ಬಯಕೆಯಿಲ್ಲದ ಮನುಷ್ಯ ಮನುಷ್ಯನೇ ಅಲ್ಲ, ಅದಕ್ಕೆ ಅಂತ್ಯವೂ ಇಲ್ಲ...
ಮನುಷ್ಯ ಪ್ರಾಣಿಯೇ ಆದರೂ ಇತರೆ ಪ್ರಾಣಿಗಳಿಗೆ ಹೋಲಿಸಿದರೆ ಬುದ್ದಿವಂತ, ಆತ್ಮಸಂಯಮಿ. ಹಾಗಾಗಿ ಪ್ರಾಣಿಗಳಿಂದ ಪ್ರತ್ಯೇಕಿಸಿ ಮನುಷ್ಯನನ್ನು ನೋಡಬಹುದು. ಪ್ರಾಣಿಗಳು ತಮ್ಮನ್ನು ತಾವು ಸಂಯಮಿಸಿಕೊಳ್ಳಲಾರವು. ಆದರೆ ಮನುಷ್ಯ ಪ್ರಯತ್ನಪಟ್ಟರೆ ಅಥವಾ ಇಚ್ಛಿಸಿದರೆ ಖಂಡಿತಾ ಸಂಯಮಿಯಾಗಬಲ್ಲ ಎಂಬುದಂತೂ ಸತ್ಯ.
ಕೆಲವೊಮ್ಮೆ ಪ್ರಾಣಿಗಳಲ್ಲಿರುವ ಕೆಲವೊಂದು ಗುಣ ಮನುಷ್ಯನಲ್ಲಿಯೂ ಕಾಣಬಹುದು. ಕಾಮ, ವಿಕಾರತೆ, ದ್ವೇಷ, ಲೋಭ, ಲಾಲಸೆ, ಮೃಗೀಯ ಹಸಿವು ಎಲ್ಲವನ್ನೂ ನಾವು ಬೆನ್ನಿಗೆಳೆದುಕೊಂಡೇ ಬಂದಿದ್ದೇವೆ. ಒಂದು ಕ್ಷಣ ನಮ್ಮನ್ನು ನಾವೇ ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಬದುಕಿನ ವಿಕಾರತೆಯನ್ನು ಕಾಣಬಹುದು.
ಉಪಾಸನೆಯಂತೆ, ಪೂಜೆಯಂತೆ ಕೆಲಸ ಮಾಡಿದಾಗ ಮಾತ್ರ ಒಳ್ಳೆಯ ಫಲ
ಅಷ್ಟೇ ಅಲ್ಲ ಆಧ್ಯಾತ್ಮಿಕತೆಯ ಹಾದಿಯಲ್ಲಿ ನಡೆದರೆ ಅದನ್ನು ಸರಿಪಡಿಸಿಕೊಳ್ಳಲೂಬಹುದು. ಹಾಗೆ ನೋಡಿದರೆ ನಾವ್ಯಾರು ನಮ್ಮ ಬಯಕೆಗಳನ್ನು ನಿಯಂತ್ರಿಸುವತ್ತ ಯೋಚಿಸುವುದೇ ಇಲ್ಲ. ಬದಲಿಗೆ ದಿನೇ ದಿನೇ ಅಥವಾ ಕ್ಷಣ ಕ್ಷಣಕ್ಕೂ ಬಯಕೆಯ ಕುದುರೆಯೇರಿ ಸಾಗುತ್ತಲೇ ಇರುತ್ತೇವೆ.
ಬಯಕೆ ಎಂಬುದು ಅಂತ್ಯವಿಲ್ಲದ್ದು, ಅದರ ದಾಸರಾಗಿ ಮುನ್ನಡೆದರೆ ಪರಿಣಾಮದ ತೀವ್ರತೆ ಭಯಾನಕ. ಹಾಗೆಂದು ಬಯಕೆಯನ್ನು ಪೂರ್ಣವಾಗಿ ತ್ಯಜಿಸುವಂತೆಯೂ ಇಲ್ಲ. ಬಯಕೆಯಿಲ್ಲದ ಮನುಷ್ಯ ಮನುಷ್ಯನೇ ಅಲ್ಲ... ಆದರೆ ಬಯಕೆಯ ಹಾದಿ ಸನ್ನಡತೆಯದ್ದಾಗಿರಬೇಕು.
ಇಂದ್ರಿಯಗಳನ್ನು ಹತೋಟಿಗಿಳಿಸಬೇಕು
ಬಹಳಷ್ಟು ಸಾರಿ ನಮಗೆ ತಿಳಿದಿರುತ್ತದೆ. ಈ ಬಯಕೆ ಹೆಬ್ಬಯಕೆ ಇದು ನಮ್ಮ ಕೈಗೆಟುಕುವುದಿಲ್ಲವೆಂದು. ಆದರೂ ಆ ಬಯಕೆಯ ಈಡೇರಿಕೆಯ ಹಠ ನಮ್ಮನ್ನು ಮತ್ತೆ, ಮತ್ತೆ ಅದರತ್ತ ಸೆಳೆಯುತ್ತಲೇ ಇರುತ್ತದೆ.
ಲಾಟರಿ ಟಿಕೇಟು ಕೊಂಡು ಒಮ್ಮೆಲೇ ಶ್ರೀಮಂತನಾಗಬೇಕೆನ್ನುವ ವ್ಯಕ್ತಿಯ ಬಯಕೆಗೂ ಕಷ್ಟಪಟ್ಟು ದುಡಿದು ಸಂಪಾದಿಸಬೇಕೆನ್ನುವ ವ್ಯಕ್ತಿಯ ಬಯಕೆಗೂ ಎಷ್ಟೊಂದು ವ್ಯತ್ಯಾಸವಿದೆಯಲ್ಲವೆ?. ಒಬ್ಬ ವ್ಯಕ್ತಿ ಬಯಕೆಯ ಹಾದಿಯಲ್ಲಿ ನಡೆಯುವಾಗ ಅದರ ಒಳಿತು ಕೆಡಕುಗಳ ಬಗ್ಗೆಯೂ ಯೋಚಿಸುವುದು ಅತ್ಯಗತ್ಯ. ಬಯಕೆಯ ಹಾದಿ ಸುಗಮವಾದುದಲ್ಲ.
ಅಲ್ಲಿ, ಕಷ್ಟ, ನಷ್ಟ, ಅವಮಾನ, ನಿರಾಶೆ ಹೀಗೆ ಎಲ್ಲವೂ ಇದೆ. ಬಯಕೆಯನ್ನು ನಿಯಂತ್ರಿಸಬೇಕೆಂದರೆ ಇಂದ್ರಿಯಗಳನ್ನು ಹತೋಟಿಗಿಳಿಸಬೇಕು ಹಾಗಿದ್ದರೆ ಮಾತ್ರ ಸಾಧ್ಯ.
ಭಗವದ್ಗೀತೆಯಲ್ಲಿ ಹೀಗೆ ಹೇಳಲಾಗಿದೆ
"ಇಂದ್ರಿಯಗಳಿಗೆ ವಿಷಯಗಳಾದ ರೂಪಾದಿಗಳಲ್ಲಿ ಇಂದ್ರಿಯಗಳು ಅನುಕೂಲವಾದಾಗ ರಾಗವೂ, ಪ್ರತಿಕೂಲವಾದಾಗ ದ್ವೇಷವೂ ಅವಶ್ಯವಾಗಿ ಸಂಭವಿಸುತ್ತದೆ. ಪುರುಷರನ್ನು ದುಷ್ಟ ಕಾರ್ಯಗಳಲ್ಲಿ ಪ್ರವೃತ್ತರನ್ನಾಗಿ ಮಾಡುವ ಕಾಮವೇ (ಬಯಕೆ) ಕ್ರೋಧವಾಗಿದೆ. ಆದ್ದರಿಂದ ಈ ಕಾಮವು ರಜೋಗುಣಗಳಿಂದ ಹುಟ್ಟಿದೆ. ಅಧಿಕವಾದ ವಿಷಯಗಳುಳ್ಳ ಹಾಗೂ ಮಹಾಪಾಪಕ್ಕೆ ಕಾರಣವಾದ ಈ ಕಾಮ (ಬಯಕೆ)ವನ್ನು ವೈರಿಯಾಗಿ ತಿಳಿಯಿರಿ".
ದೇವರಲ್ಲಿ ನಂಬಿಕೆಯಿದೆಯೆ? ಎಲ್ಲಿದ್ದಾನೆ, ಯಾವ ಸ್ವರೂಪದಲ್ಲಿದ್ದಾನೆ?
ಶಾಮೀಲಾಗಿ ಬಿಡುತ್ತವೆ
ನಾವು ಬಯಕೆಯ ಕುದುರೆಯೇರಿ ಸಾಗುವಾಗ ನಮ್ಮ ಇಂದ್ರಿಯ ಮತ್ತು ಮನಸ್ಸು ಅದರ ಸೆಳೆತಕ್ಕೆ ಸಿಕ್ಕಿ ಅದರೊಂದಿಗೆ ಶಾಮೀಲಾಗಿ ಬಿಡುತ್ತವೆ. ಹೀಗಿರುವಾಗ ಒಳಿತು ಕೆಡಕುಗಳ ಬಗೆಗೆ ಯೋಚಿಸುವ ಜ್ಞಾನವಾದರೂ ಎಲ್ಲಿರುತ್ತದೆ?. ಬಯಕೆಯೆಂಬುವುದು ಚಕ್ಷುರಾದಿ ಇಂದ್ರಿಯಗಳಿಂದ ಜ್ಞಾನವನ್ನು ಆಗಲೇ ಮುಚ್ಚಿ ಹಾಕಿ ಜೀವವನ್ನು ಮೋಹದಲ್ಲಿ ಬಂಧಿಸಿಟ್ಟಿರುತ್ತದೆ.
ಬಯಕೆಗೊಂದು ಪರಿದಿ ಎಳೆಯಿರಿ
ಆದುದರಿಂದ ಇಂದ್ರಿಯಗಳನ್ನು ಸ್ವಾಧೀನದಲ್ಲಿಟ್ಟುಕೊಂಡು ಸಾಮಾನ್ಯವಲ್ಲದ ವಿಶೇಷ ಜ್ಞಾನದಿಂದ ಬಯಕೆಯನ್ನು ನಾಶಪಡಿಸಬೇಕು. ಬಯಕೆಗೊಂದು ಪರಿದಿ ಎಳೆದು ಅದರೊಳಗೆ ಸುಖ ಕಾಣಬೇಕು. ಹಾಗಿದ್ದರೆ ಮಾತ್ರ ಸ್ವಚ್ಛಂದ, ಅಷ್ಟೇ ಅಲ್ಲ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.