ಸಂಗೀತ ಗಾಡಿಯಿಂದ ಅಂಬಾರಿ ಹೊರುವ ತನಕ... ಇದು ಅಭಿಮನ್ಯು ಕಥೆ!
ಮೈಸೂರು, ಆಗಸ್ಟ್ 16: ಈ ಹಿಂದೆ ಜಂಬೂಸವಾರಿಯಲ್ಲಿ ಸಂಗೀತಗಾರರ ಸಂಗೀತ ಗಾಡಿ ಎಳೆಯುವ ಜವಬ್ದಾರಿ ಹೊತ್ತಿದ್ದ ಅಭಿಮನ್ಯು ಕಳೆದ ಎರಡು ವರ್ಷಗಳಿಂದ ಗಜಪಡೆಯ ನೇತೃತ್ವ ವಹಿಸಿಕೊಂಡಿದ್ದು ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದಾನೆ. ಈ (ಮೂರನೇ) ಬಾರಿ ಆತನಿಗೆ ಅಂಬಾರಿ ಹೊರುವುದು ಸವಾಲ್ ಆದರೂ ಅದನ್ನು ಯಶಸ್ವಿಯಾಗಿ ಪೂರೈಸಲು ಸಜ್ಜಾಗುತ್ತಿದ್ದಾನೆ.
ಈಗಾಗಲೇ ಜಂಬೂಸವಾರಿಗೆ ತಾಲೀಮು ಆರಂಭವಾಗಿದ್ದು, ಅಕ್ಟೋಬರ್ 5ರಂದು ನಡೆಯಲಿರುವ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತು ಸುಮಾರು 5.5 ಕಿ.ಮೀ. ನಡೆಯಬೇಕಾಗಿರುವುದರಿಂದ ಸರ್ವ ರೀತಿಯಲ್ಲಿಯೂ ಆತನನ್ನು ಸಜ್ಜುಗೊಳಿಸುವ ಕೆಲಸ ಶುರುವಾಗಿದೆ.
ಮೈಸೂರು ದಸರಾ ಸಂಭ್ರಮ: ತೂಕ ಪರೀಕ್ಷೆಯಲ್ಲಿ ಯಾವ ಆನೆ ಬಲಶಾಲಿ?
ಕಳೆದ ಹಲವು ವರ್ಷಗಳಿಂದ ಜಂಬೂಸವಾರಿಯಲ್ಲಿ ಅಭಿಮನ್ಯು ಸಂಗೀತಗಾರರ ಗಾಡಿಯನ್ನು ಎಳೆಯುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದ್ದನು. ಆದರೆ 2020ರಲ್ಲಿ ಕೊರೊನಾ ಮಹಾಮಾರಿ ಕಾಡಿದ್ದರಿಂದ ಸರಳವಾಗಿ ಅರಮನೆ ಆವರಣದಲ್ಲಿ ದಸರಾ ಆಚರಿಸಲಾಯಿತು. ಈ ವೇಳೆ ಅಭಿಮನ್ಯುಗೆ ಅಂಬಾರಿ ಹೊರುವ ಜವಬ್ದಾರಿ ನೀಡಲಾಯಿತು. ಕಳೆದ ಎರಡು ಬಾರಿಯೂ ಸರಳವಾಗಿ ನಡೆದಿದ್ದು ಎರಡು ಬಾರಿಯೂ ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದಾನೆ. ಈ ಸಲ ಮೂರನೇ ಬಾರಿಗೆ ಅಂಬಾರಿ ಹೊರುತ್ತಿದ್ದಾನೆ.
ಹಿಂದೆ ಅರಮನೆ ಸಂಗೀತಗಾರರ ಗಾಡಿಯನ್ನು ಎಳೆಯುವ ಜವಾಬ್ದಾರಿ
ಹಾಗೆ ನೋಡಿದರೆ ಮೈಸೂರು ದಸರಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವುದು ಅಭಿಮನ್ಯುಗೆ ಹೊಸದೇನಲ್ಲ. ಈ ಹಿಂದೆ ಜಂಬೂಸವಾರಿಯಲ್ಲಿ ಭಾಗವಹಿಸುತ್ತಿದ್ದ ಅಭಿಮನ್ಯು ಅರಮನೆ ಸಂಗೀತಗಾರರ ಗಾಡಿಯನ್ನು ಎಳೆಯುವ ಜವಾಬ್ದಾರಿಯನ್ನು ವಹಿಸಿಕೊಂಡು ಅದನ್ನು ಸುಸೂತ್ರವಾಗಿ ನೆರವೇರಿಸಿದ ಕೀರ್ತಿ ಆತನಿಗಿದೆ. ಇನ್ನು ಈ ಸಂಗೀತ ಗಾಡಿಯನ್ನು ಎಳೆಯುವುದು ಸುಲಭವೇನಲ್ಲ. ಏಕೆಂದರೆ ಜಂಬೂಸವಾರಿ ವೇಳೆ ಬೃಹತ್ ಗಾಡಿಯಲ್ಲಿ ಸಂಗೀತಗಾರರು ಆಸೀನರಾಗಿ ಸಂಗೀತದ ಸುಧೆ ಹರಿಸುತ್ತಿದ್ದರೆ, ಅವರನ್ನು ಎಳೆದೊಯ್ಯುತ್ತಾ ಮುನ್ನಡೆಯ ಬೇಕಾಗುತ್ತದೆ. ಇದಕ್ಕೆ ಶಕ್ತಿ ಸಾಮರ್ಥ್ಯದ ಜತೆಗೆ ತಾಳ್ಮೆಯೂ ಬೇಕಾಗುತ್ತದೆ. ಅದೆಲ್ಲವೂ ಅಭಿಮನ್ಯುವಿಗೆ ಇರುವುದರಿಂದ ಆತ ಅದರಲ್ಲಿ ಯಶಸ್ವಿಯಾಗಿದ್ದನು.
World Elephant Day: ಮೈಸೂರಿನ 'ಜಂಬೂ ಸವಾರಿ' ಗಜಪಡೆಗಳ ವಿಶೇಷ ಸಂಗತಿಗಳು
ದಶಕಕ್ಕೂ ಹೆಚ್ಚು ಕಾಲ ಸಂಗೀತ ಗಾಡಿ ಎಳೆದಿರುವ ಅಭಿಮನ್ಯು
ಇನ್ನು ಸಂಗೀತ ಗಾಡಿ ಬಗ್ಗೆ ಹೇಳಬೇಕೆಂದರೆ ಮಹಾರಾಜರ ಕಾಲದಲ್ಲಿ ಸಂಗೀತಗಾರರಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿತ್ತು. ಮಹಾರಾಜರು ತಮ್ಮ ಆಸ್ಥಾನದಲ್ಲಿದ್ದ ಸಂಗೀತಗಾರರು ಜಂಬೂಸವಾರಿಯಲ್ಲಿ ಸಾಗಲು ಅವಕಾಶ ಮಾಡಿಕೊಟ್ಟಿದ್ದರು. ಅಷ್ಟೇ ಅಲ್ಲದೆ ಅವರು ಸಂಗೀತವನ್ನು ನುಡಿಸಲು ಅನುಕೂಲವಾಗುವಂತೆ ನಾಲ್ಕು ಚಕ್ರಗಳ ಛಾವಣಿ ಹೊಂದಿದ ಸುಂದರವಾದ ಬೃಹತ್ ಗಾಡಿಯನ್ನು ನಿರ್ಮಿಸಿದ್ದರು. ಈ ಗಾಡಿಯನ್ನು ಆನೆಗಳಿಂದ ಎಳೆಸಲಾಗುತ್ತಿತ್ತು. ಅರಮನೆಯಿಂದ ಹೊರಟು ಬನ್ನಿಮಂಟಪದವರೆಗೂ ಸುಮಾರು 5.5 ಕಿ.ಮೀ. ದೂರದವರೆಗೂ ಸಂಗೀತದ ಇಂಪು ಪಸರಿಸುತ್ತಿತ್ತು. ಹಿಂದಿನ ಈ ಸಂಪ್ರದಾಯವನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿದ್ದು, ದಶಕಕ್ಕೂ ಹೆಚ್ಚು ಕಾಲ ಅಭಿಮನ್ಯು ಈ ಕಾರ್ಯವನ್ನು ನಿರ್ವಹಿಸಿರುವುದು ವಿಶೇಷವಾಗಿದೆ.
ಪುಂಡಾನೆಗಳನ್ನು ಸೆರೆ ಹಿಡಿಯಲು ಬಳಕೆ
ಇನ್ನು ಅಭಿಮನ್ಯು ಬಗ್ಗೆ ಹೇಳುವುದಾದರೆ ಒಂದು ಕಾಲದಲ್ಲಿ ಇದು ಎಲ್ಲಾ ಆನೆಗಳಂತೆ ಕೊಡಗಿನ ಅರಣ್ಯದಲ್ಲಿ ಅಲೆಯುತ್ತಾ ಪುಂಡಾಟ ನಡೆಸುತ್ತಿತ್ತು. ಹೀಗಾಗಿ ಇದನ್ನು 1977 ರಲ್ಲಿ ಕೊಡಗಿನ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿದು ಪಳಗಿಸಿ ಅಭಿಮನ್ಯು ಎಂದು ನಾಮಕರಣ ಮಾಡಲಾಯಿತು. ಬಲಿಷ್ಠನಾಗಿರುವ ಈತನನ್ನು ಪುಂಡಾನೆಗಳನ್ನು ಸೆರೆಹಿಡಿದು ಪಳಗಿಸಲು ಮತ್ತು ಚಿಕಿತ್ಸೆ ನೀಡಲು ಬಳಸಿಕೊಳ್ಳಲಾಗುತ್ತದೆ.
ಸದ್ಯ ಈತನ ವಯಸ್ಸು 57 ವರ್ಷವಾಗಿದ್ದು, ಕಳೆದ 23 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ. 2.68 ಮೀಟರ್ ಎತ್ತರ ಹಾಗೂ 3.51ಮೀಟರ್ ಉದ್ದವನ್ನು ಹೊಂದಿದ್ದು ಈಗ 4770 ಕೆಜಿಯಷ್ಟು ತೂಕವಿದ್ದಾನೆ. ಮುಂದಿನ ಜಂಬೂಸವಾರಿ ವೇಳೆಗೆ ಇದು ಜಾಸ್ತಿಯಾಗಲಿದೆ.
3ನೇ ಬಾರಿಗೆ ಅಂಬಾರಿ ಹೊರಿವ ಜಬಾಬ್ದಾರಿ
ಕೊಡಗಿನ ಮತ್ತಿಗೋಡು ಶಿಬಿರದಲ್ಲಿರುವ ಈತನನ್ನು ಮಾವುತ ವಸಂತ ಮತ್ತು ಕಾವಾಡಿ ರಾಜು ನೋಡಿಕೊಳ್ಳುತ್ತಿದ್ದಾರೆ. ಈತ ಅಂಬಾರಿಯನ್ನು ಯಶಸ್ವಿಯಾಗಿ ಹೊರುತ್ತಾನೆ ಎಂಬ ನಂಬಿಕೆಯಿಂದಲೇ 2020ರಲ್ಲಿ ಅರಣ್ಯಾಧಿಕಾರಿಗಳು ಮಹತ್ವದ ತೀರ್ಮಾನ ಕೈಗೊಂಡಿದ್ದರು. ಹೀಗಾಗಿ ಇದೀಗ ಮೂರನೇ ಬಾರಿಗೆ ಅಭಿಮನ್ಯು ಅಂಬಾರಿ ಹೊತ್ತು ಸಾಗಲಿದ್ದಾನೆ.
ಅಭಿಮನ್ಯು ಬಗ್ಗೆ ಇನ್ನಷ್ಟು ಹೇಳಬೇಕೆಂದರೆ ಈತ ಕಾಡಾನೆ ಸೆರೆ ಹಿಡಿಯುವುದು, ಕಾಡಿಗೆ ಹಿಮ್ಮೆಟ್ಟಿಸುವುದರಲ್ಲಿ ನಿಸ್ಸೀಮ. ಈಗಾಗಲೇ ನೂರಾರು ಕಾರ್ಯಾಚರಣೆಯಲ್ಲಿ ಭಾಗಿಯಾದ ಅನುಭವ ಹೊಂದಿದ್ದಾನೆ. ಪುಂಡಾನೆಗಳನ್ನು ಸದೆ ಬಡಿಯುವುದರಲ್ಲಿ ಎತ್ತಿದ ಕೈ. ಹತ್ತಾರು ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾನೆ.
ಎರಡು ಆನೆಗಳಿನ್ನು ಹಿಮ್ಮೆಟ್ಟಿಸಿದ್ದ ದೈರ್ಯಶಾಲಿ
ಈ ಹಿಂದೆ ಈತನ ಮೇಲೆ ಮಾಗಡಿಯ ಸಾವನದುರ್ಗ ಅರಣ್ಯದಲ್ಲಿ ಎರಡು ಕಾಡಾನೆಗಳು ದಾಳಿ ಮಾಡಿದರೂ ಧೃತಿಗೆಡದೆ ಅವುಗಳನ್ನು ಹಿಮ್ಮೆಟ್ಟಿಸಿದ್ದ ಅಭಿಮನ್ಯು ತಾನೂ ಕೇವಲ ಬಲಶಾಲಿ ಮಾತ್ರವಲ್ಲ ಧೈರ್ಯಶಾಲಿಯೂ ಹೌದು ಎಂಬುದನ್ನು ಸಾಬೀತು ಮಾಡಿದ್ದರು. ಇನ್ನು ಅಭಿಮನ್ಯು ಮೈಸೂರು ದಸರಾ ಮಾತ್ರವಲ್ಲದೆ ಶ್ರೀರಂಗಪಟ್ಟಣದಲ್ಲಿ ನಡೆಯುವ ದಸರಾದಲ್ಲೂ ಮೂರು ಬಾರಿ ಅಂಬಾರಿ ಹೊತ್ತಿದ್ದಾನೆ.
ಮೈಸೂರು ದಸರಾ ಗಜಪಡೆಯ ಕ್ಯಾಪ್ಟನ್ ಆಗಿರುವ ಅಭಿಮನ್ಯು, ಈ ಬಾರಿಯ ಅದ್ಧೂರಿ ದಸರಾದಲ್ಲಿ ಪಾಲ್ಗೊಂಡು ಐತಿಹಾಸಿಕ ಜಂಬೂ ಸವಾರಿಗೆ ಕಳೆಕಟ್ಟಲು ತಯಾರಾಗುತ್ತಿದ್ದಾನೆ.