ಲಕ್ಷಾಂತರ ಭಾರತೀಯರನ್ನು ಬಡತನಕ್ಕೆ ದೂಡಿದ ಕೊರೊನಾ: ಚಿನ್ನ ಮಾರಾಟವೇ ದಾರಿ
ನವದೆಹಲಿ, ಜು.12: ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಯಿಂದ ತತ್ತರಿಸಿಹೋಗಿದ್ದ ಮಧ್ಯಮ ಹಾಗೂ ಬಡ ವರ್ಗದ ಜನರಿಗೆ ಕೊರೊನಾ ಇನ್ನಷ್ಟು ಕೆಟ್ಟ ಪರಿಣಾಮ ಬೀರಿದೆ. ದೇಶದಲ್ಲಿ ಈ ಕೊರೊನಾದ ಎರಡನೇ ಅಲೆಯು ಲಕ್ಷಾಂತರ ಭಾರತೀಯರನ್ನು ಬಡತನಕ್ಕೆ ತಳ್ಳಿದೆ. ಮಾತ್ರವಲ್ಲದೇ ಲಕ್ಷಾಂತರ ಮಂದಿ ತಮ್ಮ ಚಿನ್ನವನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿಗೆ ತಂದೊಡ್ಡಿದೆ.
ಮಧ್ಯಮ ವರ್ಗವನ್ನು ಬಡತನಕ್ಕೆ ತಳ್ಳಲ್ಪಟ್ಟ ಅದೇಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಭಾರತದ 50 ವರ್ಷದ ಮಾಣಿ ಪೌಲ್ ಫರ್ನಾಂಡಿಸ್ ಕಳೆದ ವರ್ಷ ಕೊರೊನಾ ಲಾಕ್ಡೌನ್ ಸಂದರ್ಭ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದು, ತನ್ನ ಮಕ್ಕಳ ಶಿಕ್ಷಣಕ್ಕಾಗಿ ಹಣ ಪಾವತಿಸಲು ಸಾಧ್ಯವಾಗದೆ ಕೊನೆಗೆ ಚಿನ್ನವನ್ನು ಮಾರಾಟ ಮಾಡಬೇಕಾಗಿ ಬಂದಿದೆ.
ಲಸಿಕೆ ಅಭಿಯಾನದಿಂದ ಹೊರಗುಳಿದರೇ ನಿರ್ಗತಿಕರು; ಆರೋಗ್ಯ ಸಚಿವಾಲಯದ ಸ್ಪಷ್ಟನೆ
ತನ್ನ ವ್ಯವಹಾರದಲ್ಲಿ ನಷ್ಟ ಉಂಟಾಗಿ, ಉದ್ಯೋಗವನ್ನು ಹುಡುಕುವ ಪ್ರಯತ್ನಗಳು ವಿಫಲವಾದ ನಂತರ ಪೌಲ್ ಫರ್ನಾಂಡಿಸ್ ತನ್ನ ಚಿನ್ನಾಭರಣವನ್ನು ಮಾರಾಟ ಮಾಡಿ ದಿನ ದೂಡುತ್ತಿದ್ದಾರೆ. "ನಾನು ತೆಗೆದುಕೊಂಡ ಎಲ್ಲಾ ಸಾಲದ ನಂತರ ಈಗ ಚಿನ್ನದ ಸಾಲ ತೆಗೆದುಕೊಳ್ಳಬೇಕಾಗಿದೆ," ಎಂದು ಕರಾವಳಿ ರಾಜ್ಯವಾದ ಗೋವಾದ ಫರ್ನಾಂಡಿಸ್ ನೊಂದು ನುಡಿದಿದ್ದಾರೆ.
ಲಕ್ಷಾಂತರ ಭಾರತೀಯರನ್ನು ಬಡತನಕ್ಕೆ ತಳ್ಳಿದ ಕೊರೊನಾ
ಕೊರೊನಾ ಸಾಂಕ್ರಾಮಿಕ ರೋಗವು ಲಕ್ಷಾಂತರ ಜನರನ್ನು ಬಡತನ ಅಥವಾ ದಿವಾಳಿತನಕ್ಕೆ ತಳ್ಳಿದೆ. ಈಗ ಲಕ್ಷಾಂತರ ಭಾರತೀಯರು ತಮ್ಮ ಕೊನೆಯ ದಾರಿಯನ್ನು ಹಿಡಿದಿದ್ದಾರೆ. ತಮ್ಮ ಚಿನ್ನದ ಆಭರಣಗಳನ್ನು ಮಾರಾಟ ಮಾಡಿ ದಿನದೂಡುತ್ತಿದ್ದಾರೆ. ಗ್ರಾಮೀಣ ಭಾರತದಲ್ಲಿ ಈಗ ಕೊರೊನಾ ಎರಡನೇ ಅಲೆಯು ಆರ್ಥಿಕತೆ ಮತ್ತು ಆದಾಯದ ಮೇಲೆ ದುರಂತ ಪರಿಣಾಮ ಬೀರಿದೆ. ಗ್ರಾಮೀಣ ಭಾಗದ ಜನರು ಹೆಚ್ಚಾಗಿ ತಮ್ಮ ಚಿನ್ನವನ್ನು ಮಾರುವ ಅಥವಾ ಅಡವಿಡುವ ಕಾರ್ಯ ಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಲಂಡನ್ ಮೂಲದ ಮೆಟಲ್ಸ್ ಫೋಕಸ್ ಲಿಮಿಟೆಡ್ನ ಸಲಹೆಗಾರರಾದ ಚಿರಾಗ್ ಶೆತ್, ''ಎರಡನೇ ಅಲೆಯಲ್ಲಿ ಕೊರೊನಾವು ಜನರ ಆರ್ಥಿಕತೆ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಇದು ಇನ್ನಷ್ಟು ದುರ್ಗತಿಗೆ ಕಾರಣವಾಗುವ ಸಾಧ್ಯತೆ ಅಧಿಕವಾಗಿದೆ. 2020 ರಲ್ಲಿ ಗ್ರಾಹಕರು ತಮ್ಮ ಚಿನ್ನವನ್ನು ಅಡವಿಟ್ಟು ಹಣ ಪಡೆದಿದ್ದಾರೆ. ಆದರೆ ಈಗ ಹೆಚ್ಚಿನ ಜನರು ಚಿನ್ನವನ್ನು ಅಡವಿಡುತ್ತಿಲ್ಲ. ಬದಲಾಗಿ ಮಾರಾಟವೇ ಮಾಡುತ್ತಿದ್ದಾರೆ,'' ಎಂದು ತಿಳಿಸಿದ್ದಾರೆ.
ಲಾಕ್ಡೌನ್, ಉದ್ಯೋಗ ನಷ್ಟದಿಂದ ಜನರು ತತ್ತರ
''ಈಗಾಗಲೇ ಕರಗಿಸಲೆಂದು 215 ಟನ್ಗೂ ಅಧಿಕ ಹಳೆಯ ಚಿನ್ನ ದೊರೆತಿದೆ. ಇನ್ನು ಕೊರೊನಾದ ಮೂರನೇ ಅಲೆ ಆರಂಭವಾದರೆ ಈ ಹಳೆಯ ಚಿನ್ನ ಮಾರಾಟವು ಒಂಬತ್ತು ವರ್ಷಗಳಲ್ಲಿ ಗರಿಷ್ಠ ಮಟ್ಟಕ್ಕೆ ಏರಬಹುದು,'' ಎಂದು ಕೂಡಾ ಚಿರಾಗ್ ಶೆತ್ ಹೇಳಿದ್ದಾರೆ. "ಈಗಾಗಲೇ ಜನರು ಕಳೆದ ವರ್ಷ ಹಣಕಾಸಿನ ಸಮಸ್ಯೆಯನ್ನು ಹೊಂದಿದ್ದಾರೆ. ಚಿನ್ನದ ಸಾಲಗಳ ಮೂಲಕ ಆ ಸಮಸ್ಯೆಯಿಂದ ಹೇಗೋ ಹೊರಬಂದಿದ್ದಾರೆ. ಈಗ ಮತ್ತೆ, ಈ ವರ್ಷ ಹಣಕಾಸಿನ ಸಮಸ್ಯೆ ಎದುರಾಗಿದೆ. ಈ ಮಧ್ಯೆ ಮೂರನೇ ಅಲೆಯ ಭೀತಿ ಉಂಟಾಗಿದೆ. ಈ ಅಲೆ ಮತ್ತೆ ಲಾಕ್ಡೌನ್ ಮತ್ತು ಉದ್ಯೋಗ ನಷ್ಟಕ್ಕೆ ಕಾರಣವಾಗಲಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ಮೂರನೇಯ ಅಲೆಯು ನಿಜವಾಗಿ ಪ್ರಾರಂಭವಾಗುವ ಸಮಯದಲ್ಲಿ ಚಿನ್ನದ ಮಾರಾಟವು ಭಾರೀ ಪ್ರಮಾಣದಲ್ಲಿ ಹೆಚ್ಚಾಗಬಹುದು," ಎಂದು ಅಭಿಪ್ರಾಯಿಸಿದ್ದಾರೆ.
ಭಾರತದ ಆರ್ಥಿಕತೆಗೆ ಎನ್ಡಿಎ ಸರ್ಕಾರ ಕೊಟ್ಟ 7 ಪೆಟ್ಟುಗಳು!?
ಒಂದು ಸಂಸ್ಥೆಯಲ್ಲೇ 3 ತಿಂಗಳಲ್ಲಿ 4.04 ಬಿಲಿಯನ್ ರು. ಚಿನ್ನ ಹರಾಜು!
ಲಾಕ್ಡೌನ್ಗಳು ಆರ್ಥಿಕತೆಯನ್ನು ಕುಂಠಿತಗೊಳಿಸಿದ್ದರಿಂದ ಬಡತನದಿಂದ ಹೊರಬರಲು ಯತ್ನಿಸುತ್ತಿರುವ ಅನೇಕ ಭಾರತೀಯರಿಗೆ ಉದ್ಯೋಗಾವಕಾಶಗಳು ಸಿಗದೆ ಪರದಾಡುತ್ತಿದ್ದಾರೆ. 200 ಮಿಲಿಯನ್ಗಿಂತಲೂ ಹೆಚ್ಚು ಜನರು ದಿನಕ್ಕೆ ಕನಿಷ್ಠ ವೇತನ ಅಥವಾ 5 ಡಾಲರ್ಗಿಂತ ಕಡಿಮೆ ಆದಾಯವನ್ನು ಗಳಿಸುತ್ತಿದ್ದಾರೆ. ದೇಶದ ಅತಿದೊಡ್ಡ ಚಿನ್ನದ ಸಾಲ ಪೂರೈಕೆದಾರರಲ್ಲಿ ಒಬ್ಬರಾದ ಮನಪ್ಪುರಂ ಫೈನಾನ್ಸ್ ಲಿಮಿಟೆಡ್ ಮಾರ್ಚ್ನಿಂದ ಮೂರು ತಿಂಗಳಲ್ಲಿ 4.04 ಬಿಲಿಯನ್ ರುಪಾಯಿ (54 ಮಿಲಿಯನ್) ಚಿನ್ನವನ್ನು ಹರಾಜು ಮಾಡಿದೆ. ಹಿಂದಿನ ಒಂಬತ್ತು ತಿಂಗಳ ಅವಧಿಯಲ್ಲಿ ಹರಾಜು ಮಾಡಿದ ಕೇವಲ 80 ಮಿಲಿಯನ್ ರುಪಾಯಿ ಚಿನ್ನವನ್ನು ಹರಾಜು ಮಾಡಲಾಗಿದೆ. ಈ ಪೈಕಿ ಕೇವಲ ಮೂರು ತಿಂಗಳಲ್ಲೇ 54 ಮಿಲಿಯನ್ ಚಿನ್ನ ಹರಾಜಾಗಿದೆ. ಇನ್ನು ಮನಪ್ಪುರಂನಲ್ಲಿ ಸಾಮಾನ್ಯವಾಗಿ ದೈನಂದಿನ ಕೂಲಿ ಮಾಡುವವರು, ಸಣ್ಣ ಉದ್ಯಮಿಗಳು, ರೈತರು ತಮ್ಮಲ್ಲಿದ್ದ ಹಳೆಯ ಚಿನ್ನಾಭರವನ್ನು ಮಾರಾಟ ಮಾಡಿದ್ದಾರೆ. ಈಗ ಹಣವನ್ನು ಮರುಪಾವತಿಸಲು ಸಾಧ್ಯವಾಗದೆ ಚಿನ್ನವನ್ನು ಕಳೆದುಕೊಂಡಿದ್ದಾರೆ. "ದಕ್ಷಿಣ ಭಾರತದಲ್ಲಿ ಶೇ. 25ಕ್ಕೂ ಹೆಚ್ಚು ಹಳೆಯ ಚಿನ್ನವನ್ನು ಆಭರಣ ವ್ಯಾಪಾರಿಗಳಿಗೆ ಮಾರಾಟ ಮಾಡಲಾಗಿದೆ," ಎಂದು ಕೊಚ್ಚಿ ಮೂಲದ ರಿಫೈನರ್ ಸಿಜಿಆರ್ ಮೆಟಾಲಾಯ್ಸ್ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕ ಜೇಮ್ಸ್ ಜೋಸ್ ಹೇಳಿದ್ದಾರೆ. ಇನ್ನು ಚಿನ್ನದ ಖರೀದಿಯೂ ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.
ಬೆಲೆ ಏರಿಕೆಯೂ ಜನರಿಗೆ ತಂದಿದೆ ಸಂಕಷ್ಟ
ಎರಡು ಕೊರೊನಾ ಅಲೆಯಿಂದಾಗಿ ತತ್ತರಿಸಿ ಹೋಗಿರುವ, ಹಾಗೆಯೇ ಮೂರನೇ ಅಲೆಯ ಆತಂಕದಲ್ಲಿರುವ ಜನರಿಗೆ ಬೆಲೆ ಏರಿಕೆಯು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ದೇಶದಲ್ಲಿ ನಿರಂತರವಾಗಿ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳವಾಗುತ್ತಿದ್ದು, ಇದರ ಪರಿಣಾಮವಾಗಿ ಅಗತ್ಯ ವಸ್ತುಗಳ ಬೆಲೆಯು ಗಗನ ಮುಟ್ಟುತ್ತಲಿದೆ. ಅಡುಗೆ ಅನಿಲ ಬೆಲೆ ಹೆಚ್ಚಳವೂ ಕೂಡಾ ಜನರಿಗೆ ಇನ್ನೂ ತೊಂದರೆಯನ್ನು ಉಂಟು ಮಾಡಿದೆ. ಮೇ 4ರಿಂದ ಈವರೆಗೆ ಒಟ್ಟು 39 ಬಾರಿ ಹಾಗೂ ಜೂನ್ ತಿಂಗಳಲ್ಲೇ 20 ಬಾರಿ ಬೆಲೆ ಪೆಟ್ರೋಲ್ ಬೆಲೆ ಏರಿಕೆ ಮಾಡಲಾಗಿದೆ. ದೇಶದ ಎಲ್ಲಾ ಮೆಟ್ರೋ ನಗರಗಳು ಸೇರಿದಂತೆ 18 ರಾಜ್ಯಗಳಲ್ಲಿ ಪೆಟ್ರೋಲ್ ದರವು ಶತಕ ಬಾರಿಸಿದೆ. ಈ ನಿಟ್ಟಿನಲ್ಲಿ ಕೇಂದ್ರದ ಮೋದಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಹಾಗೆಯೇ ಕೇಂದ್ರ ಸರ್ಕಾರವು ಮೀಮ್ಗಳಿಗೂ ಬಲಿಯಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆ ಕಂಡು ಬಂದಿದೆ. ಆದರೂ ಭಾರತದಲ್ಲಿ ಬೆಲೆ ಏರಿಕೆಯಾಗುತ್ತಿರುವುದು ವಿರೋಧ ಪಕ್ಷಗಳು ಮಾತ್ರವಲ್ಲದೇ ಆಡಳಿತ ಪಕ್ಷದ ಕೆಲವು ನಾಯಕರ ಅಸಮಾಧಾನಕ್ಕೂ ಕಾರಣವಾಗಿದೆ. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತಿದೆ. ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98ರು ಹಾಗೂ ಡೀಸೆಲ್ ಮೇಲೆ 31.80 ರು ಯಷ್ಟಿದೆ.
(ಒನ್ಇಂಡಿಯಾ ಸುದ್ದಿ)