ಲೋಕಸಮರದಲ್ಲಿ ಬಿಜೆಪಿಯನ್ನು ಹಣಿಯಲು ಕಾಂಗ್ರೆಸ್ 'ಉದಾರ ನೀತಿ'
ಕಾಂಗ್ರೆಸ್ ನಿಂದಲೇ ಪ್ರಧಾನಿ ಆಗಬೇಕೆಂದಿಲ್ಲ. ಮಿತ್ರ ಪಕ್ಷಗಳ ಪೈಕಿ ಯಾರೇ ಪ್ರಧಾನಿ ಆದರೂ ಚಿಂತೆಯಿಲ್ಲ. ಆದರೆ ಬಿಜೆಪಿ ಅಥವಾ ಆರೆಸ್ಸೆಸ್ ಬೆಂಬಲದ ಯಾವುದೇ ಪಕ್ಷ ಅಧಿಕಾರಕ್ಕೆ ಬರಬಾರದು. ಅಂಥ ಪಕ್ಷದ ವ್ಯಕ್ತಿ ಪ್ರಧಾನಿ ಆಗಲೇಬಾರದು ಎಂಬುದು ಲೋಕಸಭೆ ಚುನಾವಣೆಗೆ ದೇಶದ ಪುರಾತನ ರಾಜಕೀಯ ಪಕ್ಷ ಕಾಂಗ್ರೆಸ್ ನ 'ಉದಾರ ನೀತಿ'.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೊರತಾದ ಪಕ್ಷಗಳು ಅಧಿಕಾರಕ್ಕೆ ಬಂದರೆ ಯಾರು ಪ್ರಧಾನಿ ಆಗಬೇಕು ಎಂಬ ಪ್ರಶ್ನೆ ಗಿರಗಿಟ್ಲೆ ಹಾಕುತ್ತಿದೆ. ಹಾಗೆ ನೋಡಿದರೆ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಪರ್ಯಾಯವಾಗಿರುವ ಪಕ್ಷ ಕಾಂಗ್ರೆಸ್. ಆದರೆ ಪ್ರಾದೇಶಿಕ ಪಕ್ಷಗಳಲ್ಲಿ ಈಗ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳು ಕಾಣುತ್ತಿದ್ದಾರೆ.
ಕಾಂಗ್ರೆಸ್ ಗೇನೋ ರಾಹುಲ್ ಗಾಂಧಿ ಪ್ರಧಾನಿ ಆಗಬೇಕು ಅನ್ನೋ ಆಸೆ, ಆಶಯ, ಗುರಿ ಎಲ್ಲವೂ ಇದೆ. ಆದರೆ ಅದೇ ಸಮಯದಲ್ಲಿ ಮಿತ್ರಪಕ್ಷಗಳೆಲ್ಲ ಒಗ್ಗೂಡಿದ ನಂತರ ಅಭ್ಯರ್ಥಿಯೊಬ್ಬರನ್ನು ಸೂಚಿಸಿದರೆ ಅವರನ್ನು ಪ್ರಧಾನಿ ಮಾಡಲು ಕೈ ಹೈಕಮಾಂಡ್ ತಕರಾರು ಮಾಡುವುದಿಲ್ಲ ಅಂತ ಈಗಲೇ ಹೇಳಿಬಿಟ್ಟಿದೆ ಎಂದು ಮೂಲಗಳಿಂದ ಮಾಹಿತಿ ಹೊರಬಂದಿದೆ.
ಕಾಂಗ್ರೆಸ್-ಬಿಎಸ್ಪಿ ಮೈತ್ರಿ ಬಗ್ಗೆ ಮಾಯಾವತಿ ಏನಂತಾರೆ?
ಆ ರೀತಿ ಪ್ರಧಾನಿ ರೇಸಿನಲ್ಲಿ ಕೇಳಿಬರುತ್ತಿರುವ ಎರಡು ಮುಖ್ಯ ಹೆಸರು ದಲಿತ ಶಕ್ತಿ ಮಾಯಾವತಿ ಮತ್ತು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರದು. ಬಿಜೆಪಿಯೇತರ ಪಕ್ಷಗಳನ್ನೆಲ್ಲ ಒಗ್ಗೂಡಿಸಲು ಭಾರೀ ಶ್ರಮ ಪಟ್ಟಿರುವ ಕಾಂಗ್ರೆಸ್, ನಾಯಕತ್ವ ವಿಚಾರದಲ್ಲಿ ಭಿನ್ನಾಭಿಪ್ರಾಯ ತಲೆದೋರಿ, ಒಗ್ಗಟ್ಟು ಒಡೆದು ಹೋಗಲು ಬಯಸುವುದಿಲ್ಲ ಎಂಬ ಸ್ಪಷ್ಟ ಸಂದೇಶವಿದು.
ಮೈತ್ರಿಕೂಟದಲ್ಲಿ ಪ್ರಧಾನಿ ಆಕಾಂಕ್ಷಿಗಳು ಹೆಚ್ಚಿದ್ದಾರೆ
ಬಿಜೆಪಿ ಹಾಗೂ ಆರೆಸ್ಸೆಸ್ ಬೆಂಬಲ ಇರುವ ಪಕ್ಷಗಳನ್ನು ಹೊರತುಪಡಿಸಿ ಮತ್ಯಾವುದೇ ಪಕ್ಷದಿಂದ ಪ್ರಧಾನಿ ಆದರೂ ಕಾಂಗ್ರೆಸ್ ನಿಂದ ಬೆಂಬಲಿಸುವ ಬಗ್ಗೆ ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದೆ. ಅವಿಶ್ವಾಸ ಗೊತ್ತುವಳಿ ವೇಳೆಯಲ್ಲಿ ಕೇಂದ್ರ ಸಚಿವ ರಾಜ್ ನಾಥ್ ಸಿಂಗ್ ಅದ್ಯಾವ ನಾಯಕತ್ವದ ಬಗ್ಗೆ ಮಾತನಾಡಿದ್ದರೋ, ವಿಪಕ್ಷಗಳ ಮೈತ್ರಿಕೂಟದಲ್ಲಿ ಪ್ರಧಾನಿ ಹುದ್ದೆ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಇದು ಬರಕತ್ತಾಗುವ ದೋಸ್ತಿ ಅಲ್ಲ ಎಂದಿದ್ದರೋ ಆ ಬಗ್ಗೆ ಕಾಂಗ್ರೆಸ್ ಗಂಭೀರವಾಗಿ ಆಲೋಚಿಸಿದಂತಿದೆ.
ಬಿಹಾರ, ಉತ್ತರಪ್ರದೇಶದಲ್ಲಿ ದೊಡ್ಡ ಲಾಭ
ಮಹಾ ಘಟ್ ಬಂಧನ್ ಮಾಡಿಕೊಂಡರೆ ಬಿಹಾರ ಮತ್ತು ಉತ್ತರಪ್ರದೇಶದಲ್ಲಿ ದೊಡ್ಡ ಮಟ್ಟದ ಲಾಭವಾಗುತ್ತದೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರ. ಒಟ್ಟಾರೆ 543 ಲೋಕಸಭಾ ಕ್ಷೇತ್ರದಲ್ಲಿ 120 ಸ್ಥಾನಗಳನ್ನು ಈ ಎರಡು ರಾಜ್ಯಗಳಲ್ಲೇ ಗೆಲ್ಲಬಹುದು. ಹಾಗೊಂದು ವೇಳೆ ಆದರೆ ಬಿಜೆಪಿ ಅಥವಾ ಎನ್ ಡಿಎ ಮೈತ್ರಿ ಕೂಟಕ್ಕೆ ಬಹುಮತ ಬರುವುದು ಕಷ್ಟವಾಗುತ್ತದೆ ಎಂಬ ಎಣಿಕೆ ಹಾಕಿದೆ.
ಮಮತಾ, ಮಾಯಾವತಿ ಏನೂ ಮಾತನಾಡಿಲ್ಲ
ಮಮತಾ ಬ್ಯಾನರ್ಜಿ ಆಗಲೀ ಅಥವಾ ಮಾಯಾವತಿ ಆಗಲೀ ತಾವು ಪ್ರಧಾನಿ ಹುದ್ದೆಯ ಆಕಾಂಕ್ಷಿಗಳು ಅಂತೇನೂ ಹೇಳಿಲ್ಲ. ಆದರೆ ಮುಂದಿನ ಜನವರಿಗೆ ಬಿಜೆಪಿ ಹೊರತಾದ ಇತರ ಎಲ್ಲ ಪಕ್ಷಗಳ ನಾಯಕರ ಅಖಿಲ ಭಾರತ ಮಟ್ಟದ ಸಭೆಯನ್ನುಮಮತಾ ಬ್ಯಾನರ್ಜಿ ಕರೆದಿದ್ದಾರೆ. ಇನ್ನು ಮಾಯಾವತಿ ಅವರು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ತಾವು ಏನು ಹಾಗೂ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಾತ್ರ ಏನಾಗಿರಲಿ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.
ಬಿಎಸ್ ಪಿ ಜತೆಗಿನ ದೋಸ್ತಿ ಬಗ್ಗೆಯೇ ಆಸಕ್ತಿ
ಕಾಂಗ್ರೆಸ್ ಪಕ್ಷವು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಜತೆಗೆ ಮೈತ್ರಿ ಮಾಡಿಕೊಳ್ಳುವ ಲೆಕ್ಕಾಚಾರದಲ್ಲೇನೂ ಇಲ್ಲ. ಆದರೆ ಮಾಯಾವತಿ ಅವರ ಬಿಎಸ್ ಪಿ ಜತೆಗೆ ಮಧ್ಯಪ್ರದೇಶ ಮತ್ತು ಛತ್ತೀಸಗಢದಿಂದ ದೋಸ್ತಿ ಆರಂಭಿಸುವ ಉದ್ದೇಶ ಹೊಂದಿದೆ. ಅದು ರಾಜಸ್ತಾನಕ್ಕೂ ಹಿಗ್ಗಲಿ ಎಂಬ ಇರಾದೆ ಮಾಯಾವತಿ ಅವರದು. ಆದರೆ ಆ ರಾಜ್ಯದ ಕಾಂಗ್ರೆಸ್ ನಾಯಕರು ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ರಾಹುಲ್ ಗಾಂಧಿ ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ.
ನಿರ್ಧಾರ ಮಾಡಲು ರಾಹುಲ್ ಗಾಂಧಿ ಪೂರ್ಣ ಸ್ವತಂತ್ರರು
ಈಚೆಗೆ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಹುಲ್ ಗಾಂಧಿ ಅವರಿಗೆ ನಿರ್ಧಾರ ತೆಗೆದುಕೊಳ್ಳುವ ಪೂರ್ಣಾಧಿಕಾರ ನೀಡಲಾಗಿದೆ. ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಉತ್ತಮ ಫಲಿತಾಂಶ ತರಲು ಯಾವುದೇ ತೀರ್ಮಾನ ಅವರು ಕೈಗೊಳ್ಳಬಹುದು ಎನ್ನಲಾಗಿದೆ. ಆ ಕಾರಣಕ್ಕೆ ಇಷ್ಟು ಕಾಲ ಇದ್ದ ಕಾಂಗ್ರೆಸ್ ಪಕ್ಷದ ಆಲೋಚನೆಯಲ್ಲೇ ಬದಲಾವಣೆ ಮಾಡಿಕೊಂಡು, ಉದಾರವಾಗಿ ಯೋಚಿಸಲು ಚಿಂತಿಸಲಾಗಿದೆ. ಆಯಾ ರಾಜ್ಯಗಳಲ್ಲಿ ಮಿತ್ರ ಪಕ್ಷವು ಗೆಲ್ಲುವ ಅವಕಾಶ ಹೆಚ್ಚಿರುವ ಕಡೆಗೆ ಸ್ಥಾನಗಳಿಗಾಗಿ ಪಟ್ಟು ಹಿಡಿಯಬಾರದು ಎಂಬ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ. ಅತಿ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿದರೆ ಮಾತ್ರ ರಾಹುಲ್ ಗಾಂಧಿ ಪ್ರಧಾನಿ ಆಗಲಿದ್ದಾರೆ.