ಕೊರೊನಾ ವಿರುದ್ದ ಸದ್ಯ ಮೇಲುಗೈ ಸಾಧಿಸಿದ ಕಾರ್ಕಳ: ಶಾಸಕ ಸುನಿಲ್ ಕುಮಾರ್ ಸಂದರ್ಶನ
ರಾಜ್ಯದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು, ರಾಜ್ಯದಲ್ಲಿ ಮಾದರಿ ವಿಧಾನಸಭಾ ಕ್ಷೇತ್ರವೆಂದೇ ಹೆಸರು ಪಡೆದಿದೆ. ಸದ್ಯ, ಇಡೀ ವಿಶ್ವ ಎದುರಿಸುತ್ತಿರುವ ಕೊರೊನಾ ಸಮಸ್ಯೆ ಉಡುಪಿ ಜಿಲ್ಲೆಯನ್ನೂ ಬಿಟ್ಟಿಲ್ಲ.
Recommended Video
ಜಿಲ್ಲೆಯಲ್ಲಿ ಒಟ್ಟು ಮೂರು ಪಾಸಿಟೀವ್ ಪ್ರಕರಣಗಳು ದಾಖಲಾಗಿದ್ದವು. ಜಿಲ್ಲಾಡಳಿತದ ದಿಟ್ಟ ಹೆಜ್ಜೆ, ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸುತ್ತಿರುವ ಜಿಲ್ಲೆಯ ಶಾಸಕರು, ಸಾರ್ವಜನಿಕರ ಸಹಕಾರದೊಂದಿಗೆ, ಉಡುಪಿ ಜಿಲ್ಲೆಯಲ್ಲಿ ದಾಖಲಾಗಿದ್ದ ಮೂರೂ ಪ್ರಕರಣಗಳು ನೆಗೆಟೀವ್ ಆಗಿದ್ದರಿಂದ, ಮೂವರೂ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಉಡುಪಿ ಜಿಲ್ಲಾಡಳಿತಕ್ಕೆ ಕೇಂದ್ರದಿಂದ ಪ್ರಶಂಸೆ: ಡಿಸಿ ಜಗದೀಶ್
ಮೂರು ಬಾರಿ, ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರೂ, ರಾಜ್ಯ ಬಿಜೆಪಿಯ ಸಚೇತಕರೂ ಆಗಿರುವ ವಿ.ಸುನಿಲ್ ಕುಮಾರ್ ಅವರ ಕಾರ್ಯವೈಖರಿಯ ಬಗ್ಗೆ ಉತ್ತಮ ಮಾತುಗಳು ಕೇಳಿಬರುತ್ತಿವೆ. ಕೊರೊನಾ ಮಹಾಮಾರಿ ಆವರಿಸಿಕೊಂಡಿರುವ ಈ ಸಮಯದಲ್ಲಿ, ಕ್ಷೇತ್ರದ ಶಾಸಕರ ಜೊತೆಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಂತಿದೆ:
ಕೊರೊನಾ: ಬಿಎಸ್ವೈ ಕೆಲಸ ಎಕ್ಸಲೆಂಟ್: ತಜ್ಞರ ಸಮಿತಿಯ ಡಾ.ಮಂಜುನಾಥ್ ವಿಶೇಷ ಸಂದರ್ಶನ
ಪ್ರ: ಲಾಕ್ ಡೌನ್ ವೇಳೆ, ನಾವೆಲ್ಲ ನಮ್ಮ ಜೀವಕ್ಕೋಸ್ಕರ, ಮನೆಯೊಳಗೆ ಹೋಗುತ್ತೇವೆ. ಆದರೆ, ನೀವು ಮತ್ತು ಅಧಿಕಾರಿಗಳು ಹೇಗೆ ಪರಿಸ್ಥಿತಿಯನ್ನು ನಿಭಾಯಿಸಿದ್ರಿ?
ಸುನಿಲ್ ಕುಮಾರ್: ತಾಲೂಕಿಗೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕ ಮತ್ತು ಸರಪಳಿಯನ್ನು ನಿಲ್ಲಿಸಬೇಕು ಎನ್ನುವ ಹಿನ್ನಲೆಯನ್ನು ಮುಂದಿಟ್ಟುಕೊಂಡು ಕೆಲಸ ಮಾಡಿಕೊಂಡು ಬಂದೆವು.
ಅಸೆಂಬ್ಲಿ ಮುಗಿದ ಕೂಡಲೇ ತಡರಾತ್ರಿ ಕಾರ್ಕಳಕ್ಕೆ ಬಂದು, 21ದಿನಗಳ ಕಾಲ ಕಾರ್ಕಳದಲ್ಲಿ ತೆಗೆದುಕೊಳ್ಲಬೇಕಾದ ಮುಂಜಾಗೃತಾ ಕ್ರಮದ ಬಗ್ಗೆ ಚರ್ಚಿಸಲಾಯಿತು. ಈಗ ಯಶಸ್ಸಿನ ಹಾದಿಯಲ್ಲಿ ಹೆಜ್ಜೆಯನ್ನು ಇಡುತ್ತಿದ್ದೇವೆ.
ಕೋವಿಡ್19
ಪ್ರ: ಒಂದು ಕಾಲ್ ಸೆಂಟರ್ ಅನ್ನು ಇಲ್ಲಿ ಪ್ರತ್ಯೇಕವಾಗಿ ಸ್ಥಾಪನೆಯಾಯಿತು. ಈಗ ಯಾವುದೋ ಒಂದು ಮನೆಯಲ್ಲಿ, ಕೋವಿಡ್19ನ ಲಕ್ಷಣಗಳು ಏನಾದರೂ ಕಂಡು ಬಂದಲ್ಲಿ, ಆ ಮನೆಯವರು ಏನು ಮಾಡಬೇಕು? ವೈದ್ಯಕೀಯ ವ್ಯವಸ್ಥೆ ಯಾವ ರೀತಿಯಲ್ಲಿರುತ್ತದೆ?
ಸುನಿಲ್ ಕುಮಾರ್: ಕ್ಷೇತ್ರದ ಹಿರಿಯ ನಾಗರೀಕರಿಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕಾಗಿ ಕಾಲ್ ಸೆಂಟರ್ ಓಪನ್ ಮಾಡಿದ್ದೇವೆ. ಎರಡು ದೂರವಾಣಿ ಸಂಖ್ಯೆಯನ್ನು (96064-85854, 96064-75854) ಇಡೀ ತಾಲೂಕಿನ ಜನತೆಗೆ ನಾವು ಕೊಟ್ಟಿದ್ದೇವೆ.
ಯಾವುದೇ ಸಂದರ್ಭದಲ್ಲಿ ಸಾರ್ವಜನಿಕರು ಆ ದೂರವಾಣಿಯನ್ನು ಸಂಪರ್ಕ ಮಾಡಿದರೆ, ಉಡುಪಿಯಿಂದ ಅಥವಾ ಮಂಗಳೂರಿನಿಂದ ಮೆಡಿಸಿನ್ ತರಿಸಿಕೊಳ್ಳುವ ಅವಶ್ಯಕತೆಯಿದ್ದಲ್ಲಿ ಈ ಕಾಲ್ ಸೆಂಟರ್ ಅನ್ನು ಬಳಸಿಕೊಳ್ಳಬಹುದಾಗಿದೆ. ಜೊತೆಗೆ, ಈ ಸಂದರ್ಭದಲ್ಲಿ ಯಾವುದೇ ಗೊಂದಲ, ಅನುಮಾನವಿದ್ದರೂ, ಈ ಕಾಲ್ ಸೆಂಟರ್ ಗೆ ಫೋನ್ ಮಾಡಬಹುದಾಗಿದೆ.
ಬಡತನದ ರೇಖೆಗಿಂತ ಕೆಳಗಿನವರು
ಪ್ರ: 21 ದಿನಗಳ ಲಾಕ್ ಡೌನ್ ಮುಂದುವರಿದಿದೆ. ಈ ನಿಟ್ಟಿನಲ್ಲಿ ಸಮಾಜದಲ್ಲಿರುವ ಕೆಳ ಮಟ್ಟದ ಬಡತನದ ರೇಖೆಗಿಂತ ಕೆಳಗಿನವರು, ದಿನಗೂಲಿ ನೌಕರರ ಕಷ್ಟಗಳಿಗೆ ಹೇಗೆ ಸಮಾಧಾನವನ್ನು ನೀಡಿದ್ದೀರಿ?
ಸುನಿಲ್ ಕುಮಾರ್: ಮೋದಿಯವರ ನೇತೃತ್ವದಲ್ಲಿ ಬಡಜನರಿಗೆ ಏನೇನು ನೆರವನ್ನು ಕೊಡಲು ಸಾಧ್ಯವಿದೆಯೋ ಅದನ್ನೆಲ್ಲಾ ಕೊಡಲಾಗಿದೆ. 'ನೆರವು' ಎನ್ನುವ ಯೋಜನೆಯನ್ನು ಘೋಷಣೆ ಮಾಡಿ, ಪಡಿತರ ಯೋಜನೆಯಲ್ಲಿ ಸುಮಾರು ಐದು ಸಾವಿರ ಕುಟುಂಬ ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದೆ.
ಏಪ್ರಿಲ್ ಒಂದರಿಂದ ಈ ಕಾರ್ಯಕ್ರಮ ಆರಂಭವಾಗಿದೆ. ಇದರ ಬೇಡಿಕೆ ಹೆಚ್ಚಾಗಿರುವುದರಿಂದ, ಇದನ್ನು ಸ್ಥಳೀಯ ದಾನಿಗಳ ಸಹಕಾರದೊಂದಿಗೆ ಇನ್ನೂ ವಿಸ್ತರಿಸಲಾಗಿದೆ. ಲಾಕ್ ಡೌನ್ ಸಮಯದಲ್ಲಿ ಊಟ ಸಿಗುವುದಿಲ್ಲ ಎನ್ನುವುದು ಯಾರ ಮನಸ್ಸಿಗೂ ಬರಬಾರದು ಎನ್ನುವುದು ನಮ್ಮ ಸ್ಪಷ್ಟ ಉದ್ದೇಶ.
ಯಾವ ರೀತಿ ಅನುಷ್ಠಾನಕ್ಕೆ ಬಂತು
ಪ್ರ: ಕಾರ್ಕಳದಲ್ಲಿ ನಿರ್ಗತಿಕರಿಗೂ ಕೂಡ ಒಂದು ಕ್ಯಾಂಪ್ ತೆರೆಯಲಾಗಿದೆ, ಇದು ಯಾವ ರೀತಿ ಅನುಷ್ಠಾನಕ್ಕೆ ಬಂತು? ಹೇಗೆ ಅಷ್ಟು ಜನರನ್ನು ಒಂದೇ ಕಡೆ ಸೇರಿಸಲು ಸಾಧ್ಯವಾಯಿತು? ಸಾಮಾಜಿಕ ಅಂತರವನ್ನು ಯಾವ ರೀತಿಯಲ್ಲಿ ಕಾಪಾಡಿಕೊಂಡು ಬಂದಿರುತ್ತೀರಿ?
ಸುನಿಲ್ ಕುಮಾರ್: ಉತ್ತರ ಕರ್ನಾಟಕ, ಉತ್ತರ ಭಾರತದಿಂದ ಕೆಲಸಕ್ಕಾಗಿ ಬಂದವರಿಗಾಗಿ ನಿರಾಶ್ರಿತ ಶಿಬಿರವನ್ನು ತೆಗೆಯಲಾಗಿದೆ. ಒಂದು ಹೊತ್ತಿನ ಊಟಕ್ಕೂ ಜನರಿಗೆ ತೊಂದರೆ ಬರಬಾರದು ಎನ್ನುವುದಕ್ಕಾಗಿ ಇದನ್ನು ಸ್ಥಾಪಿಸಲಾಗಿದೆ.
ಮುಂಜಾಗೃತಾ ಕ್ರಮ
ಪ್ರ: ಅತೀ ಮುಖ್ಯವಾಗಿ ನಾವು ಸೋಷಿಯಲ್ ಮಿಡಿಯಾದಲ್ಲಿ ನೊಡುತ್ತಿದ್ದೇವೆ, ಪೋಲಿಸ್ ಹಾಗೂ ಜನರ ಗಲಾಟೆ, ಲಾಠಿಚಾರ್ಚ್, ವಾಹನ ಸೀಜ್ ಮುಂತಾದ ಘಟನೆಗಳು, ಕಾರ್ಕಳದಲ್ಲಿ ಅತೀ ಕಡಿಮೆ ವರದಿಯಾಗಿದೆ. ಇದು ಹೇಗೆ ಸಾಧ್ಯವಾಯಿತು?
ಸುನಿಲ್ ಕುಮಾರ್: ಪಡಿತರ ಸಾಮಗ್ರಿಗಳನ್ನು ತೆಗೆದುಕೊಳ್ಳಲು ಸರಕಾರ ಬೆಳಗ್ಗೆಯಿಂದ ಸಂಜೆಯವರಿಗಿನ ಸಮಯವನ್ನು ಕೊಟ್ಟಿತ್ತು. ಆದರೆ, ಮುಂಜಾಗೃತಾ ಕ್ರಮವನ್ನು ತೆಗೆದುಕೊಳ್ಳಲು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಗಡಿಯನ್ನು ಬಂದ್ ಮಾಡಲಾಯಿತು. ನಮ್ಮ ತಾಲೂಕಿನಿಂದ ಯಾರೂ ಹೋಗಬಾರದು, ಯಾರೂ ಬರಬಾರದು ಎನ್ನುವ ನಿರ್ಧಾರಕ್ಕೆ ಬಂದೆವು.
ಮೊದಲೆರಡು ದಿನ ಜನಗಳಿಗೆ ತೊಂದರೆಯಾದರೂ, ನಮ್ಮ ತಾಲೂಕಿನಲ್ಲಿ ಜನಸ್ನೇಹಿ ಆಡಳಿತ ಇರುವುದರಿಂದ, ಪೊಲೀಸರಿಗೆ ಜನರೂ ಹೆಚ್ಚಿನ ತೊಂದರೆಯನ್ನು, ಪೊಲೀಸರೂ ಸಾರ್ವಜನಿಕರಿಗೆ ತೊಂದರೆಯನ್ನು ಕೊಟ್ಟಿಲ್ಲ.
ತಾಲೂಕಿನ ಜನತೆಗೆ ನಿಮ್ಮ ಸಂದೇಶ
ಪ್ರ: ಮುಂದಿನ ದಿನಗಳಲ್ಲಿ ಜನರ ಜವಾಬ್ದಾರಿಗಳ ಬಗ್ಗೆ ಕ್ಷೇತ್ರದ ಜನತೆಗೆ ನಿಮ್ಮ ಸಂದೇಶ?
ಸುನಿಲ್ ಕುಮಾರ್: ಯಾರೂ ತಮ್ಮ ಜವಾಬ್ದಾರಿಯನ್ನು ಮರೆಯಬಾರದು. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಜಿಲ್ಲಾಡಳಿತ, ನಾವೆಲ್ಲಾ ಈ ರೀತಿಯ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವುದು ಜನರ ಆರೋಗ್ಯಕ್ಕಾಗಿ. ಈ ನಿರ್ಣಾಯಕ ಕಾಲಘಟ್ಟದಲ್ಲಿ ನಾವೆಲ್ಲಾ ಒಗ್ಗಟ್ಟಾಗಿ, ಕೊರೊನಾ ವಿರುದ್ದ ಜಯ ಸಾಧಿಸಬೇಕಿದೆ.