ದಲಿತರ ಮತವೋ -ಮೇಲ್ಜಾತಿ ವೋಟ್ ಬ್ಯಾಂಕೋ ಎಂಬ ಗೊಂದಲದಲ್ಲಿ ಬಿಜೆಪಿ
ಸಮಸ್ಯೆಗಳನ್ನು-ಸವಾಲುಗಳನ್ನು ಎಷ್ಟು ಚೆನ್ನಾಗಿ ನಿರ್ವಹಿಸಬಲ್ಲರು ಎಂಬುದರ ಆಧಾರದಲ್ಲಿ ರಾಜಕೀಯ ಪಕ್ಷಗಳ ಅಸ್ತಿತ್ವ ಹಾಗೂ ಭವಿಷ್ಯ ಇರುತ್ತದೆ. ಅಂಥ ಸವಾಲು ಇದೀಗ ಕಮಲ ಪಕ್ಷಕ್ಕೆ ಎದುರಾಗಿದೆ. ಮುಂದಿನ ಲೋಕಸಭೆ ಚುನಾವಣೆಗೆ ಹಾಗೂ ಇನ್ನೇನು ಈ ವರ್ಷ ಕೊನೆಗೆ ನಡೆಯುವ ವಿಧಾನಸಭಾ ಚುನಾವಣೆಗೆ ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಬಿಜೆಪಿಗೆ ಭಾರೀ ಸವಾಲುಗಳಿವೆ.
ಕಳೆದ ವರ್ಷ ಸುಪ್ರೀಂ ಕೋರ್ಟ್ ಎಸ್-ಎಸ್ ಟಿ ಕಾಯ್ದೆ ಬಗ್ಗೆ ಆದೇಶವೊಂದನ್ನು ನೀಡಿತ್ತು. ದಲಿತರ ಮೇಲೆ ದೌರ್ಜನ್ಯ ನಡೆಸಿದ ಪ್ರಕರಣಗಳಲ್ಲಿ ದೂರು ದಾಖಲಾದಾಗ ಆ ವರೆಗೆ ಇದ್ದ ಜಾಮೀನು ಸಿಗುವುದಿಲ್ಲ ಎಂಬ ನಿಯಮಕ್ಕೆ ಆದೇಶವು ವಿರುದ್ಧವಾಗಿತ್ತು. ಆದೇಶ ಬಂದ ನಂತರ ರಾಜಕೀಯ ಚರ್ಚೆ ಆರಂಭವಾಗಿ, ಕೇಂದ್ರದಲ್ಲಿ ಸರಕಾರದ ನೇತೃತ್ವ ವಹಿಸಿಕೊಂಡಿರುವ ಬಿಜೆಪಿಗೆ ಬಿಸಿ ತಾಗಲು ಶುರುವಾಯಿತು.
SC/ST ಕಾಯ್ದೆ ತಿದ್ದುಪಡಿ ವಿರೋಧಿಸಿ ಇಂದು ಭಾರತ್ ಬಂದ್
ಆ ನಂತರ ದಲಿತ ಗುಂಪುಗಳ ಪ್ರತಿಭಟನೆ ಹೆಚ್ಚಾದಾಗ ನರೇಂದ್ರ ಮೋದಿ ನೇತೃತ್ವದ ಸರಕಾರ ಮಸೂದೆಗೆ ತಿದ್ದುಪಡಿ ತರಬೇಕಾಯಿತು. ಏಕೆಂದರೆ ಸುಪ್ರೀಂ ಕೋರ್ಟ್ ಆದೇಶದ ಪ್ರಭಾವ ಬೀರದಿರಲು ಹಾಗೆ ಮಾಡಲೇಬೇಕು ಎಂಬ ಸ್ಥಿತಿ ಆಯಿತು. ಇದರಿಂದ ಸಿಟ್ಟಾದವರು ಬಿಜೆಪಿ ಪಾಲಿಗೆ ನಿಲ್ಲುತ್ತಿದ್ದ ಮೇಲ್ಜಾತಿಯ ಮತದಾರರು. ಅದರಲ್ಲೂ ಚುನಾವಣೆ ನಡೆಯಬೇಕಿರುವ ರಾಜ್ಯಗಳಲ್ಲಿ ಆ ಸಿಟ್ಟು ಕುದಿಯುತ್ತಿದೆ.
ಸಾಂಪ್ರದಾಯಿಕ ವೋಟ್ ಬ್ಯಾಂಕ್ ನಲ್ಲಿ ಅಸಮಾಧಾನ
ಇದೀಗ ಬಿಜೆಪಿಯೇ ಗೊಂದಲಕ್ಕೆ ಬಿದ್ದಿದೆ. ಮೇಲ್ಜಾತಿಯ ಸಾಂಪ್ರದಾಯಿಕ ವೋಟ್ ಬ್ಯಾಂಕ್ ನಲ್ಲಿ ಅಸಮಾಧಾನ ಇಣುಕುತ್ತಾ ಇದೆ. ಇನ್ನು ದಲಿತರು ಉತ್ತರಪ್ರದೇಶದಂಥ ದೊಡ್ಡ ರಾಜ್ಯಗಳಲ್ಲಿ ಬಹುಜನ ಸಮಾಜ ಪಕ್ಷದ ಜತೆ ನಿಂತಿದ್ದಾರೆ. ಈಗಾಗಲೇ ಮಧ್ಯಪ್ರದೇಶದಲ್ಲಿ ಮೇಲ್ಜಾತಿಯವರು ಪ್ರತಿಭಟನೆ ಕೂಡ ನಡೆಸಿದ್ದಾರೆ. ಅಷ್ಟೇ ಅಲ್ಲ, ಪಕ್ಷದೊಳಗೆ ಇರುವ ಮೇಲ್ಜಾತಿಯ ನಾಯಕರು ಸರಕಾರದ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. "ಸಾಮಾಜಿಕ ಸ್ವಾಸ್ಥ್ಯ ಕಾಪಾಡಬೇಕು ಅಂದರೆ ಎಸ್ ಸಿ, ಎಸ್ ಟಿ ಕಾಯ್ದೆ ದುರುಪಯೋಗ ಆಗಬಾರದು. ಆದ್ದರಿಂದ ಅಧಿಕಾರಾರೂಢ ಪಕ್ಷವು ಸೇರಿದ ಹಾಗೆ ಎಲ್ಲ ರಾಜಕೀಯ ಪಕ್ಷಗಳೂ ಕಾಯ್ದೆಯಲ್ಲಿನ ಅಂಶಗಳನ್ನು ಪುನರ್ ಪರಿಶೀಲಿಸಬೇಕು" ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಪ್ತರು ಹಾಗೂ ಕೇಂದ್ರದ ಮಾಜಿ ಸಚಿವರೂ ಆದ ಕಲ್ ರಾಜ್ ಮಿಶ್ರಾ ಟ್ವೀಟ್ ಮಾಡಿದ್ದಾರೆ.
ದಲಿತರೊಬ್ಬರನ್ನು ಏಕೆ ಪ್ರಧಾನಿ ಮಾಡಬಾರದು?
ಇದು ಪಕ್ಷದೊಳಗಿನ ಬ್ರಾಹ್ಮಣ ಮುಖಂಡರಿಂದ ಮಾತ್ರವಲ್ಲ, ಇತರ ಮೇಲ್ಜಾತಿಗಳ ಮುಖಂಡರೂ ಅಸಮಾಧಾನ ಹೇಳಿಕೊಂಡಿದ್ದಾರೆ. "ದಲಿತ ಕಾಯ್ದೆ ಒಟ್ಟಾರೆಯಾಗಿ ದುರ್ಬಳಕೆ ಆಗುತ್ತಿದೆ. ಅಮಾಯಕ ಜನರು ಇದರಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ಹಾಗೊಂದು ವೇಳೆ ದಲಿತರನ್ನು ಸಂಪ್ರೀತಗೊಳಿಸಬೇಕು ಎಂದು ರಾಜಕೀಯ ಪಕ್ಷಗಳಿಗೆ ಇದ್ದರೆ ಮುಂದಿನ ಹತ್ತು ವರ್ಷಗಳ ಕಾಲ ದಲಿತರೊಬ್ಬರನ್ನು ಏಕೆ ಪ್ರಧಾನಿ ಮಾಡಬಾರದು?" ಎಂದು ಉತ್ತರಪ್ರದೇಶದ ಶಾಸಕ ಸುರೇಂದ್ರ ಸಿಂಗ್ ಪ್ರಶ್ನಿಸಿದ್ದಾರೆ. ತುಂಬ ಸೂಕ್ಷ್ಮ ವಿಷಯವಾಗಿರುವ ಇದರ ಬಗ್ಗೆ ಮಾತನಾಡುವುದಕ್ಕೆ ಪಕ್ಷದೊಳಗೆ ಇರುವ ಹಲವರಿಗೆ ಇಷ್ಟವಿಲ್ಲ. ಆದರೆ ಅಸಮಾಧಾನ ಇದ್ದೇ ಇದೆ.
ಭಾರತದಾದ್ಯಂತ ದಲಿತರ ಮತಗಳನ್ನು ಸೆಳೆಯುವ ಉದ್ದೇಶ
"ಲೋಕಸಭೆ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಬಿಜೆಪಿಯ ವರಿಷ್ಠ ನಾಯಕರು ಇಂಥದೊಂದು ಆಟ ಆಡುತ್ತಿದ್ದಾರೆ. ಇಡೀ ಭಾರತದಾದ್ಯಂತ ದಲಿತರ ಮತಗಳನ್ನು ಸೆಳೆಯುವ ಉದ್ದೇಶ ಅವರದು. ಮೇಲ್ಜಾತಿಯ ಮತಗಳು ಬಿಜೆಪಿಗೇ ಎಂಬ ನಂಬಿಕೆ ಅವರದು. ಈ ನಿರ್ಧಾರಗಳಿಂದ ಏನು ಪ್ರಯೋಜನ ಆಗಬಹುದು ಅನ್ನೋದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಫಲಿತಾಂಶ ಬರುವ ತನಕ ಕಾದು ನೋಡಬೇಕು" ಎನ್ನುತ್ತಾರೆ ಪಕ್ಷದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು. ಆದರೆ ಈ ಮಾತನ್ನು ನಿರಾಕರಿಸುವ ಕೆಲವು ನಾಯಕರು, ಪ್ರಧಾನಿ ಮೋದಿ ಅವರದು 'ಸಬ್ ಕಾ ಸಾಥ್-ಸಬ್ ಕಾ ವಿಕಾಸ್' ಎಂಬ ಮಂತ್ರ. ಅಭಿವೃದ್ಧಿ ವಿಷಯದ ಆಧಾರದಲ್ಲೇ ಮುಂದಿನ ಲೋಕಸಭೆ ಚುನಾವಣೆ ನಡೆಯುತ್ತದೆ ಎನ್ನುತ್ತಾರೆ.
ಸಹಜ ನಾಯಕತ್ವ ಜಾತಿ ಮೂಲಕ ಬರುತ್ತದೆ
ಮಂಡಲ್ ಆಯೋಗದ ಶಿಫಾರಸ್ಸನ್ನು ಜಾರಿಗೆ ತಂದ ವಿ.ಪಿ.ಸಿಂಗ್ ಅವರನ್ನೇ ಹಿಂದುಳಿದ ವರ್ಗಗಳ ನಾಯಕರು ಅಂತ ಪರಿಗಣಿಸಲಿಲ್ಲ. ಸಹಜವಾಗಿ ನಾಯಕತ್ವ ಅನ್ನೋದು ಜಾತಿ ಮೂಲಕ ಬರುತ್ತದೆ: ಲಾಲೂ ಪ್ರಸಾದ್ ಯಾದವ್ ಹಾಗೂ ಮುಲಾಯಂ ಸಿಂಗ್ ಥರ. ಆದ್ದರಿಂದ ದಲಿತರು ತಮ್ಮ ನಾಯಕ ಅಥವಾ ನಾಯಕಿ ಜತೆಗೆ ನಿಲ್ಲುತ್ತಾರೆ. ಯಾವ ಪಕ್ಷವು ದಲಿತರನ್ನು ಕೇಂದ್ರವಾಗಿ ಮಾಡಿಕೊಂಡು ರಾಜಕಾರಣ ಮಾಡಿಕೊಂಡು ಬಂದಿದೆಯೋ ಅಂಥದ್ದರ ಬೆನ್ನಿಗೆ ನಿಲ್ಲುತ್ತಾರೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ದಲಿತ ಹೋರಾಟಗಾರರಾಪ ಎಸ್.ಆರ್.ದಾರಾ ಪುರಿ ಹೇಳುವಂತೆ, ಎಸ್-ಎಸ್ ಟಿ ಕಾಯ್ದೆ ಬಗ್ಗೆ ಅನಗತ್ಯ ವಿವಾದ ಮಾಡಲಾಗುತ್ತಿದೆ. ನರೇಂದ್ರ ಮೋದಿ ಸರಕಾರವು ಈ ಕಾಯ್ದೆ ಹಿಂದೆ ಹೇಗಿತ್ತೋ ಆ ಸ್ಥಿತಿಗೇ ತಂದಿದೆ ವಿನಾ ಅದನ್ನು ಮತ್ತಷ್ಟು ಕಠಿಣ ಮಾಡಿಲ್ಲ.