ಅಪ್ಪಟ ಕನ್ನಡ ಮಾತಾಡುವ ದೇವಪ್ಪಜ್ಜನ ಗೆದ್ದವರುಂಟೇ?
ಈಗ ಇಂಗ್ಲಿಷ್ ಆವರಿಸದ ಜಾಗವೆಲ್ಲಿದೆ ಹೇಳಿ? ಕನ್ನಡವನ್ನೇ ಮಾತನಾಡಿದರೂ ಅದರಲ್ಲೂ ಅರೆಬರೆ ಇಂಗ್ಲಿಷ್ ಇದ್ದೇ ಇರುತ್ತದೆ. ಇದು ಬೇರೆ ಭಾಷೆಗಳಿಗೂ ಹೊರತಲ್ಲ. ಮಾತನಾಡುವಾಗ ಗೊತ್ತೇ ಆಗದೇ ಮಾತೃಭಾಷೆಯೊಂದಿಗೆ ಇಂಗ್ಲಿಷ್ ಸೇರಿಕೊಂಡುಬಿಡುತ್ತದೆ.
ಆದರೆ ಕನ್ನಡವನ್ನು, ಅದೂ ಒಂದು ಇಂಗ್ಲಿಷ್ ಪದವನ್ನೂ ಬಳಸದೆ ಅಪ್ಪಟ ಕನ್ನಡವನ್ನು ಮಾತನಾಡುತ್ತಾರೆ ಇವರು. ಕಳೆದ 35 ವರ್ಷಗಳಿಂದ ಒಂದೇ ಒಂದು ಇಂಗ್ಲಿಷ್ ಪದ ಬಳಸದೆ ಶುದ್ಧ ಕನ್ನಡದಲ್ಲಿ ಇವರು ಮಾತನಾಡುತ್ತಿದ್ದಾರೆ ಎಂದರೆ ನಂಬುತ್ತೀರಾ? ನಂಬಲೇಬೇಕು. ಇದು ಸಾಧ್ಯವೇ ಇಲ್ಲ ಎಂದು ಇವರನ್ನು ಸೋಲಿಸಲು ಬಂದವರೂ ಇದೇ ಮಾತನ್ನೇ ಆಡುತ್ತಿದ್ದಾರೆ. ಈ ನವೆಂಬರ್ 24ಕ್ಕೂ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಏನಿದು ಸ್ಪರ್ಧೆ, ಈ ವರದಿ ಓದಿ...
ದೇವಪ್ಪಜ್ಜನ ಬಾಯಲ್ಲಿ ಆಂಗ್ಲ ಪದವೇ ಬರಲ್ಲ
ಹುಬ್ಬಳ್ಳಿಯ ಈಶ್ವರ ನಗರದ ದಕ್ಷಿಣ ಶ್ರೀವೈಷ್ಣೋದೇವಿ ಮಂದಿರದ ಧರ್ಮಾಧಿಕಾರಿ ಅಭಿನವ ಆಂಡಯ್ಯ ಎಂದೇ ಪ್ರಸಿದ್ಧರಾಗಿರುವ ದೇವಪ್ಪಜ್ಜನವರ ಬಾಯಿಯಿಂದ ಆಂಗ್ಲ ಪದಗಳನ್ನು ಹೇಳಿಸಿದವರು ಯಾರೂ ಇಲ್ಲ. ಯಾವುದೇ ಇಂಗ್ಲಿಷ್ ಪದವನ್ನು ಕೇಳಿದರೂ, ಅದಕ್ಕೆ ಶುದ್ಧ ಕನ್ನಡದಲ್ಲಿ ಉತ್ತರಿಸುತ್ತಾರೆ, ಜೊತೆಗೆ ಆ ಇಂಗ್ಲಿಷ್ ಪದಕ್ಕೆ ತಕ್ಕ ಕನ್ನಡ ಪದ ತಿಳಿಸುತ್ತಾರೆ.
ಮುನ್ನೋಟ: ಡಿಜಿಟಲ್ ಜಗತ್ತಿನಲ್ಲಿ ಕನ್ನಡ ನಿನ್ನೆ, ಇಂದು ಮತ್ತು ನಾಳೆ
35 ವರ್ಷಗಳಿಂದ ಸೋಲು ಕಂಡಿಲ್ಲ
ಇವರ ಬಾಯಿಯಿಂದ ಇಂಗ್ಲಿಷ್ ಶಬ್ದ ಅಥವಾ ಪದವನ್ನು ಹೇಳಿಸುವ ಸ್ಪರ್ಧೆಯಲ್ಲಿ ಇದುವರೆಗೂ ಯಾರೂ ಗೆಲುವು ಸಾಧಿಸಿಲ್ಲ. 35 ವರ್ಷಗಳಿಂದ ಅವರು ಒಡ್ಡುತ್ತಿರುವ ಈ ಸವಾಲಿನಲ್ಲಿ ಯಾರೊಬ್ಬರೂ ಜಯಶಾಲಿಗಳಾಗಲೂ ಸಾಧ್ಯವಾಗಿಲ್ಲ. ಈ ವರ್ಷವೂ ನವೆಂಬರ್ 24ರಂದು ಮುಕ್ತ ಸ್ಪರ್ಧೆಯನ್ನು ಆಯೋಜಿಸಿದ್ದಾರೆ. ಸಾಹಿತಿಗಳು, ವಿದ್ವಾಂಸರು, ಶಿಕ್ಷಕರು, ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು, ಆಸಕ್ತ ಸಾರ್ವಜನಿಕರು ಸೇರಿದಂತೆ ಯಾವುದೇ ಜಾತಿ, ಧರ್ಮದವರು ಬೇಕಾದರೂ ಈ ಸವಾಲಿನಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ.
55,555 ಬಹುಮಾನ ಗೆಲ್ಲುವ ಅವಕಾಶ
ಈ ಸ್ಪರ್ಧೆಯಲ್ಲಿ ಸ್ಪರ್ಧಾಳುಗಳಿಗೆ ಐದು ನಿಮಿಷ ಕಾಲಾವಕಾಶ ಇರಲಿದ್ದು, ಈ ಸಮಯದಲ್ಲಿ ದೇವಪ್ಪಜ್ಜನವರಿಂದ ಆಂಗ್ಲಪದ ಹೇಳಿಸಿದರೆ ಸವಾಲು ಗೆದ್ದಂತೆ. ಆದರೆ, ಸವಾಲಿನ ಸಂದರ್ಭದಲ್ಲಿ ವಾದ, ತಕರಾರು ಮಾಡುವುದಾಗಲಿ, ಹೊಡೆಯುವುದಾಗಲಿ, ಬೈಯುವುದಕ್ಕಾಗಲಿ ಅವಕಾಶವಿಲ್ಲ ಎಂಬುದು ಅವರ ಪ್ರಮುಖ ಷರತ್ತುಗಳು.
ಪ್ರತಿ ವರ್ಷ ನವೆಂಬರ್ನಲ್ಲಿ ಆಯೋಜಿಸುವ ಈ ಸವಾಲಿನಲ್ಲಿ ನೂರಾರು ಸ್ಪರ್ಧಿಗಳು ಭಾಗವಹಿಸುತ್ತಾರೆ. ಆರಂಭದ ವರ್ಷಗಳಲ್ಲಿ ಇವರ ಸವಾಲು ಜಯಿಸಿದವರಿಗೆ 500 ಬಹುಮಾನ ಇಟ್ಟಿದ್ದರು. 2006-07ರಲ್ಲಿ ಈ ಮೊತ್ತ 1 ಕೋಟಿ ಇತ್ತು! ಆಗಲೂ ಯಾರೊಬ್ಬರೂ ಗೆಲ್ಲಲಿಲ್ಲ.
ಕನ್ನಡ್ ಗೊತ್ತಿಲ್ಲ? ಫೋನಿನಲ್ಲೇ ಕನ್ನಡ ಕಲಿಸಲು ಮುಂದಾದ ಯುವ ಬ್ರಿಗೇಡ್
ಸಾಹಿತಿ, ಜನಪ್ರತಿನಿಧಿಗಳಿಗೂ ಸೋಲು
ಇವರ ಬಾಯಿಂದ ಆಂಗ್ಲ ಪದ ಹೇಳಿಸಲು ಯತ್ನಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಜಗದೀಶ ಶೆಟ್ಟರ್, ಚಂದ್ರಕಾಂತ ಬೆಲ್ಲದ, ಪ್ರೊ.ಐ.ಜಿ.ಸನದಿ, ಚಂಪಾ, ಮಾತೆ ಮಹಾದೇವಿ, ಸಿ.ಎಸ್.ಶಿವಳ್ಳಿ ಸೇರಿದಂತೆ ಪ್ರಮುಖರು ಸೋಲೊಪ್ಪಿದ್ದಾರೆ ಎನ್ನುವುದು ದೇವಪ್ಪಜ್ಜ ಮಾತು. ಇವರು ವಿಮಾನಯಾನ ಸಹ ಮಾಡಿದ್ದಾರೆ. ಅಲ್ಲಿಯೂ ಸಿಬ್ಬಂದಿ ಇಂಗ್ಲಿಷ್ ನಲ್ಲಿ ಮಾತನಾಡಿದರೆ ಅವರಿಗೆ ಕನ್ನಡದಲ್ಲಿ ಉತ್ತರಿಸಿ ಮನವರಿಕೆ ಮಾಡಿ ಪ್ರಯಾಣ ಮಾಡಿದ್ದೇನೆ ಅನ್ನುತ್ತಾರೆ ದೇವಪ್ಪಜ್ಜ.
ಇನ್ನು ಈ ಸವಾಲಿನಲ್ಲಿ ಭಾಗವಹಿಸಲು ಇಚ್ಛಿಸುವವರು 98806 38208/ 86188 58462 ಸಂಪರ್ಕಿಸಿ, ಹೆಸರು ನೋಂದಾಯಿಸಬಹುದು.