ದಸರಾ ಜಂಬೂಸವಾರಿಗೆ ಗಜಪಡೆಗಳ ತಯಾರಿ ಆರಂಭ!
ಮೈಸೂರು, ಆಗಸ್ಟ್ 20 : ಐತಿಹಾಸಿಕ ಮೈಸೂರು ದಸರಾಕ್ಕೆ ಸಿದ್ಧತೆಗಳು ಆರಂಭವಾಗಿವೆ. ಜತೆಗೆ ಜಂಬೂಸವಾರಿಗಾಗಿ ಗಜಪಡೆಯನ್ನು ತಯಾರು ಮಾಡುವ ಕಾರ್ಯವೂ ಭರದಿಂದ ಸಾಗುತ್ತಿದೆ. ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಗಜಪಡೆಗಳು ಈಗ ಎಲ್ಲರ ಆಕರ್ಷಣೆಯಾಗಿವೆ.
ಮೈಸೂರು ದಸರಾದಲ್ಲಿ ಗಜಪಡೆಗಳೇ ಪ್ರಮುಖ ಆಕರ್ಷಣೆಯಾಗಿರುವುದರಿಂದ ಮತ್ತು ದಸರಾಕ್ಕೆ ಜಂಬೂಸವಾರಿಯೇ ಮೆರುಗು ಆಗಿರುವುದರಿಂದ ಒಂದು ದಿನ ನಡೆಯುವ ಈ ಜಂಬೂಸವಾರಿ ಯಾವುದೇ ವಿಘ್ನಗಳಿಲ್ಲದೆ ಸುಗಮವಾಗಿ ನಡೆಯಬೇಕಾದರೆ ಅದಕ್ಕೆ ಸುಮಾರು ಎರಡು ತಿಂಗಳಿಗಿಂತಲೂ ಹೆಚ್ಚಿನ ಕಾಲದ ತಾಲೀಮು ಬೇಕಾಗುತ್ತದೆ. ಇದರ ಹಿಂದೆ ನೂರಾರು ಜನರ ಶ್ರಮವಿರುತ್ತದೆ. ಅರಣ್ಯ ಅಧಿಕಾರಿಗಳಿಂದ ಆರಂಭವಾಗಿ, ಮಾವುತ, ಕಾವಾಡಿ ತನಕವೂ ಹಗಲು ರಾತ್ರಿ ಎನ್ನದೆ ಶ್ರಮವಹಿಸಿ ಕೆಲಸ ಮಾಡುತ್ತಾರೆ.
ಸಾಮಾನ್ಯವಾಗಿ ಆನೆ ಶಿಬಿರಗಳು ಅರಣ್ಯಕ್ಕೆ ಹೊಂದಿಕೊಂಡಿರುತ್ತವೆ. ಸದಾ ಕಾಡಿನಲ್ಲಿರುವ ಆನೆಗಳನ್ನು ಅವುಗಳ ಶಿಬಿರಗಳಿಂದ ತಂದು ನಗರಕ್ಕೆ ಹೊಂದುವಂತೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಜನರನ್ನು ಕಂಡರೆ ವಿಚಲಿತಗೊಳ್ಳದಂತೆ, ಶಬ್ದಕ್ಕೆ ಬೆದರದಂತೆ ಹಾಗೂ ಮೆರವಣಿಗೆಯಲ್ಲಿ ಶಿಸ್ತುಬದ್ಧವಾಗಿ ಸಾಗುವಂತೆ, ತಮಗೆ ನೀಡಿದ ಜವಬ್ದಾರಿಯನ್ನು ಚಾಚೂ ತಪ್ಪದೆ ನಿರ್ವಹಿಸುವಂತೆ ಆನೆಗಳನ್ನು ತಯಾರು ಮಾಡುವುದು ಒಂದೆರಡು ದಿನಗಳಲ್ಲಿ ಮುಗಿಯುವ ಕೆಲಸವಲ್ಲ. ಅದಕ್ಕೆ ಕಠಿಣ ತಾಲೀಮಿನ ಅಗತ್ಯವಿರುತ್ತದೆ.
ಮೈಸೂರನ್ನು ಆವರಿಸಿಕೊಳ್ಳುತ್ತಿದೆ ದಸರಾ ಕಳೆ
ಇನ್ನು ಬೇರೆ ಬೇರೆ ಶಿಬಿರಗಳಿಂದ ಬಂದಿರುವ ಆನೆಗಳನ್ನು ಪರಸ್ಪರ ಪರಿಚಯಿಸಿ ಅವುಗಳು ಯಾವುದೇ ಕಾದಾಟ ಮಾಡಲು ಅವಕಾಶ ನೀಡದಂತೆ ಒಂದರ ಹಿಂದೆ ಒಂದು ಶಿಸ್ತುಬದ್ಧವಾಗಿ ಸಾಗುವಂತೆ ತರಬೇತಿ ನೀಡುವುದು, ಅವುಗಳ ಆರೋಗ್ಯ ತಪಾಸಣೆ ಮಾಡುವುದು, ಅಗತ್ಯವನ್ನು ಅರಿತು ಆಹಾರ ನೀರು ನೀಡುವುದು, ಸ್ನಾನ ಮಾಡಿ ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು ಅರಣ್ಯ ಇಲಾಖೆ ಅಧಿಕಾರಿಗಳು, ಮಾವುತರು, ಕಾವಾಡಿಗಳ ನಿತ್ಯದ ಕೆಲಸವಾಗಿದೆ.
ಜಪಡೆಗಳ ನೋಟ ನಗರಕ್ಕೊಂದು ಕಳೆ
ಇದೀಗ ಈ ಎಲ್ಲ ಕಾರ್ಯಗಳು ಆರಂಭವಾಗಿದ್ದು, ಆನೆಗಳ ಕಾರುಬಾರು ಜೋರಾಗಿದೆ. ಅಂಬಾರಿ ಹೊತ್ತು ಸಾಗುವ ಅಭಿಮನ್ಯು ಮತ್ತು ಅದರ ಹಿಂದೆ ಗಂಭೀರ ನಡಿಗೆಯಿಂದ ಸಾಗುವ ಇತರೆ ಗಜಪಡೆಗಳ ನೋಟ ನಗರಕ್ಕೊಂದು ಕಳೆಕಟ್ಟುತ್ತಿದೆ. ಜಂಬೂ ಸವಾರಿ ಸಂದರ್ಭ ಸುಂದರ ಬಣ್ಣಗಳ ಕಲಾಕೃತಿ ಮತ್ತು ಆಕರ್ಷಕ ವಸ್ತ್ರಗಳಿಂದ ಸರ್ವಾಲಂಕೃತವಾಗಿ ಸಾಗುವ ಗಜಪಡೆಯನ್ನು ನೋಡುವಾಗ ಎಲ್ಲರೂ ವಾವ್ ಎಂದು ಅಚ್ಚರಿಯ ನೋಟ ಬೀರುತ್ತೇವೆ. ಆದರೆ ಆ ದಿನಗಳಿಗಾಗಿ ನಡೆಯುವ ತಯಾರಿಯ ಹಿಂದಿನ ಶ್ರಮ ಯಾರಿಗೂ ಗೊತ್ತೇ ಆಗುವುದಿಲ್ಲ.
ದಸರಾ ವಿಶೇಷ; ಮೈಸೂರು ದಸರಾ ಗಜಪಡೆಯ ದಿನಚರಿ ಹೇಗಿದೆ ಗೊತ್ತಾ?
ಆನೆಗಳೊಂದಿಗೆ ಕಾಲ ಕಳೆಯುವ ಕಾವಾಡಿಗರ ಮಕ್ಕಳು
ಗಜಪಡೆ ಬೀಡುಬಿಟ್ಟ ಅರಮನೆಯ ಆವರಣದ ಸ್ಥಳಕ್ಕೆ ಹೋದರೆ ಅಲ್ಲಿನ ದೃಶ್ಯಗಳು ಗಮನಸೆಳೆಯುತ್ತವೆ. ಆನೆಗಳೊಂದಿಗೆ ಶಿಬಿರದಿಂದ ಬಂದಿರುವ ಮಾವುತರು ಮತ್ತು ಕಾವಾಡಿಗರ ಕುಟುಂಬ ಆನೆಗಳೊಂದಿಗೆ ಕಾಲ ಕಳೆಯುತ್ತಿರುತ್ತವೆ. ಆನೆಗಳಿಗೆ ಆಹಾರ, ನೀರು ನೀಡುವುದು, ಸ್ನಾನ ಮಾಡಿಸುವುದು ಹೀಗೆ ಸದಾ ಆನೆಗಳ ಹಿಂದೆ ಮುಂದೆ ಓಡಾಡುತ್ತಿರುತ್ತಾರೆ. ಅದರಲ್ಲೂ ಮಕ್ಕಳು ಆನೆಗಳೊಂದಿಗಿದ್ದು ಅಭ್ಯಾಸವಾಗಿರುವುದರಿಂದ ಯಾವುದೇ ಭಯವಿಲ್ಲದೆ ಅವುಗಳೊಂದಿಗೆ ಸಮಯ ಕಳೆಯುತ್ತಾರೆ. ಇದೆಲ್ಲದರ ನಡುವೆ ಆನೆಗಳೊಂದಿಗೆ ಆಗಮಿಸಿರುವ ಮಾವುತ, ಕಾವಾಡಿಗರ ಮತ್ತು ಅವರ ಕುಟುಂಬಗಳ ಆರೋಗ್ಯದ ಬಗ್ಗೆ ಗಮನಹರಿಸಬೇಕಾಗಿರುವುದರಿಂದ ಅವರ ಆರೋಗ್ಯ ತಪಾಸಣೆ, ಜತೆಗೆ ಮಕ್ಕಳಿಗೆ ಟೆಂಟ್ ಶಾಲೆ ಇನ್ನಿತರ ಚಟುವಟಿಕೆಗಳಿಗೂ ಅಲ್ಲಿಯೇ ವ್ಯವಸ್ಥೆ ಮಾಡಿಕೊಡಲಾಗುತ್ತದೆ.
ಅರಮನೆಯ ಆವರಣದೊಳಗೆ ಆನೆಗಳಿಗೆ ವಿಶೇಷ ಸೌಲಭ್ಯ
ಮೈಸೂರು ದಸರಾದ ಆರಂಭ ಕಾಲದಿಂದಲೂ ಆನೆಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಹಿಂದಿನ ಕಾಲದಲ್ಲಿ ರಾಜರ ಆಳ್ವಿಕೆಯಿದ್ದಾಗ ಜಂಬೂಸವಾರಿ ವೇಳೆ ಅಂಬಾರಿಯಲ್ಲಿ ಮಹಾರಾಜರು ಆಸೀನರಾಗಿ ಮೆರವಣಿಗೆಯಲ್ಲಿ ಸಾಗುತ್ತಿದ್ದರು. (ಸ್ವಾತಂತ್ರ್ಯ ನಂತರ ಅಂಬಾರಿಯಲ್ಲಿ ಚಾಮುಂಡೇಶ್ವರಿಯನ್ನು ಪ್ರತಿಷ್ಠಾಪಿಸಿ ಜಂಬೂಸವಾರಿ ಮೆರವಣಿಗೆ ನಡೆಯುತ್ತದೆ. ಇದಕ್ಕೆ ಸ್ತಬ್ಧ ಚಿತ್ರಗಳು, ಜಾನಪದ ಕಲಾ ತಂಡಗಳು, ಪೊಲೀಸ್, ಆಶ್ವರೋಹಿಪಡೆ ಹೀಗೆ ಹಲವರು ಸಾಥ್ ನೀಡುತ್ತಾರೆ.) ಹೀಗಾಗಿಯೇ ಆನೆಗಳನ್ನು ಕರೆತಂದು ಅವುಗಳಿಗೆ ಅರಮನೆ ಬಳಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಟ್ಟು ಬಳಿಕ ಪ್ರತಿನಿತ್ಯ ತಾಲೀಮು ನಡೆಸಿ ದಸರಾ ಜಂಬೂಸವಾರಿಗೆ ತಯಾರಿಗೊಳಿಸುವುದು ಮೊದಲಿನಿಂದಲೂ ನಡೆದು ಬಂದಿದೆ.
ಹಿಂದಿನ ಕಾಲದಲ್ಲಿ ದಸರಾ ಆನೆಗಳಿಗೆ ಈಗಿನ ಜೆಎಸ್ಎಸ್ ಆಸ್ಪತ್ರೆ ಇದ್ದ ಸ್ಥಳದಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದ್ದರಿಂದಲೇ ಅದನ್ನು ಆನೆ ಕರೋಟಿ ಎಂದು ಈಗಲೂ ಕರೆಯಲಾಗುತ್ತದೆ. ನಂತರದ ವರ್ಷಗಳಲ್ಲಿ ಅರಮನೆಯ ಆವರಣದೊಳಗೆ ಆನೆಗಳಿಗೆ ಅವಕಾಶ ಮಾಡಿ ಕೊಡಲಾಯಿತು. ಇಲ್ಲಿಯೇ ಆನೆಗಳಿಗೆ ವಿಶೇಷ ತಿಂಡಿ ಮತ್ತು ಮಜ್ಜನದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಆನೆಗಳ ಮಜ್ಜನಕ್ಕೆ ಅನುಕೂಲವಾಗುವಂತೆ ಬೃಹತ್ ವಿಸ್ತಾರದ ತೊಟ್ಟಿಯನ್ನು ನಿರ್ಮಿಸಲಾಗಿದೆ. ಇಲ್ಲಿಯೇ ದಿನನಿತ್ಯ ಆನೆಗಳ ಮಹಾಮಜ್ಜನ ನಡೆಯುತ್ತದೆ.
ಜಂಬೂಸವಾರಿಗೆ ಅಭಿಮನ್ಯು ಲೀಡರ್
ಬೆಳಿಗ್ಗೆ ಆಹಾರ ನೀಡಿದ ಬಳಿಕ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಯುತ್ತದೆ. ನಂತರ ಸ್ನಾನ, ವಿಶ್ರಾಂತಿ ಮಧ್ಯಾಹ್ನದ ಆಹಾರದ ಬಳಿಕ ತಾಲೀಮು ಹೀಗೆ ನಡೆಯುತ್ತಲೇ ಇರುತ್ತದೆ. ಸದ್ಯ ಒಂಬತ್ತು ಆನೆಗಳು ಆಗಮಿಸಿದ್ದು ಎರಡನೇ ಹಂತದ ಆನೆಗಳು ಬಂದ ಬಳಿಕ ತಾಲೀಮು ಇನ್ನಷ್ಟು ಕಠಿಣವಾಗಲಿದೆ. ಈ ಬಾರಿ ಜಂಬೂಸವಾರಿಯು ಮತ್ತಿಗೋಡು ಆನೆ ಶಿಬಿರದಿಂದ ಬಂದಿರುವ ಅಭಿಮನ್ಯು(57) ನೇತೃತ್ವದಲ್ಲಿ ನಡೆಯಲಿದ್ದು, ಭೀಮ(22), ಮಹೇಂದ್ರ(39), ಗೋಪಾಲಸ್ವಾಮಿ(39), ಬಳ್ಳೆ ಆನೆ ಶಿಬಿರದಿಂದ ಅರ್ಜುನ (63), ದುಬಾರೆ ಆನೆಶಿಬಿರದಿಂದ ವಿಕ್ರಮ(59), ಧನಂಜಯ(44), ಕಾವೇರಿ(45) ಗೋಪಿ(41), ಶ್ರೀರಾಮ(40), ವಿಜಯ(63), ರಾಮಾಪುರ ಆನೆ ಶಿಬಿರದಿಂದ ಚೈತ್ರ (49), ಲಕ್ಷ್ಮೀ(21), ಪಾರ್ಥಸಾರಥಿ (18) ಸಾಥ್ ನೀಡಲಿದ್ದಾರೆ.
Recommended Video