ಡಿಕೆಶಿಗೆ ದೀಪಾವಳಿ ಅಂದ್ರೆ ಅದೃಷ್ಟ! ಕಳೆದ ಬಾರಿ ಬಳ್ಳಾರಿ, ಈ ಬಾರಿ ಜಾಮೀನು!
ಉಸ್ಸಪ್ಪಾ...! ಸತತ 50 ದಿನಗಳ ನಿರಂತರ ವಿಚಾರಣೆ, ಆಗಾಗ ಹದಗೆಟ್ಟ ಆರೋಗ್ಯ, ವಾರಕ್ಕೊಮ್ಮೆ ಕೋರ್ಟಿಗೆ ಅಲೆದಾಟ ಎಂದು ಹೈರಾಣಾಗಿದ್ದ ಕನಕಪುರ ಶಾಸಕ ಡಿಕೆ ಶಿವಕುಮಾರ್ ಅವರು ಕೊನೆಗೂ ನಿರಾಳತೆಯ ನಿಟ್ಟುಸಿರು ಬಿಟ್ಟಿದ್ದಾರೆ. ದೆಹಲಿ ಹೈಕೋರ್ಟ್ ಅವರಿಗೆ ಜಾಮೀನು ನೀಡಿದ್ದು, ಕಾಂಗ್ರೆಸ್ ನ ಟ್ರಬಲ್ ಶೂಟರ್ ಡಿಕೆಶಿ, ದೀಪಾವಳಿಯನ್ನು ಕುಟುಂಬದೊಟ್ಟಿಗೆ ಆಚರಿಸಲಿದ್ದಾರೆ.
ಡಿ.ಕೆ.ಶಿವಕುಮಾರ್ ಗೆ ಜಾಮೀನು ಸಿಕ್ಕರೂ ಕಂಟಕ ಇನ್ನೂ ಮುಗಿದಿಲ್ಲ
ಕಳೆದ ದೀಪಾವಳಿಯನ್ನು ಡಿಕೆ ಶಿವಕುಮಾರ್ ಅವರು ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ನ ಅನಿರೀಕ್ಷಿತ ಜಯದೊಂದಿಗೆ ಆಚರಿಸಿದ್ದರು. ಕಳೆದ ದೀಪಾವಳಿಯಲ್ಲಿ ಬಳ್ಳಾರಿಯ ಬಿಜೆಪಿ ಭದ್ರಕೋಟೆಯನ್ನು ಭೇದಿಸಿದ್ದ ಡಿಕೆ ಶಿವಕುಮಾರ್ ಈ ಬಾರಿಯ ದೀಪಾವಳಿಯನ್ನು ತಿಹಾರ್ ಜೈಲಿನಲ್ಲಿ ಆಚರಿಸುವ ಪರಿಸ್ಥಿತಿಯಿಂದ ಪಾರಾಗಿದ್ದಾರೆ. ಡಿಕೆಶಿ ಪಾಲಿಗೆ ಮತ್ತೀಗ ದೀಪಾವಳಿ ಬೆಳಕು ಮೂಡಿದೆ.
ಬಳ್ಳಾರಿ ವಿಜಯದೊಂದಿಗೆ ಕಳೆದ ದೀಪಾವಳಿ
ಕಳೆದ ದೀಪಾವಳಿ ಸಮಯದಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಉಗ್ರಪ್ಪ ಅವರು ಸ್ಪರ್ಧಿಸಿದ್ದರು. ಬಿಜೆಪಿಯಿಂದ ಸಂಸದ ಶ್ರೀರಾಮುಲು ಆವರ ಸಹೋದರಿ ಶಾಂತಾ ಸ್ಪರ್ಧಿಸಿದ್ದರು. ಆ ಸಮಯದಲ್ಲಿ ಬಳ್ಳಾರಿ ಉಸ್ತುವಾರಿ ವಹಿಸಿದ್ದ ಡಿಕೆ ಶಿವಕುಮಾರ್ ಅವರ ಸಮರ್ಥ ಪ್ರಚಾರ, ಕಾರ್ಯತಂತ್ರದಿಂದಾಗಿ ಬಿಜೆಪಿ ಭದ್ರಕೋಟೆಯಾಗಿದ್ದ ಬಳ್ಳಾರಿಯನ್ನು ಕಾಂಗ್ರೆಸ್ ತನ್ನ ವಶಕ್ಕೆ ಪಡೆದಿತ್ತು. ಈ ಅನಿರೀಕ್ಷಿತ ವಿಜಯಿಂದ ಸಂತಸಗೊಂಡ ಡಿಕೆಶಿ ಇದು ದೀಪಾವಳಿಗೆ ಜನರ ಉಡುಗೊರೆ ಎಂದಿದ್ದರು.
ಕಳೆದ ದೀಪಾವಳಿಯಲ್ಲಿ ಟ್ವೀಟ್ ಮಾಡಿದ್ದ ಡಿಕೆಶಿ
"ಈ ದಾಖಲೆಯ ಜಯದೊಂದಿಗೆ ಕಾಂಗ್ರೆಸ್ ಪಕ್ಷವನ್ನು ಆಶೀರ್ವದಿಸಿದ ಕರ್ನಾಟಕದ, ಅದರಲ್ಲೂ ಬಳ್ಳಾರಿ ಜನರಿಗೆ ಈ ದೀಪಾವಳಿಯಲ್ಲಿ ನನ್ನ ಕೃತಜ್ಞತೆಗಳು. ಕಾಂಗ್ರೆಸ್ ಅಧ್ಯಕ್ಷ(ಆಗಿನ) ರಾಹುಲ್ ಗಾಂಧಿ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಮಾರ್ಗದರ್ಶನ ಮತ್ತು ನೆರವಿನಿಂದ ನಾವು ಬಿಜೆಪಿಯನ್ನು ಸೋಲಿಸಿದ್ದೇವೆ" ಎಂದು ಡಿಕೆಶಿ ಟ್ವೀಟ್ ಮಾಡಿದ್ದರು.
ಡಿಕೆ ಶಿವಕುಮಾರ್ ಗೆ ಜಾಮೀನು, ನಿಜವಾಯ್ತೆ ಬ್ರಹ್ಮಾಂಡ ಗುರೂಜಿ ಭವಿಷ್ಯ
ಸ್ಥಳೀಯ ಸಂಸ್ಥೆ ಚುನಾವಣೆ ಡಿಕೆಶಿ ಪಾತ್ರ?
ಈ ಬಾರಿ ನವೆಂಬರ್ 12 ರಂದು ಬಳ್ಳಾರಿಯ ಕಂಪ್ಲಿ(ಪುರಸಭೆ), ಕೂಡ್ಲಗಿ(ಪಟ್ಟಣ ಪಂಚಾಯತ್)ಯಲ್ಲಿ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಕುತೂಹಲ ಕೆತರಳಿಸಿದ್ದು, ಜೈಲಿನಿಂದ ಹೊರಬರಲಿರುವ ಡಿಕೆ ಶಿವಕುಮಾರ್ ಅವರು ಫಿನಿಕ್ಸ್ ನಂತೆ ಎದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ವಿಜಯ ಮಾಲೆ ಸಿಗುವಂತೆ ಮಾಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ಸತತ 50 ದಿನಗಳ ನಂತರ ಇಂದು ಜಾಮೀನು
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಡಿ. ಕೆ. ಶಿವಕುಮಾರ್ರನ್ನು ಸೆಪ್ಟೆಂಬರ್ 3ರಂದು ಬಂಧಿಸಿತ್ತು. ಇದಕ್ಕೂ ಮೊದಲು ಆಗಸ್ಟ್ 30ರಿಂದ ಸತತ ನಾಲ್ಕು ದಿನ ವಿಚಾರಣೆಗೆ ಒಳಪಡಿಸಿತ್ತು. ಬಳಿಕ ಅವರನ್ನು ವಿಶೇಷ ನ್ಯಾಯಾಲಯವು ಇ.ಡಿ ವಶಕ್ಕೆ ಒಪ್ಪಿಸಿತ್ತು.