ಬಿಜೆಪಿ ಜುಟ್ಟು ಜಗ್ಗಲು ಲೋಕಲ್ ಜಟ್ಟಿಗಳ ಟೋಳಿ ಕಟ್ಟಿಕೊಂಡ ಕಾಂಗ್ರೆಸ್!
ಉತ್ತರ ಪ್ರದೇಶದಲ್ಲಿ ದೊಡ್ಡ ಮಟ್ಟದ ಮೈತ್ರಿ ಈಗಾಗಲೇ ಅಂತಿಮವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ನೀವಂದುಕೊಂಡಂತೆ ಲೋಕಸಭೆ ಚುನಾವಣೆಗೆ ಸಂಬಂಧಿಸಿದ್ದು ಅನ್ನೋದು ನೂರಕ್ಕೆ ನೂರು ಸತ್ಯ. ಆದರೆ ಈ ಮೈತ್ರಿ ಯಾರ-ಯಾರದು ಎಂಬುದು ಬಹಳ ಆಸಕ್ತಿಕರವಾಗಿದೆ.
ಕಾಂಗ್ರೆಸ್-ಅಖಿಲೇಶ್ ರ ಸಮಾಜವಾದಿ ಪಕ್ಷ- ದಲಿತ ನಾಯಕಿ ಮಾಯಾವತಿ ಅವರ ಬಿಎಸ್ ಪಿ ಹಾಗೂ ಆರ್ ಎಲ್ ಡಿಯ ಅಜಿತ್ ಸಿಂಗ್ ಒಟ್ಟಿಗೆ ಕೈ ಜೋಡಿಸುತ್ತಿದ್ದಾರೆ. ಇವರೆಲ್ಲರೂ ಒಟ್ಟಾಗಿ ಬಿಜೆಪಿಯನ್ನು ಎದುರಿಸಲಿದ್ದಾರೆ. ಸಂಖ್ಯೆ ದೃಷ್ಟಿಯಿಂದ ಉತ್ತರ ಪ್ರದೇಶ ಬಹಳ ಮುಖ್ಯವಾದದ್ದು. ಏಕೆಂದರೆ, ದೇಶದಲ್ಲೇ ಅತಿ ಹೆಚ್ಚು ಸಂಸದರನ್ನು ಆರಿಸಿ ಕಳಿಸುವ ರಾಜ್ಯ ಉತ್ತರಪ್ರದೇಶ.
ಲೋಕಸಮರದಲ್ಲಿ ಬಿಜೆಪಿಯನ್ನು ಹಣಿಯಲು ಕಾಂಗ್ರೆಸ್ 'ಉದಾರ ನೀತಿ'
ಉತ್ತರಪ್ರದೇಶದಲ್ಲಿ ಎಂಬತ್ತು ಲೋಕಸಭಾ ಸ್ಥಾನಗಳಿದ್ದು, ಸೀಟು ಹಂಚಿಕೆ ವಿಚಾರವಾಗಿ ಆ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ಉತ್ತರಪ್ರದೇಶದಲ್ಲಿ ಇಂಥದ್ದೊಂದು ಮೈತ್ರಿ ಏರ್ಪಡುವುದು ದೇಶದ ಇತರ ರಾಜ್ಯಗಳ ಪಾಲಿನ ಮಾದರಿಯೂ ಆಗಬಹುದು. ಜತೆಗೆ ದೊಡ್ಡ ಶಕ್ತಿಯಾಗಿ ಹೊಮುತ್ತಿರುವ ಬಿಜೆಪಿಯನ್ನು ನಿಲ್ಲಿಸಲು ಹೊಸ ತಂತ್ರವಾಗಿಯೂ ಕಾಣುತ್ತದೆ.
ಉತ್ತರಪ್ರದೇಶದಲ್ಲಿ ರಣತಂತ್ರ ಫಲ ನೀಡಿತ್ತು
ಇದೇ ಮಾದರಿಯು ಉತ್ತರಪ್ರದೇಶದಲ್ಲಿ ನಡೆದ ಲೋಕಸಭೆ ಉಪ ಚುನಾವಣೆಗಳಲ್ಲಿ ಫಲ ನೀಡಿತ್ತು. ಗೋರಖ್ ಪುರ್, ಫುಲ್ ಪುರ್, ಕೈರಾನಾ ಮತ್ತು ನೂರ್ ಪುರ್ ನಲ್ಲಿ ಹೊಂದಾಣಿಕೆ ರಾಜಕೀಯವು ಬಿಜೆಪಿಯ ವಿರೋಧ ಪಕ್ಷಗಳಿಗೆ ಹೊಸ ಸಾಧ್ಯತೆಯೊಂದನ್ನು ತೋರಿಸಿದ್ದವು. ಕಳೆದ ವಾರವಷ್ಟೇ ಎನ್ ಸಿಪಿ ಮುಖ್ಯಸ್ಥರಾದ ಶರದ್ ಪವಾರ್ ಕೂಡ ಮಾಯಾವತಿ ಅವರನ್ನು ಭೇಟಿ ಮಾಡಿದ್ದರು. ಮೂಲಗಳೇ ಹೇಳುವ ಪ್ರಕಾರ, ಈ ವರ್ಷದ ಕೊನೆಗೆ ನಡೆಯಲಿರುವ ರಾಜಸ್ತಾನ, ಛತ್ತೀಸ್ ಗಢ ಮತ್ತು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಎನ್ ಸಿಪಿ ಹಾಗೂ ಬಿಎಸ್ ಪಿ ಮಧ್ಯೆ ಮೈತ್ರಿ ಮಾಡಿಕೊಳ್ಳುವ ವಿಚಾರವಾಗಿ ಭೇಟಿಯಾಗಿದ್ದರು.
ಮಧ್ಯಪ್ರದೇಶದಲ್ಲಿ ದೋಸ್ತಿ ಸಾಧ್ಯತೆ ಇಲ್ಲ
ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ ಪಿಗೆ ಐವತ್ತು ಸ್ಥಾನಗಳನ್ನು ಬಿಟ್ಟುಕೊಡಬೇಕು ಎಂಬ ಮಾಯಾವತಿ ಬೇಡಿಕೆಯನ್ನು ಕಾಂಗ್ರೆಸ್ ತಿರಸ್ಕರಿಸಿದೆ. ಅಲ್ಲಿರುವ ಒಟ್ಟು 230 ಸ್ಥಾನಗಳಲ್ಲಿ 22 ಬಿಟ್ಟುಕೊಡಬಹುದು. ಸಂಖ್ಯೆ 30 ದಾಟುವ ಸಾಧ್ಯತೆಯೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಆದ್ದರಿಂದ ಅಲ್ಲಿ ಬಿಎಸ್ ಪಿ ಹಾಗೂ ಕಾಂಗ್ರೆಸ್ ಹೊಂದಾಣಿಕೆ ಆಗುವ ಸಾಧ್ಯತೆ ಇಲ್ಲ. ಕಾಂಗ್ರೆಸ್- ಬಿಎಸ್ ಪಿ ಒಟ್ಟಿಗೆ ಬಿಜೆಪಿಯನ್ನು ಎದುರಿಸಿದ್ದರೆ ಅದರ ಕಥೆಯೇ ಬೇರೆ ಇತ್ತು. ಆದರೆ ಹೀಗೆ ಬೇರೆ ಬೇರೆ ಆಗಿ ಚುನಾವಣೆ ಅಖಾಡಕ್ಕೆ ಇಳಿದರೆ ಅದರಿಂದ ಬಿಜೆಪಿಗೆ ಲಾಭ ಆಗುತ್ತದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.
ಉತ್ತರಪ್ರದೇಶದಲ್ಲಿ ಸೀಟು ಹಂಚಿಕೆ ಹೀಗಾಗಬಹುದು
ಇನ್ನು ಉತ್ತರಪ್ರದೇಶದ ವಿಚಾರಕ್ಕೆ ಬಂದರೆ ಮೈತ್ರಿ ಮಾತುಕತೆ ಪ್ರಗತಿಯ ಹಂತದಲ್ಲೇ ಇದೆ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತವೆ. ಈಗಾಗಲೇ ಸಮಾಜವಾದಿ ಪಕ್ಷ ಹಾಗೂ ಬಿಎಸ್ ಪಿ ಮಧ್ಯೆ ಒಂದು ಮಟ್ಟಿಗಿನ ಒಪ್ಪಂದ ಇದೆ. ಆ ರಾಜ್ಯದಲ್ಲಿ ಸೀಟು ಹಂಚಿಕೆ ವಿಚಾರ ಬಂದಾಗ ಎಸ್ ಪಿ ಪಾಲಿನ ಸ್ಥಾನಗಳನ್ನು ಅಜಯ್ ಸಿಂಗ್ ಪಕ್ಷಕ್ಕೆ ಬಿಟ್ಟುಕೊಡಲಾಗುತ್ತದೆ. ಉತ್ತರಪ್ರದೇಶದಲ್ಲಿನ ಎಂಬತ್ತು ಸ್ಥಾನಗಳಲ್ಲಿ ಕಾಂಗ್ರೆಸ್ ಗೆ ಎಂಟು ಅಥವಾ ಅದು ತೀರಾ ಕಡಿಮೆ ಆಯಿತು ಅಂದರೆ ಹತ್ತು, ಬಿಎಸ್ ಪಿಗೆ ಅತಿ ಹೆಚ್ಚು ಸ್ಥಾನ, ಸಮಾಜವಾದಿ ಪಕ್ಷಕ್ಕೆ ಅಂದಾಜು ಮೂವತ್ತೆರಡು ಸ್ಥಾನ ಹಾಗೂ ಆರ್ ಎಲ್ ಡಿಗೆ ಮೂರು ಸ್ಥಾನ ಹಂಚಿಕೆ ಆಗಬಹುದು ಎಂಬ ಲೆಕ್ಕಾಚಾರ ಇದೆ.
ಮಹಾರಾಷ್ಟ್ರದಲ್ಲಿ ಎನ್ ಸಿಪಿ ಜತೆಗೆ ಕಾಂಗ್ರೆಸ್
ಜಾರ್ಖಂಡ್, ಮಹಾರಾಷ್ಟ್ರ, ಬಿಹಾರ, ತಮಿಳುನಾಡು ಹಾಗೂ ಕೇರಳದಲ್ಲಿ ಲೋಕಸಭೆ ಚುನಾವಣೆಗೆ ಮೈತ್ರಿ ಯಾರ ಜತೆಗೆ ಎಂಬುದನ್ನು ಕಾಂಗ್ರೆಸ್ ಈಗಾಗಲೇ ಅಂತಿಮ ಮಾಡಿಕೊಂಡಿದೆ. ಜಾರ್ಖಂಡ್ ನಲ್ಲಿ ಜೆಎಂಎಂ, ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಡಪಕ್ಷಗಳು, ಬಿಹಾರದಲ್ಲಿ ಲಾಲೂ ಪ್ರಸಾದ್ ರ ಆರ್ ಜೆಡಿ ಜತೆಗೆ ಮಹಾ ಘಟಬಂಧನ್ ಮಾಡಿಕೊಂಡಿದೆ. ಮಹಾರಾಷ್ಟ್ರದಲ್ಲಿ ಎನ್ ಸಿಪಿಯ ಶರದ್ ಪವಾರ್ ಜತೆಗೆ ಸೀಟು ಹಂಚಿಕೆ ವಿಚಾರವಾಗಿ ಮಾತುಕತೆ ನಡೆಸಿದೆ. ಎನ್ ಸಿಪಿ ಜತೆಗೆ ಇನ್ನೂ ಹಲವು ಸಣ್ಣ ಪಕ್ಷಗಳು ಮೈತ್ರಿಕೂಟದ ಭಾಗವಾಗುವ ಸಾಧ್ಯತೆಗಳಿವೆ.