ಕೊಹಿನೂರ್ ರೀತಿಯಲ್ಲೇ ಸ್ಟಾರ್ ಡೈಮಂಡ್ ಹಿಂದಿರುಗಿಸಲು ಆಗ್ರಹಿಸಿದ ದಕ್ಷಿಣ ಆಫ್ರಿಕಾ
ಕಿಂಬರ್ಲಿ, ಸೆಪ್ಟೆಂಬರ್ 19: ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ನಿಧನದ ಬಳಿಕ ಭಾರತದಿಂದ ತೆಗೆದುಕೊಂಡು ಹೋದ ಪ್ರಸಿದ್ಧ ಕೊಹಿನೂರ್ ವಜ್ರವನ್ನು ಹಿಂದುರುಗಿಸಲು ಆಗ್ರಹಗಳು ಹೆಚ್ಚಾಗುತ್ತಿದ್ದಂತೆ ಈಗ ದಕ್ಷಿಣ ಆಫ್ರಿಕಾದಿಂದಲೂ ಸಹ ಅವರ 500 ಕ್ಯಾರೆಟ್ ಸ್ಟಾರ್ ಡೈಮಂಡ್ ವಜ್ರವನ್ನು ಹಿಂದುರಿಗಿಸುವಂತೆ ಆಗ್ರಹ ಕೇಳಿ ಬಂದಿದೆ.
ರಾಣಿ ಎಲಿಜಬೆತ್ ಅವರ ಮರಣದ ನಂತರ, ಬ್ರಿಟಿಷ್ ಕಿರೀಟವನ್ನು ಅಲಂಕರಿಸಿರುವ ಹಲವಾರು ವಜ್ರಗಳನ್ನು ಹಿಂದಿರುಗಿಸುವಂತೆ ಈಗ ಆಗ್ರಹಗಳನ್ನು ಮಾಡಲಾಗುತ್ತಿದೆ. ದಕ್ಷಿಣ ಆಫ್ರಿಕಾವು ಗ್ರೇಟ್ ಸ್ಟಾರ್ ಆಫ್ ಆಫ್ರಿಕಾದ ವಜ್ರವನ್ನು ಹಿಂದುರಿಗಿಸಲು ಆಗ್ರಹ ಮಾಡಿದೆ. ಇದು ಅತಿದೊಡ್ಡ ಸ್ಪಷ್ಟವಾದ ವಜ್ರವಾಗಿದೆ.
ವಾರಂಗಲ್ನ ಭದ್ರಕಾಳಿ ದೇಗುಲವೇ ಕೊಹಿನೂರ್ ವಜ್ರದ ಮೂಲ ನೆಲೆ?
ಸಿಎನ್ಎನ್ ವರದಿಯ ಪ್ರಕಾರ 1905ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಗಣಿಗಾರಿಕೆ ಮಾಡಿದಾಗ ದೊರೆತ ದೊಡ್ಡ ವಜ್ರವಾದ ಇದನ್ನು ಕಲಿನನ್ I ಎಂದೂ ಕರೆಯುತ್ತಾರೆ. ಗ್ರೇಟ್ ಸ್ಟಾರ್ ವಜ್ರವನ್ನು ಆಫ್ರಿಕಾದ ವಸಾಹತುಶಾಹಿ ಆಡಳಿತಗಾರರು ಬ್ರಿಟಿಷ್ ರಾಜಮನೆತನಕ್ಕೆ ಹಸ್ತಾಂತರಿಸಿದರು. ಪ್ರಸ್ತುತ ರಾಣಿಗೆ ಸೇರಿದ ರಾಜ ರಾಜದಂಡದ ಮೇಲೆ ಅಳವಡಿಸಲಾಗಿದೆ ಎಂದು ಅದು ತಿಳಿಸಿದೆ.
"ಕಲಿನನ್ ಡೈಮಂಡ್ ಅನ್ನು ದಕ್ಷಿಣ ಆಫ್ರಿಕಾಕ್ಕೆ ತಕ್ಷಣವೇ ಹಿಂತಿರುಗಿಸಬೇಕು. ನಮ್ಮ ದೇಶ ಮತ್ತು ಇತರ ದೇಶಗಳ ಖನಿಜಗಳು ನಮ್ಮ ಜನರ ವೆಚ್ಚದಲ್ಲಿ ಬ್ರಿಟನ್ಗೆ ಪ್ರಯೋಜನವನ್ನು ನೀಡುತ್ತಲೇ ಇರುತ್ತವೆ ಎಂದು ಕಾರ್ಯಕರ್ತ ಥಂಡುಕ್ಸೊಲೊ ಸಬೆಲೊ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ. ವಜ್ರವನ್ನು ಹಿಂದಿರುಗಿಸುವಂತೆ change.org ನಲ್ಲಿ ಆನ್ಲೈನ್ ಅರ್ಜಿಯನ್ನು ಪ್ರಾರಂಭಿಸಲಾಗಿದೆ. ಅದಕ್ಕೆ 6,000 ಕ್ಕೂ ಹೆಚ್ಚು ಜನರು ಸಹಿ ಹಾಕಿದ್ದಾರೆ.
ಕೊಹಿನೂರ್ ವಜ್ರ ಪುರಿ ಜಗನ್ನಾಥನಿಗೆ ಸೇರಿದ್ದು: ಜಗನ್ನಾಥ ಸೇನೆ ವಾದ
ದಕ್ಷಿಣ ಆಫ್ರಿಕಾದ ಸಂಸತ್ತಿನ ಸದಸ್ಯರಾದ ವುಯೋಲ್ವೆತು ಝುಂಗುಲಾ ಅವರು ಬ್ರಿಟನ್ ಮಾಡಿದ ಎಲ್ಲಾ ಹಾನಿಗಳಿಗೆ ಪರಿಹಾರ ಮತ್ತು ಬ್ರಿಟನ್ ನಮ್ಮಿಂದ ಕದ್ದ ಎಲ್ಲಾ ಚಿನ್ನ, ವಜ್ರಗಳನ್ನು ಹಿಂದಿರುಗಿಸಬೇಕು ಎಂದು ಒತ್ತಾಯಿಸಿ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಾರೆ. 530.2 ಕ್ಯಾರೆಟ್ ಡ್ರಾಪ್ ಆಕಾರದ ವಜ್ರವನ್ನು ರಾಜದಂಡದೊಂದಿಗೆ ಕ್ರಾಸ್ಗೆ ಸೇರಿಸಲಾಯಿತು ಎಂದು ಎಬಿಸಿ ನ್ಯೂಸ್ ವರದಿಯಲ್ಲಿ ತಿಳಿಸಿದೆ. ಇದು 1600 ರ ದಶಕದ ಹಿಂದಿನ ಪಟ್ಟಾಭಿಷೇಕ ಸಮಾರಂಭಗಳಲ್ಲಿ ಬಳಸಲ್ಪಟ್ಟ ಪವಿತ್ರ ವಸ್ತುವಾಗಿದೆ.
ಬ್ರಿಟಿಷ್ ಕುಟುಂಬದ ವಶದಲ್ಲಿರುವ ವಜ್ರ ಹಿಂದುರಿಸಲಿ
ಲಂಡನ್ ಟವರ್ನಲ್ಲಿರುವ ಜ್ಯುವೆಲ್ ಹೌಸ್ನಲ್ಲಿ ವಜ್ರವನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ ಎಂದು ಸಿಎನ್ಎನ್ ತಿಳಿಸಿದೆ. ವಜ್ರದ ನಿಖರವಾದ ವಿತ್ತೀಯ ಮೌಲ್ಯವು ಅಸ್ಪಷ್ಟವಾಗಿದೆ. ಆದರೂ ಅದರ ಅಪರೂಪತೆ ಮತ್ತು ಇತಿಹಾಸವು ಅದನ್ನು ಅದೃಷ್ಟದ ಮೌಲ್ಯವನ್ನಾಗಿ ಮಾಡುತ್ತದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಬ್ರಿಟಿಷ್ ಕುಟುಂಬದ ವಶದಲ್ಲಿರುವ ಹಲವಾರು ವಜ್ರಗಳನ್ನು ತಮ್ಮ ದೇಶಗಳಿಗೆ ಹಿಂದಿರುಗಿಸಬೇಕೆಂದು ಒತ್ತಾಯಿಸಿ ಅಭಿಯಾನಗಳನ್ನು ಪ್ರಾರಂಭಿಸಿದ್ದಾರೆ.
1947ರಲ್ಲಿ ಭಾರತ ಸರ್ಕಾರದಿಂದ ಆಗ್ರಹ
ಭಾರತದಿಂದ ಕೊಂಡು ಹೋದ ವಜ್ರವನ್ನು 14ನೇ ಶತಮಾನದಲ್ಲಿ ಗೋಲ್ಕೊಂಡಾ ಗಣಿಗಳಲ್ಲಿ ಪತ್ತೆ ಹಚ್ಚಲಾಗಿತ್ತು. ಶತಮಾನಗಳ ಅವಧಿಯಲ್ಲಿ ವಿವಿಧ ಕೈಗಳ ಮೂಲಕ ಅದು ಸರಿದು ಹೋಯಿತು. ಭಾರತ ಸರ್ಕಾರವು 1947ರಲ್ಲಿ ಒಮ್ಮೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಕೊಹಿನೂರ್ನ ವಾಪಸಾತಿಗೆ ಒತ್ತಾಯಿಸಿದೆ. ಆದಾಗ್ಯೂ, ಬ್ರಿಟಿಷ್ ಸರ್ಕಾರವು ವಜ್ರವನ್ನು ಕೊಡಲು ನಿರಾಕರಿಸಿದೆ.
ಜಗನ್ನಾಥ ಸೇನೆಯಿಂದ ರಾಷ್ಟ್ರಪತಿಗೆ ಮತ್ರ
ಕೊಹಿನೂರ್ ವಜ್ರದ ಮಾಲೀಕತ್ವಕ್ಕಾಗಿ ಭಾರತದಲ್ಲಿ ಎರಡು ಆಗ್ರಹಗಳು ಕೇಳಿಬಂದಿದ್ದು, ಒಡಿಶಾದ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯ ಜಗನ್ನಾಥ ಸೇನೆಯು ಸದರಿ ವಜ್ರವು ತಮಗೆ ಸೇರಿದ್ದು ಅದನ್ನು ತಮ್ಮ ಸುಪರ್ದಿಗೆ ನೀಡಬೇಕು. ಅದನ್ನು ಪುರಿಯ ಜಗನ್ನಾಥ ದೇವಾಲಯಕ್ಕೆ ಅರ್ಪಿಸಬೇಕು. ಇದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಧ್ಯಸ್ಥಿಕೆ ವಹಿಸಬೇಕು ಎಂದು ಪತ್ರ ಬರೆದಿತ್ತು.
ಇಮ್ಮಡಿ ಪುಲಿಕೇಶಿಯಿಂದ ವಾರಂಗಲ್ ದೇವಾಲಯಕ್ಕೆ ಅರ್ಪಣೆ
ಜಗನ್ನಾಥ ಸೇನೆ ಆಗ್ರಹದ ಬಳಿಕ ಕೊಹಿನೂರ್ ವಜ್ರವು ಸೇರಬೇಕು ಎಂದು ವಾರಂಗಲ್ನ ಭದ್ರಕಾಳಿ ದೇವಾಲಯಕ್ಕೆ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿತ್ತು ಚಾಲುಕ್ಯ ರಾಜವಂಶದ ರಾಜ ಇಮ್ಮಡಿ ಪುಲಿಕೇಶಿ ಕ್ರಿ.ಶ. 625 ರ ಸುಮಾರಿಗೆ ವಾರಂಗಲ್ನಲ್ಲಿ ಸುಂದರವಾದ ಭದ್ರಕಾಳಿ ದೇವಾಲಯವನ್ನು ನಿರ್ಮಿಸಿದನು. ಆಗ ಇದೇ ಕೊಹಿನೂರ್ ವಜ್ರವನ್ನು ದೇವಿಗೆ ಅರ್ಪಿಸಿದ್ದನು. ಹಾಗಾಗಿ ಇದರ ಮೂಲ ವಾರಂಗಲ್ ಭದ್ರಕಾಳಿ ದೇವಾಲಯವಾಗಿದೆ. ಇದರಿಂದ ಪ್ರಸಿದ್ಧ ಕೊಹಿನೂರ್ ವಜ್ರವನ್ನು ಸದರಿ ದೇವಾಲಯಕ್ಕೆ ಒಪ್ಪಿಸಬೇಕು ಎಂಬ ಆಗ್ರಹವು ಇದೆ.