕೆ ಕಹಿ ತೋರಿಸದೆ ಮೌನವಾಗಿದ್ದರು. ಯಾಕೆಂದರೆ ಸದ್ಯದಲ್ಲೇ ನಡೆಯುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಜೆಡಿಎಸ್ ಹೆಚ್ಚು ಸೀಟುಗಳನ್ನು ಗೆಲ್ಲಬೇಕೆಂದರೆ ಕೈ ಪಾಳೆಯದ ವೋಟುಗಳು ಜೆಡಿಎಸ್ ಗೆ ಬರಬೇಕು ಎಂಬ ಲೆಕ್ಕಾಚಾರ ಅವರಿಗಿತ್ತು.
ಹೀಗಾಗಿ ಅವರು ಸುಮ್ಮನಾದರೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷ ರಾಜ್ಯದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳ ಪೈಕಿ ಹನ್ನೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಅಲ್ಲೆಲ್ಲ ಗೆಲುವು ಸಾಧಿಸಲು ಯತ್ನಿಸಬೇಕು ಎಂದು ತಮ್ಮ ಪಕ್ಷದ ವೇದಿಕೆಯಲ್ಲಿ ಹೇಳಿದರು.
ಅವರು ಈ ಮಾತುಗಳನ್ನು ತಮ್ಮ ಪಕ್ಷದ ವೇದಿಕೆಯಲ್ಲಿ ಆಡಿದ್ದೇ ತಡ, ಸಿದ್ದರಾಮಯ್ಯ ಗ್ಯಾಂಗು ಉಲ್ಟಾ ಹೊಡೆಯಿತು. ಜೆಡಿಎಸ್ ಪಕ್ಷಕ್ಕೆ ಹೆಚ್ಚೆಂದರೆ ಐದು ಸೀಟುಗಳನ್ನು ಬಿಟ್ಟುಕೊಡಬಹುದೇ ವಿನ: ಹನ್ನೆರಡು ಸೀಟುಗಳನ್ನಲ್ಲ ಎಂದು ವರಾತ ತೆಗೆಯಿತು.
ಜೆಡಿಎಸ್-ಕಾಂಗ್ರೆಸ್ ಮೈತ್ರಿ : 12 ಸ್ಥಾನಕ್ಕೆ ದೇವೇಗೌಡರ ಬೇಡಿಕೆ
ಕೈ ಪಾಳಯದ ನಾಯಕರು ಜೆಡಿಎಸ್ ಜೊತೆ
ವಸ್ತುಸ್ಥಿತಿ ಎಂದರೆ ಈಗಲೇ ಜೆಡಿಎಸ್ ಜತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿರುವ ಕಾಂಗ್ರೆಸ್ ಹೈಕಮಾಂಡ್ ಕ್ರಮದ ಬಗ್ಗೆ ರಾಜ್ಯದ ಬಹುತೇಕ ಕಾಂಗ್ರೆಸ್ ನಾಯಕರಿಗೆ, ಕಾರ್ಯಕರ್ತರಿಗೆ ಸಮಾಧಾನವಿಲ್ಲ.
ಉದಾಹರಣೆಗೆ ಇತ್ತೀಚೆಗೆ ಲೋಕಸಭೆಯ ಮೂರು ಸ್ಥಾನಗಳಿಗೆ ನಡೆದ ಚುನಾವಣೆಯನ್ನೇ ತೆಗೆದುಕೊಳ್ಳಿ. ಮಂಡ್ಯದಲ್ಲಿ ಜೆಡಿಎಸ್ ನೆಲೆ ಭದ್ರವಾಗಿದ್ದರೂ, ಶಿವಮೊಗ್ಗದಲ್ಲಿ ಜೆಡಿಎಸ್ ನ ಮಧು ಬಂಗಾರಪ್ಪ ಅವರಿಗೆ ಟಿಕೆಟ್ ನೀಡಿದ ಪರಿಣಾಮವಾಗಿ ಅಲ್ಲೀಗ ಕೈ ಪಾಳೆಯ ಕುಸಿದಿದೆ.
ಕೈ ಪಾಳೆಯದ ಬಹುತೇಕ ನಾಯಕರು, ಕಾರ್ಯಕರ್ತರು ಜೆಡಿಎಸ್ ಜತೆ ಕೈ ಬೆರೆಸಿದ್ದಾರೆ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಅಲ್ಲಿ ಜೆಡಿಎಸ್ ಪಕ್ಷಕ್ಕೇ ಸೀಟು ಕೊಡುವ ಸ್ಥಿತಿ ಇದೆ. ಹೀಗೆಯೇ ಮುಂದಿನ ಚುನಾವಣೆಯಲ್ಲಿ ಪಕ್ಷ ಜೆಡಿಎಸ್ ಗೆ ಯಾವ್ಯಾವ ಕ್ಷೇತ್ರಗಳನ್ನು ಬಿಟ್ಟು ಕೊಡುತ್ತದೋ? ಆ ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆ ಕುಸಿದು ಹೋಗುತ್ತದೆ ಎಂಬುದು ಈ ನಾಯಕರು, ಕಾರ್ಯಕರ್ತರ ಆತಂಕ.
ಭಿನ್ನಮತೀಯರ ದಾಳಿಗೆ ಆಪರೇಷನ್ 'ಕೆಜಿಎಫ್' ಸಾಧ್ಯವಾಗುವುದೆ?
ಹನ್ನೆರಡು ಸೀಟು ಬಿಟ್ಟುಕೊಡಲು ತಕರಾರು
ಪರಿಸ್ಥಿತಿ ಹೀಗಿರುವಾಗ ಜೆಡಿಎಸ್ ಪಕ್ಷಕ್ಕೆ ಹನ್ನೆರಡು ಸೀಟುಗಳನ್ನು ಬಿಟ್ಟು ಕೊಡುವುದು ಎಂದರೆ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ವಯಂಬಲದ ಮೇಲೆ ರಾಜ್ಯ ವಿಧಾನಸಭೆಯನ್ನು ವಶಪಡಿಸಿಕೊಳ್ಳುವುದು ಕಷ್ಟ. ಬದಲಿಗೆ ಜೆಡಿಎಸ್ ಜತೆ ಸೇರಿಯೇ ಸರ್ಕಾರ ರಚಿಸುವ ಅಸಹಾಯಕತೆ ಸೃಷ್ಟಿಯಾಗುತ್ತದೆ.
ಹಾಗೇನಾದರೂ ಆದರೆ ಕರ್ನಾಟಕದಲ್ಲಿ ಒಂದು ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ ಪಕ್ಷದ ಲೆವೆಲ್ಲು ಬಿಜೆಪಿಗಿಂತ ಕಡಿಮೆಯಾಗುತ್ತದೆಯೇ ಹೊರತು ಬಲಿಷ್ಠವಂತೂ ಆಗುವುದಿಲ್ಲ. ಹೀಗಾಗಿ ಪಾರ್ಲಿಮೆಂಟ್ ಚುನಾವಣೆಯಲ್ಲಿ ಜೆಡಿಎಸ್ ಗೆ ಹನ್ನೆರಡು ಸೀಟುಗಳನ್ನು ಯಾವ ಕಾರಣಕ್ಕೂ ಬಿಟ್ಟು ಕೊಡಬಾರದು ಎಂಬ ಕೂಗು ಶುರುವಾಯಿತು.
ಈ ಬೆಳವಣಿಗೆ ಮಾಜಿ ಪ್ರಧಾನಿ ದೇವೇಗೌಡರಿಗೆ ಸಾಕಷ್ಟು ಇರುಸುಮುರುಸು ತಂದಿದೆ. ಆದರೆ, ಗೌಡರು ಎಂತಹ ರಾಜಕೀಯದಲ್ಲಿ ಎಂತಹ ಪಳಗಿದ ಆಟಗಾರ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಕೆಲವರ ಕೈಬಿಡಲು ಎಚ್ಡಿಕೆಗೆ ಗೌಡರ ಸೂಚನೆ
ಯಾವಾಗ ಈ ಕೂಗು ಶುರುವಾಯಿತೋ? ಆಗ ದೇವೇಗೌಡರು ಪುನ: ದಾಳ ಉರುಳಿಸತೊಡಗಿದರು. ಇದಕ್ಕಾಗಿ ಅವರು ನಿಗಮ, ಮಂಡಳಿಗಳ ನೇಮಕಾತಿ ವಿಷಯವನ್ನು ಬಳಸಿಕೊಂಡರು. ಸಂಪುಟ ಪುನರ್ರಚನೆಯ ಸಂದರ್ಭದಲ್ಲೇ ನಿಗಮ, ಮಂಡಳಿಗಳ ನೇಮಕಾತಿ ವಿಷಯದಲ್ಲಿ ಅವರು ತಕರಾರು ತೆಗೆದಿದ್ದರೂ ಅದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕಿವಿಯ ತನಕ ಮುಟ್ಟಿರಲಿಲ್ಲ.
ಆದರೆ ಭಾನುವಾರ ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನದ ಪಟ್ಟಿಗೆ ಸಹಿ ಹಾಕುವಾಗ ಹಲವು ಹೆಸರುಗಳನ್ನು ಕೈ ಬಿಡಲು ಸಿಎಂ ಕುಮಾರಸ್ವಾಮಿ ಅವರಿಗೆ ಸೂಚಿಸಿದ ದೇವೇಗೌಡ ನೇರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸಂಪರ್ಕಿಸಿದರು.
ಕೈ ಗ್ಯಾಂಗಿಗೆ ಸಿದ್ದುವೇ ಚಕ್ರವರ್ತಿ, ಮಿಡ್ಲ್ ಮನ್ನುಗಳಿಗೆ ಫುಲ್ಲು ನಿಶ್ಯಕ್ತಿ!
ಬೆಚ್ಚಿ ಬೀಳುವ ರಾಹುಲ್ ಗಾಂಧಿ
ದೇವೇಗೌಡ ಹಾಗೂ ಕುಮಾರಸ್ವಾಮಿ ಪೈಕಿ ಯಾರೇ ತಮ್ಮನ್ನು ಸಂಪರ್ಕಿಸಿದರೂ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಚ್ಚಿ ಬೀಳುತ್ತಾರೆ. ಯಾಕೆಂದರೆ, ರಾಷ್ಟ್ರ ಮಟ್ಟದಲ್ಲಿ ರೂಪುಗೊಳ್ಳುತ್ತಿರುವ ತೃತೀಯ ರಂಗದ ವರಸೆ ದಿನದಿಂದ ದಿನಕ್ಕೆ ಬದಲಾಗುತ್ತಿರುವುದು.
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷ ಮಧ್ಯೆ ಮೈತ್ರಿ ಏರ್ಪಟ್ಟಿದೆ. ಆದರೆ ಅಚ್ಚರಿ ಎಂಬಂತೆ ಕಾಂಗ್ರೆಸ್ ಪಕ್ಷವನ್ನು ಅವು ದೂರ ಇರಿಸಿವೆ. ಅದೇ ರೀತಿ ತೆಲಂಗಾಣದ ಕೆ.ಸಿ. ಚಂದ್ರಶೇಖರ ರಾವ್ ಹಾಗೂ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಮಧ್ಯೆ ವಿಶ್ವಾಸ ಗಟ್ಟಿಯಾಗಿದೆ. ಅದೇ ಕಾಲದಲ್ಲಿ ಕಾಂಗ್ರೆಸ್ ಪಕ್ಷದಿಂದ ದೂರವಿರುವ ಮನ:ಸ್ಥಿತಿ ಬಂದಿದೆ. ಆಂಧ್ರ ಪ್ರದೇಶದಲ್ಲಿಯೂ ಕಾಂಗ್ರೆಸ್ ಪಕ್ಷವನ್ನು ದೂರ ಇಡಬೇಕೆಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಇದು ಸಹಜವಾಗಿ ಕಾಂಗ್ರೆಸ್ಸಿಗೆ ಆತಂಕ ಮೂಡಿಸಿವೆ.
ಗೌಡರು ಮೋದಿ ಪರ ವಾಲುವುದಿಲ್ಲ ಎಂಬುದು ಏನು ಗ್ಯಾರಂಟಿ
ಅರ್ಥಾತ್, ಮುಂದಿನ ದಿನಗಳಲ್ಲಿ ದಿಲ್ಲಿ ಗದ್ದುಗೆ ಹಿಡಿಯಲು ತೃತೀಯ ರಂಗದ ಬೆಂಬಲ ಪಡೆಯಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ, ಮೇಲಿನ ಮತ್ತು ಹಲವಾರು ಕಾರಣಗಳಿಗಾಗಿ ಅದು ಸಾರಾಸಗಟಾಗಿ ತನಗೆ ಬೆಂಬಲ ನೀಡುತ್ತದೆ ಎಂಬ ವಿಶ್ವಾಸ ಮೂಡುತ್ತಿಲ್ಲ.
ಯಾಕೆಂದರೆ ತೃತೀಯ ರಂಗದ ಬಹುತೇಕರು, ಸನ್ನಿವೇಶಕ್ಕೆ ಅನುಗುಣವಾಗಿ ಕಾಂಗ್ರೆಸ್ ಪಕ್ಷದ ಜತೆ ನಿಲ್ಲಬೇಕೋ? ನರೇಂದ್ರ ಮೋದಿ ಜತೆ ಹೋಗಬೇಕೋ? ಎಂದು ಯೋಚಿಸುತ್ತಿದ್ದಾರೆ. ಇಂತವರ ಪೈಕಿ ದೇವೇಗೌಡರೂ ಒಬ್ಬರಾದರೆ? ಅನ್ನುವುದು ರಾಹುಲ್ ಗಾಂಧಿ ಆತಂಕ.
ಎಲ್ಲಕ್ಕಿಂತ ಹೆಚ್ಚಾಗಿ ಲೋಕಸಭೆ ಚುನಾವಣೆ ನೇತೃತ್ವ ವಹಿಸುವ ವಿಷಯ ಬಂದಾಗ ತೃತೀಯ ರಂಗದ ಯಾವ ನಾಯಕರೂ ರಾಹುಲ್ ಗಾಂಧಿ ಮಾತು ಆಡುತ್ತಿಲ್ಲ. ಬದಲಿಗೆ, ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್ ಹೊರತಾದ ತೃತೀಯ ರಂಗ ರಚಿಸುವ ಬಗ್ಗೆಯೇ ಮಾತುಗಳಾಗುತ್ತಿವೆ.
ರೈತರ ಬಗ್ಗೆ ಮೋದಿಯನ್ನು ಪ್ರಶ್ನಿಸಿದ ಎಚ್.ಡಿ.ದೇವೇಗೌಡ
ತೃತೀಯ ರಂಗದಲ್ಲಿ ದೇವೇಗೌಡರಿಗೆ ಹೆಸರಿದೆ
ಯಾರೇನೇ ಹೇಳಿದರೂ ರಾಷ್ಟ್ರ ಮಟ್ಟದಲ್ಲಿ, ಅದರಲ್ಲೂ ತೃತೀಯ ರಂಗದ ಲೆವೆಲ್ಲಿನಲ್ಲಿ ದೇವೇಗೌಡರಿಗೆ ಹೆಸರಿದೆ. ಮಾಯಾವತಿ ಇರಬಹುದು, ಮುಲಾಯಂ ಸಿಂಗ್ ಯಾದವ್ ಇರಬಹುದು, ಚಂದ್ರಬಾಬು ನಾಯ್ಡುವೇ ಇರಬಹುದು ಅಥವಾ ನವೀನ್ ಪಾಟ್ನಾಯಕ್ ಅವರೇ ಇರಬಹುದು.
ಇವರೆಲ್ಲರಿಗೂ ದೇವೇಗೌಡರ ಬಗ್ಗೆ ವಿಶ್ವಾಸವಿದೆ. ಹೀಗಾಗಿ ದೇವೇಗೌಡರೇನಾದರೂ ಕಾಂಗ್ರೆಸ್ ಬಗ್ಗೆ ಅಸಮಾಧಾನಗೊಂಡರೆ ರಾಷ್ಟ್ರ ಮಟ್ಟದಲ್ಲಿ ಕೈ ಪಾಳೆಯಕ್ಕೆ ಒಂದು ಲೆವೆಲ್ಲಿನಲ್ಲಿ ಡ್ಯಾಮೇಜ್ ಆಗುತ್ತದೆ ಎಂಬುದು ರಾಹುಲ್ ಗಾಂಧಿ ಅವರಿಗೆ ಮನವರಿಕೆಯಾಗಿದೆ.
ಹಾಗಂತಲೇ ದೇವೇಗೌಡರು ತಮ್ಮನ್ನು ಸಂಪರ್ಕಿಸಿದ ಕೂಡಲೇ ರಾಹುಲ್ ಗಾಂಧಿ ಗೌರವದಿಂದಲೇ ವಿಷಯ ಕೇಳಿದ್ದಾರೆ. ಅವರು ಎಷ್ಟು ಗೌರವದಿಂದ ಕೇಳಿದರೋ? ಅಷ್ಟೇ ಸಜ್ಜನಿಕೆಯಿಂದ ದೇವೇಗೌಡರೂ ವಿಷಯ ಪ್ರಸ್ತಾಪಿಸಿದ್ದಾರೆ.
ಈಗಲೂ ಕೈ ನಾಯಕರಿಂದ ಮಾತು ಉಲ್ಲಂಘನೆ
ರಾಹುಲ್ ಜೀ, 2004ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸಿದಾಗ ಅಸಮಾಧಾನಗೊಂಡ ನಿಮ್ಮ ಪಕ್ಷದ ನಾಯಕರೊಬ್ಬರು ತಮ್ಮ ಬೆಂಬಲಿಗರ ಜತೆ ಸೇರಿ ಜೆಡಿಎಸ್ ಒಡೆಯಲು ಯತ್ನಿಸಿದರು. ಆಗ ನಾನು ಮೇಡಂ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ, ಇನ್ನು ಮೈತ್ರಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ. ಹೀಗಾಗಿ ವಿಧಾನಸಭೆ ವಿಸರ್ಜಿಸಿ ಮಧ್ಯಂತರ ಚುನಾವಣೆಗೆ ಹೋಗೋಣ ಎಂದು ಹೇಳಿ ಬಂದೆ.
ಆದರೆ ನಾನು ಬೆಂಗಳೂರಿಗೆ ಹಿಂತಿರುಗುವಷ್ಟರಲ್ಲಿ ಕರ್ನಾಟಕದ ರಾಜಕೀಯ ಚಿತ್ರ ಬದಲಾಗಿತ್ತು. ಅವತ್ತು ಮಧ್ಯಂತರ ಚುನಾವಣೆಯನ್ನು ಬಯಸದ ನಮ್ಮ ಪಕ್ಷದ ಶಾಸಕರು, ನನ್ನ ಮಗ ಕುಮಾರಸ್ವಾಮಿಯನ್ನೇ ಹೈಜಾಕ್ ಮಾಡಿ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸುವಂತೆ ಮಾಡಿದರು.
ನಾನದಕ್ಕೆ ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಯಾವ ಪ್ರಯೋಜನವಾಗಲಿಲ್ಲ. ಯಾಕೆಂದರೆ ಎಲ್ಲರೂ ತಮ್ಮ ತಮ್ಮ ಅನಿವಾರ್ಯತೆಗೆ ತಕ್ಕಂತೆ ನಡೆದುಕೊಳ್ಳುತ್ತಾರೆ. ಇವತ್ತೂ ಅಷ್ಟೇ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯ ಸಂದರ್ಭದಲ್ಲಿ ಏನು ಮಾತುಕತೆ ನಡೆದಿತ್ತೋ? ಆ ಮಾತುಕತೆಯನ್ನು ಉಲ್ಲಂಘಿಸುವ ರೀತಿಯಲ್ಲಿ ರಾಜ್ಯದ ನಿಮ್ಮ ನಾಯಕರು ನಡೆದುಕೊಳ್ಳುತ್ತಿದ್ದಾರೆ.
ರಾಹುಲ್ಗೆ ಗೌಡರ ತಣ್ಣನೆಯ ಎಚ್ಚರಿಕೆ
ಸರ್ಕಾರ ರಚನೆಯ ಸಂದರ್ಭದಲ್ಲಿ, ಯಾವ ಪಕ್ಷಕ್ಕೆ ಯಾವ ಖಾತೆಗಳು ಹೋಗುತ್ತವೆಯೋ? ಆ ಖಾತೆಯ ವ್ಯಾಪ್ತಿಯಲ್ಲಿರುವ ನಿಗಮ, ಮಂಡಳಿಗಳು ಆಯಾ ಪಕ್ಷಕ್ಕೇ ಹೋಗಬೇಕು ಎಂಬ ನಿರ್ಧಾರವಾಗಿತ್ತು ಎಂಬುದು ದೇವೇಗೌಡರು ರಾಹುಲ್ ಗಾಂಧಿ ಅವರ ಮುಂದಿಟ್ಟಿರುವ ವಾದ.
ಆದರೆ ನಮ್ಮ ಪಕ್ಷಕ್ಕೆ ಸೇರಿದ ಖಾತೆಗಳ ವ್ಯಾಪ್ತಿಗೆ ಬರುವ ನಿಗಮ, ಮಂಡಳಿಗಳ ಮೇಲೂ ನಿಮ್ಮವರು ಕಣ್ಣು ಹಾಕುತ್ತಿದ್ದಾರೆ ಎಂದರೆ, ಅವರೇನೇ ಮಾಡಿದರೂ ನಿಮ್ಮ ಗಮನಕ್ಕೆ ತರುತ್ತಿಲ್ಲ ಎಂದೇ ಅರ್ಥ. ಹಾಗಂತ ನಾವು ಸುಮ್ಮನಿರಲು ಸಾಧ್ಯವಿಲ್ಲ. ಯಾಕೆಂದರೆ ನಾವು ಸುಮ್ಮನಿದ್ದರೂ ಪಕ್ಷದ ಶಾಸಕರು ಬೇರೆ ನಿರ್ಧಾರಕ್ಕೆ ಬರಬಹುದು ನೋಡಿ ಎಂದು ದೇವೇಗೌಡರು ತಣ್ಣಗೆ ಹೇಳಿದ್ದಾರೆ ಅಲ್ಲ ಎಚ್ಚರಿಕೆ ನೀಡಿದ್ದಾರೆ
ಇಷ್ಟು ಹೇಳಿದ್ದೇ ತಡ ಈಗ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ಕೆ.ಸಿ. ವೇಣುಗೋಪಾಲ್ ಅವರಿಗೆ, ಯಾಕೆ ಈ ಗೊಂದಲ ಸೃಷ್ಟಿಯಾಗಿದೆ ಎಂದು ಕ್ಲಾಸ್ ತೆಗೆದುಕೊಳ್ಳಲು ರಾಹುಲ್ ಗಾಂಧಿ ಸಜ್ಜಾಗಿದ್ದಾರೆ. ನಿಗಮ ಮಂಡಳಿ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ರಾಜಕೀಯದಲ್ಲಿ ಈಗಾಗಲೆ ಅಸಮಾಧಾನ ಭುಗಿಲೆದ್ದಿದೆ. ಮುಂದೇನೋ?