ದಾವಣಗೆರೆ ಲೋಕಸಭಾ ಕ್ಷೇತ್ರದ ಪರಿಚಯ
Recommended Video
ದಾವಣಗೆರೆ ಕರ್ನಾಟಕದ ಪ್ರಮುಖ ಆಡಳಿತಾತ್ಮಕ ಜಿಲ್ಲೆಯಾಗಿದೆ. ಉತ್ತರ ಮತ್ತು ದಕ್ಷಿಣ ಕರ್ನಾಟಕದ ಮಧ್ಯದಲ್ಲಿರುವ ಜಿಲ್ಲೆ ರಾಜಧಾನಿಯಾಗಬೇಕು ಎಂಬ ಕೂಗು ಹಲವು ವರ್ಷ ಹಿಂದೆ ಕೇಳಿಬಂದಿತ್ತು. 2011ರ ಜನಗಣತಿ ಪ್ರಕಾರ ಕ್ಷೇತ್ರದ ಜನಸಂಖ್ಯೆ 19,46,905.
1997ರಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾದ ಜೆ.ಎಚ್.ಪಟೇಲ್ ಅವರು ಶಿವಮೊಗ್ಗ, ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಯ ಕೆಲವು ಭಾಗಗಳನ್ನು ಸೇರಿಸಿ ದಾವಣಗೆರೆ ಜಿಲ್ಲೆಯನ್ನು ರಚನೆ ಮಾಡಿದರು. ಚಿತ್ರದುರ್ಗ, ಬಳ್ಳಾರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ದಾವಣಗೆರೆಯನ್ನು ಸುತ್ತುವರೆದಿವೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪರಿಚಯ
ದಾವಣಗೆರೆ ಕಾಟನ್ ಸಿಟಿ ಎಂದು ಪ್ರಖ್ಯಾತವಾಗಿತ್ತು, ಈಗ ತನ್ನ ಒಡಲಲ್ಲಿ ಅನೇಕ ಶಾಲಾ ಕಾಲೇಜುಗಳನ್ನು ಹೊಂದಿದ್ದು ವಿದ್ಯಾನಗರಿಯಾಗಿ ಬಡ್ತಿ ಪಡೆದಿದೆ. ಚಿತ್ರಕಲೆ, ಇಂಜಿನಿಯರಿಂಗ್, ವೈದ್ಯಕೀಯ, ಕಲೆ, ವಾಣಿಜ್ಯ ಇತರ ವಿಭಾಗಗಳನ್ನು ಹೊಂದಿರುವ ಮಹಾ ವಿದ್ಯಾಲಯಗಳಿವೆ.
ಲೋಕಸಭೆ ಕದನ 2019: ಹಾಸನ ಲೋಕಸಭಾ ಕ್ಷೇತ್ರದ ಪರಿಚಯ
ದಾವಣಗೆರೆ ಎಂದರೆ ತಕ್ಷಣ ನೆನಪಿಗೆ ಬರುವುದು ಬೆಣ್ಣೆದೋಸೆ, ಮಂಡಕ್ಕಿ, ದುರ್ಗಾಂಬಿಕ ಜಾತ್ರೆ, ಸೂಳೆಕೆರೆ, ರಂಗಭೂಮಿ ಕಲಾವಿದೆ ದಿ.ಚಿಂದೋಡಿ ಲೀಲಾ, ರಾಜ್ಯ ರೈತಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್. ದಾವಣಗೆರೆಯ ಬೆಣ್ಣೆ ದೋಸೆಯ ಘಮ ರಾಜ್ಯದ, ದೇಶದ ಗಡಿ ದಾಟಿ ಹೋಗಿದೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸ್ಥೂಲ ಪರಿಚಯ
ದಾವಣಗೆರೆ ಪ್ರಮುಖ ವ್ಯಾಪಾರಿ ಸ್ಥಳವಾಗಿತ್ತು. ಹತ್ತಿ, ಮೆಕ್ಕೆಜೋಳ, ಕಡಲೆ, ಸೂರ್ಯಕಾಂತಿ, ಜೋಳ, ಅಕ್ಕಿ, ಭತ್ತ ಮುಂತಾದ ಬೆಳೆಗಳನ್ನು ಬೆಳೆಯಲಾಗುತ್ತದೆ. ಚನ್ನಗಿರಿ ಮತ್ತು ಹರಿಹರ ತಾಲೂಕಿನಲ್ಲಿ ಅಪಾರ ಪ್ರಮಾಣದಲ್ಲಿ ಭತ್ತ ಬೆಳೆಯಲಾಗುತ್ತದೆ.
ರಾಜಕೀಯವಾಗಿಯೂ ಜಿಲ್ಲೆ ಬಹಳ ಪ್ರಸಿದ್ಧಿ ಪಡೆದಿದೆ. ದಿ.ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಮತ್ತು ಎಂ.ಪಿ.ಪ್ರಕಾಶ್ ಇದೇ ಜಿಲ್ಲೆಯವರು. ಲಿಂಗಾಯತ, ಬ್ರಾಹ್ಮಣ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಂ, ಕುರುಬರು, ಲಂಬಾಣಿ ಜನಾಂಗದವರು ಪ್ರಮುಖವಾಗಿದ್ದಾರೆ.
ದಾವಣಗೆರೆ ಕ್ಷೇತ್ರದ ಹಾಲಿ ಸಂಸದರು ಬಿಜೆಪಿಯ ಜಿ.ಎಂ.ಸಿದ್ದೇಶ್ವರ (66). 2014ರ ಚುನಾವಣೆಯಲ್ಲಿ 5,18,894 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಭಾರಿ ಕೈಗಾರಿಕೆ ರಾಜ್ಯ ಖಾತೆ ಸಚಿವರಾಗಿ ಕೆಲಸ ಮಾಡಿದ್ದಾರೆ. ಲೋಕಸಭಾ ಕಲಾಪದಲ್ಲಿ ಶೇ 60ರಷ್ಟು ಹಾಜರಾತಿ ಹೊಂದಿದ್ದಾರೆ.
ಲೋಕಸಭಾ ಕ್ಷೇತ್ರಕ್ಕೆ 25 ಕೋಟಿ ಅನುದಾನ ಮೀಸಲಾಗಿತ್ತು. 611 ಕಾಮಗಾರಿಗೆ ಅನುದಾನವನ್ನು ಶಿಫಾರಸು ಮಾಡಿದ್ದಾರೆ. 580 ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, 435 ಪೂರ್ಣಗೊಂಡಿದೆ. 145 ಕಾಮಗಾರಿ ಪ್ರಗತಿಯಲ್ಲಿದೆ.
29 ಕಾಮಗಾರಿಗಳು ಆಡಳಿತಾತ್ಮಕ ಅನುಮೋದನೆ ಹಂತದಲ್ಲಿದೆ. ಸಮುದಾಯ ಭವನ, ಕುಡಿಯುವ ನೀರು ಸರಬರಾಜು, ಶಾಲಾ ಕೊಠಡಿ, ಸಿಸಿ ರಸ್ತೆ, ಬಸ್ ನಿಲ್ದಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅನುದಾನ ನೀಡಿದ್ದಾರೆ. ಒಟ್ಟು 21.62 ಕೋಟಿ ವೆಚ್ಚವಾಗಿದೆ. 1.78 ಕೋಟಿ ರೂ. ಅನುದಾನ ಉಳಿದಿದೆ.
ಒಟ್ಟು ಮತದಾರರು : ಒಟ್ಟು ಮತದಾರರು 15,22,712. ಪುರುಷರು 7,72,126, ಮಹಿಳೆಯರು 7,50,586. (2014ರ ಲೋಕಸಭಾ ಚುನಾವಣೆ ಅನ್ವಯ)
ದಾವಣಗೆರೆ ಜಿಲ್ಲೆ ರಚನೆಯಾದಾಗ ಬಳ್ಳಾರಿ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ತಾಲೂಕನ್ನು ದಾವಣಗೆರೆಗೆ ಸೇರಿಸಲಾಗಿತ್ತು. ಆದರೆ, ತಾಲೂಕಿನ ಜನರು ಪುನಃ ಜಿಲ್ಲೆಯನ್ನು ಬಳ್ಳಾರಿಗೆ ಸೇರಿಸಲು ಹೋರಾಟ ಮಾಡಿದ್ದರಿಂದ, ಕರ್ನಾಟಕ ಸರ್ಕಾರ ತಾಲೂಕನ್ನು ಬಳ್ಳಾರಿಗೆ ವಾಪಸ್ ಸೇರಿಸಿ ಅಧಿಸೂಚನೆ ಹೊರಡಿಸಿದೆ.
ದಾವಣಗೆರೆ ನಗರದಲ್ಲಿ ಮಂಡಕ್ಕಿ ಭಟ್ಟಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ಸೌಲಭ್ಯಗಳು ಸಿಗುತ್ತಿಲ್ಲ. ತುಂಗಭದ್ರಾ ನದಿ ನೀರನ್ನು ಜಿಲ್ಲೆ ಆಶ್ರಯಿಸಿದೆ. ಆದರೆ, ಹಲವು ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ.
ಬೇಸಿಗೆಯಲ್ಲಿ ದಾವಣಗೆರೆ ನಗರಕ್ಕೆ ಕುಡಿಯುವ ನೀರನ್ನು ಪೂರೈಕೆ ಮಾಡಲು ಮಹಾನಗರ ಪಾಲಿಕೆ ಪರದಾಡುತ್ತದೆ. ಜಿಲ್ಲೆಯ ಹಲವು ತಾಲೂಕುಗಳ ಗ್ರಾಮಾಂತರ ಪ್ರದೇಶಗಳಿಗೆ ಇನ್ನೂ ಸರಿಯಾದ ಸಾರಿಗೆ ಸೌಕರ್ಯ ಸಿಕ್ಕಿಲ್ಲ.
ವಿಧಾನಸಭಾ ಕ್ಷೇತ್ರಗಳು : ಹರಿಹರ, ಜಗಳೂರು, ಹೊನ್ನಾಳಿ, ಚನ್ನಗಿರಿ, ದಾವಣಗೆರೆ ದಕ್ಷಿಣ, ದಾವಣಗೆರೆ ಉತ್ತರ, ಮಾಯಕೊಂಡ (ಮೀಸಲು) ಕ್ಷೇತ್ರಗಳನ್ನು ಲೋಕಸಭಾ ಕ್ಷೇತ್ರ ಒಳಗೊಂಡಿದೆ.