ಕ್ರೂರಿ ಕೊರೊನಾ ಬಾಂಬ್ ನಿಂದ ಧಾರಾವಿ ಜನರನ್ನು ಕಾಪಾಡು ದೇವರೇ.!
ಮುಂಬೈ, ಏಪ್ರಿಲ್ 3: ಡೆಡ್ಲಿ ಕೊರೊನಾ ವೈರಸ್ ಭಾರತಕ್ಕೆ ಬಂದಿದ್ದು ವಿಮಾನದ ಮೂಲಕ. ಭಾರತಕ್ಕೆ ಬಂದ ವಿದೇಶಿ ಪ್ರವಾಸಿಗರು ಮತ್ತು ಹೊರದೇಶಗಳಿಂದ ವಾಪಸ್ ಆದ ಭಾರತೀಯರಿಂದ ಇಲ್ಲಿ ಕೊರೊನಾ ವೈರಸ್ ಸೋಂಕು ಹರಡಲು ಆರಂಭವಾಯಿತು.
Recommended Video
ಹೈ-ಫೈ ಮಂದಿಯಿಂದ ಶುರುವಾದ ಈ ಮಹಾಮಾರಿ ಕಾಯಿಲೆ ಇದೀಗ ಮುಂಬೈ ಕೊಳಗೇರಿ ಪ್ರದೇಶವನ್ನೂ ಆವರಿಸಿದೆ. ಏಷ್ಯಾದ ಅತಿ ದೊಡ್ಡ ಸ್ಲಂ ಎಂದು ಕರೆಯಿಸಿಕೊಳ್ಳುವ ಮುಂಬೈನ ಧಾರಾವಿಯಲ್ಲಿ ಕೋವಿಡ್-19 ಕಿಡಿ ಹೊತ್ತಿಕೊಂಡಿದೆ. ಈ ಕಿಡಿಗೆ ಈಗಾಗಲೇ ಅಲ್ಲಿ ಓರ್ವ ಬಲಿಯಾಗಿದ್ದಾನೆ.
ಮುಂಬೈ ಸ್ಲಂಗೂ ಕಾಲಿಟ್ಟ ಕೊರೊನಾ: ಮಾರಿ ಕಟ್ಟಿಹಾಕೋದಿನ್ನು ಅಸಾಧ್ಯನಾ?
ಮೊದಲೇ ಧಾರಾವಿ ಕ್ಷಯ ರೋಗದ ಕೂಪ. ಇದರ ಜೊತೆಗೀಗ ಕೊರೊನಾ ಬಾಂಬ್ ಏನಾದರೂ ಸ್ಫೋಟಗೊಂಡರೆ.. ಅಲ್ಲಿ ನೆಲೆಸಿರುವ 15 ಲಕ್ಷ ಮಂದಿಯ ಪ್ರಾಣವೂ ಹರೋಹರ.
ಸೋಂಕು ದೃಢಪಟ್ಟಿದೆ.!
ಇಲ್ಲಿಯವರೆಗೂ ಮುಂಬೈನ ಧಾರಾವಿಯಲ್ಲಿ ಒಟ್ಟು ಮೂವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಅದರಲ್ಲಿ ಒಬ್ಬರು ಈಗಾಗಲೇ ಕೋವಿಡ್-19 ನಿಂದ ಸಾವನ್ನಪ್ಪಿದ್ದಾರೆ. ವಿದೇಶಿ ಟ್ರಾವೆಲ್ ಹಿಸ್ಟರಿ ಹೊಂದಿಲ್ಲದ ಈ ಮೂವರು ಸ್ಲಂ ನಿವಾಸಿಗಳಿಗೆ ಕೊರೊನಾ ಸೋಂಕು ತಗುಲಿದ್ದು ಹೇಗೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.
ಧಾರಾವಿಯಲ್ಲಿನ ಜನಸಂಖ್ಯೆ ಎಷ್ಟು.?
ಇಡೀ ಏಷ್ಯಾದಲ್ಲೇ ಅತಿ ದೊಡ್ಡ ಸ್ಲಂ ಎಂದು ಕರೆಯಿಸಿಕೊಳ್ಳುವ ಧಾರಾವಿ 613 ಹೆಕ್ಟೇರ್ ಪ್ರದೇಶವನ್ನು ವ್ಯಾಪಿಸಿಕೊಂಡಿದೆ. ಇಲ್ಲಿನ ಜನಸಂಖ್ಯೆ ಸುಮಾರು 15 ಲಕ್ಷ.! ಬೆಂಕಿಪಟ್ಟಣದಂತಹ ಪುಟ್ಟ ಪುಟ್ಟ ಮನೆಗಳನ್ನು ಹೊಂದಿರುವ ಧಾರಾವಿಯಲ್ಲಿ, ಪ್ರತಿ ಮನೆಯಲ್ಲಿ ನೆಲೆಸಿರುವವರ ಸಂಖ್ಯೆ ಕಮ್ಮಿ ಎಂದರೂ 8 ಜನ.!
ಸಾಮಾಜಿಕ ಅಂತರ ಹೇಗೆ ಸಾಧ್ಯ.?
ಚಿಕ್ಕ ಪುಟ್ಟ ಮನೆಗಳು.. ವಠಾರಕ್ಕೊಂದು ಶೌಚಾಲಯ.. ಕಿಷ್ಕಿಂದೆಯಂತಹ ಓಣಿ.. ಒಂದೇ ಮನೆಯೊಳಗೆ ಹತ್ತಾರು ಜನವಿರುವ ಧಾರಾವಿಯಲ್ಲಿ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಸಾಮಾಜಿಕ ಅಂತರಕಾಯ್ದುಕೊಳ್ಳುವುದು ದೂರದ ಮಾತು. ಇನ್ನೂ 'ಹೋಮ್ ಕ್ವಾರಂಟೈನ್' ಎಂಬ ಕಾನ್ಸೆಪ್ಟ್ ಗೆ ಧಾರಾವಿಯಲ್ಲಿ ಅರ್ಥವೇ ಇಲ್ಲ. ಹೀಗಿರುವಾಗ, ಇಲ್ಲಿ ಕೊರೊನಾ ತಾಂಡವವಾಡಿದರೆ, ಲಕ್ಷಾಂತರ ಮಂದಿ ಬೀದಿ ಹೆಣಗಳಾಗುವುದು ಗ್ಯಾರಂಟಿ.
ನೈರ್ಮಲ್ಯ ಇಲ್ಲವೇ ಇಲ್ಲ.!
ಕೋವಿಡ್-19 ತಡೆಗಟ್ಟಲು ಆಗಾಗ ಸೋಪಿನಲ್ಲಿ ಕೈತೊಳೆದುಕೊಳ್ಳಿ ಅಂತಾರೆ. ಆದ್ರೆ, ಧಾರಾವಿಯಂತಹ ಕೊಳಗೇರಿಯಲ್ಲಿ ನೈರ್ಮಲ್ಯ, ಸ್ವಚ್ಛತೆ ಕನಸಿನ ಮಾತು. ಕುಡಿಯುವ ನೀರಿಗಾಗಿ ಪರದಾಡುವ ಅಲ್ಲಿನ ಜನ, ಪ್ರತಿ ದಿನ ಸ್ನಾನ ಮಾಡುವುದೇ ಅನುಮಾನ. ಅಂಥದ್ರಲ್ಲಿ ಅವರೆಲ್ಲಾ ಶುಚಿತ್ವ ಕಾಪಾಡಿಕೊಳ್ಳುವುದು ಹೇಗೆ.? ಒಳಚರಂಡಿ ವ್ಯವಸ್ಥೆಯೂ ಸರಿಯಾಗಿ ಇಲ್ಲದ ಧಾರಾವಿಯಲ್ಲಿ ಈಗಾಗಲೇ ಹಲವು ಜನ ಟೈಫಾಯ್ಡ್ ನಿಂದ ಬಳಲುತ್ತಿದ್ದಾರೆ.
ರೋಗಗಳ ಬೀಡು
ಚರ್ಮೋದ್ಯಮ, ಜವಳಿ ಸೇರಿದಂತೆ 5000ಕ್ಕೂ ಹೆಚ್ಚು ಕೈಗಾರಿಕಾ ಘಟಕಗಳು ಇಲ್ಲಿವೆ. ವಾಯು ಮಾಲಿನ್ಯದಿಂದಾಗಿ ಇಲ್ಲಿ ನೆಲೆಸಿರುವ ಅನೇಕ ಮಂದಿ ಆಸ್ತಮಾ, ಕ್ಷಯ ಮತ್ತು ಕ್ಯಾನ್ಸರ್ ರೋಗಗಳಿಂದ ಬಳಲುತ್ತಿದ್ದಾರೆ. ಹೀಗಿರುವಾಗ, ಕೊರೊನಾ ಇಲ್ಲಿ ವ್ಯಾಪಿಸಿಬಿಟ್ಟರೆ, ಅದೆಷ್ಟು ಮಂದಿ ಬಲಿಯಾಗಬಹುದು.?
ಅನೇಕ ಮಂದಿ ಸಾವನ್ನಪ್ಪಿದ್ದರು.!
ಈ ಹಿಂದೆ ಪ್ಲೇಗ್, ಕಾಲರಾದಂತಹ ಸಾಂಕ್ರಾಮಿಕ ರೋಗ ಧಾರಾವಿಯಲ್ಲಿ ಕಾಣಿಸಿಕೊಂಡಿದ್ದಾಗಲೂ, ಸಾವಿರಾರು ಮಂದಿ ಜೀವ ಕಳೆದುಕೊಂಡಿದ್ದರು. ಈಗಲೂ ಧಾರಾವಿಯಲ್ಲೇ ಅದೇ ಭೀತಿ ಎದುರಾಗಿದೆ. ಕಡಿಮೆ ಜಾಗ, ಹೆಚ್ಚು ಜನಸಾಂದ್ರತೆ ಹೊಂದಿರುವ ಧಾರಾವಿಗೆ ಕ್ರೂರಿ ಕೊರೊನಾ ಕಾಲಿಟ್ಟಾಗಿದೆ. ಇನ್ನು ಅಲ್ಲಿನ ಜನರನ್ನ ಆ ದೇವರೇ ಕಾಪಾಡಬೇಕು.!