ಎಚ್ಚರಿಕೆ: ನಾಲಗೆ ತುರಿಕೆ, ಬಾಯಿ ಒಣಗುವಿಕೆ ಕೂಡಾ ಕೊರೊನಾ ಲಕ್ಷಣ!
ನವದೆಹಲಿ, ಮೇ 18: ಕೊರೊನಾವೈರಸ್ ಸೋಂಕಿತರಲ್ಲಿ ಯಾವಾಗ ಯಾವ ರೀತಿ ಲಕ್ಷಣಗಳು ಗೋಚರಿಸುತ್ತವೆಯೋ ಎಂಬ ಸ್ಪಷ್ಟ ಚಿತ್ರಣ ಇಂದಿಗೂ ಸಿಗುತ್ತಿಲ್ಲ. ಕೆಮ್ಮು, ಜ್ವರ, ನೆಗಡಿ, ಹಾಗೂ ಶ್ವಾಸಕೋಶ ಸಂಬಂಧ ಸಮಸ್ಯೆ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಇದರ ಜೊತೆಗೆ ಕೊವಿಡ್-19 ಸೋಂಕಿತರಲ್ಲಿ ಹೊಸ ಲಕ್ಷಣಗಳು ಕಂಡು ಬಂದಿರುವುದನ್ನು ಬೆಂಗಳೂರಿನ ವೈದ್ಯರು ಪತ್ತೆ ಮಾಡಿದ್ದಾರೆ.
ಬೆಂಗಳೂರಿನ 55 ವರ್ಷದ ವ್ಯಕ್ತಿಯಲ್ಲಿ ಬಾಯಿ ಒಣಗುವುದು ಹಾಗೂ ನಾಲಗೆ ತುರಿಕೆ ರೀತಿ ಸಮಸ್ಯೆ ಕಾಣಿಸಿಕೊಂಡಿತ್ತು. ಆ ವ್ಯಕ್ತಿಯ ದೇಹದಲ್ಲಿ ರಕ್ತದೊತ್ತದ ಪ್ರಮಾಣವು ಹೆಚ್ಚಾಗಿದ್ದು ಕಂಡು ಬಂದಿದ್ದು, ಅಂತಿಮವಾಗಿ ಆತನನ್ನು ಕೊವಿಡ್-19 ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಕೊವಿಡ್-19 ಕಾರ್ಯಪಡೆ ಸದಸ್ಯರು ಆಗಿರುವ ಡಾ. ಜಿ ಬಿ ಸತ್ತೂರ್ ಹೇಳಿದ್ದಾರೆ.
ಕೊರೊನಾ 2ನೇ ಅಲೆ, ಮಕ್ಕಳಿಗೂ ಹೆಚ್ಚು ಅಪಾಯಕಾರಿ: ವೈದ್ಯರ ಎಚ್ಚರಿಕೆ
ಕೊರೊನಾವೈರಸ್ ಸೋಂಕಿತರಲ್ಲಿ ಮೊದಲಿನಿಂದಲೂ ಕೆಲವು ಸಾಮಾನ್ಯ ಲಕ್ಷಣಗಳು ಗೋಚರಿಸುತ್ತವೆ. ಒಣ ಕೆಮ್ಮು, ಜ್ವರ, ಆಹಾರದ ರುಚಿ ಕಳೆದುಕೊಳ್ಳುವುದು, ವಾಸನೆ ಗುರುತಿಸಲಾಗದೇ ಇರುವುದು, ಮೂಗು ಸ್ರವಿಸುವಿಕೆ ಹಾಗೂ ಗಂಟಲು ನೋವಿನ ಸಮಸ್ಯೆಯು ಕೊವಿಡ್-19 ಸೋಂಕಿತರಲ್ಲಿ ಕಾಣಿಸಿಕೊಳ್ಳುವು ಸಾಮಾನ್ಯ ಆರೋಗ್ಯ ಸಮಸ್ಯೆಗಳಾಗಿರುತ್ತವೆ. ಇದರ ಹೊರತಾಗಿ ಬಾಯಿ ಒಣಗುವಿಕೆ ಮತ್ತು ನಾಲಗೆ ತುರಿಕೆ ಕೂಡಾ ಕೊವಿಡ್-19 ಲಕ್ಷಣ ಎಂಬ ಅನುಮಾನ ಹುಟ್ಟಿಕೊಂಡಿದೆ. ಈ ಅನುಮಾನಕ್ಕೆ ಕಾರಣವೇನು, ಬೆಂಗಳೂರಿನ ವೈದ್ಯರು ಈ ಲಕ್ಷಣಗಳ ಬಗ್ಗೆ ಏನು ಹೇಳುತ್ತಾರೆ ಎನ್ನುವುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
ಬಾಯಿ ಒಣಗುವಿಕೆ, ನಾಲಗೆ ತುರಿಕೆ ಹಿಂದೆ ಕೊರೊನಾ ಅನುಮಾನ
"ನಾನು ಆ ವ್ಯಕ್ತಿಯ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ತಪಾಸಣೆ ನಡೆಸಿದಾಗ ಅದು ಸಾಮಾನ್ಯವಾಗಿದ್ದು, ಎರಿಥ್ರೋಸೈಟ್ ಸೆಡಿಮೆಂಟೇಶನ್ ದರದಲ್ಲಿ ಸ್ವಲ್ಪ ಏರಿಕೆಯಾಗಿತ್ತು. ತಲೆನೋವು ಸಹ ಕೊರೊನಾವೈರಸ್ ಸೋಂಕಿನ ಒಂದು ಲಕ್ಷಣವಾಗಿತ್ತು. ಆತನಲ್ಲಿ ಜ್ವರ ಕಾಣಿಸಿಕೊಂಡಿರಲಿಲ್ಲ, ಆದರೆ ವ್ಯಕ್ತಿ ತೀವ್ರವಾಗಿ ಆಯಾಸಗೊಂಡಿದ್ದರು. ಇದರಿಂದ ಅನುಮಾನಗೊಂಡು RT-PCR ಪರೀಕ್ಷೆ ನಡೆಸುವಂತೆ ಸೂಚಿಸಲಾಗಿತ್ತು. ಈ ವೇಳೆ ಆತನಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು" ಎಂದು ಡಾ.ಜಿ ಬಿ ಸತ್ತೂರ್ ಹೇಳಿದ್ದಾರೆ.
ಕೊರೊನಾವೈರಸ್ ರೂಪಾಂತರ ಇಷ್ಟಕ್ಕೆಲ್ಲ ಕಾರಣ?
ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಅಲೆಗಳ ರೂಪದಲ್ಲಿ ಹರಡುತ್ತಿದೆ. ಇಂಗ್ಲೆಂಡಿನ ರೂಪಾಂತರ ಕೊರೊನಾವೈರಸ್, ಬ್ರೆಜಿಲ್ ಮೂಲದ ರೂಪಾಂತರ ವೈರಸ್ ಹಾಗೂ ಭಾರತದಲ್ಲೇ ಮೊದಲು ಕಾಣಿಸಿಕೊಂಡಿರುವ ಕೊವಿಡ್-19 ಸೋಂಕಿನಿಂದ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತಿರುವ ಸಾಧ್ಯತೆಗಳಿವೆ. ನಾಲಿಗೆ ತುರಿಕೆ, ರುಚಿ ಗೊತ್ತಾಗದಿರುವುದು, ಬಾಯಿ ನೋವಿನ ಅಸ್ಪಷ್ಟ ಸಂವೇದನೆ ಮತ್ತು ಬಾಯಿಯ ಒಣಗುವಿಕೆ ಜೊತೆ ಬಾಯಿ ಹುಣ್ಣು ಕಾಣಿಸಿಕೊಳ್ಳುತ್ತದೆ. ಇಂಥ ಲಕ್ಷಣಗಳ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸುವಂತಿಲ್ಲ. ಅಲ್ಲದೇ ರೂಪಾಂತರ ಕೊರೊನಾವೈರಸ್ ಸೋಂಕಿನ ಲಕ್ಷಣ ಬದಲಾಗಿದೆಯೇ ಎಂಬ ಬಗ್ಗೆ ಮುನ್ನೆಚ್ಚರಿಕೆ ಜೊತೆ ಕಾಳಜಿಯನ್ನು ವಹಿಸಬೇಕು ಎಂದು ವೈದ್ಯರು ಹೇಳಿದ್ದಾರೆ.
ಕೊರೊನಾ ಲಕ್ಷಣವಿದ್ದರೂ, RTPCR ನೆಗೆಟಿವ್: ಕಾರಣಗಳು 3, ಮಾಡಬೇಕಾಗಿರುವುದು 5
ಬಹುತೇಕ ಸೋಂಕಿತರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಲಕ್ಷಣ
ಕೊರೊನಾವೈರಸ್ ಸೋಂಕಿನ ಎರಡನೇ ಅಲೆಯು ವೇಗವಾಗಿ ಹರಡುವುದಕ್ಕೆ ಕಾರಣವಿದೆ. ಇದು ಮನುಷ್ಯರ ಕೆಲವು ಅಂಗಗಳಲ್ಲಿ ಇರುವ ಹೆಚ್ಚಿನ ಪ್ರತಿರಕ್ಷಣಾ ಶಕ್ತಿಯಿಂದ ತಪ್ಪಿಸಿಕೊಂಡು ಹೆಚ್ಚು ಪರಿಣಾಮಕಾರಿಯಾಗಿ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹಿನ್ನೆಲೆ ಸೋಂಕಿತರಲ್ಲಿ ಜ್ವರದ ಲಕ್ಷಣ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದು, ಇದರ ಜೊತೆ ತೀವ್ರ ದಣಿವು ಕಂಡು ಬರುತ್ತದೆ. ಇದರ ಜೊತೆಗೆ ಸ್ನಾಯು ಸೆಳೆತ, ಕಿವಿ ಕೇಳಿಸದಿರುವುದು, ಚರ್ಮ ರೋಗ, ಉದರ ಬಾಧೆ (ಹೊಟ್ಟೆ ನೋವು, ಹೊಟ್ಟೆಯಲ್ಲಿ ಹಿಂಡುವಿಕೆ, ಅತಿಸಾರ) ಕಣ್ಣು ಕೆಂಪಾಗುವುದು ಹಾಗೂ ದೃಷ್ಟಿದೋಷದ ರೀತಿ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
2ನೇ ಅಲೆಯ ಕೊರೊನಾವೈರಸ್ ಹರಡುವಿಕೆ ವೇಗ ಹೆಚ್ಚು
ಹೊಸ ಅಧ್ಯಯನದ ಪ್ರಕಾರ, ಇಂಗ್ಲೆಂಡಿನ ರೂಪಾಂತರ ಕೊರೊನಾ ರೋಗಾಣುವಿನ B.1.1.7 ತಳಿಯು ಇತರೆ ರೋಗಾಣುಗಳಿಗಿಂತ ಅತ್ಯಂತ ಸುಲಭ ಹಾಗೂ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಮೊದಲ ಅಲೆಯಲ್ಲಿ ಒಬ್ಬ ಕೊರೊನಾವೈರಸ್ ಸೋಂಕಿತನಿಂದ ಆತನ ಸಂಪರ್ಕಕ್ಕೆ ಬಂದವರಲ್ಲಿ ಶೇ.30 ರಿಂದ 40ರಷ್ಟು ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಆದರೆ ಎರಡನೇ ಅಲೆಯಲ್ಲಿ ಈ ಪ್ರತಿಶತ ಪ್ರಮಾಣವು ದ್ವಿಗುಣಗೊಂಡಿದೆ. ಒಬ್ಬ ಸೋಂಕಿತನಿಂದ ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಶೇ.80 ರಿಂದ 90ರಷ್ಟು ಜನರಲ್ಲಿ ಕೊರೊನಾವೈರಸ್ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ತಿಳಿಸಿದ್ದಾರೆ.
ಮೊದಲಿಗಿಂತ ಅಪಾಯಕಾರಿ ಈ ರೂಪಾಂತರ ವೈರಸ್
ಇಂಗ್ಲೆಂಡ್ ಮೂಲದ ರೂಪಾಂತರ ಕೊರೊನಾವೈರಸ್ ಸೋಂಕಿನ ಹೊಸ ತಳಿಯು ಮೊದಲಿಗಿಂತ ಶೇ.70ರಷ್ಟು ಹೆಚ್ಚು ಪರಿಣಾಮಕಾರಿ ಹಾಗೂ ಅಪಾಯಕಾರಿ ಆಗಿದೆ ಎಂದು ಎಮರ್ಜಿಂಗ್ ರೆಸ್ಪಿರೆಟರಿ ವೈರಸ್ ಥ್ರೆಟ್ಸ್ ಅಡ್ವೈಸರಿ ಗ್ರೂಪ್ ವರದಿ ಮಾಡಿದೆ. 2020ರ ಅಕ್ಟೋಬರ್ ತಿಂಗಳಿನಲ್ಲಿ B.1.1.7 ತಳಿಯ ಸೋಂಕು ಕಾಣಿಸಿಕೊಂಡಿತ್ತು. ಇತ್ತೀಚಿಗೆ ದಕ್ಷಿಣ ಆಫ್ರಿಕಾದಲ್ಲಿ B.1.351 ತಳಿ ಪತ್ತೆಯಾಗಿದೆ. ಜನವರಿ ತಿಂಗಳಾಂತ್ಯದ ಸಮಯದಲ್ಲಿ ಅಮೆರಿಕಾದಲ್ಲಿ ಪತ್ತೆಯಾದ ಕೆಲವರಲ್ಲಿ ಈ ರೂಪಾಂತರ ವೈರಸ್ ಗೋಚರಿಸಿದೆ ವಿಪತ್ತು ನಿರ್ವಹಣೆ ಮತ್ತು ನಿಯಂತ್ರಣಾ ಕೇಂದ್ರ ತಿಳಿಸಿದೆ.
Recommended Video
ದೇಶದಲ್ಲಿ ಕೊವಿಡ್-19 ಸೋಂಕಿತರ ಸಾವಿನ ಪ್ರಮಾಣ
ಭಾರತದಲ್ಲಿ ಒಂದೇ ದಿನ ಕೊರೊನಾವೈರಸ್ ಮಹಾಮಾರಿಗೆ 4,329 ರೋಗಿಗಳು ಉಸಿರು ನಿಲ್ಲಿಸಿದ್ದು, ಸಾವಿನ ಸಂಖ್ಯೆ 2,78,719ಕ್ಕೆ ಏರಿಕೆಯಾಗಿದೆ. ಒಂದೇ ದಿನ 2,63,533 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 4,22,436 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಭಾರತದಲ್ಲಿ ಒಟ್ಟು 2,52,28,996 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,15,96,512 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಟ್ಟು 2,78,719 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 33,53,765 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.