ಗೋವಾದಲ್ಲಿ ಕೈ ತಲ್ಲಣ, ಮೇಘಾಲಯದಲ್ಲಿ ಗರಿಷ್ಠದಿಂದ ಶೂನ್ಯ, ಇಲ್ಲಿದೆ ಕಾಂಗ್ರೆಸ್ ಸಂಕಷ್ಟ ಪಟ್ಟಿ
ಪಣಜಿ, ಜುಲೈ 11: ಗೋವಾದಲ್ಲಿ ಬಿಜೆಪಿ ತನ್ನ ನೇತೃತ್ವದ ಮೈತ್ರಿಕೂಟ ಸರಕಾರವನ್ನು ಇನ್ನಷ್ಟು ಭದ್ರ ಮಾಡಿಕೊಳ್ಳಲು ಕಾರ್ಯಾಚರಣೆ ನಡೆಸುತ್ತಿರುವಂತೆ ತೋರುತ್ತಿದೆ. ವಿಪಕ್ಷದಲ್ಲಿರುವ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯ ಎದ್ದಿದ್ದು, 5 ಶಾಸಕರು ನಾಪತ್ತೆಯಾಗಿದ್ದಾರೆ. ಐದು ಶಾಸಕರನ್ನು ಕಾಂಗ್ರೆಸ್ ರಹಸ್ಯ ಸ್ಥಳದಲ್ಲಿ ಇರಿಸಿಕೊಂಡು ರಕ್ಷಿಸುತ್ತಿದೆ ಎಂಬ ಸುದ್ದಿ ಇದೆ.
ಗೋವಾದಲ್ಲಿ ಕಾಂಗ್ರೆಸ್ ಪಕ್ಷದ 11 ಶಾಸಕರಿದ್ದಾರೆ. ಬಂಡಾಯ ಎದ್ದಿರುವ ಬಣದಲ್ಲಿ ಐವರಿದ್ದಾರೆ. ಕನಿಷ್ಠ ಎಂಟು ಮಂದಿಯ ಗುಂಪನ್ನು ರಚಿಸುವ ಪ್ರಯತ್ನ ವಿಫಲವಾಗಿದೆ. ಪಕ್ಷಾಂತರ ನಿಷೇಧ ಕಾಯ್ದೆಗೆ ನಿಲುಕದಂತೆ ಪಕ್ಷದಿಂದ ಹೋಳಾಗಿ ಹೊಸ ಬಣ ರಚಿಸಬೇಕೆಂದರೆ ಎಂಟು ಶಾಸಕರ ಅಗತ್ಯತೆ ಇತ್ತು. ಆದರೆ, ಅದು ಸಾಧ್ಯವಾಗಲಿಲ್ಲ.
ಗೋವಾ ಕಾಂಗ್ರೆಸ್ ಬಿಕ್ಕಟ್ಟು; ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆರೋಪ
ಕಾಂಗ್ರೆಸ್ನ ಅದೃಷ್ಟಕ್ಕೆ ಪಕ್ಷ ಹೋಳಾಗುವುದು ತಪ್ಪಿದೆ. ಬೀಸೋ ದೊಣ್ಣೆಯಿಂದ ಕಾಂಗ್ರೆಸ್ ತಪ್ಪಿಸಿಕೊಂಡಂತಾಗಿದೆ. ಐವರು ಶಾಸಕರು ಮಾತ್ರ ಈಗ ಕಾಂಗ್ರೆಸ್ ಸುಪರ್ದಿಯಲ್ಲಿದ್ದಾರೆ. ಇನ್ನೊಬ್ಬ ಶಾಸಕ ತಾನು ಬಂಡಾಯ ಬಣದ ಜೊತೆ ಇಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ.
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗೋವಾ ಕಾಂಗ್ರೆಸ್ ಉಸ್ತುವಾರಿ. ಕಾಂಗ್ರೆಸ್ ಬಿಕ್ಕಟ್ಟು ಶಮನಕ್ಕೆ ಕಳುಹಿಸಲಾಗಿದೆ. ಅಲ್ಲಿ ದಿನೇಶ್ ಗುಂಡೂರಾವ್ ನಡೆಸಿದ ಸಭೆಯಲ್ಲಿ ಹಾಜರಾಗಿದ್ದುದು ಕೇವಲ ನಾಲ್ವರು ಶಾಸಕರು ಮಾತ್ರವಂತೆ.
ಬಂಡಾಯ ಬಣದಲ್ಲಿರುವವರು ಯಾರು?
ಗೋವಾ ವಿಧಾನಸಭೆಯಲ್ಲಿ ಒಟ್ಟು ಶಾಸಕರ ಸಂಖ್ಯೆ 40 ಇದೆ. ಫೆಬ್ರವರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನ ಗೆದ್ದಿತ್ತು. ಬಹುಮತಕ್ಕೆ ಕೇವಲ ಒಂದು ಸ್ಥಾನದ ಕೊರತೆ ಬಿದ್ದಿತು. ಎಂಜಿಪಿಯ 3 ಶಾಸಕರು ಮತ್ತು ಮೂವರು ಪಕ್ಷೇತರರ ಬೆಂಬಲದೊಂದಿಗೆ ಬಿಜೆಪಿ ಸರಕಾರ ರಚಿಸಿದೆ.
ಇತ್ತ ಕಾಂಗ್ರೆಸ್ ಪಕ್ಷ 11 ಸ್ಥಾನಗಳನ್ನು ಹೊಂದಿದೆ. ಈಗ ಮೈಕೇಲ್ ಲೋಬೋ, ದಿಗಂಬರ್ ಕಾಮತ್, ಕೇದಾರ್ ನಾಯ್ಕ್, ರಾಜೇಶ್ ಫಲದೇಸಾಯಿ, ದೇಲಿಯಾಲಾ ಲೋಬೋ ಅವರು ಬಂಡಾಯ ಎದ್ದಿರುವ ಶಾಸಕರಾಗಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಒಡೆದು ಬಿಜೆಪಿ ಜೊತೆ ಸೇರುವ ಸಂಚು ನಡೆದಿದೆ. ಮೈಕೇಲ್ ಲೋಬೋ ಮತ್ತು ದಿಗಂಬರ್ ಕಾಮತ್ ಈ ಸಂಚಿನ ಹಿಂದಿದ್ದಾರೆ ಎಂದು ದಿನೇಶ್ ಗುಂಡೂರಾವ್ ಆರೋಪಿಸುತ್ತಾರೆ. ಮೈಕೇಲ್ ಲೋಬೊ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಹೌದು. ಈಗ ಕಾಂಗ್ರೆಸ್ ಶಾಸಕರ ಸಭೆ ಕರೆಯಲಾಗಿದ್ದು ಹೊಸ ಸಿಎಲ್ಪಿ ನಾಯಕರನ್ನು ಆಯ್ಕೆ ಮಾಡುವ ನಿರೀಕ್ಷೆ ಇದೆ.
ಇದೇ ವೇಳೆ, ಈಗ ಕಾಂಗ್ರೆಸ್ ಪಕ್ಷವನ್ನು ಒಡೆಯಲು ಬಂಡಾಯ ಬಣಕ್ಕೆ ಇನ್ನೂ 3 ಶಾಸಕರ ಅಗತ್ಯವಿದೆ. ಹೀಗಾಗಿ, ಉಳಿದ ಆರು ಕಾಂಗ್ರೆಸ್ ಶಾಸಕರನ್ನು ಬಂಡಾಯ ಬಣಕ್ಕೆ ಸೆಳೆದುಕೊಳ್ಳುವ ಪ್ರಯತ್ನ ನಡೆಯಬಹುದು ಎಂದು ಗ್ರಹಿಸಿ ಶಾಸಕರನ್ನು ರಹಸ್ಯ ಸ್ಥಳಕ್ಕೆ ಕರೆದೊಯ್ದು ಇರಿಸಲಾಗಿದೆ.
ಆದರೆ, ಈ ಹೊಸ ರಾಜಕೀಯ ಡ್ರಾಮಾ ಎಲ್ಲಿಯವರೆಗೆ ಮುಂದುವರಿಯುತ್ತದೆ ಎಂಬುದು ಸದ್ಯದ ಕುತೂಹಲ. ಇನ್ನು, ಗೋವಾ ಜೊತೆಗೆ ಇತ್ತೀಚೆಗೆ ಮಹಾರಾಷ್ಟ್ರ ಸೇರಿ ಕೆಲ ರಾಜ್ಯಗಳಲ್ಲೂ ರಾಜಕೀಯ ಬಿಕ್ಕಟ್ಟು ಮತ್ತು ಹೈಡ್ರಾಮಾ ನಡೆದಿರುವುದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಬಹುದು.
ಒಪಿಎಸ್ vs ಇಪಿಎಸ್; ಅಣ್ಣಾ ದ್ರಾವಿಡ ಪಕ್ಷದೊಳಗಿನ ತುಮುಲಕ್ಕೆ ತೆರೆ?
ಮೇಘಾಲಯದಲ್ಲಿ ಗರಿಷ್ಠದಿಂದ ಕನಿಷ್ಠಕ್ಕೆ ಕೈ
ಗೋವಾದಲ್ಲಿ ಕಾಂಗ್ರೆಸ್ ತನ್ನ ಪಾಲಿಗೆ ಉಳಿದುಕೊಂಡಿರುವ ಐದಾರು ಶಾಸಕರನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ, ಮೇಘಾಲಯದಲ್ಲಿ ಕಾಂಗ್ರೆಸ್ ಪಾಲಿಗೆ ಉಳಿದಿದ್ದ ಐವರೂ ಶಾಸಕರು ಬಿಜೆಪಿ ಪಾಲಾಗಿ ಹೋಗಿದ್ದಾರೆ. ಅಲ್ಲೀಗ ಕಾಂಗ್ರೆಸ್ ಶೂನ್ಯ ಸ್ಥಿತಿಗೆ ಬಂದು ನಿಂತಿದೆ.
2018ರ ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 60 ಸ್ಥಾನಗಳ ಪೈಕಿ ಕಾಂಗ್ರೆಸ್ 21 ಕ್ಷೇತ್ರಗಳಲ್ಲಿ ಗೆದ್ದಿತ್ತು. ಕಾನ್ರಾಡ್ ಸಾಂಗ್ಮ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ 20 ಸ್ಥಾನಗಳನ್ನು ಗೆದ್ದಿತು. ಅತಿ ಹೆಚ್ಚು ಸ್ಥಾನ ಪಡೆದ ಕಾಂಗ್ರೆಸ್ಗೆ ಸರಕಾರ ರಚಿಸುವ ಅವಕಾಶ ಕೈತಪ್ಪಿತು. ಬಿಜೆಪಿ ಮತ್ತಿತರ ಪಕ್ಷಗಳ ಬೆಂಬಲದೊಂದಿಗೆ ಕಾನ್ರಾಡ್ ಸಾಂಗ್ಮಾ ಸರಕಾರ ರಚಿಸಿದರು.
ಕಾಂಗ್ರೆಸ್ ದುರದೃಷ್ಟಕ್ಕೆ ಒಬ್ಬ ಶಾಸಕ ರಾಜೀನಾಮೆ ನೀಡಿದ್ದು ಮತ್ತು ಕೆಲ ಶಾಸಕರ ನಿಧನ ಹೊಂದಿದ್ದು, ಆ ಸ್ಥಾನಗಳಿಗೆ ನಡೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲನುಭವಿಸಿದ್ದು, ಹೀಗೆಲ್ಲಾ ಆಗಿ ಅಂತಿಮವಾಗಿ ಕಾಂಗ್ರೆಸ್ ಶಾಸಕರ ಸಂಖ್ಯೆ 17ಕ್ಕೆ ಇಳಿಯಿತು.
ಗಾಯದ ಮೇಲೆ ಬರೆ ಎಳೆದಂತೆ ತೃಣಮೂಲ ಕಾಂಗ್ರೆಸ್ ಪಕ್ಷ ಅಖಾಡಕ್ಕೆ ಇಳಿದು 13 ಮಂದಿ ಕಾಂಗ್ರೆಸ್ ಶಾಸಕರನ್ನು ಸೆಳೆದುಕೊಂಡಿತು. ಅಲ್ಲಿಗೆ ಕೈಗೆ ಉಳಿದದ್ದು ಕೇವಲ 5 ಮಂದಿ ಮಾತ್ರ.
ಈಗ ಈ ಐದು ಶಾಸಕರೂ ಕೂಡ ಬಿಜೆಪಿ ಬೆಂಬಲಿತ ಆಡಳಿತ ಮೈತ್ರಿಕೂಟಕ್ಕೆ ಬೆಂಬಲ ಕೊಟ್ಟಿದ್ದಾರೆ. ಭಾನುವಾರ ಈ ಬೆಳವಣಿಗೆ ಆಗಿದೆ. ಈ ಐವರು ಶಾಸಕರಿಗೆ ಶೋಕಾಸ್ ನೋಟೀಸ್ ಕೊಡಲು ಕಾಂಗ್ರೆಸ್ ಯೋಜಿಸುತ್ತಿದೆ. ಅದೇನೇ ಆದರೂ ಗರಿಷ್ಠ ಸಂಖ್ಯೆಯಿಂದ ಶೂನ್ಯ ಸಂಖ್ಯೆಗೆ ಕಾಂಗ್ರೆಸ್ ಇಳಿಮುಖವಾಗಿರುವುದು ಮಾತ್ರ ವಾಸ್ತವ.
ಜಾರ್ಖಂಡ್ ಸಿಎಂಗೆ ಸಂಕಷ್ಟ
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ಅಪರೂಪದ ರಾಜ್ಯಗಳಲ್ಲಿ ಜಾರ್ಖಂಡ್ ಒಂದು. ಅದೂ ಇಲ್ಲಿ ಮೈತ್ರಿ ಸರಕಾರದ ಭಾಗವಾಗಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಜಾರ್ಖಂಡ್ ಮುಕ್ತಿ ಮೋರ್ಚಾದ ಹೇಮಂತ್ ಸೊರೇನ್ ನೇತೃತ್ವದಲ್ಲಿ ಸರಕಾರ ಸ್ಥಾಪನೆಯಾಗಿದೆ.
ಈಗ ಸಿಎಂ ಮತ್ತವರ ಬೆಂಬಲಿಗರ ಮೇಲೆ ಭ್ರಷ್ಟಾಚಾರ ಹಾಗೂ ವಿವಿಧ ಹಗರಣಗಳ ಕುಣಿಕೆ ಸುತ್ತಿಕೊಳ್ಳುತ್ತಿದೆ. ಕಳೆದ ವಾರ ಜಾರಿ ನಿರ್ದೇಶನಾಲಯದ ತಂಡಗಳು ಹೇಮಂತ್ ಸೊರೇನ್ರ ಆಪ್ತ ಪಂಕಜ್ ಮಿಶ್ರಾಗೆ ಸೇರಿದ 17 ಸ್ಥಳಗಳ ಮೇಲೆ ದಾಳಿ ನಡೆಸಿವೆ. ಕಳೆದ ತಿಂಗಳು ಗಣಿಗಾರಿಕೆ ಇಲಾಖೆ ಕಾರ್ಯದರ್ಶಿ ಪೂಜಾ ಸಿಂಘಲ್ ವಿರುದ್ಧ ಇಡಿಯಿಂದ ಪ್ರಕರಣ ದಾಖಲಾಗಿತ್ತು. ಅದರ ತನಿಖೆಯೂ ಪ್ರತ್ಯೇಕವಾಗಿ ನಡೆಯುತ್ತಿದೆ.
ಸ್ವತಃ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿರುದ್ಧವೇ ಭ್ರಷ್ಟಾಚಾರ ಆರೋಪಗಳು ಕೇಳಿಬಂದಿವೆ. ಗಣಿಗಾರಿಕೆಯ ಲೀಸ್ ಅನ್ನು ತನ್ನ ಹೆಸರಿಗೇ ಹಂಚಿಕೆ ಮಾಡಿಕೊಂಡಿದ್ದು ಮತ್ತು ತನ್ನ ಹೆಂಡತಿಗೆ ಅಕ್ರಮವಾಗಿ ಜಮೀನು ನೀಡಿರುವ ಆರೋಪಗಳಿವೆ.
ಸಿಎಂ ಹೇಮಂತ್ ಸೊರೇನ್ ಬಳಿ ಗಣಿಗಾರಿಕೆ ಮತ್ತು ಪರಿಸರ ಎರಡೂ ಖಾತೆಗಳಿವೆ. ಅವರು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಪಕ್ಷ ಬಿಜೆಪಿ ಜಾರ್ಖಂಡ್ ರಾಜ್ಯಪಾಲರಲ್ಲಿ ದೂರು ಕೊಟ್ಟಿತ್ತು. ಹೇಮಂತ್ ಸೊರೇನ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬಹುದೇ ಎಂದು ರಾಜ್ಯಪಾಲರು ಚುನಾವಣಾ ಆಯೋಗವನ್ನು ಕೇಳಿದ್ದಾರೆ. ಒಂದು ವೇಳೆ ಸೊರೇನ್ ಶಾಸಕ ಸ್ಥಾನ ಕಳೆದುಕೊಂಡರೆ ಆಡಳಿತಾರೂಢ ಮೈತ್ರಿಕೂಟ ಯಾವಾಗ ಬೇಕಾದರೂ ಬೆನ್ನುಮೂಳೆ ಮುರಿದುಕೊಂಡು ಕುಸಿಯುವ ಸಾಧ್ಯತೆ ಇದೆ. ಅದರ ಪರಿಣಾಮವಾಗಿ ಜೆಎಂಎಂವೊಳಗೆ ಬಂಡಾಯ ಎದ್ದು ಬಿಜೆಪಿ ಸರಕಾರ ರಚಿಸುವ ಸಾಧ್ಯತೆ ಇಲ್ಲದಿಲ್ಲ.
ಮಹಾರಾಷ್ಟ್ರ ಬಿಕ್ಕಟ್ಟು
ಮಹಾರಾಷ್ಟ್ರದಲ್ಲಿ ಕಳೆದ ಕೆಲ ವಾರದಲ್ಲಿ ಹೈ ಡ್ರಾಮಾವೇ ನಡೆದುಹೋಗಿ ಅಂತಿಮವಾಗಿ ಬಿಜೆಪಿ ಸರಕಾರ ರಚನೆಯಲ್ಲಿ ಪರ್ಯಾವಸಾಸನಗೊಂಡಿದೆ. ಬಿಜೆಪಿ ಜೊತೆ ಚುನಾವಣೆಪೂರ್ವ ಮೈತ್ರಿ ಮಾಡಿಕೊಂಡು ಬಳಿಕ ಎನ್ಸಿಪಿ, ಕಾಂಗ್ರೆಸ್ ಜೊತೆ ಶಿವಸೇನೆ ಮಹಾ ವಿಕಾಸ್ ಆಘಾಡಿ ಮೈತ್ರಿಸರಕಾರ ರಚಿಸಿತು. ಉದ್ಧವ್ ಠಾಕ್ರೆ ಸಿಎಂ ಆದರು.
ಮೂರು ವರ್ಷಗಳ ಬಳಿಕ ಶಿವಸೇನಾ ಪಕ್ಷದೊಳಗೆ ಬಂಡಾಯ ಎದ್ದಿತು. ಏಕನಾಥ್ ಶಿಂಧೆ ನೇತೃತ್ವದಲ್ಲಿ 40ಕ್ಕೂ ಹೆಚ್ಚು ಶಾಸಕರು ಭಿನ್ನಹಾದಿ ತುಳಿದರು. ಭಿನ್ನಮತೀಯ ಗುಂಪು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿತು. ಶಿಂಧೆ ಸಿಎಂ ಸ್ಥಾನ ಪಡೆದರು.
ಇದರೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರ ಇರುವ ರಾಜ್ಯಗಳ ಸಂಖ್ಯೆ ಬೆರಳೆಣಿಕೆಗಿಂತಲೂ ಕಡಿಮೆ ಆದಂತಾಗಿದೆ.
(ಒನ್ಇಂಡಿಯಾ ಸುದ್ದಿ)