ಅಂಬಾರಿ ಹೊರಲಿರುವ ಅಭಿಮನ್ಯುಗೆ ಜಂಬೂಸವಾರಿ ಹೊಸತೇನಲ್ಲ...
ಮೈಸೂರು, ಅಕ್ಟೋಬರ್ 21: ಇದುವರೆಗೆ ಜಂಬೂಸವಾರಿಯಲ್ಲಿ ಸಂಗೀತಗಾರರ ಸಂಗೀತ ಗಾಡಿ ಎಳೆಯುವ ಜವಾಬ್ದಾರಿ ಹೊತ್ತಿದ್ದ ಅಭಿಮನ್ಯು ಈ ಬಾರಿ ಗಜಪಡೆಯ ನೇತೃತ್ವ ವಹಿಸಿಕೊಳ್ಳುವ ಮೂಲಕ ಚಿನ್ನದ ಅಂಬಾರಿ ಹೊರುವ ಮಹತ್ವದ ಕಾರ್ಯವನ್ನು ನಿರ್ವಹಿಸಲು ಸಜ್ಜಾಗುತ್ತಿದ್ದಾನೆ.
ಈಗಾಗಲೇ ಮೈಸೂರು ಅರಮನೆ ಆವರಣದಲ್ಲಿ ನಡೆಯುತ್ತಿರುವ ತಾಲೀಮಿನಲ್ಲಿ ಭಾರದ ಮತ್ತು ಮರದ ಅಂಬಾರಿ ಹೊತ್ತು ಸೈ ಎನಿಸಿಕೊಂಡಿರುವ ಅಭಿಮನ್ಯು ಅ.26ರಂದು ನಡೆಯಲಿರುವ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರಲು ಸರ್ವ ರೀತಿಯಲ್ಲಿಯೂ ಸಜ್ಜಾಗುತ್ತಿದ್ದಾನೆ. ಸರಳವಾಗಿ ದಸರಾ ಆಚರಣೆಯಾಗುತ್ತಿರುವುದರಿಂದ ಅರಮನೆ ಆವರಣದಲ್ಲಿಯೇ ಜಂಬೂಸವಾರಿ ನಡೆಯುತ್ತಿದೆ. ಜತೆಗೆ ಜಂಬೂಸವಾರಿಯಲ್ಲಿ ಅಭಿಮನ್ಯು ಸೇರಿದಂತೆ ಕಾವೇರಿ, ಗೋಪಿ, ವಿಕ್ರಮ ಮತ್ತು ವಿಜಯ ಐದು ಗಜಪಡೆಗಳು ಮಾತ್ರ ಭಾಗವಹಿಸುತ್ತಿವೆ. ಮುಂದೆ ಓದಿ...
ಮೈಸೂರು ದಸರಾ: ಅರಮನೆಗೆ ಆಗಮಿಸಿದ ಗಜಪಡೆಗೆ ಸಂಭ್ರಮದ ಸ್ವಾಗತ!
ಸಂಗೀತ ಗಾಡಿ ಎಳೆಯುತ್ತಿದ್ದ ಅರ್ಜುನ
ಕಳೆದ ಹಲವು ವರ್ಷಗಳಿಂದ ಜಂಬೂಸವಾರಿಯಲ್ಲಿ ಅಭಿಮನ್ಯು ಸಂಗೀತಗಾರರ ಗಾಡಿಯನ್ನು ಎಳೆಯುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದ್ದನು. ಜಂಬೂಸವಾರಿ ವೇಳೆ ಬೃಹತ್ ಗಾಡಿಯಲ್ಲಿ ಸಂಗೀತಗಾರರು ಆಸೀನರಾಗಿ ಸಂಗೀತದ ಸುಧೆ ಹರಿಸುತ್ತಿದ್ದರೆ, ಅವರನ್ನು ಎಳೆದೊಯ್ಯುತ್ತಾ ಮುನ್ನಡೆಯುತ್ತಿದ್ದನು.
ಮಹಾರಾಜರ ಕಾಲದಲ್ಲಿ ಸಂಗೀತಗಾರರಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿತ್ತು. ಮಹಾರಾಜರು ತಮ್ಮ ಆಸ್ಥಾನದಲ್ಲಿದ್ದ ಸಂಗೀತಗಾರರು ಜಂಬೂಸವಾರಿಯಲ್ಲಿ ಸಾಗಲು ಅವಕಾಶ ಮಾಡಿಕೊಟ್ಟಿದ್ದರು. ಅಷ್ಟೇ ಅಲ್ಲದೆ ಅವರು ಸಂಗೀತವನ್ನು ನುಡಿಸಲು ಅನುಕೂಲವಾಗುವಂತೆ ನಾಲ್ಕು ಚಕ್ರಗಳ ಛಾವಣಿ ಹೊಂದಿದ ಸುಂದರವಾದ ಗಾಡಿ ನಿರ್ಮಿಸಿದ್ದರು. ಈ ಗಾಡಿಯನ್ನು ಆನೆಗಳಿಂದ ಎಳೆಸಲಾಗುತ್ತಿತ್ತು. ಅರಮನೆಯಿಂದ ಹೊರಟು ಬನ್ನಿಮಂಟಪದವರೆಗೂ ಸುಮಾರು ಆರು ಕಿ.ಮೀ. ದೂರದವರೆಗೂ ಸಂಗೀತದ ಇಂಪು ಪಸರಿಸುತ್ತಿತ್ತು. ಹಿಂದಿನ ಈ ಸಂಪ್ರದಾಯವನ್ನು ಇಂದಿಗೂ ಮುಂದುವರೆದುಕೊಂಡು ಬಂದಿದ್ದು, ಕಳೆದೊಂದು ದಶಕಕ್ಕೂ ಹೆಚ್ಚು ಕಾಲ ಅಭಿಮನ್ಯು ಈ ಕಾರ್ಯವನ್ನು ನಿರ್ವಹಿಸಿಕೊಂಡು ಬರುತ್ತಿದ್ದಾನೆ.
ಅಭಿಮನ್ಯುಗೆ ಹಿಂದಿಗಿಂತಲೂ ಹೆಚ್ಚಿನ ಜವಾಬ್ದಾರಿ
ಇನ್ನು ಸಂಗೀತಗಾರರನ್ನು ಕೊಂಡೊಯ್ಯುವ ಬೃಹತ್ ಗಾಡಿ ಸುಸ್ಥಿತಿಯಲ್ಲಿದೆಯಾ ಎಂದು ಪರಿಶೀಲನೆ ನಡೆಸಿದ ಬಳಿಕ ಅಭಿಮನ್ಯು ಅದನ್ನು ಎಳೆದು, ಗಾಡಿ ಸುಸ್ಥಿತಿಯಲ್ಲಿದೆ ಎಂಬುದನ್ನು ಮನದಟ್ಟು ಮಾಡಿಕೊಂಡ ಬಳಿಕ ಜಂಬೂಸವಾರಿಯಲ್ಲಿ ಸೇರ್ಪಡೆಗೊಳಿಸಲಾಗುತ್ತಿತ್ತು. ಆದರೆ ಈ ಬಾರಿ ಸರಳವಾಗಿ ಆಚರಣೆ ಮಾಡುತ್ತಿರುವುದರಿಂದ ಅದ್ಯಾವುದೂ ಇಲ್ಲವಾಗಿದೆ. ಆದರೆ ಅಭಿಮನ್ಯುಗೆ ಮಾತ್ರ ಹಿಂದಿಗಿಂತಲೂ ಹೆಚ್ಚಿನ ಜವಾಬ್ದಾರಿ ಈಗ ಸಿಕ್ಕಿದೆ. ದಸರಾ ಜಂಬೂಸವಾರಿ ಅಭಿಮನ್ಯುವಿಗೆ ಹೊಸದೇನಲ್ಲ.
ಪುಂಡಾನೆಯಾಗಿದ್ದ ಅಭಿಮನ್ಯು
ಅಭಿಮನ್ಯು ಬಗ್ಗೆ ಹೇಳುವುದಾದರೆ, ಒಂದು ಕಾಲದಲ್ಲಿ ಇದು ಎಲ್ಲಾ ಆನೆಗಳಂತೆ ಕೊಡಗಿನ ಅರಣ್ಯದಲ್ಲಿ ಪುಂಡಾಟ ನಡೆಸುತ್ತಿತ್ತು. ಹೀಗಾಗಿ ಇದನ್ನು 1977ರಲ್ಲಿ ಕೊಡಗಿನ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿದು ಪಳಗಿಸಿ ಅಭಿಮನ್ಯು ಎಂದು ನಾಮಕರಣ ಮಾಡಲಾಯಿತು. ಬಲಿಷ್ಠನಾಗಿರುವ ಈತನನ್ನು ಪುಂಡಾನೆಗಳನ್ನು ಸೆರೆಹಿಡಿದು ಪಳಗಿಸಲು ಮತ್ತು ಚಿಕಿತ್ಸೆ ನೀಡಲು ಬಳಸಿಕೊಳ್ಳಲಾಗುತ್ತದೆ.
ಸಾಮರ್ಥ್ಯ ಸಾಬೀತು ಮಾಡಿದ ಅಭಿಮನ್ಯು
ಸದ್ಯ ಈತನ ವಯಸ್ಸು 54ವರ್ಷವಾಗಿದ್ದು, ಕಳೆದ 21 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ. 2.68 ಮೀಟರ್ ಎತ್ತರ ಹಾಗೂ 3.51 ಮೀಟರ್ ಉದ್ದ ಹೊಂದಿದ್ದು ಅಂದಾಜು ತೂಕ 5000 ದಿಂದ 5290 ಕೆಜಿಯಷ್ಟಿದೆ. ಕೊಡಗಿನ ಮತ್ತಿಗೋಡು ಶಿಬಿರದಲ್ಲಿರುವ ಈತನನ್ನು ಮಾವುತ ವಸಂತ ಮತ್ತು ಕಾವಾಡಿ ರಾಜು ನೋಡಿಕೊಳ್ಳುತ್ತಿದ್ದಾರೆ. ಈ ಬಾರಿ ಅಂಬಾರಿಯನ್ನು ಯಶಸ್ವಿಯಾಗಿ ಹೊರುತ್ತಾನೆ ಎಂಬ ನಂಬಿಕೆಯಿಂದಲೇ ಅರಣ್ಯಾಧಿಕಾರಿಗಳು ಮಹತ್ವದ ಜವಾಬ್ದಾರಿ ನೀಡಿದ್ದು ಈಗಾಗಲೇ ತಾಲೀಮಿನಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾನೆ.