ಯುಪಿ ರಾಜಕೀಯ ರಕ್ತ ಚರಿತ್ರೆ, ಯೋಗಿ ಎನ್ಕೌಂಟರ್ ಮ್ಯಾನ್!
ಕ್ರಿಮಿನಲ್ಗಳ ಸ್ವರ್ಗ ಉತ್ತರ ಪ್ರದೇಶದಲ್ಲಿ ಮತ್ತೆ ಗನ್ಗಳು ಆರ್ಭಟಿಸಿವೆ. ಇದು ಇಂದು ನಿನ್ನೆಯ ಕಥೆಯಲ್ಲ ಕಳೆದ ಕೆಲ ವರ್ಷಗಳಿಂದ ಅಲ್ಲಿ ಇಂತಹದ್ದೇ ಪರಿಸ್ಥಿತಿ ಇದೆ. ಯೋಗಿ ಆದಿತ್ಯನಾಥ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕ್ರಿಮಿನಲ್ಸ್ ಹಾಗೂ ಪೊಲೀಸರ ನಡುವೆ ಕುರುಕ್ಷೇತ್ರವೇ ಆರಂಭವಾಗಿದೆ. 2017ರಿಂದಲೂ ಈ ಹೋರಾಟ ನಡೆಯುತ್ತಾ ಬಂದಿದೆ.
Recommended Video
2017ರ ಜೂನ್ನಲ್ಲಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದ ಯುಪಿ ಸಿಎಂ ಯೋಗಿ, ಕ್ರಿಮಿನಲ್ಗಳ ಹೆಡೆಮುರಿ ಕಟ್ಟುವ ಬಗ್ಗೆ ಮೊದಲಬಾರಿಗೆ ಬಹಿರಂಗ ಹೇಳಿಕೆ ನೀಡಿದ್ದರು. ಸಿಎಂ ಯೋಗಿಯ ಈ ಹೇಳಿಕೆ ಬಳಿಕ ಉತ್ತರ ಪ್ರದೇಶದಲ್ಲಿ ತೀವ್ರ ಸ್ವರೂಪ ಪಡೆದ ಎನ್ಕೌಂಟರ್ ಪರ್ವ, ದುಬೆ ಸಾವಿನವರೆಗೂ ಬಂದು ನಿಂತಿದೆ.
ವಿಕಾಸ್ ದುಬೆ ಕಾರ್ ಪಲ್ಟಿ ಆಗಿದ್ದರಿಂದ ಯೋಗಿ ಸರಕಾರ ಬಚಾವ್ ಆಯಿತು!
ಇನ್ನು ಈ ಎನ್ಕೌಂಟರ್ಗಳ ಸರಮಾಲೆಗೆ ರಾಜಕೀಯ ಬಣ್ಣವೂ ಮೆತ್ತಿದೆ. ಉತ್ತರ ಪ್ರದೇಶದಲ್ಲಿ ರಾಜಕೀಯ ಏಕಸ್ವಾಮಿತ್ವಕ್ಕಾಗಿ ಸಿಎಂ ಯೋಗಿ ಆದಿತ್ಯನಾಥ್ ಹೀಗೆ ಮಾಡ್ತಿದ್ದಾರೆ ಅನ್ನೋ ಆರೋಪವೂ ಕೇಳಿಬರುತ್ತಿದೆ. ಎಸ್ಪಿ, ಬಿಎಸ್ಪಿ ಸೇರಿದಂತೆ ಶತೃ ಪಾಳಯದಲ್ಲಿ ಗುರುತಿಸಿಕೊಂಡಿರುವ ರೌಡಿ ಶೀಟರ್ಸ್ ಅಥವಾ ಮಾಜಿ ರೌಡಿಗಳನ್ನೇ ಯೋಗಿ ಟಾರ್ಗೆಟ್ ಮಾಡ್ತಿದ್ದಾರೆ ಅನ್ನೋ ಗಂಭೀರ ಆರೋಪ ವಿಪಕ್ಷಗಳದ್ದು.
ಸಾವಿರಾರು ಎನ್ಕೌಂಟರ್..!
2018ರಲ್ಲಿ ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ತಮ್ಮ ಪತ್ರದಲ್ಲಿ ನೀಡಿದ್ದ ಮಾಹಿತಿ ಪ್ರಕಾರ, 3 ಸಾವಿರಕ್ಕೂ ಹೆಚ್ಚು ಎನ್ಕೌಂಟರ್ಗಳು ನಡೆದಿದ್ದವು. ಇದಾದ ನಂತರ ಎನ್ಕೌಂಟರ್ಗಳ ಬಗ್ಗೆ ಯೋಗಿ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲವಾದರೂ, ಸಾವಿರಾರು ಎನ್ಕೌಂಟರ್ಗಳಲ್ಲಿ ನೂರಾರು ಕ್ರಿಮಿನಲ್ಗಳ ಹೆಣ ಬಿದ್ದಿದೆ. ಇದರ ಜೊತೆ ಹತ್ತಾರು ಪೊಲೀಸರು ಕೂಡ ಹುತಾತ್ಮರಾಗಿದ್ದಾರೆ. ಇದೀಗ ವಿಕಾಸ್ ದುಬೆ ಹತ್ಯೆ ಬಳಿಕ ಯುಪಿ ಎನ್ಕೌಂಟರ್ ಪರ್ವದ ಸುತ್ತ ಹಲವು ಅನುಮಾನಗಳು ಹುಟ್ಟಿವೆ. ವಿಪಕ್ಷ ನಾಯಕರು ಯೋಗಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾರೆ.
ಯುಪಿ ರಾಜಕೀಯ ರಕ್ತ ಚರಿತ್ರೆ..!
ಹೌದು, ಉತ್ತರ ಪ್ರದೇಶದಲ್ಲಿ ಯಾವ ಪಕ್ಷವೇ ಅಧಿಕಾರಕ್ಕೆ ಬರಲಿ, ಆಡಳಿತ ಪಕ್ಷದಲ್ಲಿ ಕ್ರಿಮಿನಲ್ಸ್ ಲಿಸ್ಟ್ ದೊಡ್ಡದಿರುತ್ತೆ. 2017ರಲ್ಲಿ ನಡೆದಿದ್ದ 17ನೇ ವಿಧಾನಸಭಾ ಚುನಾವಣೆಯಲ್ಲೂ ಉತ್ತರ ಪ್ರದೇಶದಲ್ಲಿ ಕ್ರಿಮಿನಲ್ ಹಿನ್ನೆಲೆಯ ನೂರಾರು ಶಾಸಕರು ಆಯ್ಕೆಯಾಗಿದ್ದಾರೆ. ಒಟ್ಟು 403 ಶಾಸಕರ ಬಲದ ಉತ್ತರ ಪ್ರದೇಶ ಅಸೆಂಬ್ಲಿಯಲ್ಲಿ, 143 ಮಂದಿ ಕ್ರಿಮಿನಲ್ ಹಿನ್ನೆಲೆಯ ಶಾಸಕರಿದ್ದಾರೆ. 312 ಸ್ಥಾನ ಗೆದ್ದು ಸರ್ಕಾರ ರಚಿಸಿರುವ ಬಿಜೆಪಿ ಪಾಳಯದಲ್ಲಿ ಅತಿಹೆಚ್ಚು ಅಂದರೆ, 114 ಶಾಸಕರಿಗೆ ಕ್ರಿಮಿನಲ್ ಹಿನ್ನೆಲೆ ಇದೆ. ಹಾಗೇ 47 ಸ್ಥಾನ ಗೆದ್ದಿದ್ದ ಸಮಾಜವಾದಿ ಪಕ್ಷದಲ್ಲಿ 14 ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದರೆ, 19 ಶಾಸಕರಿರುವ ಬಿಎಸ್ಪಿ ಕೂಡ ಐವರು ಕ್ರಿಮಿನಲ್ ಹಿನ್ನೆಲೆಯ ಶಾಸಕರನ್ನು ಹೊಂದಿದೆ. ಉತ್ತರ ಪ್ರದೇಶದ ಈ ರಾಜಕೀಯ ರಕ್ತ ಚರಿತ್ರೆಗೆ ದಶಕಗಳ ಇತಿಹಾಸವೇ ಇದೆ. ಈ ರಾಜ್ಯದಲ್ಲಿ ಪ್ರತಿ ಪಕ್ಷದಲ್ಲೂ ಕ್ರಿಮಿನಲ್ಗಳ ದೊಡ್ಡ ಪಡೆಯೇ ಇದೆ. ಈ ಕಾರಣಕ್ಕಾಗಿ ಸದ್ಯ ಯೋಗಿ ಸರ್ಕಾರ ನಡೆಸುತ್ತಿರುವ ಎನ್ಕೌಂಟರ್ ಬಗ್ಗೆ ಹಲವು ಆರೋಪಗಳು ಕೇಳಿಬರುತ್ತಿವೆ.
ಮಾಧ್ಯಮಗಳಿಗೆ ನಿರ್ಬಂಧ..!
ಈಗ ವಿಕಾಸ್ ದುಬೆ ಎನ್ಕೌಂಟರ್ ಸುತ್ತ ಹಬ್ಬಿರುವ ನೂರಾರು ಅನುಮಾನಗಳಿಗೆ ಕಾರಣವಾಗಿರುವುದು ಯುಪಿ ಪೊಲೀಸ್ ಪಡೆಯ ವರ್ತನೆ. ಅಷ್ಟಕ್ಕೂ ಕ್ರಿಮಿನಲ್ ವಿಕಾಸ್ ದುಬೆ ಹತ್ಯೆಗೂ ಅರ್ಧಗಂಟೆ ಮುನ್ನ, ಅಂದರೆ ದುಬೆಯನ್ನ ಬಂಧಿಸಿ ಕರೆದುಕೊಂಡು ಹೋಗುವ ಹಾದಿಯಲ್ಲೇ ಮಾಧ್ಯಮಗಳಿಗೆ ತಡೆಯೊಡ್ಡಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ದುಬೆ ಹತ್ಯೆ ಪೂರ್ವ ನಿರ್ಧಾರಿತವೇ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಈ ಬಗ್ಗೆ ಮಾಜಿ ಸಿಎಂ ಅಖಿಲೇಶ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಕಾರು ಉರುಳಿದ್ದಕ್ಕೆ ಸರ್ಕಾರ ಉಳಿಯಿತು ಅಂತಾ ವ್ಯಂಗ್ಯವಾಡಿದ್ದಾರೆ.
ಅನುಮಾನಗಳ ನಡುವೆ ಪಾತಕಿ ವಿಕಾಸ್ ದುಬೆ ಹತ್ಯೆ
ಒಟ್ಟಿನಲ್ಲಿ ಇಂತಹ ನೂರಾರು ಅನುಮಾನಗಳ ಮಧ್ಯೆ, 8 ಮಂದಿ ಪೊಲೀಸರ ಹತ್ಯೆಗೆ ಕಾರಣವಾಗಿದ್ದ ಪಾತಕಿ ವಿಕಾಸ್ ದುಬೆ ಹತ್ಯೆಯಾಗಿದೆ. ಅಲ್ಲದೆ ಇದೊಂದು ಎನ್ಕೌಂಟರ್ ರಾಷ್ಟ್ರಮಟ್ಟದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಆದರೆ ಇದಕ್ಕೆ ಮೆತ್ತಿರುವ ರಾಜಕೀಯ ಬಣ್ಣ ಅದೆಷ್ಟು ಸತ್ಯ, ಅದೆಷ್ಟು ಸುಳ್ಳು ಅನ್ನೋದನ್ನ ಕಾಲವೇ ನಿರ್ಧರಿಸಲಿದೆ.