Freedom Struggle- ಬ್ರಿಟಿಷರ ಟ್ರಕ್ಗೆ ಎದೆಕೊಟ್ಟು ನಿಂತ ಕಾರ್ಮಿಕ ಬಾಬು ಗೇನು ಬಲಿದಾನದ ಕಥೆ
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಅಸಂಖ್ಯಾತ ಜನರ ಬಲಿದಾನ, ಹೋರಾಟಗಳ ಕಥೆಗಳಿವೆ. ಬಹಳ ಮಂದಿಯ ಬಲಿದಾನಗಳು ಬೆಳಕಿಗೆ ಬಾರದೆ ಇತಿಹಾಸದಲ್ಲಿ ಹುದುಗಿ ಹೋಗಿವೆ. ಇಂಥವರಲ್ಲಿ ಮುಂಬೈನ ಬಾಬು ಗೇನು ಸೈದ್ ಒಬ್ಬರು.
ಚಂದ್ರಶೇಖರ್ ಆಜಾದ್, ಭಗತ್ ಸಿಂಗ್ ಮಟ್ಟದಲ್ಲಿ ನೆನಪಿಸಿಕೊಳ್ಳಲಾಗದಿದ್ದರೂ ಬಾಬು ಗೇನು ಸೈದ್ ಬಲಿದಾನದ ಮಹತ್ವ ಕಡಿಮೆಯಲ್ಲ. ಒಬ್ಬ ಸಾಮಾನ್ಯ ಕಾರ್ಮಿಕನೊಬ್ಬ ಬ್ರಿಟಿಷರನ್ನು ಕೆಚ್ಚೆದೆಯಿಂದ ಎದುರಿಸಿ ಪ್ರಾಣ ತ್ಯಾಗ ಮಾಡಿದ ರೀತಿ ನಿಜಕ್ಕೂ ಎಂಥವರಿಗೂ ದೇಶಭಕ್ತಿಯ ಕಿಚ್ಚೆಬ್ಬಿಸುತ್ತದೆ.
ಬ್ರಿಟಿಷರ ನಿದ್ದೆಗೆಡಿಸಿದ್ದ ಗೆರಿಲ್ಲಾ ಯುದ್ಧ ನಿಷ್ಣಾತ ಅಲ್ಲೂರಿ ಸೀತಾರಾಮರಾಜು
ಯಾರು ಈ ಬಾಬು ಗೇನು?
ಬಾಬು ಗೇನು ಸೈದ್ ಅವರು ಬಾಂಬೆ (ಈಗಿನ ಮುಂಬೈ) ನಗರದ ಕಾಟನ್ ಮಿಲ್ನಲ್ಲಿ ಕೆಲಸ ಮಾಡುತ್ತಿದ್ದ ಸಾಮಾನ್ಯ ಕಾರ್ಮಿಕ. ಬ್ರಿಟಿಷರ ವಿರುದ್ಧ ಹೋರಾಡುತ್ತಾ ಇವರು ಮಾಡಿದ ಬಲಿದಾನ ದೊಡ್ಡ ಮಟ್ಟದ ಹೋರಾಟಕ್ಕೆ ಎಡೆ ಮಾಡಿಕೊಟ್ಟಿತ್ತು.
ಬಾಬು ಗೇನ್ 1902ರಲ್ಲಿ ಮಹಾರಾಷ್ಟ್ರದ ಪುಣೆ ಬಳಿಯ ಮಹಾಲುಂಗೆ ಪಡವಾಲ್ ಎಂಬ ಗ್ರಾಮದಲ್ಲಿ ಬಡ ಕುಟುಂಬದಲ್ಲಿ ಜನಿಸಿದವರು. ಬಾಂಬೆಯಲ್ಲಿ ಹತ್ತಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.
ವಿದೇಶದಿಂದ ಬಟ್ಟೆಯನ್ನು ಆಮದು ಮಾಡಿಕೊಳ್ಳಲು ಬ್ರಿಟಿಷ್ ಸರಕಾರ ನಿರ್ಧರಿಸಿತ್ತು. ಇದರ ವಿರುದ್ಧ ಭಾರತದ ನಾಯಕರು ತೀವ್ರ ಪ್ರತಿಭಟನೆ ನಡೆಸಿದ್ದರು. ದೇಶಾಧ್ಯಂತ ಅಸಹಕಾರ ಚಳವಳಿ ನಡೆಯುತ್ತಿದ್ದ ಕಾಲಘಟ್ಟ.
ಬಾಬು ಗೇನು ಸಾಮಾನ್ಯ ಕಾರ್ಮಿಕನಾದರೂ ವಿದೇಶಿ ಉಡುಪುಗಳ ಆಮದು ಕಾರ್ಯವನ್ನು ಬಲವಾಗಿ ವಿರೋಧಿಸಿ, ಸ್ವಾತಂತ್ರ್ಯ ಹೋರಾಟಗಾರರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಟ್ರಕ್ಗೆ ಎದೆಗೊಟ್ಟ ಬಾಬು
1930ರಲ್ಲಿ ಇಂಗ್ಲೆಂಡ್ನ ಮ್ಯಾಂಚೆಸ್ಟರ್ ನಗರದ ವರ್ತಕ ಜಾರ್ಜ್ ಫ್ರೇಜಿಯರ್ ಮುಂಬೈನ ಹನುಮಾನ್ ಗಲ್ಲಿ ಬಳಿ ಇದ್ದ ತನ್ನ ಅಂಗಡಿಯಿಂದ ವಿದೆಶೀ ನಿರ್ಮಿತ ಉಡುಪುಗಳನ್ನು ಸಾಗಿಸಲು ಯತ್ನಿಸುತ್ತಿದ್ದಾಗ ಸ್ವಾತಂತ್ರ್ಯ ಹೋರಾಟಗಾರರು ರಸ್ತೆಗೆ ಅಡ್ಡ ನಿಲ್ಲುತ್ತಾರೆ.
ಹೋರಾಟಗಾರರು ಎಷ್ಟು ಮನವಿ ಮಾಡಿದರೂ ಟ್ರಕ್ ಅನ್ನು ಮುಂದಕ್ಕೆ ಚಲಾಯಿಸಲಾಗುತ್ತಿತ್ತು. ಆಗ ಬಾಬು ಗೇನು ಸೈದ್ ಆ ಟ್ರಕ್ ಮುಂದಕ್ಕೆ ನಿಂತು ವೀರಾವೇಶದಿಂದ ಮಹಾತ್ಮ ಗಾಂಧಿ ಕೀ ಜೈ ಘೋಷಣೆಗಳನ್ನು ಕೂಗುತ್ತಾರೆ. ಆಗ ಟ್ರಕ್ ಚಲಾಯಿಸುತ್ತಿದ್ದ ಡ್ರೈವರ್ ವಿಠಲ್ ಧೋಂಡು.
ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಟ್ರಕ್ ಚಾಲಕನಿಗೆ ವಾಹನವನ್ನು ಬಾಬು ಗೇನು ಮೇಲೆ ಹತ್ತಿಸಿಹೋಗುವಂತೆ ಆದೇಶಿಸುತ್ತಾರೆ. ಆದರೆ, ಚಾಲಕ ವಿಠಲ್ ಧೋಂಡು ಇದಕ್ಕೆ ಕಿವಿಗೊಡುವುದಿಲ್ಲ. "ನಾನು ಭಾರತೀಯ, ಆತನೂ ಭಾರತೀಯ. ನಾವಿಬ್ಬರೂ ಅಣ್ಣ ತಮ್ಮಂದಿರು ನಾನ್ಯಾಕೆ ನನ್ನ ಸಹೋದರನನ್ನು ಕೊಲ್ಲಲಿ?" ಎಂದು ವಿಠಲ್ ಧೋಂಡು ಟ್ರಕ್ ಮುಂದಕ್ಕೆ ಚಲಾಯಿಸಲು ನಿರಾಕರಿಸುತ್ತಾರೆ.
ಆಗ ಬ್ರಿಟಿಷ್ ಅಧಿಕಾರಿಯೊಬ್ಬರು ತಾನೇ ಸ್ವತಃ ಟ್ರಕ್ ಚಲಾಯಿಸುತ್ತಾ ಬುಬು ಗೇನು ಸೈದ್ ಮೇಲೆ ಹತ್ತಿಸುತ್ತಾರೆ. ಟ್ರಕ್ ಅಡಿಗೆ ಸಿಕ್ಕು ಬಾಬು ಗೇನು ಸ್ಥಳದಲ್ಲೇ ಮೃತಪಡುತ್ತಾರೆ.
ಇವರ ಸಾವು ಆಗ ಮುಂಬೈ ನಗರದಲ್ಲಿ ಬೃಹತ್ ಪ್ರತಿಭಟನೆಗೆ ಎಡೆ ಮಾಡಿಕೊಡುತ್ತದೆ. ಬಾಬು ಗೇನು ಸೇದ್ ಅಂತ್ಯಕ್ರಿಯೆಗೆ ಸಾವಿರಾರು ಜನರು ಸೇರುತ್ತಾರೆ. ಜನರು ಅದೆಷ್ಟು ಭಾವಾವೇಶಗೊಳ್ಳುತ್ತಾರೆ ಎಂದರೆ ಬಾಲ್ ಗಂಗಾಧರ್ ತಿಲಕ್ ಅಂತ್ಯಕ್ರಿಯೆ ಆದ ಗಿರ್ಗಾಂ ಚೌಪಟ್ಟಿ ಬಳಿಯೇ ಬಾಬು ಗೇನುವನ್ನು ಮಣ್ಣು ಮಾಡಲು ಯತ್ನಿಸುತ್ತಾರೆ. ಆದರೆ, ಬ್ರಿಟಿಷರು ಅದಕ್ಕೆ ಅವಕಾಶ ಕೊಡುವುದಿಲ್ಲ. ಕೊನೆಗೆ ಬ್ರಿಟಿಷರು ನಿದಗಿ ಮಾಡಲಾದ ಸ್ಥಳದಲ್ಲಿ ಬಾಬು ಅಂತ್ಯಕ್ರಿಯೆ ಜರುಗುತ್ತದೆ.
ಬಾಬು ಗೇನು ಸೇದ್ ಬಲಿದಾನವಾಗಿದ್ದು 1930 ಡಿಸೆಂಬರ್ 12ರಂದು. ಆಗ ಅವರ ವಯಸ್ಸು ಕೇವಲ 22 ವರ್ಷ ಮಾತ್ರ. ಆದರೆ, ಅವರ ಬಲಿದಾನ ಅಂದಿನ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಇನ್ನಷ್ಟು ಹೆಚ್ಚಿಸಿತ್ತು. ಹೀಗಾಗಿ, ಬಾಬು ಬಲಿದಾನ ವ್ಯರ್ಥವಾಗಲಿಲ್ಲ.
ಬಾಬುಗೆ ಮರಣೋತ್ತರ ಗೌರವ
ಬಾಬು ಗೇನು ಇದೀಗ ಶಾಹೀದ್ ಬಾಬು ಗೇನು ಎಂದೇ ಪರಿಚಿತರಾಗಿದ್ದಾರೆ. ಮಹಾರಾಷ್ಟ್ರದ ಹಲವು ಸ್ಥಳಗಳಲ್ಲಿ ಅವರ ಹೆಸರು ಇಡಲಾಗಿದೆ. ನವಿ ಮುಂಬೈನಲ್ಲಿ ಬಾಬು ಗೇನು ಮೈದಾನ ಇದೆ. ಅವರ ತವರೂರು ಪುಣೆಯ ಮಹಾಲುಂಗೆ ಪಡ್ವಾಲ್ನಲ್ಲಿ ಬಾಬು ಗೇನು ಸೈದ್ ವಾಡಿ ಇದೆ. ಪುಣೆ ನಗರದ ವೃತ್ತವೊಂದಕ್ಕೆ ಬಾಬು ಬೇನು ಹೆಸರಿಡಲಾಗಿದೆ.
ಮುಂಬೈನ ಪಾರೆಲ್ನಲ್ಲಿರುವ ಕೆಇಎಂ ಆಸ್ಪತ್ರೆಯ ಸರ್ಕಲ್ವೊಂದಕ್ಕೆ ಬಾಬು ಹೆಸರಿಡಲಾಗಿದೆ. ವೃತ್ತದಲ್ಲಿ ಹುತಾತ್ಮ ಬಾಬು ಗೇನು ಎಂದು ದೊಡ್ಡ ಫಲಕ ಹಾಕಲಾಗಿದೆ. ದೇಶದ ರಾಜಧಾನಿ ಇರುವ ದೆಹಲಿಯಲ್ಲಿ ಶಾಹೀದ್ ಬಾಬು ಗೇನು ಎಂಬ ರಸ್ತೆ ಇದೆ.
(ಒನ್ಇಂಡಿಯಾ ಸುದ್ದಿ)