ಕರ್ಕರೆ ಆಯ್ತು, ಈಗ ಗೋಡ್ಸೆ! ಪ್ರಗ್ಯಾ ಮಾತನಾಡಿದ್ದೆಲ್ಲ ವಿವಾದವೇ!
ಕೆಲವರು ಇರೋದೇ ಹಾಗೆ. ಮಾತನಾಡಿದರೆ ಅದು ವಿವಾದವಾಗಲೇ ಬೇಕು! ವಿವಾದವಾಗುತ್ತದೆ ಎಂಬ ಅರಿವಿಲ್ಲದೆ ಮಾತನಾಡುತ್ತಾರಾ, ಅಥವಾ ವಿವಾದ ಮಾಡುವುದಕ್ಕೆಂದೇ ಉದ್ದೇಶಪೂರ್ವಕವಾಗಿ ಮಾತನಾಡುತ್ತಾರೋ ದೇವರೇ ಬಲ್ಲ! ಹೀಗೆ ವಿವಾದಾತ್ಮಕ ಮಾತುಗಳಿಂದಲೇ ಸದಾ ಸುದ್ದಿಯಲ್ಲಿರುವವರಲ್ಲಿ ಅಗ್ರಪಂಕ್ತಿಯಲ್ಲಿರುವ ಹೆಸರು ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್.
ಪ್ರಗ್ಯಾ ಇದೀಗ ಮತ್ತೆ ಸುದ್ದಿಗೆ ಬಂದಿದ್ದು, ಲೋಕಸಭೆಯಲ್ಲಿ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎನ್ನುವ ಮೂಲಕ. ಸಂಸತ್ತಿನ ಹೊರಗಿರುವ ಗಾಂಧಿ ಪ್ರತಿಮೆಗೆ ತಲೆಬಾಗಿ ನಮಸ್ಕರಿಸಿ ಬರುತ್ತಿದ್ದ ಎಷ್ಟೋ ಬಿಜೆಪಿ ಮುಖಂಡರಿಗೂ ಪ್ರಗ್ಯಾ ಹೇಳಿಕೆ ಇರಿಸುಮುರಿಸುಂಟು ಮಾಡಿರಲಿಕ್ಕೆ ಸಾಕು.
ಮಹಾತ್ಮ ಗಾಂಧಿ ಹಂತಕನೇ ದೇಶಭಕ್ತ: ಬಿಜೆಪಿ ಸಂಸದರೇ ಏನು ಇದೆಲ್ಲ?
ಮಧ್ಯಪ್ರದೇಶದ ಭೋಪಾಲ್ ಕ್ಷೇತ್ರದ ಬಿಜೆಪಿ ಸಂಸದೆ ಪ್ರಗ್ಯಾ ಬುಧವಾರ ಸಂಸತ್ತಿನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ಹಂತಕ ನಾಥುರಾಮ್ ಗೋಡ್ಸೆಯನ್ನು ದೇಶಭಕ್ತ ಎಂದರು. ಈ ಘಟನೆಯ ನಂತರ ಪ್ರಗ್ಯಾ ಅವರು ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ನೀಡಿದ ಹಲವು ವಿವಾದಾತ್ಮಕ ಹೇಳಿಕೆಗಳು ಗಮನ ಸೆಳೆದವು. ಅವುಗಳಲ್ಲಿ ನೆನಪಿಸಿಕೊಳ್ಳುವಂಥ ಕೆಲವು ಇಲ್ಲಿವೆ.
ಗೋಡ್ಸೆ ದೇಶಭಕ್ತ
"ನಾಥುರಾಮ್ ಗೋಡ್ಸೆ ಮಹಾತ್ಮ ಗಾಂಧಿಯನ್ನು ಕೊಂದಿದ್ದೇಕೆ" ಎಂದು ಡಿಎಂಕೆ ಸದಸ್ಯ ಎ ರಾಜ ಅವರು ಬುಧವಾರ ಲೋಕಸಭೆಯಲ್ಲಿ ಪ್ರಶ್ನೆ ಎತ್ತಿದರು. ಈ ವೇಳೆ ಎದ್ದು ನಿಂತ ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ, "ಗೋಡ್ಸೆಯೊಬ್ಬ ದೇಶಭಕ್ತರಾಗಿದ್ದು, ಅವರ ಬಗ್ಗೆ ಹೀಗೆಲ್ಲ ಮಾತನಾಡಬಾರದು ಎಂದರು. ಅಲ್ಲದೇ ಹತ್ಯೆ ವಿಚಾರದಲ್ಲಿ ದೇಶಭಕ್ತನನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಾರದು" ಎಂದಿದ್ದರು. ಕಳೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಗೋಡ್ಸೆಯನ್ನು ದೇಶಭಕ್ತ ಎನ್ನುವ ಮೂಲಕ ಪ್ರಗ್ಯಾ ವಿವಾದ ಸೃಷ್ಟಿಸಿದ್ದರು. 'ಬಾಪು ಅವರಿಗೆ ಅವಮಾನ ಮಾಡಿದ ಪ್ರಗ್ಯಾ ನಡೆಯನ್ನು ತಾವು ಎಂದಿಗೂ ಕ್ಷಮಿಸುವುದಿಲ್ಲ' ಎಂದು ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಹೇಳಿದ್ದರು. ಆದರೆ ಅವರನ್ನು ಲೋಕಸಭೆ ಚುನಾವಣೆಯಿಂದ ಹಿಂದೆಸರಿಯುವಂತೆ ಬಿಜೆಪಿ ಮಾಡಲಿಲ್ಲ ಎಂಬುದು ಬೇರೆ ಮಾತು!
ತಮ್ಮ ಶಾಪದಿಂದಲೇ ಕರ್ಕರೆ ಸಾವು
"ನನಗೆ ಜೈಲಿನಲ್ಲಿ ಹಿಂಸೆ ನೀಡಿದ್ದಕ್ಕೆ ನಾನು ಹೇಮಂತ್ ಕರ್ಕರೆ ಅವರಿಗೆ ಶಾಪ ನೀಡಿದ್ದೇ ಅವರು ಮುಂಬೈ ಸ್ಫೋಟದ ಸಮಯದಲ್ಲಿ ಸಾವಿಗೀಡಾಗಲು ಕಾರಣ" ಎಂಬ ಹೇಳಿಕೆಯನ್ನು ಸಹ ಕಳೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಪ್ರಗ್ಯಾ ನೀಡಿದ್ದರು. ಮುಂಬೈ ಸ್ಫೋಟದ ಸಂದರ್ಭದಲ್ಲಿ ಉಗ್ರರನ್ನು ಹತ್ತಿಕ್ಕುವ ಸಂದರ್ಭದಲ್ಲಿ ಹೇಮಂತ್ ಕರ್ಕರೆ ವೀರಮರಣವನ್ನಪ್ಪಿದ್ದರು. ಉಗ್ರರನ್ನು ಹತ್ತಿಕ್ಕುವ ಸಂದರ್ಭದಲ್ಲಿ ಹುತಾತ್ಮರಾದ ಕರ್ಕರೆ ಅವರ ಸಾವನ್ನು ಸಂಭ್ರಮಿಸುವ ರೀತಿಯಲ್ಲಿ ಮಾತನಾಡಿದ ಪ್ರಗ್ಯಾ ಅವರು ಸಾಕಷ್ಟು ಜನರ ಕೆಂಗಣ್ಣಿಗೆ ಗುರಿಯಾಗಿದ್ದರು.
'ಹೇಮಂತ್ ಕರ್ಕರೆ ಸತ್ತಿದ್ದು ನನ್ನ ಶಾಪದಿಂದ': ವಿವಾದದ ಕಿಡಿ ಹಚ್ಚಿದ ಸಾಧ್ವಿ ಪ್ರಗ್ಯಾ
ಬಾಬ್ರಿ ಮಸೀದಿ ಧ್ವಂಸ ನನ್ನ ಹೆಮ್ಮೆ!
"ಬಾಬ್ರಿ ಮಸೀದಿ ಧ್ವಂಸ ಕಾರ್ಯದಲ್ಲಿ ನಾನು ಪಾಲ್ಗೊಂಡಿದ್ದೆ, ಗುಮ್ಮಟದ ಮೇಲೆ ಹತ್ತಿ ಮಸೀದಿಯನ್ನು ಧ್ವಂಸ ಮಾಡುವ ಕಾರ್ಯದಲ್ಲಿ ನಾನು ನಿರತನಾಗಿದ್ದೆ, ಬಾಬ್ರಿ ಮಸೀದಿ ಧ್ವಂಸ ಮಾಡುವ ಕಾರ್ಯದಲ್ಲಿ ಪಾಲ್ಗೊಂಡಿದ್ದಕ್ಕೆ ನನಗೆ ಹೆಮ್ಮೆ ಇದೆ" ಎಂಬ ಹೇಳಿಕೆಯನ್ನು ಪ್ರಗ್ಯಾ ನೀಡಿದ್ದರು.
ಸಂಸದಳಾಗಿರೋದು ಟಾಯ್ಲೆಟ್ ಕ್ಲೀನ್ ಮಾಡೋಕಲ್ಲ!
"ನಾವು ಸಂಸದರಾಗಿ ಆಯ್ಕೆಯಾಗಿರುವುದು ಚರಂಡಿ ಮತ್ತು ಟಾಯ್ಲೆಟ್ ಗಳನ್ನು ಕ್ಲೀನ್ ಮಾಡುವುದಕ್ಕಲ್ಲ. ಅರ್ಥವಾಯಿತಾ? ನಾನು ಆಯ್ಕೆಯಾಗಿರುವುದು ಯಾವ ಕೆಲಸ ಮಾಡುವುದಕ್ಕೆ ಎಂಬುದು ನನಗೆ ಗೊತ್ತು, ನಾನು ಅದನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ" ಎಂದು ತಾವು ಸಂಸದರಾದ ನಂತರ ಭಾಗವಿಸಿದ್ದ ಸಭೆಯೊಂದರಲ್ಲಿ ಪ್ರಗ್ಯಾ ಪ್ರಶ್ನಿಸಿದ್ದರು.
ಬಾಪುಗೆ ಅವಮಾನ ಮಾಡಿದ ಪ್ರಗ್ಯಾಳನ್ನು ಕ್ಷಮಿಸಲಾರೆ: ಮೋದಿ
ದಿಗ್ವಿಜಯ್ ಸಿಂಗ್ ಭಯೋತ್ಪಾದಕ!
ಕಾಂಗ್ರೆಸ್ ನಾಯಕ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರನ್ನು 'ಭಯೋತ್ಪಾದಕ' ಎಂದು ಟೀಕಿಸುವ ಮೂಲಕ ಲೋಕಸಭೆ ಚುನಾವಣೆಯ ಸಮಯದಲ್ಲಿ ಪ್ರಗ್ಯಾ ಚುನಾವಣಾ ಆಯೋಗದಿಂದ ನೋಟಿಸ್ ಪಡೆದಿದ್ದರು. ಭೋಪಾಲ್ ಕ್ಷೇತ್ರದಿಂದ ದಿಗ್ವಿಜಯ್ ಸಿಂಗ್ ಅವರ ವಿರುದ್ಧವೇ ಅವರು ಸ್ಪರ್ಧಿಸಿ ಗೆಲುವು ಸಾಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.