ದಸರಾ ಆಹಾರ ಮೇಳದಲ್ಲಿ ಸಿರಿಧಾನ್ಯಕ್ಕೆ ಪ್ರಾಶಸ್ತ್ಯ; ಬೊಂಬು ಬಿರಿಯಾನಿ, ಸೊಪ್ಪಿನ ಪಲ್ಯ ಸ್ಪೆಷಲ್
ಜಗತ್ತಿನ ಆಹಾರ ಕ್ರಮ ಬದಲಾಗುತ್ತಿದೆ. ಜನರು ವಿದೇಶಿ ಹಾಗೂ ಜಂಕ್ಫುಡ್ಗೆ ಮೊರೆ ಹೋಗುತ್ತಿದ್ದಾರೆ. ಹಾಗಾಗಿ ಈ ಬಾರಿ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಆಹಾರ ಮೇಳದಲ್ಲಿ 'ಸಿರಿಧಾನ್ಯ' ಅರಿವು ಮೂಡಿಸಲು ದಸರಾ ಆಹಾರ ಮೇಳ ಉಪ ಸಮಿತಿ ಮುಂದಾಗಿದೆ.
ಜನರ ಸಮಕಾಲಿನ ಆಹಾರ ಅಭ್ಯಾಸಗಳನ್ನು ಮತ್ತು ಆಧುನಿಕ ಆಹಾರ ಅಭ್ಯಾಸಗಳಿಂದ ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯಗಳ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ಗಮನಿಸಿಕೊಂಡು ಸಹಜ ಮತ್ತು ನೈಸರ್ಗಿಕ ಹಾಗೂ ಸಾವಯವ ಕೃಷಿಯಲ್ಲಿ ಬೆಳೆದ ಆಹಾರ ಧಾನ್ಯಗಳು, ಹಣ್ಣು-ಹಂಪಲು, ತರಕಾರಿ ಕಾಯಿ ಪಲ್ಯಗಳಿಂದ ತಯಾರಿಸಿದ ಅಡುಗೆಗಳು ಮತ್ತು ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆಗಳನ್ನು ಆಹಾರ ಮೇಳದಲ್ಲಿ ಉಣಬಡಿಸಲು ನಿರ್ಧರಿಸಲಾಗಿದೆ.
Madikeri Dasara 2022: ಮಡಿಕೇರಿ ದಸರಾಕ್ಕೆ ಮೆರಗು ನೀಡುವ ದಶಮಂಟಪಗಳು...
ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮೈದಾನದಲ್ಲಿ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 3ರವರೆಗೆ ನಡೆಯಲಿರುವ ಆಹಾರ ಮೇಳದಲ್ಲಿ ಬೊಂಬು ಬಿರಿಯಾನಿ ಜತೆಗೆ ಕಾಡು ಸೊಪ್ಪಿನ ಪಲ್ಯ ಪ್ರಮುಖ ಆಕರ್ಷಣೆಯಾಗಲಿದೆ ಎಂದು ಪ್ರಕೃತಿ ಆದಿವಾಸಿ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ಎಂ.ಕೃಷ್ಣಯ್ಯ ತಿಳಿಸಿದ್ದಾರೆ.
ಬೆಳಗ್ಗೆಯಿಂದ ರಾತ್ರಿವರೆಗೂ ನಡೆಯುವ ಆಹಾರ ಮೇಳದಲ್ಲಿ ಮಾಂಸಹಾರ ಮತ್ತು ಸಸ್ಯಹಾರಕ್ಕೆ ಸಂಬಂಧಿಸಿದಂತೆ ನೂರಾರು ಬಗೆಯ ತಿನಿಸುಗಳು ತಯಾರಾಗುವುದರಿಂದ ಜನ ತಮಗೆ ಇಷ್ಟವಾದುದನ್ನು ತಿಂದು ಖುಷಿ ಪಡಲು ಅವಕಾಶವಿದೆ. ಆಹಾರ ಮೇಳದಲ್ಲಿ ಆದಿವಾಸಿ ಫೌಂಡೇಷನ್ ಮಳಿಗೆ ತೆರೆಯುತ್ತಿದ್ದು, ನಳ್ಳಿ ಸಾರು, ಮುದ್ದೆ, ಕಾಡುಗೆಣಸು ಜೇನುತುಪ್ಪ ಮಿಶ್ರಣ, ಬಿದಿರಕ್ಕಿ ಪಾಯಸ, ಮಾಕಳಿ ಬೇರಿನ ಟೀ ಸೇರಿದಂತೆ ಹಲವು ಕಾಡಿನ ಖಾದ್ಯಗಳ ರುಚಿ ಸವಿಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಮೈಸೂರಿನ 2 ಕಡೆ ಆಹಾರ ಮೇಳ
ಈ ಬಾರಿಯೂ ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ಹಾಗೂ ಲಲಿತಮಹಲ್ ಪ್ಯಾಲೇಸ್ ಪಕ್ಕದ ಮುಡಾ ಮೈದಾನದಲ್ಲಿ ದಸರಾ ಆಹಾರ ಮೇಳಕ್ಕೆ ಸಿದ್ಧತೆ ಶುರುವಾಗಿದೆ. ಸೆಪ್ಟೆಂಬರ್ 26ರಿಂದ ಅಕ್ಟೋಬರ್ 3ರವರೆಗೆ ಆಹಾರ ಮೇಳ ನಡೆಯಲಿದೆ. ಆಹಾರ ಮೇಳ ನಡೆಯುವ ಎರಡು ಕಡೆಗಳಿಂದ 150 ರಿಂದ 170 ಮಳಿಗೆಗಳಿಗೆ ಅವಕಾಶ ನೀಡಲು ಚಿಂತಿಸಲಾಗಿದೆ. ಈ ಪೈಕಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ 90 ರಿಂದ 100 ಹಾಗೂ ಲಲಿತಮಹಲ್ ಪ್ಯಾಲೇಸ್ ಪಕ್ಕದ ಮುಡಾ ಮೈದಾನದಲ್ಲಿ 60 ರಿಂದ 70 ಮಳಿಗೆ ನಿರ್ಮಿಸಲು ಯೋಜಿಸಲಾಗಿದೆ.
Dasara 2022: ಯುವ ದಸರಾಗೆ ಸುದೀಪ್ ಚಾಲನೆ, ಒಂದು ದಿನ ಅಪ್ಪು ನಮನಕ್ಕೆ ಸೀಮಿತ
ಬುಡಕಟ್ಟು ಜನರ ಬೊಂಬು ಬಿರಿಯಾನಿ
ಬುಡಕಟ್ಟು ಜನರು ಸಾಕಿದ ನಾಟಿ ಕೋಳಿಯಿಂದ ಬೊಂಬು ಬಿರಿಯಾನಿ ಸಿದ್ಧಪಡಿಸಲಾಗುವುದು. ಇದಕ್ಕೆ ಮಸಾಲೆಯನ್ನು ಕೂಡ ಅರಣ್ಯದಲ್ಲಿ ಬೆಳೆದ ಸೊಪ್ಪು ಮತ್ತಿತರ ವಸ್ತುಗಳಿಂದ ಸಿದ್ಧಪಡಿಸಲಾಗುವುದು. ಬೊಂಬಿನಲ್ಲಿ ತುಂಬಿ, ಸೌದೆಯಲ್ಲಿ ಬೇಯಿಸಿ ಪೂರೈಸಲಾಗುವುದು. ಬುಡ್ಡಕಟ್ಟು ಜನರು ಬಿರಿಯಾನಿಯನ್ನು ತಯಾರಿಸಲು ಬೊಂಬಿನೊಳಗೆ ಅಕ್ಕಿ, ಮಸಾಲೆ ಸೇರಿದಂತೆ ವಿವಿಧ ಪದಾರ್ಥಗಳನ್ನು ತುಂಬಿ ಬೆಣೆ ಹಾಕಿ ಮುಚ್ಚುತ್ತಾರೆ. ಅರ್ಧಗಂಟೆ ಸೌದೆಯ ಒಲೆಯಲ್ಲಿ ಬೇಯಿಸಿ ಭೋಜನ ಪ್ರಿಯರಿಗೆ ಸವಿಯಲು ನೀಡುತ್ತಾರೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸೊಪ್ಪಿನ ತಿನಿಸು
2014ರಿಂದಲೂ ಆದಿವಾಸಿ ಫೌಂಡೇಷನ್ ಟ್ರಸ್ಟ್ನಿಂದ ಮಳಿಗೆ ತೆರೆದು, ಗ್ರಾಹಕರಿಗೆ ರುಚಿ ರುಚಿಯಾದ ಊಟ ಬಡಿಸಲಾಗುತ್ತಿದೆ. ಮಾಗಡೆ ಸೊಪ್ಪು, ಜಾಗಡಿ ಸೊಪ್ಪು, ಆಲೆ ಸೊಪ್ಪು, ಗಣಿಕೆ ಸೊಪ್ಪುಗಳನ್ನು ಒಳಗೊಂಡ ವಿಶೇಷ ಪಲ್ಯ ಮಾಡಲಾಗುವುದು. ಇನ್ನು ತುಂಬೆ ಸೊಪ್ಪನ್ನು ಹಾವು ಕಡಿತಕ್ಕೂ ಆದಿವಾಸಿಗಳು ಔಷಧವಾಗಿ ಬೆಳೆಸುತ್ತಾರೆ. ಇವುಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೇ ಆರೋಗ್ಯವೂ ಉತ್ತಮವಾಗುತ್ತದೆ ಎಂದು ಎಂ ಕೃಷ್ಣಯ್ಯ ವಿವರಿಸಿದ್ದಾರೆ.
ದೇಶಿ-ಖಂಡಾಂತರ ಆಹಾರ ಪದ್ದತಿ ಪರಿಚಯ
ವಿವಿಧ ರೀತಿಯ ಚಾಕೊಲೇಟ್, ಹಣ್ಣು ಮತ್ತು ಹಣ್ಣಿನ ರಸ, ಸಾಂಪ್ರದಾಯಿಕ ಸಿಹಿ ತಿಂಡಿಗಳು, ಚಾಟ್ಸ್ ಸೇರಿದಂತೆ ನಾನಾ ಬಗೆಯ ತಿಂಡಿಗಳು ಮೇಳದಲ್ಲಿ ಸಿಗಲಿವೆ. ವಿಶೇಷವಾಗಿ ಚೈನೀಸ್, ಇಟಾಲಿಯನ್, ಫ್ರೆಂಚ್ ಹಾಗೂ ಆಫ್ರಿಕನ್ ಶೈಲಿಯ ವಿಭಿನ್ನ ತಿನಿಸುಗಳನ್ನು ಪರಿಚಯಿಸಲು ಸಿದ್ಧತೆ ನಡೆಯುತ್ತಿದೆ. ಎಲ್ಲ ವರ್ಗದ ಜನರ ಅಭಿರುಚಿ ಗಮನದಲ್ಲಿರಿಸಿಕೊಂಡು ವೈವಿಧ್ಯಮಯವಾಗಿಸಲು ಉದ್ದೇಶಿಸಲಾಗಿದೆ. ಮೇಳದಲ್ಲಿ ದೇಶಿಯ ಮತ್ತು ಖಂಡಾಂತರ ಆಹಾರ ಪದ್ಧತಿಯ ಜತೆಗೆ ಪ್ರಾದೇಶಿಕ ಮತ್ತು ಹೊರ ರಾಜ್ಯಗಳ ವೈವಿಧ್ಯಮಯ ಊಟೋಪಚಾರಗಳನ್ನು ಅಳವಡಿಸಲಾಗುತ್ತದೆ.
''ಆಧುನಿಕ ಆಹಾರ ಅಭ್ಯಾಸಗಳಿಂದ ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಸಹಜ, ನೈಸರ್ಗಿಕ, ಸಾವಯವ ಕೃಷಿಯಲ್ಲಿ ಬೆಳೆದ ಆಹಾರ ಧ್ಯಾನಗಳು, ಹಣ್ಣು-ಹಂಪಲು, ತರಕಾರಿ, ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆಗಳನ್ನು ಉಣಬಡಿಸಲು ಉದ್ದೇಶಿಸಲಾಗಿದೆ" ಎಂದು ಆಹಾರ ಮೇಳ ಉಪ ಸಮಿತಿ ಕಾರ್ಯಾಧ್ಯಕ್ಷೆ ಕುಮುದಾ ತಿಳಿಸಿದ್ದಾರೆ.