ದಾವಣಗೆರೆ ವಿಶೇಷ; ಮಕ್ಕಳನ್ನು ಬದುಕಿನ ದಡ ಸೇರಿಸಿದ ತಾಯಿ!
ದಾವಣಗೆರೆ, ಮಾರ್ಚ್ 09: ಬದುಕಿನಲ್ಲಿ ಕಂಡಿದ್ದು ಬರೀ ಕಷ್ಟಕಷ್ಟ. ಬದುಕಿನ ಇಳಿಹೊತ್ತಲ್ಲಿ ಇರುವ ಈ ಮಹಾನ್ ತಾಯಿ ಮಕ್ಕಳನ್ನು ಓದಿಸಿ ಬೆಳೆಸಿರುವ ಪರಿ ಊಹೆಗೆ ನಿಲುಕದ್ದು. ತಾನು ಪಟ್ಟ ಕಷ್ಟ, ಮಕ್ಕಳನ್ನು ಬೆಳೆಸುವಾಗ ಅನುಭವಿಸಿದ ನೋವು, ಸಂಕಟ ಇನ್ನು ಕಡಿಮೆ ಆಗಿಲ್ಲ. 89ರ ವಯಸ್ಸಲ್ಲಿಯೂ ಬಡಮಕ್ಕಳು, ಅನಾಥರು, ವೃದ್ಧರಿಗೆ ಸಹಾಯಹಸ್ತ ಚಾಚುತ್ತಿರುವ ಇವರ ಸಾಧನೆ ಪ್ರತಿಯೊಬ್ಬ ತಾಯಂದಿರಿಗೂ ಸ್ಫೂರ್ತಿ ತರುವುದರಲ್ಲಿ ಸಂದೇಹ ಇಲ್ಲ.
ಈ ತಾಯಿಯ ಓರ್ವ ಪುತ್ರ ಎಸ್ಪಿಯಾಗಿ ಕಾರ್ಯನಿರ್ವಹಿಸಿ ನಿವೃತ್ತಿಯಾದವರು. ಮತ್ತೊಬ್ಬ ಮಗ ವಕೀಲರಾಗಿದ್ದವರು. ಒಬ್ಬರು ಅಂಚೆ ಕಚೇರಿಯಲ್ಲಿ ಕೆಲಸ ನಿರ್ವಹಿಸಿದವರು. ಮತ್ತೊಬ್ಬ ಪುತ್ರಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವ ರೀತಿ ಕೆಲಸ ಮಾಡಿ ನಿವೃತ್ತಿ ಹೊಂದಿದವರು. ಅಂದ ಹಾಗೆ ಈ ಮಕ್ಕಳ ಸಾಧನೆ ಹಿಂದೆ ಇರೋದು ಒಂದೇ ಪ್ರೇರಕ ಶಕ್ತಿ ತಾಯಿ.
ಚಿಕ್ಕಮಗಳೂರು: 22 ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗಳು; ಅಮ್ಮನನ್ನು ತಬ್ಬಿ ಕಣ್ಣೀರು
ಇಂತಹ ಮಹಾನ್ ತಾಯಿಯ ಹೆಸರು ಶೇಖಮ್ಮ. ನಿಜಕ್ಕೂ ಇವರು ಮಕ್ಕಳನ್ನು ಬೆಳೆಸಿರುವ ಪರಿ ಅನನ್ಯ. ಕೊಳಚೆ ಪ್ರದೇಶದಲ್ಲಿದ್ದರೂ ಮಕ್ಕಳನ್ನು ಗುಬ್ಬಚ್ಚಿಯಂತೆ ಕಾಪಾಡಿಕೊಂಡು ವಿದ್ಯಾಭ್ಯಾಸ ಕೊಟ್ಟು ತಾನು ಅನುಭವಿಸಿದ ನೋವು ಬಡವರು, ವೃದ್ದರಿಗೆ ಆಗಬಾರದು. ಬಡಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ನೀಡಿಸಬೇಕೆಂಬ ನಿಟ್ಟಿನಲ್ಲಿ 89ರ ಹರೆಯದಲ್ಲಿಯೂ ಸಹಾಯ ಮಾಡುತ್ತಿದ್ದಾರೆ, ಮುಂದೆಯೂ ಮಾಡುವ ಮಾತು ಆಡುತ್ತಾರೆ.
ಹೊಸಪೇಟೆಯಲ್ಲಿ ಅಪರೂಪದ ಘಟನೆ: ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ!
ರಾಯಚೂರು ಜಿಲ್ಲೆಯ ಲಿಂಗಸೂಗುರಿನ ಹಟ್ಟಿ ಗಣಿಯಲ್ಲಿ ವಾಸವಾಗಿದ್ದರು. ಕೇವಲ 12 ವರ್ಷಕ್ಕೆ ಮದುವೆಯಾದ ಇವರು 1964ರಲ್ಲಿ ಗಂಡನನ್ನು ಕಳೆದುಕೊಂಡರು. ಕಮ್ಯುನಿಷ್ಟ್ ಪಾರ್ಟಿ ಮೂಲಕ ಗುರುತಿಸಿಕೊಂಡಿದ್ದ ಇವರ ಪತಿ ಪಿ. ನಾರಾಯಣ್ ಅಂದು ಕೋಲ್ಕತ್ತಾಕ್ಕೆ ಹೋದವರು ವಾಪಸ್ ಮನೆಗೆ ಬರಲಿಲ್ಲ. ಆಗ ನಾಲ್ಕು ಮಕ್ಕಳು ಚಿಕ್ಕವರು. ಕೊಳಗೇರಿ ಪ್ರದೇಶದಲ್ಲೇ ವಾಸವಿದ್ದು ಮಕ್ಕಳನ್ನು ಕಷ್ಟಪಟ್ಟು ಸಾಕಿ ಅವರಿಗೆ ಅತ್ಯುನ್ನತ ವಿದ್ಯಾಭ್ಯಾಸ ನೀಡುವ ಮೂಲಕ ಸಾಧನೆ ಮಾಡಿದ್ದಾರೆ.
ಶಾಸಕ ಗೂಳಿಹಟ್ಟಿ ಶೇಖರ್ ತಾಯಿ ಸೇರಿದಂತೆ ನಾಲ್ಕು ಕುಟುಂಬಗಳು ಹಿಂದೂ ಧರ್ಮಕ್ಕೆ ವಾಪಸ್
ಮಹಾನ್ ತಾಯಿ ನಿದರ್ಶನವಾಗಿದ್ದಾರೆ
ತಾಯಿ ಮನಸ್ಸು ಮಾಡಿದರೆ ಮಕ್ಕಳಿಗೆ ಯಾವ ರೀತಿ ಶಿಕ್ಷಣ ಕೊಡಿಸಬಹುದು ಎಂಬುದಕ್ಕೆ ಈ ಮಹಾನ್ ತಾಯಿ ಉತ್ತಮ ನಿದರ್ಶನ. ಬಡತನದ ಬೇಗೆಯಲ್ಲಿ ಬೆಂದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಈಗ ವೃದ್ದರು ಹಾಗೂ ಬಡಮಕ್ಕಳ ಪಾಲಿಗೆ ಆಶಾಕಿರಣವಾಗಿದ್ದಾರೆ.
1964ರ ಸಮಯ. ಕೋಲ್ಕತ್ತಾಕ್ಕೆ ಹೋಗಿ ಬರವೆ ಎಂದು ಹೇಳಿ ಹೋದ ಪತಿ ಮರಳಿ ಬರಲಿಲ್ಲ. ಆಗಿನ್ನು ಸಣ್ಣಸಣ್ಣ ನಾಲ್ಕು ಮಕ್ಕಳು. ಕೆಲಸಕ್ಕೆ ಹೋದಾಗ ಸಿಗುತ್ತಿದ್ದದ್ದು ಕೇವಲ 56 ರೂಪಾಯಿ. ಕೊಳಗೇರಿಯಲ್ಲಿಯೇ ವಾಸ. ಕಿತ್ತು ತಿನ್ನುವ ಬಡತನ. ಒಂದೊತ್ತಿನ ಊಟಕ್ಕೂ ಪರದಾಟ. ಇನ್ನು ಮಕ್ಕಳನ್ನು ಓದಿಸುವುದಾದರೂ ಹೇಗೆ? ಎಂಬ ಸಾಲು ಸಾಲು ಸವಾಲು. ಆ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದಿರಲಿ, ಉನ್ನತ ವಿದ್ಯಾಭ್ಯಾಸ ಎನ್ನುವುದು ಮರೀಚಿಕೆಯಾಗಿದ್ದ ಕಾಲ. ಆದರೆ ಈ ಮಹಾನ್ ತಾಯಿ ಎಲ್ಲಾ ಕಷ್ಟಗಳನ್ನು ಮೀರಿ ನಿಂತು ಉನ್ನತ ವಿದ್ಯಾಭ್ಯಾಸ ಕೊಟ್ಟು ಒಂದೊಳ್ಳೆ ಬದುಕು ಕಲ್ಪಿಸಿಕೊಟ್ಟಿದ್ದಾರೆ.
ಐಎಎಸ್, ಐಪಿಎಸ್ ಓದಿದ್ದಾರೆ
ದಾವಣಗೆರೆಯಲ್ಲಿ ಕಳೆದ ಮೂರು ವರ್ಷಗಳಿಂದ ನೆಲೆಸಿರುವ ಶೇಖಮ್ಮ ಈ ಸಾಧನೆ ಮಾಡಿರುವ ಮಹಾನ್ ತಾಯಿ. ಶೇಖಮ್ಮರ ಪುತ್ರ ರವಿನಾರಾಯಣ್ ಎಸ್ಪಿ ಆಗಿ ಕಾರ್ಯನಿರ್ವಹಿಸಿ ನಿವೃತ್ತಿಯಾಗಿದ್ದರೆ, ಪದ್ಮವರ್ಧನ್ ವಕೀಲರಾಗಿದ್ದರು. ಆದರೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರೆ, ಅಂಚೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಮಲಾ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಮರಣ ಹೊಂದಿದರು. ಮತ್ತೋರ್ವ ಪುತ್ರಿ ಐಆರ್ ಎಸ್ ಮಾಡಿರುವ ಭಾಗ್ಯದೇವಿ ಡಾ. ಮನಮೋಹನ್ ಸಿಂಗ್ ಯೋಜನಾ ನಿರ್ದೇಶಕರಾಗಿದ್ದಾಗ ಸಹಾಯಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಇನ್ನು ಭಾಗ್ಯದೇವಿ ಪುತ್ರಿ ಪದ್ಮಾ ಬಸವಂತಪ್ಪ ಐಎಎಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಡ್ಡಿ ಹಣ ಬಡವರಿಗೆ
1964ರಲ್ಲಿ ಗಂಡನನ್ನು ಕಳೆದುಕೊಂಡರೂ ಉಪವಾಸ ಇದ್ದು, ಕೂಲಿನಾಲಿ ಮಾಡಿ ಮಕ್ಕಳನ್ನು ಸಾಕಿ ಸಲಹಿರುವ ಈ ಮಾತೆ ಈಗ ಬಡಮಕ್ಕಳು ಹಾಗೂ ಬಡವೃದ್ಧರಿಗೂ ಸಹಾಯ ಮಾಡುತ್ತಿದ್ದಾರೆ. 30 ಲಕ್ಷ ರೂಪಾಯಿಯಿಂದ ಬರುವ ಬಡ್ಡಿ ಹಣವನ್ನು ಬಡವರಿಗೆ ಮೀಸಲಿಟ್ಟಿರುವ ಈ ತಾಯಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ರವಿನಾರಾಯಣ್ ಮಾತನಾಡಿ, "ನಾನು ಐಎಎಸ್ ಮಾಡಿಲ್ಲ. ಇನ್ಸ್ಪೆಕ್ಟರ್ ಆಗಿ ವೃತ್ತಿ ಆರಂಭಿಸಿ ಪದೋನ್ನತಿ ಪಡೆದು ಎಸ್ಪಿಯಾಗಿ ಕಾರ್ಯನಿರ್ವಹಿಸಿ ನಿವೃತ್ತಿಯಾಗಿದ್ದೇನೆ. ನನ್ನ ತಾಯಿ ನಮ್ಮನ್ನು ಬೆಳೆಸಿರುವ ರೀತಿ ನೋಡಿದರೆ ತಾಯಿ ಮನಸ್ಸು ಮಾಡಿದರೆ ಮಕ್ಕಳನ್ನು ಯಾವ ರೀತಿ ಉನ್ನತ ಮಟ್ಟಕ್ಕೆ ಕರೆದುಕೊಂಡು ಹೋಗಬಹುದು ಎಂಬುದಕ್ಕೆ ಸಾಕ್ಷಿ. ನನ್ನ ತಾಯಿಯೇ ನನಗೆ ದೇವರು. ಈಗಲೂ ಬಡವರ ಬಗ್ಗೆ ಮರುಗುವ ಅವರ ಗುಣ ಎಲ್ಲಿಯೂ ಕಂಡಿಲ್ಲ" ಎಂದರು.
"ನಮ್ಮ ತಾಯಿ ಹಟ್ಟಿಯಲ್ಲಿ ದೇವಸ್ಥಾನಗಳ ಅಭಿವೃದ್ದಿಗೆ ಹಣ ನೀಡಿದ್ದಾರೆ. ಎಲ್ಲರೂ ನನ್ನ ತಾಯಿಯನ್ನು ದೇವರಂತೆ ಕಾಣುತ್ತಾರೆ. ಈಗಲೂ ಬಡವರ ಬಗ್ಗೆಯೇ ಕಾಳಜಿ. ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದ ಅಮ್ಮ ಈಗ ಕೈಯಲ್ಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಇದು ನಮಗೂ ಖುಷಿ ತರುತ್ತಿದೆ" ಎನ್ನುತ್ತಾರೆ.
ಮಕ್ಕಳು ಇಲ್ಲ ಎಂಬ ಕೊರಗು ಕಾಡುತ್ತಿದೆ
"ನನ್ನಿಬ್ಬರು ಮಕ್ಕಳು ಇಲ್ಲ ಎಂಬ ಕೊರಗು ಈಗಲೂ ಕಾಡುತ್ತಿದೆ. ಸುಮಾರು 60 ವರ್ಷಗಳ ಹಿಂದೆ ಮನೆಯಲ್ಲಿ ಕರೆಂಟ್ ಇರಲಿಲ್ಲ. ಚಿಮಣಿಯದ್ದೇ ಬೆಳಕು. ತನ್ನ ಗಂಡ ಇಲ್ಲವಾದ ಬಳಿಕ ಮಕ್ಕಳನ್ನು ಸಾಕಿ ಸಲಹಲು ತುಂಬಾನೇ ಕಷ್ಟ. ಪೌರ ಕಾರ್ಮಿಕಳಾಗಿ ಎಲ್ಲಾ ರೀತಿಯ ಸಂಕಷ್ಟಗಳನ್ನು ಎದುರಿಸಿದೆ. ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸಿದೆ. ಹಿರಿಯ ಮಗ ಎಸ್ಪಿಯಾಗಿ ಕಾರ್ಯನಿರ್ವಹಿಸಿ ಜನರ ಮನಗೆದ್ದಿದ್ದು ಖುಷಿ ಕೊಟ್ಟಿದೆ. ಆದ್ರೆ ಕಮಲಾ ಹಾಗೂ ಪದ್ಮವರ್ಧನ್ ಇಲ್ಲ ಎಂಬ ಕೊರಗು ಈಗಲೂ ಕಾಡುತ್ತಿದೆ. ನಾನು ನಂಬಿರುವ ದೇವರು ಕೈಬಿಟ್ಟಿಲ್ಲ. ಮಕ್ಕಳನ್ನು ಕಿತ್ತುಕೊಂಡದ್ದು ಬೇಸರ ತರಿಸಿದೆ" ಎನ್ನುತ್ತಾರೆ ಶೇಖಮ್ಮ.