ದೇಶದಲ್ಲಿ 15ಕ್ಕೂ ಹೆಚ್ಚು ರಾಜಕೀಯ ನಾಯಕರು ಕೊರೊನಾ ವೈರಸ್ ಸೋಂಕಿಗೆ ಬಲಿ
ಬೆಂಗಳೂರು, ಸೆಪ್ಟೆಂಬರ್ 24: ಕೊರೊನಾ ವೈರಸ್ ಸೋಂಕು ಅಪಾಯಕಾರಿಯೇನಲ್ಲ, ಅದರಿಂದ ಗುಣಮುಖರಾಗಬಹುದು ಎಂದು ಸರ್ಕಾರ ಹಾಗೂ ಅಧಿಕಾರಿಗಳು ಹೇಳುತ್ತಿರುವ ನಡುವೆಯೇ ಕೇಂದ್ರ ಸಚಿವರೂ ಸೇರಿದಂತೆ ಅನೇಕ ಗಣ್ಯರು ಕೋವಿಡ್-19ಗೆ ಬಲಿಯಾಗಿದ್ದಾರೆ. ಪ್ರಭಾವಿ ಸ್ಥಾನದಲ್ಲಿರುವ, ಅತ್ಯುನ್ನತ ದರ್ಜೆಯ ವೈದ್ಯಕೀಯ ಸೌಲಭ್ಯಗಳನ್ನು ಪಡೆಯುವ ಅವಕಾಶವಿರುವ ರಾಜಕೀಯ ಮುಖಂಡರು ಕೂಡ ಕೊರೊನಾ ವೈರಸ್ನಿಂದ ಚೇತರಿಸಿಕೊಳ್ಳಲಿಲ್ಲ ಎನ್ನುವುದು ಆಘಾತಕಾರಿ ಸಂಗತಿ.
ಜಾಗತಿಕ ಪಿಡುಗು ಕೋವಿಡ್ 19ಅನ್ನು ನಿರ್ವಹಿಸಿದ ರೀತಿ, ಭಾರತೀಯರ ಆರೈಕೆಗೆ ತೆಗೆದುಕೊಂಡ ಕ್ರಮಗಳು ಹಾಗೂ ಈ ಸವಾಲಿನ ಸಂದರ್ಭದಲ್ಲಿ ಜಾಗತಿಕ ಸಮುದಾಯಕ್ಕೆ ನೀಡಿದ ನೆರವನ್ನು ಕಂಡು ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಡೀ ಜಗತ್ತು ಶ್ಲಾಘಿಸುತ್ತಿದೆ. ಅವರ ನಾಯಕತ್ವದಲ್ಲಿ ಪ್ರತಿ ಭಾರತೀಯರೂ ಸುರಕ್ಷಿತರಾದ ಭಾವನೆ ಹೊಂದಿದ್ದಾರೆ ಮತ್ತು ಅವರನ್ನು ನಂಬಿದ್ದಾರೆ ಎಂದು ಕೆಲವು ದಿನಗಳ ಹಿಂದೆ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದರು.
ಸ್ವಯಂಸೇವಕರಿಗೆ ಕೊರೊನಾ ಸೋಂಕು ತಗುಲಿಸಿ ಹೊಸ ಪ್ರಯೋಗ
ಆದರೆ ಈ ಸುರಕ್ಷತಾ ಭಾವನೆ ಜನರಲ್ಲಿ ವಾಸ್ತವವಾಗಿಯೂ ಇದೆಯೇ ಎಂಬ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಭಾರತದಲ್ಲಿ ವರದಿಯಾಗುತ್ತಿರುವ ಕೊರೊನಾ ವೈರಸ್ ಪ್ರಕರಣಗಳು ಇಡೀ ಜಗತ್ತಿಗೇ ಆತಂಕ ಮೂಡಿಸುವಂತಿದೆ. ಮುಖ್ಯವಾಗಿ ಉನ್ನತ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಈ ಮಾರಕ ಕಾಯಿಲೆಗೆ ಬಲಿಯಾಗಿದ್ದಾರೆ. ಮುಂದೆ ಓದಿ...
ಕೋವಿಡ್ಗೆ ಬಲಿಯಾದ ರಾಜಕೀಯ ನಾಯಕರು
ಮಾಜಿ ರಾಷ್ಟ್ರಪತಿ, ಕೇಂದ್ರ ಸಚಿವ, ನಾಲ್ಕು ಮಂದಿ ಸಂಸದರು ಹಾಗೂ ಆರು ಮಂದಿ ಶಾಸಕರು ಇದುವರೆಗೂ ಕೋವಿಡ್ಗೆ ಜೀವ ಕಳೆದುಕೊಂಡಿದ್ದಾರೆ. ಇದರ ಜತೆಗೆ ವಿವಿಧ ರಾಜ್ಯಗಳಲ್ಲಿ ವಿಧಾನ ಪರಿಷತ್ ಸದಸ್ಯರು, ಮಾಜಿ ಸಂಸದರು, ಮಾಜಿ ಶಾಸಕರು ಹಾಗೂ ರಾಜಕೀಯ ಪಕ್ಷಗಳಲ್ಲಿ ಪ್ರಮುಖ ಸ್ಥಾನದಲ್ಲಿದ್ದವರು ಕೂಡ ಸೋಂಕಿಗೆ ಬಲಿಯಾಗಿದ್ದಾರೆ.
ಅಶೋಕ್ ಗಸ್ತಿ, ಸುರೇಶ್ ಅಂಗಡಿ
ಇತ್ತೀಚೆಗಷ್ಟೇ ಕರ್ನಾಟಕದಿಂದ ರಾಜ್ಯಸಭೆಗೆ ಬಿಜೆಪಿಯಿಂದ ಆಯ್ಕೆಯಾಗಿದ್ದ ಅಶೋಕ್ ಗಸ್ತಿ ಕೆಲವು ದಿನಗಳ ಹಿಂದೆ ಕೊರೊನಾ ವೈರಸ್ಗೆ ಬಲಿಯಾಗಿದ್ದರು. ಈ ಆಘಾತದ ಮಧ್ಯೆಯೇ ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಕೋವಿಡ್ನಿಂದಾಗಿ ಮೃತಪಟ್ಟಿದ್ದಾರೆ. ಸುರೇಶ್ ಅಂಗಡಿ ದೇಶದ ಪ್ರತಿಷ್ಠಿತ ಆಸ್ಪತ್ರೆ ದೆಹಲಿಯ ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನುವುದು ಗಮನಿಸಬೇಕಾದ ಸಂಗತಿ.
ಫೋನ್ ಕಾಲ್ ಸ್ವೀಕರಿಸಲು, ಹಾಡು ಕೇಳಲು ಈ ಮಾಸ್ಕ್ ಸಾಕು!
ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ
ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಮೆದುಳಿನ ಶಸ್ತ್ರ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದಾಗ ಅವರಿಗೆ ಕೊರೊನಾ ಇರುವುದು ಪತ್ತೆಯಾಗಿತ್ತು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದರೂ ಅವರಲ್ಲಿ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿದ್ದರಿಂದ ಹಲವು ದಿನಗಳವರೆಗೆ ಕೋಮಾದಲ್ಲಿದ್ದು ನಿಧನರಾಗಿದ್ದರು.
ಇಬ್ಬರು ಲೋಕಸಭೆ ಸಂಸದರ ಸಾವು
ತಿರುಪತಿಯ ವೈಎಸ್ಆರ್ ಕಾಂಗ್ರೆಸ್ ಸಂಸದ ಬಲ್ಲಿ ದುರ್ಗಾ ಪ್ರಸಾದ್ ರಾವ್ (64) ಇತ್ತೀಚೆಗೆ ಚೆನ್ನೈನ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ನಿಂದ ಮೃತಪಟ್ಟಿದ್ದರು. ಇದಕ್ಕೂ ಮುನ್ನ ತಮಿಳುನಾಡಿನ ಕನ್ಯಾಕುಮಾರಿ ಕಾಂಗ್ರೆಸ್ ಸಂಸದ ಎಚ್ ವಸಂತಕುಮಾರ್ (70) ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.
60,000 ಸ್ವಯಂ ಸೇವಕರ ಮೇಲೆ ಅಂತಿಮ ಹಂತದ ಕೋವಿಡ್ ಲಸಿಕೆ ಪ್ರಯೋಗ
ಉತ್ತರ ಪ್ರದೇಶದಲ್ಲಿ ಇಬ್ಬರು ಸಚಿವರು ಕೊರೊನಾಗೆ ಬಲಿಯಾಗಿದ್ದರು. ಯೋಗಿ ಆದಿತ್ಯನಾಥ್ ಸಂಪುಟದ ಏಕೈಕ ಮಹಿಳಾ ಸಚಿವರಾಗಿದ್ದ ಕಮಲ್ ರಾಣಿ ವರುಣ್ ನಿಧನರಾಗಿದ್ದರೆ, ಮಾಜಿ ಕ್ರಿಕೆಟಿಗ ಮತ್ತು ಸಚಿವ ಚೇತನ್ ಚೌಹಾಣ್ ಕೊರೊನಾ ಸೋಂಕಿನಿಂದ ಅಗಲಿದ್ದರು.
ಕರ್ನಾಟಕದ ಮಾಜಿ ಶಾಸಕರು
ಭದ್ರಾವತಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್ನ ಅಪ್ಪಾಜಿ ಗೌಡ (67) ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸೆ. 2ರಂದು ಮೃತಪಟ್ಟಿದ್ದರು. ಮಾಜಿ ಶಾಸಕರಾಗಿದ್ದರೂ ಅವರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ನೀಡಿರಲಿಲ್ಲ. ಅವರನ್ನು ದಾಖಲಿಸಲು ಬೆಡ್ ಕೂಡ ಇರಲಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿತ್ತು. ಚಾಮರಾಜನಗರ ಜಿಲ್ಲೆಯ ಮೊದಲ ಬಿಜೆಪಿ ಶಾಸಕರೆಂಬ ಹೆಗ್ಗಳಿಕೆ ಹೊಂದಿದ್ದ ಮಾಜಿ ಶಾಸಕ ಸಿ. ಗುರುಸ್ವಾಮಿ (68) ಆಗಸ್ಟ್ 19ರಂದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಟಿಎಂಸಿಯ ಇಬ್ಬರು ಶಾಸಕರು
ಮಧ್ಯಪ್ರದೇಶದ ಬೈಯೊರಾದ ಕಾಂಗ್ರೆಸ್ ಶಾಸಕ ಗೋವರ್ಧನ್ ದಾಂಗಿ (54) ಸೆ. 15ರಂದು ಕೊರೊನಾಗೆ ಬಲಿಯಾಗಿದ್ದರು. ಪಶ್ಚಿಮ ಬಂಗಾಳದಲ್ಲಿ ಇಬ್ಬರು ಶಾಸಕರು ಕೋವಿಡ್ಗೆ ಜೀವ ಕಳೆದುಕೊಂಡಿದ್ದರು. ತೃಣಮೂಲ ಕಾಂಗ್ರೆಸ್ ಶಾಸಕರಾದ ಸಮರೇಶ್ ದಾಸ್ (76) ಹಾಗೂ ತಮೊನಷ್ ಘೋಷ್ (60) ಕೊರೊನಾದಿಂದ ಮೃತಪಟ್ಟಿದ್ದಾರೆ.
Recommended Video
ಮಾಜಿ ಸಚಿವರು, ಶಾಸಕರು
ತಮಿಳುನಾಡಿನಲ್ಲಿ ಚೆಪಾಕ್-ತಿರುವಲ್ಲಿಕೆನಿ ಕ್ಷೇತ್ರದ ಶಾಸಕ ಜೆ. ಅನ್ಬಳಗನ್ (61) ಜೂನ್ 3ರಂದು ಮೃತಪಟ್ಟಿದ್ದರು. ಕೇಂದ್ರದ ಮಾಜಿ ಸಚಿವ, ಲೆಹ್ನ ಕಾಂಗ್ರೆಸ್ ಹಿರಿಯ ನಾಯಕ ಪಿ. ನಮ್ಗ್ಯಾಲ್ (83), ಮಹಾರಾಷ್ಟ್ರದ ಮಾಜಿ ಸಂಸದ ಹರಿಬಾವು ಜಾವಳೆ, ಪುಣೆಯ ಮಾಜಿ ಶಾಸಕ ಸುಧಾರಕ್ ಪರಿಚಾರಕ್, ಪಶ್ಚಿಮ ಬಂಗಾಳದ ಮಾಜಿ ಸಚಿವ ಶ್ಯಾಮಲ್ ಚಕ್ರವರ್ತಿ ಮೃತಪಟ್ಟಿದ್ದರು.