ಜ್ವಾಲಾಮುಖಿ, ಉಲ್ಕೆಗಳಿಂದಲೂ ವಿನಾಶಕಾರಿ ವೈರಸ್ಗಳು ಭೂಮಿಗೆ ಬರುತ್ತವೆ!
ಬೆಂಗಳೂರು, ಮಾರ್ಚ್ 18: ಚೀನಾದಲ್ಲಿ ಹುಟ್ಟಿ ಸುಮಾರು 150 ಕ್ಕೂ ಹೆಚ್ಚು ದೇಶಗಳ ನಿದ್ದೆಗೆಡಿಸಿರುವ ನೊವೆಲ್ ಕೊರೊನಾ ವೈರಸ್ (ಕೋವಿಡ್ 19) ಪಸರಿಸುತ್ತಲೇ ನಡೆದಿದೆ. ಕೊರೊನಾ ಬಗ್ಗೆ ದಿನಕ್ಕೊಂದು ಕಥೆ ಉಪಕಥೆಗಳು ಹುಟ್ಟುತ್ತಿವೆ. ಅತ್ಯಂತ ಚರ್ಚಾ ವಸ್ತುವಾಗಿದೆ ಕೊರೊನಾ ಸಂಗತಿ.
ಇಷ್ಟುದಿನ ಕೊರೊನಾ ವೈರಸ್ ಚೀನಾದಲ್ಲಿ ಪ್ರಾಣಿಗಳ ದೇಹದಿಂದ ಉತ್ಪತ್ತಿಯಾಗಿ ಮನುಷ್ಯರಿಂದ ಮನುಷ್ಯರಿಗೆ ಹರಡಿದೆ ಎಂಬ ಸುದ್ದಿಗಳು ಚಾಲ್ತಿಯಲ್ಲಿದ್ದವು. ಆದರೆ, ಈಗ ಪ್ರಳಯಾಂತಕ ನೋವೆಲ್ ಕೊರೊನಾ ವೈರಸ್ನಂತಹ ವಿನಾಶಕಾರಿ ವೈರಸ್ಗಳು ಭೂಮಿಯ ಆಳದಿಂದ ಉಗಮವಾಗುತ್ತವೆ ಎಂದು ಕೆಲ ವಿಜ್ಞಾನಿಗಳು ಹೊಸ ಸಿದ್ದಾಂತ ಮಂಡಿಸಿದ್ದಾರೆ.
ಕೊರೊನಾ ವೈರಸ್ ಸಾವು ಮತ್ತು ಹರಡುವಿಕೆ ಸುತ್ತ ರೌಂಡ್ ಅಪ್
ಖ್ಯಾತ ಭೂಗರ್ಭಶಾಸ್ತ್ರ ವಿಜ್ಞಾನಿ ಡಾ ಎಚ್ ಎಸ್ ಎಂ ಪ್ರಕಾಶ್ ಅವರು, ಈ ಕುರಿತು ಹೊಸ ವಿಚಾರ ಹರಿಬಿಟ್ಟಿದ್ದಾರೆ. ಇಂಡಿಯನ್ ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾದ ನಿವೃತ್ತ ಡೆಪ್ಯೂಟಿ ಡೈರೆಕ್ಟರ್ ಜನರಲ್ ಆಗಿರುವ ಪ್ರಕಾಶ್ ಅವರು, ವಿನಾಶಕಾರಿ ವೈರಸ್ಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ... ಮುಂದೆ ಓದಿ...
ಜ್ವಾಲಾಮುಖಿಯಿಂದ ಬರುತ್ತವೆ
ಕೊರೊನಾ ಅಷ್ಟೇ ಅಲ್ಲದೇ ಹಲವು ಬಗೆಯ ಮಾರಣಾಂತಿಕ ವೈರಸ್ ಮತ್ತು ಬ್ಯಾಕ್ಟೀರಿಯಾಗಳು ಭೂಗರ್ಭ ಅಥವಾ ಉಲ್ಕೆಗಳ ಮೂಲಕ ಭೂಮಿಯ ಮೇಲ್ಪದರಕ್ಕೆ ಬಂದು ಅವು ಹರಡಿಕೊಳ್ಳುತ್ತವೆ. ಭೂಗರ್ಭದಿಂದ ಈ ಸೂಕ್ಷ್ಮ ಜೀವಿಗಳು ಜ್ವಾಲಾಮುಖಿಗಳು ಉಗುಳುವ ಬೂದಿಯ ಮೂಲಕ ಹೊರಬರುತ್ತವೆ. ನಂತರ ವಾತಾವರಣ ಸೇರಿಕೊಳ್ಳುತ್ತವೆ ಎನ್ನುತ್ತಾರೆ ಭೂ ವಿಜ್ಞಾನಿ ಪ್ರಕಾಶ್ ಅವರು.
ಭೂವಾತಾವರಣವನ್ನು ಪ್ರವೇಶಿಸುತ್ತವೆ
ಜ್ವಾಲಾಮುಖಿಗಳು ಸ್ಪೋಟವಾದಾಗ ಭಾರಿ ಪ್ರಮಾಣದಲ್ಲಿ ಗಂಧಕಾಮ್ಲವನ್ನು ಹೊರ ಹಾಕುತ್ತವೆ. ಎಲ್ಲ ಬಗೆಯ ವೈರಾಣುಗಳು, ಸೂಕ್ಷ್ಮಜೀವಿಗಳು ಈ ರೀತಿ ಭೂವಾತಾವರಣವನ್ನು ಪ್ರವೇಶಿಸುತ್ತವೆ. ಜ್ವಾಲಾಮುಖಿಯ ಬೂದಿ ವಾಯುಮಂಡಲದ ಮೇಲೆ ತೆಳುವಾದ ಪದರ ಕಟ್ಟಿಕೊಳ್ಳುತ್ತದೆ. ಇದರಲ್ಲಿ ಸೂಕ್ಷ್ಮ ಜೀವಿಗಳು ಅವಿತಿರುತ್ತವೆ. ಬೂದಿಯ ಪದರ ಕ್ರಮೇಣ ತಂಪಾಗಿ ಮಳೆಯ ರೂಪದಲ್ಲಿ ಬಿದ್ದಾಗ ಸೂಕ್ಷ್ಮ ಜೀವಿಗಳು ನೀರು, ಗಾಳಿ ಅಥವಾ ಸಸ್ಯದಲ್ಲಿ ಸೇರಿಕೊಳ್ಳುತ್ತವೆ. ಆ ಮೂಲಕ ಸಸ್ಯ, ಪ್ರಾಣಿ ಅಥವಾ ಮಾನವ ದೇಹದಲ್ಲಿ ಮನೆ ಮಾಡಿಕೊಳ್ಳುತ್ತವಂತೆ.
19 ನೇ ಶತಮಾನದ ಆರಂಭದಲ್ಲಿ
ಇತ್ತೀಚಿನ ವರ್ಷಗಳಲ್ಲಿ ಕಾಡಿರುವ ಹಲವು ಸಾಂಕ್ರಾಮಿಕ ರೋಗಗಳನ್ನು ಹೊತ್ತು ತರುವ ವೈರಸ್ಗಳ ಮೂಲವೂ ಭೂಗರ್ಭವೇ ಆಗಿದೆ. ಈ ದಿಸೆಯಲ್ಲಿ ವಿಜ್ಞಾನಿಗಳು ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆ ಕೇಂದ್ರೀಕರಿಸಬೇಕು. ಈ ಹಿಂದೆ 19 ನೇ ಶತಮಾನದ ಆರಂಭದಲ್ಲಿ ಜಗತ್ತು ಇದೇ ರೀತಿ ಸನ್ನಿವೇಶ ಎದುರಿಸಿತ್ತು ಫ್ಲೂ ಮತ್ತು ಪ್ಲೇಗ್ ಜಗತ್ತನ್ನು ಆವರಿಸಿ ಬಹಳಷ್ಟು ಜನ ಸಾವನ್ನಪ್ಪಿದ್ದರು. ಆಗ ತಂಬೋರಾ ಜ್ವಾಲಾಮುಖಿಯ ಸೃಷ್ಟಿಸಿದ ಅನಾಹುತ ಅಷ್ಟಿಷ್ಟಲ್ಲ. ಕ್ಷಾಮ, ಪ್ರವಾಹ, ಸಾಂಕ್ರಾಮಿಕ ರೋಗಗಳು ಗರಿಷ್ಠ ಪ್ರಮಾಣದಲ್ಲಿ ಕಾಡಿದ್ದವು ಎನ್ನುತ್ತಾರೆ ವಿಜ್ಞಾನಿ ಪ್ರಕಾಶ್ ಅವರು.
ಕರ್ನಾಟಕದಲ್ಲಿ 14 ಜನಕ್ಕೆ
ಸದ್ಯ ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಒಟ್ಟು 14 ಕ್ಕೆ ಏರಿಕೆಯಾಗಿದೆ. ಇದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ರಾಜ್ಯ ಸರ್ಕಾರ ಮಾರ್ಚ್ 31 ರವೆರೆಗೆ ಸಾರ್ವಜನಿಕ ನಿರ್ಭಂಧಗಳನ್ನು ಮುಂದುವರೆಸಿದೆ.