ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತ್ರಿಕೋನ ಸ್ಪರ್ಧೆ, ಅಭ್ಯರ್ಥಿಗಳ ಸವಿವರ
ಕೇಂದ್ರಾಡಳಿತ ಪ್ರದೇಶ, ರಾಷ್ಟ್ರ ರಾಜಧಾನಿ ದೆಹಲಿಯನ್ನು ಪ್ರತ್ಯೇಕ ರಾಜ್ಯ ಮಾಡುವ ಕನಸು ಹೊತ್ತಿರುವ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ ಈ ಬಾರಿಯ ಲೋಕಸಭೆ ಚುನಾವಣೆ ಭಾರಿ ಸ್ಪರ್ಧೆಯನ್ನು ತಂದೊಡ್ಡಲಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಘಟನಾಘಟಿಗಳನ್ನು ಕಣಕ್ಕಿಳಿಸಿದ್ದು ತೀವ್ರ ಹಣಾಹಣಿ ನಿರೀಕ್ಷಿಸಲಾಗಿದೆ.
ಮಾಜಿ ಮುಖ್ಯಮಂತ್ರಿ, ಕೇರಳದ ಮಾಜಿ ರಾಜ್ಯಪಾಲೆ ಶೀಲಾ ದೀಕ್ಷಿತ್ ಅವರು ಚುನಾವಣಾ ರಾಜಕೀಯಕ್ಕೆ ಮರಳಿದಿದ್ದಾರೆ. ಆಮ್ ಆದ್ಮಿ ಪಕ್ಷದ ಮೈತ್ರಿ ಇಲ್ಲದೆ ಕಾಂಗ್ರೆಸ್ ಏಕಾಂಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದಾರೆ. ಬಿಜೆಪಿ ಕೂಡಾ ಅನಿರೀಕ್ಷಿತ ರೀತಿಯಲ್ಲಿ ಟಿಕೆಟ್ ಹಂಚಿದೆ.
ಜನಪ್ರಿಯತೆ, ಮೋದಿ ಸರ್ಕಾರದ ಶ್ರೀರಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆಮಾಡಿದೆ. ಕಾಂಗ್ರೆಸ್ಸಿನಿಂದ ಟಿಕೆಟ್ ವಂಚಿತರ ಸಂಖ್ಯೆ ಕಡಿಮೆ. ಆಮ್ ಆದ್ಮಿ ಪಕ್ಷದಲ್ಲಿ ಭಿನ್ನಮತ ತಲೆದೋರಿದ್ದು, ಶಾಸಕರು ಸಾಲು ಸಾಲಾಗಿ ಬಿಜೆಪಿ ಸೇರುತ್ತಿದ್ದಾರೆ. ಅಲ್ಕಾ ಲಂಬಾ ಅವರು ಪಕ್ಷದ ಪರ ಪ್ರಚಾರ ನಡೆಸುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ್ದಾರೆ
ಕುಡಿಯುವ ನೀರಿನ ಸಮಸ್ಯೆ, ವಾಯು ಮಾಲಿನ್ಯ, ಯಮುನಾ ನದಿ ರಕ್ಷಣೆ, ಮೂಲ ಸೌಕರ್ಯ, ಸ್ವಚ್ಛತೆ, ಮಹಿಳೆಯರಿಗೆ ರಕ್ಷಣೆ ಇವೆ ಈ ಬಾರಿಯ ಚುನಾವಣೆಯ ವಿಷಯಗಳು. ಆದರೆ, ಇವೆಲ್ಲವನ್ನು ನೋಡಿಕೊಳ್ಳಲು ಆಮ್ ಆದ್ಮಿ ಪಕ್ಷ ಅಧಿಕಾರದಲ್ಲಿದೆ, ಇದು ಲೋಕಸಭೆ ಚುನಾವಣೆ ಹಾಗಾಗಿ ಅಭಿವೃದ್ಧಿಗೆ ಮತ ಹಾಕಿ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಪ್ರಚಾರ ನಡೆಸಿದ್ದಾರೆ.
ದೆಹಲಿಯ ಐತಿಹಾಸಿಕ ಚಾಂದಿನಿ ಚೌಕ್ ಕ್ಷೇತ್ರ
ದೆಹಲಿಯ ಐತಿಹಾಸಿಕ ಚಾಂದಿನಿ ಚೌಕ್ ಕ್ಷೇತ್ರದಿಂದ ಬಿಜೆಪಿಯಿಂದ ಡಾ. ಹರ್ಷ್ ವರ್ಧನ್, ಕಾಂಗ್ರೆಸ್ಸಿನಿಂದ ಜೆ.ಪಿ ಅಗರವಾಲ್ ಹಾಗೂ ಆಮ್ ಆದ್ಮಿ ಪಕ್ಷದಿಂದ ಪಂಕಜ್ ಗುಪ್ತಾ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಿರೀಕ್ಷಿಸಲಾಗಿದೆ.
ಈಶಾನ್ಯ ದೆಹಲಿ ಕ್ಷೇತ್ರ
ಈಶಾನ್ಯ ದೆಹಲಿಯಿಂದ ದೆಹಲಿ ಬಿಜೆಪಿ ಮುಖ್ಯಸ್ಥ, ಭೋಜ್ ಪುರಿ ನಟ, ಗಾಯಕ ಮನೋಜ್ ತಿವಾರಿ, ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹಾಗೂ ಆಮ್ ಆದ್ಮಿ ಪಕ್ಷದಿಂದ ದಿಲೀಪ್ ಪಾಂಡೆ ಕಣದಲ್ಲಿದ್ದಾರೆ. ಮನೋಜ್ ತಿವಾರಿ ಹಾಲಿ ಸಂಸದರಾಗಿದ್ದಾರೆ. ತ್ರಿಕೋನ ಸ್ಪರ್ಧೆ ನಿರೀಕ್ಷಿಸಲಾಗಿದೆ.
ಪೂರ್ವ ದೆಹಲಿ ಕ್ಷೇತ್ರ
ಪೂರ್ವ ದೆಹಲಿ ಕ್ಷೇತ್ರದಲ್ಲಿ ಬಿಜೆಪಿಯ ಮಹೇಶ್ ಗಿರಿ ಹಾಲಿ ಸಂಸದರಾಗಿದ್ದಾರೆ. ಆದರೆ, ಈ ಬಾರಿ ಮಹೇಶ್ ಗಿರಿ ಬದಲಿಗೆ ಬಿಜೆಪಿಯಿಂದ ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ಸಿನಿಂದ ಅರವಿಂದ್ ಸಿಂಗ್ ಲವ್ಲಿ ಸ್ಪರ್ಧಿಸಿದ್ದರೆ, ಎಎಪಿಯಿಂದ ಅತಿಷಿ ಕಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಗೂ ಈ ಬಾರಿ ಸುಲಭ ಗೆಲುವು ನಿರೀಕ್ಷಿಸಲು ಸಾಧ್ಯವಿಲ್ಲ. ತ್ರಿಕೋನ ಸ್ಪರ್ಧೆ ಸಾಧ್ಯತೆಯಿದೆ.
ನವದೆಹಲಿ ಕ್ಷೇತ್ರ
ನವದೆಹಲಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ ಬಿಜೆಪಿಯ ಮೀನಾಕ್ಷಿ ಲೇಖಿ ಅವರು ಈ ಬಾರಿ ಪುನರ್ ಆಯ್ಕೆ ಬಯಸಿದ್ದಾರೆ. ಮಾಜಿ ಕೇಂದ್ರ ಸಚಿವ ಅಜಯ್ ಮಾಕೆನ್ ಅವರು ಕಾಂಗ್ರೆಸ್ಸಿನಿಂದ ಹಾಗೂ ಎಎಪಿಯಿಂದ ಬ್ರಿಜೇಶ್ ಗೋಯೆಲ್ ಕಣದಲ್ಲಿದ್ದಾರೆ. ಲೇಖಿ ಹಾಗೂ ಮಾಕೆನ್ ನಡುವೆ ನೇರ ಹಣಾಹಣಿ ನಿರೀಕ್ಷಿಸಬಹುದು.
ವಾಯುವ್ಯ ದೆಹಲಿ ಕ್ಷೇತ್ರ
ವಾಯುವ್ಯ ದೆಹಲಿ ಕ್ಷೇತ್ರದಲ್ಲಿ ಬಿಜೆಪಿಯ ಉದಿತ್ ರಾಜ್ ಹಾಲಿ ಸಂಸದರಾಗಿದ್ದಾರೆ. ಆದರೆ, ಈ ಬಾರಿ ಅವರ ಬದಲಿಗೆ ಸೂಫಿ ಗಾಯಕ ಹನ್ಸ್ ರಾಜ್ ಹನ್ಸ್ ಗೆ ಟಿಕೆಟ್ ನೀಡಲಾಗಿದೆ. ಇನ್ನು ಕಾಂಗ್ರೆಸ್ಸಿನಿಂದ ರಾಜೇಶ್ ಲಿಲೊಥಿಯಾ ಕಣದಲ್ಲಿದ್ದರೆ, ಎಎಪಿಯಿಂದ ಗುಗ್ಗನ್ ಸಿಂಗ್ ಸ್ಪರ್ಧಿಸುತ್ತಿದ್ದಾರೆ.
ಪಶ್ಚಿಮ ದೆಹಲಿ
ಬಿಜೆಪಿಯಿಂದ ಹಾಲಿ ಸಂಸದ ಪ್ರವೇಶ್ ವರ್ಮಾ ಮತ್ತೆ ಸಂಸತ್ತಿಗೆ ಆಯ್ಕೆ ಬಯಸಿದ್ದಾರೆ. ಕಾಂಗ್ರೆಸ್ಸಿನಿಂದ ಮಹಾಬಲ್ ಮಿಶ್ರಾ ಹಾಗೂ ಎಎಪಿಯಿಂದ ಬಲ್ಬೀರ್ ಸಿಂಗ್ ಜಖಾರ್ ಕಣದಲ್ಲಿದ್ದಾರೆ. ತ್ರಿಕೋನ ಸ್ಪರ್ಧೆ ಸಾಧ್ಯತೆಯಿದ್ದರೂ ಪ್ರವೇಶ್ ಶರ್ಮ ಅವರಿಗೆ ಹಾಲಿ ಸಂಸದರಾಗಿ ಹೆಚ್ಚಿನ ಲಾಭ ಸಿಗುವ ಸಾಧ್ಯತೆಯಿದೆ.
ದಕ್ಷಿಣ ದೆಹಲಿ
ದಕ್ಷಿಣ ದೆಹಲಿಯಿಂದ ಹಾಲಿ ಸಂಸದ ರಮೇಶ್ ಬಿಧೂರಿ ಕಣದಲ್ಲಿದ್ದಾರೆ, ಇವರಿಗೆ ಪಂಚ್ ನೀಡಲು ಕಾಂಗ್ರೆಸ್ಸಿನಿಂದ ಜನಪ್ರಿಯ ಬಾಕ್ಸರ್ ವಿಜೇಂದ್ರ ಸಿಂಗ್ ಅವರನ್ನು ಕರೆ ತರಲಾಗಿದೆ. ಎಎಪಿನಿಂದ ರಾಘವ್ ಛಡ್ಡಾ ಸ್ಪರ್ಧಿಸುತ್ತಿದ್ದು, ರಮೇಶ್ ಹಾಗೂ ವಿಜೇಂದ್ರ ನಡುವಿನ ನೇರ ಹಣಾಹಣಿ ನಿರೀಕ್ಷಿಸಲಾಗಿದೆ.