ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಬೆಳೆದು ಬಂದ ಹಾದಿ
ನವದೆಹಲಿ, ನವೆಂಬರ್.25: ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್(71) ಬುಧವಾರ ಗುರುಗ್ರಾಮ್ ಖಾಸಗಿ ಆಸ್ಪತ್ರೆಯಲ್ಲಿ ವಿಧವಶರಾಗಿದ್ದಾರೆ. ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರಿಗೆ ತಿಂಗಳ ಹಿಂದೆಯಷ್ಟೇ ಕೊವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿತ್ತು.
"ನಮ್ಮ ತಂದೆ ಅಹ್ಮದ್ ಪಟೇಲ್ ಅವರು 25/11/2020ರ ಬುಧವಾರ ಬೆಳಗಿನ ಜಾವ 3.30ರ ವೇಳೆ ನಮ್ಮನ್ನೆಲ್ಲ ಅಗಲಿ ಹೋಗಿದ್ದಾರೆ ಎಂದು ತಿಳಿಸುವುದಕ್ಕೆ ವಿಷಾದಿಸುತ್ತೇನೆ. ಕಳೆದ ಒಂದು ತಿಂಗಳ ಹಿಂದೆ ಅವರಿಗೆ ಕೊರೊನಾವೈರಸ್ ತಗುಲಿರುವುದು ದೃಢಪಟ್ಟಿದ್ದು, ಅಂದಿನಿಂದ ಅವರ ಆರೋಗ್ಯ ಬಹಳಷ್ಟು ಹದಗೆಟ್ಟಿತ್ತು. ಅವರ ಆತ್ಮಕ್ಕೆ ಅಲ್ಲಾ ಶಾಂತಿ ನೀಡಲಿ" ಎಂದು ಪುತ್ರ ಫೈಜಲ್ ಟ್ವಿಟರ್ ಮೂಲಕ ತಮ್ಮ ತಂದೆಯ ಸಾವಿನ ಬಗ್ಗೆ ಬರೆದುಕೊಂಡಿದ್ದಾರೆ.
ಅಹ್ಮದ್ ಪಟೇಲ್ ನಿಧನಕ್ಕೆ ರಾಜ್ಯ ಕಾಂಗ್ರೆಸ್ ನಾಯಕರ ಸಂತಾಪ
ಕಾಂಗ್ರೆಸ್ ಪಕ್ಷದಿಂದಲೇ ರಾಜಕೀಯ ಜೀವನ ಆರಂಭಿಸಿದ ಅಹ್ಮದ್ ಪಟೇಲ್ ಪಕ್ಷನಿಷ್ಠೆಗೆ ಹೆಸರುವಾಸಿ ಆಗಿದ್ದರು. ಗುಜರಾತ್ ಪುಟ್ಟ ಹಳ್ಳಿಯಿಂದ ಸಂಘಟನೆ ಸಾಮರ್ಥ್ಯ ಬೆಳೆಸಿಕೊಂಡದ್ದರು. ಸರಳ, ಸಜ್ಜನಿಕೆ ಮತ್ತು ಸೌಮ್ಯ ಸ್ವಭಾವದ ಇವರು ಯಾವುದೇ ಉನ್ನತ ಹುದ್ದೆ ಮತ್ತು ಸ್ಥಾನಕ್ಕಾಗಿ ಆಸೆಪಟ್ಟವರೇ ಅಲ್ಲ. ಅಹ್ಮದ್ ಪಟೇಲ್ ರಾಜಕೀಯ ವಲಯದಲ್ಲಿ "ಅಹ್ಮದ್ ಭಾಯ್" ಅಂತಲೇ ಪ್ರಖ್ಯಾತರಾಗಿದ್ದವರ ರಾಜಕೀಯ ಹಿನ್ನೆಲೆ ಕುರಿತು ಒಂದು ವರದಿ ಇಲ್ಲಿದೆ.
ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ವಿಧಿವಶ
3 ಬಾರಿ ಲೋಕಸಭೆ, 5 ಬಾರಿ ರಾಜ್ಯಸಭೆಗೆ ಆಯ್ಕೆ
ಕಾಂಗ್ರೆಸ್ ಪಕ್ಷದಿಂದಲೇ ರಾಜಕೀಯ ಜೀವನ ಆರಂಭಿಸಿದ ಅಹ್ಮದ್ ಪಟೇಲ್ ಅವರು ಎಂಟು ಬಾರಿ ಸಂಸತ್ ಸದಸ್ಯರಾಗಿ ಆಯ್ಕೆ ಆಗಿದ್ದರು. ಐದು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದರೆ ಮೂರು ಬಾರಿ ಲೋಕಸಭೆ ಸದಸ್ಯರಾಗಿ ಚುನಾಯಿತರಾಗಿದ್ದರು. 2018ರ ಆಗಸ್ಟ್ ತಿಂಗಳಿನಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಖಜಾಂಚಿಯಾಗಿ ನೇಮಕಗೊಂಡಿದ್ದರು.
ಅಹ್ಮದ್ ಪಟೇಲ್ ರಾಜಕೀಯ ಜೀವನ ಆರಂಭ
ಗುಜರಾತ್ ಭರೂಚ್ ಜಿಲ್ಲೆಯಲ್ಲಿ 1976ರಲ್ಲಿ ನಡೆದ ಸ್ಥಳೀಯ ಚುನಾವಣೆಯಿಂದ ಅಹ್ಮದ್ ಪಟೇಲ್ ಅವರು ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದರು. ತದನಂತರ ಗುಜರಾತ್ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಹೊಣೆ ವಹಿಸಿಕೊಂಡಿದ್ದರು. 1985ರಲ್ಲಿ ರಾಜೀವ್ ಗಾಂಧಿ ಪ್ರಧಾನಮಂತ್ರಿ ಆಗಿದ್ದ ವೇಳೆಯಲ್ಲಿ ಸಂಸತ್ ಕಾರ್ಯದರ್ಶಿಯಾಗಿ ಅಹ್ಮದ್ ಪಟೇಲ್ ಸೇವೆ ಸಲ್ಲಿಸಿದ್ದರು.
ನಿಷ್ಠೆಯಿಂದಲೇ ಮನ್ನಣೆ ಪಡೆದಿದ್ದ ಪಟೇಲ್
ಅಹ್ಮದ್ ಪಟೇಲ್ ಅವರು ನೆಹರೂ ಮತ್ತು ಗಾಂಧಿ ಕುಟುಂಬದ ಬಗ್ಗೆ ಹೆಚ್ಚು ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಹೊಂದಿದ್ದರು. ಎಂಥಾ ಸಂದಿಗ್ಧ ಸ್ಥಿತಿಯಲ್ಲೂ ಕಾಂಗ್ರೆಸ್ ಮೇಲಿನ ನಿಷ್ಠೆ, ಪಕ್ಷದ ಧುರೀಣರ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಸೋನಿಯಾ ಗಾಂಧಿಯವರು ಕಾಂಗ್ರೆಸ್ ಪ್ರವೇಶಿಸಿದ ಸಮಯದಲ್ಲಿ ನಿಷ್ಠೆಗೆ ಹೆಸರಾಗಿದ್ದ ಅಹ್ಮದ್ ಪಟೇಲ್ ರನ್ನೇ ತಮ್ಮ ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸಿಕೊಂಡಿದ್ದರು.
ಉನ್ನತ ಹುದ್ದೆಗೆ ಆಸೆ ಪಟ್ಟವರಲ್ಲ ಅಹ್ಮದ್ ಪಟೇಲ್
ಕಾಂಗ್ರೆಸ್ ಪಕ್ಷದಲ್ಲಿ ಪ್ರಬಲ ನಾಯಕರ ನಡುವೆಯೇ ಉನ್ನತ ಸ್ಥಾನದಲ್ಲಿ ಅಹ್ಮದ್ ಪಟೇಲ್ ಗುರುತಿಸಿಕೊಂಡಿದ್ದರು. ಪಕ್ಷದ ಧುರೀಣರ ನಡುವೆಯೇ ನಿಂತಿದ್ದರೂ ಸರಳ ಮತ್ತು ಸೌಮ್ಯ ನಡೆಯಿಂದಲೇ ಎಲ್ಲರ ಗಮನ ಸೆಳೆಯುತ್ತಿದ್ದ ಇವರು ಎಂದಿಗೂ ಉನ್ನತ ಹುದ್ದೆಗಾಗಿ ಆಸೆ ಪಟ್ಟವರಲ್ಲ. ಸರ್ಕಾರದ ಭಾಗವಾಗಿ ಕೆಲಸ ಮಾಡಲು ಎಂದಿಗೂ ಬಯಸಿದವರಲ್ಲ. ಪಕ್ಷದ ಕೆಳ ಹಂತದಲ್ಲಿಯೇ ತಮ್ಮನ್ನು ಗುರುತಿಸಿಕೊಳ್ಳಲು ಅಹ್ಮದ್ ಪಟೇಲ್ ಬಯಸುತ್ತಿದ್ದರು.
ರಾಜಕಾರಣದಲ್ಲಿ ಅಹ್ಮದ್ ಪಟೇಲ್ ಹಾದಿ
ಗುಜರಾತಿನ ಭರೂಚ್ ನಲ್ಲಿ ಜನಿಸಿದ ಅಹ್ಮದ್ ಪಟೇಲ್ ಮೊದಲಿಗೆ ಯುವ ಕಾಂಗ್ರೆಸ್ ಸೇರ್ಪಡೆಗೊಂಡರು. ಕಾಲಾಂತರದಲ್ಲಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರು. 1977ರಲ್ಲಿ ಮೊದಲ ಬಾರಿಗೆ ಭರೂಚ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಹ್ಮದ್ ಪಟೇಲ್ ರನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಆಯ್ಕೆ ಮಾಡಿದ್ದರು. 1980 ಮತ್ತು 1984ರಲ್ಲಿ ಭರೂಚ್ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಅಹ್ಮದ್ ಪಟೇಲ್ ಆಯ್ಕೆಯಾದರು. 2004-2014ರ ಯುಪಿಎ-1 ಮತ್ತು ಯುಪಿಎ-2 ಸರ್ಕಾರದ ಆಡಳಿತದಲ್ಲಿ ಅಹ್ಮದ್ ಪಟೇಲ್ ಪ್ರಮುಖ ಪಾತ್ರ ವಹಿಸಿದ್ದರು. 2017ರಲ್ಲಿ ಸಂಸತ್ ಮೇಲ್ಮನೆ ಸದಸ್ಯರಾಗಿ ಅಹ್ಮದ್ ಪಟೇಲ್ ಆಯ್ಕೆಯಾಗಿದ್ದರು.