ಮುಂದಿನ ಲೋಕಸಭಾ ಚುನಾವಣೆಯಲ್ಲಿ 'ಕೈ’ಗೆ ಲಾಭಕ್ಕಿಂತ ನಷ್ಟವೇ ಜಾಸ್ತಿ!
Recommended Video
ರಾಜ್ಯ ರಾಜಕೀಯದಲ್ಲಿ ಬದಲಾವಣೆ ನಿರಂತರವಾಗಿಯೇ ನಡೆಯುತ್ತಿದ್ದು, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಮತ್ತು ಐದು ವರ್ಷವನ್ನು ಯಶಸ್ವಿಯಾಗಿಯೇ ಪೂರೈಸುತ್ತೇವೆ ಎನ್ನುತ್ತಾ ಬರುತ್ತಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ದೋಸ್ತಿ ಸರ್ಕಾರದ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ಮುಸುಕಿನ ಗುದ್ದಾಟವನ್ನು ಮಾತ್ರ ನಿಲ್ಲಿಸಿಲ್ಲ ಎಂಬುದು ಅವರು ನೀಡುತ್ತಿರುವ ಹೇಳಿಕೆ ಹಾಗೂ ನಡೆದುಕೊಳ್ಳುತ್ತಿರುವ ನಡಾವಳಿಕೆಯಿಂದಲೇ ಗೊತ್ತಾಗುತ್ತಿದೆ.
ಬಿಜೆಪಿಯನ್ನು ಆಡಳಿತದಿಂದ ಹೊರಗಿಡಬೇಕೆಂಬ ಉದ್ದೇಶದಿಂದ ಮೈತ್ರಿ ಮಾಡಿಕೊಂಡ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಸರ್ಕಾರ ರಚನೆಗೊಂಡ ಬಳಿಕ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿಯೂ ಇದೆರಡು ಪಕ್ಷಗಳು ಪ್ರತ್ಯೇಕವಾಗಿಯೇ ಸ್ಪರ್ಧೆ ಮಾಡಿವೆ.
ಸುಮಲತಾ ಅಂಬರೀಶ್, ಸಿದ್ದರಾಮಯ್ಯ ಭೇಟಿ: ಮಂಡ್ಯ ಟಿಕೆಟ್ ಚರ್ಚೆ
ಇದೀಗ ಲೋಕಸಭೆಗೆ ಯಾವ ರೀತಿಯಲ್ಲಿ ತಯಾರಿ ನಡೆಸುತ್ತವೆ ಎಂಬುದೇ ಇದೀಗ ಕುತೂಹಲವನ್ನು ಕೆರಳಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮರ್ಜಿಯಲ್ಲಿ ಸಿಕ್ಕಿ ಹಾಕಿಕೊಂಡಿವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮೈತ್ರಿ ಸರ್ಕಾರದ ಸಾಧನೆಯನ್ನು ಹೇಳಬೇಕು ಅಥವಾ ಬಿಜೆಪಿಯನ್ನು ದೂರಬೇಕು.
ಇದೆರಡನ್ನು ಬಿಟ್ಟು ಕೇಂದ್ರ ಸರ್ಕಾರದ ಬಗ್ಗೆಯಾಗಲೀ, ಭ್ರಷ್ಟಚಾರದ ಬಗ್ಗೆ ಮಾತನಾಡುವುದಕ್ಕಾಗಲೀ ಗಂಭೀರವಾದ ವಿಚಾರಗಳು ಇವರ ಕೈನಲ್ಲಿ ಇಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಗೆ ಈಗಿನಿಂದಲೇ ತಯಾರಾಗಲೇಬೇಕಾಗಿದೆ. ಮುಂದೆ ಓದಿ...
ವರಸೆ ಬದಲಾದರೆ ಅಚ್ಚರಿ ಪಡಬೇಕಾಗಿಲ್ಲ
ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಪಡೆದಷ್ಟು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೇ ಕರೆಸಿಕೊಳ್ಳುತ್ತಿರುವ ರಾಹುಲ್ ಗಾಂಧಿಗೆ ಲಾಭವಾಗಲಿದೆ. ಅಪ್ಪಿತಪ್ಪಿ ಮೈತ್ರಿಯ ಲಾಭ ಪಡೆದು ಜೆಡಿಎಸ್ ಹೆಚ್ಚಿನ ಸ್ಥಾನ ಪಡೆದರೆ ಅದರ ಲಾಭ ಕಾಂಗ್ರೆಸ್ ಗೆ ಸಿಗುತ್ತದೆ ಎಂದು ಹೇಳುವುದು ಕಷ್ಟಸಾಧ್ಯ. ಏಕೆಂದರೆ ತೃತೀಯ ರಂಗದತ್ತ ಒಲವಿರುವ ಮಾಜಿ ಪ್ರಧಾನಿ ದೇವೇಗೌಡರು ಯಾವಾಗ ಬೇಕಾದರೂ ತಮ್ಮ ವರಸೆಯನ್ನು ಬದಲಾಯಿಸಿದರೂ ಅಚ್ಚರಿ ಪಡಬೇಕಾಗಿಲ್ಲ. ಇಷ್ಟಕ್ಕೂ ದೇವೇಗೌಡರಿಗೂ ಪ್ರಧಾನಿ ಪಟ್ಟದ ಮೇಲೆ ಬಯಕೆಯಿರುವುದು ಗೊತ್ತಿರುವ ವಿಚಾರವೇ. ಇದೆಲ್ಲವನ್ನು ತಾಳೆ ಹಾಕಿ ನೋಡುತ್ತಿರುವ ಕಾಂಗ್ರೆಸ್ ನಾಯಕರು ಒಂದು ವೇಳೆ ಜೆಡಿಎಸ್ ಕೇಳಿದಂತೆ ಒಂದಷ್ಟು ಸ್ಥಾನವನ್ನು ಬಿಟ್ಟುಕೊಟ್ಟು ಜತೆಗೆ ಬೆಂಬಲವನ್ನು ನೀಡಿ ಗೆಲ್ಲಿಸಿಕೊಟ್ಟರೆ ಅದರಿಂದ ಕಾಂಗ್ರೆಸ್ ಗೆ ಲಾಭವಾಗಲ್ಲ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಹೀಗಾಗಿಯೇ ಅವರು ಜೆಡಿಎಸ್ ಗೆ ಹೆಚ್ಚಿನ ಕ್ಷೇತ್ರಗಳನ್ನು ಬಿಟ್ಟುಕೊಡಲು ಹಿಂದೇಟು ಹಾಕುತ್ತಿರಬಹುದೇ? ಎಂಬ ಪ್ರಶ್ನೆಯೂ ಮೂಡುತ್ತಿದೆ.
ಕಾಂಗ್ರೆಸ್ ಈ 3 ಕ್ಷೇತ್ರ ಬಿಟ್ಟು ಕೊಡಲೇಬೇಕೆಂದು ಜೆಡಿಎಸ್ ಹಠವೇಕೆ?
ನಿಖಿಲ್ ಕಣಕ್ಕಿಳಿಸಿದರೆ ಸುಲಭವಾಗಿ ಗೆಲುವು
ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೇವಲ ಎರಡೇ ಕ್ಷೇತ್ರಗಳಲ್ಲಿ ಗೆಲುವು ಪಡೆದ ಜೆಡಿಎಸ್ ಈ ಬಾರಿ 12 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಮೇಲೆ ಒತ್ತಡ ತರುತ್ತಿರುವುದು ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಅದರಲ್ಲೂ ಕಾಂಗ್ರೆಸ್ ಗೆಲುವಿಗೆ ಅವಕಾಶವಿರುವ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಜೆಡಿಎಸ್ ಅವಲತ್ತುಕೊಂಡಿರುವುದು ಇದೀಗ ಕಾಂಗ್ರೆಸ್ ಕಾರ್ಯಕರ್ತರನ್ನು ಕೆರಳಿಸುವಂತೆ ಮಾಡಿದೆ. ಇಲ್ಲಿ ಅಂಬರೀಶ್ ಅವರ ನಿಧನದ ಬಳಿಕ ಸುಮಲತಾ ಅವರನ್ನು ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಸಬೇಕೆಂದು ಕಾರ್ಯಕರ್ತರು ಅಭಿಮಾನಿಗಳು, ಜನರು ಬಯಸುತ್ತಿರುವ ಬೆನ್ನಲ್ಲೇ ತಮ್ಮ ರಾಜಕೀಯ ಲಾಭ ಪಡೆಯಲು ಜೆಡಿಎಸ್ ನಾಯಕರು ಮುಂದಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಮಂಡ್ಯ ಕ್ಷೇತ್ರ ಜೆಡಿಎಸ್ ನ ಭದ್ರಕೋಟೆ. ಹೀಗಾಗಿ ಅಲ್ಲಿ ಎಚ್.ಡಿ.ಕುಮಾರ ಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿದರೆ ಸುಲಭವಾಗಿ ಗೆಲುವು ಪಡೆಯಬಹುದು. ಆ ಮೂಲಕ ದೇವೇಗೌಡರ ಮೂರನೇ ತಲೆಮಾರಿನ ನಾಯಕರನ್ನು ಸೃಷ್ಟಿಸಿಕೊಂಡಂತಾಗುತ್ತದೆ ಎಂಬ ಲೆಕ್ಕಾಚಾರವೂ ಇದೆ.
ಮಂಡ್ಯದಿಂದ ನಿಖಿಲ್ ಸ್ಪರ್ಧೆ?, ಮೌನ ಮುರಿದ ಎಚ್.ಡಿ.ಕುಮಾರಸ್ವಾಮಿ
ದೇವೇಗೌಡರ ಕುಟುಂಬದ ಆಲೋಚನೆ
ತಾವು ರಾಜಕೀಯದಲ್ಲಿ ಸಕ್ರಿಯವಾಗಿದ್ದಾಗಲೇ ಮೊಮ್ಮಕ್ಕಳನ್ನು ರಾಜಕೀಯಕ್ಕೆ ತಂದು ಅವರು ಅಧಿಕಾರ ಪಡೆಯುವಂತೆ ಮಾಡಬೇಕೆನ್ನುವುದು ದೇವೇಗೌಡರ ಅಭಿಲಾಷೆಯಾಗಿದೆ. ಈಗಾಗಲೇ ಮಕ್ಕಳು, ಸೊಸೆಯಂದಿರು ರಾಜಕೀಯದಲ್ಲಿದ್ದಾರೆ. ಇದೀಗ ಮೊಮ್ಮಕ್ಕಳ ಸರದಿ. ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯದಿಂದ ಮತ್ತು ಪ್ರಜ್ವಲ್ ರೇವಣ್ಣರನ್ನು ಹಾಸನದಿಂದ ಕಣಕ್ಕಿಳಿಸಿದರೆ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಭಾವವಿರುವುದರಿಂದ ಮತ್ತು ಕಾಂಗ್ರೆಸ್ ಕೂಡ ಬೆಂಬಲ ನೀಡುವುದರಿಂದ ಗೆಲುವು ಸುಲಭವಾಗಲಿದೆ ಎಂಬುದು ದೇವೇಗೌಡರ ಮತ್ತು ಕುಟುಂಬದ ಆಲೋಚನೆಯಾಗಿದೆ. ಆದರೆ ಇದು ಅಷ್ಟೊಂದು ಸುಲಭನಾ ಎಂಬುದು ಈಗ ಪ್ರಶ್ನೆಯಾಗಿ ಉಳಿದಿದೆ. ಯಾವಾಗ ದೇವೇಗೌಡರು ತನ್ನ ಮೊಮ್ಮಕ್ಕಳನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುತ್ತೇವೆ ಎಂಬುದಾಗಿ ಘೋಷಿಸಿದರೋ ಆಗಲೇ ಕಾಂಗ್ರೆಸ್ ನ ಕೆಲವು ನಾಯಕರು ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಮಂಡ್ಯದಲ್ಲಿ ಸುಮಲತಾ ಅವರು ಸ್ಪರ್ಧಿಸಲಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸುತ್ತಿದ್ದರೆ, ಅತ್ತ ಹಾಸನದಲ್ಲಿ ದೇವೇಗೌಡರು ಸ್ಪರ್ಧಿಸುವುದಾದರೆ ಬೆಂಬಲ ನೀಡುತ್ತೇವೆ. ಅದನ್ನು ಹೊರತುಪಡಿಸಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವುದಾದರೆ ಖಂಡಿತಾ ಬೆಂಬಲ ನೀಡುವುದಿಲ್ಲ. ನಾವೇನು ಮಾಡಬೇಕು ಎಂಬ ತೀರ್ಮಾನವನ್ನು ಮುಂದೆ ಮಾಡುತ್ತೇವೆ ಎಂಬುದಾಗಿ ಮಾಜಿ ಸಚಿವ ಎ.ಮಂಜು ಹೇಳುವ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ.
12 ಕ್ಷೇತ್ರ ಕೇಳಿದ್ದಕ್ಕೆ 5 ಜೆಡಿಎಸ್ ಗೆ, ಕಾಂಗ್ರೆಸ್ ರಣತಂತ್ರ
ಲಾಭ ನಷ್ಟದ ಪರಿಣಾಮಗಳು 'ಕೈ' ಮೇಲೆಯೇ ಹೆಚ್ಚು
ಒಂದು ವೇಳೆ ಕಾಂಗ್ರೆಸ್ ನ ರಾಜ್ಯ ನಾಯಕರು ದೇವೇಗೌಡರ ಮಾತಿಗೆ ಕಟ್ಟುಬಿದ್ದು ಜೆಡಿಎಸ್ ಗೆ ಸ್ಥಾನವನ್ನು ಬಿಟ್ಟುಕೊಟ್ಟು ಪ್ರಜ್ವಲ್ ರೇವಣ್ಣ ಸ್ಪರ್ಧೆಗಿಳಿದರೆ ದೇವೇಗೌಡರ ಕುಟುಂಬದ ವಿರೋಧಿಯಾಗಿರುವ ಎ.ಮಂಜು ಅವರು ಬಿಜೆಪಿಯತ್ತ ವಾಲಿದರೂ ಅಚ್ಚರಿಪಡಬೇಕಾಗಿಲ್ಲ. ಇತ್ತೀಚೆಗಿನ ಎ.ಮಂಜು ಅವರ ನಡವಳಿಕೆಗಳು ಕೂಡ ಅದನ್ನೇ ಹೇಳುತ್ತಿವೆ. ಇದೆಲ್ಲದರ ಮಧ್ಯೆ ಮಂಡ್ಯ ಕ್ಷೇತ್ರದಲ್ಲಿ 25 ವರ್ಷಗಳಿಂದ ಅಭಿವೃದ್ಧಿಯೇ ಆಗಿಲ್ಲ ಹೀಗಾಗಿ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ.ಗಳ ಯೋಜನೆಯನ್ನು ನೀಡುತ್ತಿರುವುದಾಗಿ ಎಚ್.ಡಿ.ಕುಮಾರಸ್ವಾಮಿ ಹೇಳಿರುವುದು. ರಾಜಕೀಯವಾಗಿ ಜೆಡಿಎಸ್ ಗೆ ಲಾಭ ತರುವಂತಿದ್ದರೂ ಒಳಗೊಳಗೆ ಕಾಂಗ್ರೆಸ್ ನಾಯಕರಿಗೆ ಅವಮಾನ ಮಾಡಿದಂತಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೇವಲ ಹಳೇ ಮೈಸೂರು ಭಾಗದಲ್ಲಿ ಅದರಲ್ಲೂ ಜೆಡಿಎಸ್ ಪ್ರಾಬಲ್ಯವಿರುವಲ್ಲಿ ಮಾತ್ರವೇ ಹಲವು ಯೋಜನೆಗಳನ್ನು ಘೋಷಣೆ ಮಾಡಿ ನಿಮ್ಮ ಋಣ ತೀರಿಸುತ್ತಿದ್ದೇನೆ ಎಂಬುದಾಗಿ ಹೇಳುತ್ತಿರುವುದು ರಾಜ್ಯದ ಇತರೆ ಭಾಗದ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಅಸಮಾಧಾನದ ಬಿಸಿ ದೋಸ್ತಿ ಸರ್ಕಾರದ ಪಾಲುದಾರ ಪಕ್ಷವಾಗಿರುವ ಕಾಂಗ್ರೆಸ್ ಗೂ ತಟ್ಟಿದರೆ ಅಚ್ಚರಿಪಡುವಂತಿಲ್ಲ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಲಾಭ ನಷ್ಟದ ಪರಿಣಾಮಗಳು ಕಾಂಗ್ರೆಸ್ ನ ಮೇಲೆಯೇ ಹೆಚ್ಚು ಬೀರುತ್ತದೆ ಎಂಬುದಂತು ಸತ್ಯ.