ಕರ್ನಾಟಕ: ಕೈ- ಕಮಲಕ್ಕೆ ಅಧಿಕಾರ ತಂದುಕೊಡಬಹುದಾದ ರಾಜ್ಯ!
ಮೈಸೂರು, ಮಾರ್ಚ್ 11: ಪಂಚರಾಜ್ಯ ಚುನಾವಣೆ ಬಳಿಕ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಅಧಿಕಾರ ತಂದುಕೊಡಬಹುದಾದ ಏಕೈಕ ರಾಜ್ಯ ಕರ್ನಾಟಕವಾಗಿದ್ದು, ಹೀಗಾಗಿ ಇನ್ಮುಂದೆ ಎಲ್ಲ ರಾಜಕೀಯ ಚಟುವಟಿಕೆಗಳು ರಾಜ್ಯದಲ್ಲಿ ಆರಂಭವಾಗುವುದು ಖಚಿತವಾಗಿದೆ.
ಈಗಾಗಲೇ ನಾಲ್ಕು ರಾಜ್ಯಗಳಲ್ಲಿ ಅಧಿಕಾರ ಉಳಿಸಿಕೊಂಡಿರುವ ಬಿಜೆಪಿಗೆ ಕರ್ನಾಟಕ ಬಹುಮುಖ್ಯವಾಗಿದ್ದು, ಇನ್ನೊಂದು ವರ್ಷದಲ್ಲಿ ಏನೆಲ್ಲ ತಂತ್ರಗಳನ್ನು ಮಾಡಬಹುದೋ ಅದೆಲ್ಲವನ್ನು ಮಾಡಲು ಈಗಿನಿಂದಲೇ ಬಿಜೆಪಿ ಹೈಕಮಾಂಡ್ ತಯಾರಿ ನಡೆಸಿದೆ. ರಾಜ್ಯದಲ್ಲಿ ಮೋದಿ ಹವಾ ಇರುವುದರಿಂದ ಅದನ್ನು ಪಕ್ಷವು ಸಂಪೂರ್ಣವಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ.
ಪಂಚರಾಜ್ಯ ಚುನಾವಣೆ ರಾಜ್ಯಕ್ಕೂ ದಿಕ್ಸೂಚಿ, 2023ರಲ್ಲಿ ಬಿಜೆಪಿಗೆ ಅಧಿಕಾರ ಖಚಿತ: ಅಶೋಕ್
ತಲೆಕೆಳಗಾದ ಕಾಂಗ್ರೆಸ್ ಲೆಕ್ಕಾಚಾರ
ಪಂಚರಾಜ್ಯಗಳ ಚುನಾವಣೆಯ ಫಲಿತಾಂಶವನ್ನು ಎಲ್ಲ ಪಕ್ಷದವರು ಕುತೂಹಲದಿಂದ ನೋಡುತ್ತಿದ್ದರು. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಲೆ ಶುರುವಾಗಿದೆ. ಹೀಗಾಗಿ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಮುಗ್ಗರಿಸಿದರೆ ಮುಂದಿನ ದಿನಗಳಲ್ಲಿ ತೃತೀಯ ರಂಗ ಸ್ಥಾಪನೆ ಮಾಡುವ ಲೆಕ್ಕಾಚಾರದಲ್ಲಿ ಕೆಲವು ಸಣ್ಣಪುಟ್ಟ ಪಕ್ಷಗಳ ನಾಯಕರಿದ್ದರು. ಅದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಯತ್ತ ದೃಷ್ಟಿ ನೆಟ್ಟಿತ್ತು. ಹೀಗಾಗಿ ಹೊಸ ಪ್ರಯೋಗ ಮಾಡಿತ್ತು. ರಾಹುಲ್ ಗಾಂಧಿಯವರನ್ನು ಬದಿಗೆ ಸರಿಸಿ ಪ್ರಿಯಾಂಕಾ ಗಾಂಧಿಯವರನ್ನು ಮುಖ್ಯವಾಹಿನಿಗೆ ಬಂದಿದ್ದರು. ಅವರ ನೇತೃತ್ವದಲ್ಲಿಯೇ ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರಗಳು ನಡೆದವು.
ಪ್ರಿಯಾಂಕಾ ಗಾಂಧಿ ಚುನಾವಣಾ ಅಖಾಡಕ್ಕೆ ಇಳಿದಿದ್ದು, ಕಾಂಗ್ರೆಸ್ ನಾಯಕರಲ್ಲಿ ಹೊಸ ಭರವಸೆಯನ್ನು ಹುಟ್ಟುಹಾಕಿತ್ತು. ಆದರೆ ಪ್ರಿಯಾಂಕಾ ಗಾಂಧಿ ಹಿರಿಯ ನಾಯಕರನ್ನು ಬದಿಗಿಟ್ಟು ಮುಂಚೂಣಿಯಲ್ಲಿ ನಿಂತು ಅಬ್ಬರದ ಪ್ರಚಾರ ನಡೆಸಿದರು. ಮಹಿಳೆಯರಿಗೆ ಟಿಕೆಟ್ ನೀಡಿ ಕಣಕ್ಕಿಳಿಸಿದರು. ಅವರ ಈ ತಂತ್ರ ಫಲಿಸಬಹುದು ಎಂಬ ಭರವಸೆಯಿತ್ತು. ಆದರೆ ಫಲಿತಾಂಶದಲ್ಲಿ ಅದ್ಯಾವುದೂ ಫಲಿಸಿದಂತೆ ಕಾಣುತ್ತಿಲ್ಲ. ಒಂದು ವೇಳೆ ಪ್ರಿಯಾಂಕಾ ಗಾಂಧಿ ಅವರ ತಂತ್ರಗಳು ಕಮಾಲ್ ಮಾಡಿದ್ದರೆ, ಅದರ ಪರಿಣಾಮ ರಾಜ್ಯದ ಮೇಲೆ ನೇರ ಬೀರುತ್ತಿತ್ತು. ಆದರೆ ಅದ್ಯಾವುದೂ ಆಗದಿರುವುದು ರಾಜ್ಯದಲ್ಲಿ ಕಾಂಗ್ರೆಸ್ ನಾಯಕರಿಗೆ ಗರಬಡಿದಂತೆ ಮಾಡಿದೆ.
ಸಣ್ಣಪುಟ್ಟ ಪಕ್ಷಗಳು ಬೆಳೆಯಲು ದಾರಿ
ಬಿಜೆಪಿಯನ್ನು ಪದೇಪದೇ ಕೋಮುವಾದಿ ಎನ್ನುತ್ತಲೇ ಬರುತ್ತಿರುವ ಕಾಂಗ್ರೆಸ್ ನಾಯಕರು ಹಿಂದೂಪರ ಸಂಘಟನೆಗಳನ್ನು ದ್ವೇಷಿಸುವ ಭರದಲ್ಲಿ ಇಡೀ ಹಿಂದೂ ಸಮುದಾಯವನ್ನೇ ಟಾರ್ಗೆಟ್ ಮಾಡುವಂತೆ ಮಾತನಾಡುವುದು, ಬೇರೆ ಯಾರು ಅಧಿಕಾರ ಹಿಡಿದರೂ ಪರವಾಗಿಲ್ಲ ಅವರಿಗೆ ಬೆಂಬಲ ನೀಡುತ್ತೇವೆ. ಆದರೆ ಬಿಜೆಪಿಗೆ ಮಾತ್ರ ಅವಕಾಶ ನೀಡಬಾರದು ಎಂಬ ಧೋರಣೆಗಳು ಇತರೆ ಸಣ್ಣಪುಟ್ಟ ಪಕ್ಷಗಳು ಬೆಳೆಯಲು ದಾರಿ ಮಾಡಿಕೊಡುತ್ತಿದೆ. ಅದು ಇವತ್ತು ಬಿಜೆಪಿಗಿಂತಲೂ ಕಾಂಗ್ರೆಸ್ಗೆ ಮಗ್ಗುಲ ಮುಳ್ಳಾಗಿ ಚುಚ್ಚುತ್ತಿದೆ. ಇದಕ್ಕೆ ಪಂಜಾಬ್ನಲ್ಲಿ ಅಧಿಕಾರಕ್ಕೆ ಬಂದ ಎಎಪಿ ಸಾಕ್ಷಿಯಾಗಿದೆ.
ರಾಜ್ಯದಲ್ಲಿ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದಾಗ ಬಿಜೆಪಿಗೆ ಅವಕಾಶ ಕೊಡಬಾರದು ಎಂಬ ಒಂದೇ ಕಾರಣಕ್ಕೆ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿ ಮುಖ್ಯಮಂತ್ರಿಯಾಗುವಂತೆ ಮಾಡಿದ ಕಾಂಗ್ರೆಸ್ ಅದರಿಂದ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಎಂಬುದು ನಮ್ಮ ಮುಂದಿದೆ.
ಕಾಂಗ್ರೆಸ್ ನಾಯಕರ ಒಗ್ಗಟ್ಟಿನ ಮಂತ್ರ
ಇತ್ತೀಚೆಗೆ ಕಾಂಗ್ರೆಸ್ ಮಾಡಿದ ಮೇಕೆದಾಟು ಪಾದಯಾತ್ರೆ ಒಂದಷ್ಟು ಲಾಭ ತಂದುಕೊಟ್ಟಿತ್ತು. ಅದರಲ್ಲಿ ಪಕ್ಷದ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದ್ದರಾದರೂ ಅದು ಸಾಮೂಹಿಕ ನಾಯಕತ್ವದ, ಪಕ್ಷದ ಹೋರಾಟ ಅಂತ ಎನಿಸಲೇ ಇಲ್ಲ. ಅಲ್ಲಿ ಡಿ.ಕೆ. ಶಿವಕುಮಾರ್ ಅವರ ಪಾದಯಾತ್ರೆ ಎಂಬಂತೆ ಬಿಂಬಿತವಾಯಿತು.
ಅದಾದ ನಂತರ ಸರ್ಕಾರದ ವಿರುದ್ಧ ಹೋರಾಡಲೇಬೇಕೆಂಬ ಒಂದೇ ಉದ್ದೇಶಕ್ಕೆ ಅಧಿವೇಶನದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಯಿತು. ಅದರಿಂದ ಅಧಿವೇಶನ ಹಾಳಾಯಿತು. ಇದು ಜನವಲಯದಲ್ಲಿ ಬೇರೆಯದ್ದೇ ಆದ ಸಂದೇಶ ರವಾನೆಯಾಯಿತು. ಕಾಂಗ್ರೆಸ್ ನಾಯಕರ ವರ್ತನೆಗೆ ಬಿಜೆಪಿ ನಾಯಕರು ಮಾತ್ರವಲ್ಲ ಜೆಡಿಎಸ್ ನಾಯಕರು ಕೂಡ ವಿರೋಧ ವ್ಯಕ್ತಪಡಿಸಿದರು.
ಕಾಂಗ್ರೆಸ್ನ ಘಟಕಗಳು ಸಕ್ರಿಯವಾಗಿಲ್ಲ
ಇದೆಲ್ಲವನ್ನು ಗಮನಿಸಿದರೆ ಕಾಂಗ್ರೆಸ್ ಕೇವಲ ವಿರೋಧ ಮಾಡುವುದರಿಂದಲೇ ಜನರನ್ನು ತಮ್ಮತ್ತ ಸೆಳೆಯಬಹುದು ಎಂಬ ಭ್ರಮೆಯಲ್ಲಿದೆ. ಅದನ್ನು ಬಿಟ್ಟು ತಳಮಟ್ಟದಿಂದ ಕಾರ್ಯಕರ್ತರನ್ನು ಹುಟ್ಟು ಹಾಕಿ ಪಕ್ಷವನ್ನು ಭದ್ರಪಡಿಸುವ ಕೆಲಸಕ್ಕೆ ಮುಂದಾಗಬೇಕು. ಆದರೆ ಅದು ಆದಂತೆ ಕಾಣುತ್ತಿಲ್ಲ. ಜತೆಗೆ ಕಾಂಗ್ರೆಸ್ನ ವಿವಿಧ ಘಟಕಗಳು ಸಕ್ರಿಯವಾಗಿರುವಂತೆ ಗೋಚರಿಸುತ್ತಿಲ್ಲ. ಬಹುಶಃ ಮುಂದಿನ ದಿನಗಳಲ್ಲಿ ಪಂಚರಾಜ್ಯ ಚುನಾವಣೆಯಲ್ಲಿ ಎಲ್ಲಿ ಎಡವಿದ್ದೇವೆ ಎನ್ನುವುದನ್ನು ಪರಾಮರ್ಶೆ ಮಾಡುವ ಅನಿವಾರ್ಯತೆ ಕಾಂಗ್ರೆಸ್ ನಾಯಕರದ್ದಾಗಿದೆ.
ಮೇಲ್ನೋಟಕ್ಕೆ ಕಾಂಗ್ರೆಸ್ ಮುಂದಿನ ಸಿಎಂ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ. ಜತೆಗೆ ಯಾರ ನೇತೃತ್ವದಲ್ಲಿ ಚುನಾವಣೆ ಹೋಗುತ್ತೇವೆ ಎನ್ನುವುದನ್ನು ಕೂಡ ಹೇಳಿಲ್ಲ. ಸಾಮೂಹಿಕ ನಾಯಕತ್ವದ ಜಪ ಮಾಡುತ್ತಿದ್ದಾರೆಯಾದರೂ ಅದು ಎಷ್ಟರ ಮಟ್ಟಿಗೆ ಅನುಕೂಲವಾಗುತ್ತದೆ ಎನ್ನುವುದು ಪ್ರಶ್ನೆಯಾಗಿ ಉಳಿದಿದೆ.
ಹಠಕ್ಕೆ ಬಿದ್ದ ಎರಡು ಪಕ್ಷಗಳ ನಾಯಕರು
ಇನ್ನು ಪಂಚರಾಜ್ಯ ಚುನಾವಣೆಯ ಗೆಲುವು ಬಿಜೆಪಿಗೆ ಹುಮ್ಮಸ್ಸು ತಂದಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ಚುನಾವಣೆಗೆ ಹೋಗುವುದಾಗಿ ಘೋಷಣೆ ಮಾಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಕೂಡ ರಾಜ್ಯ ಪ್ರವಾಸ ಮಾಡುವುದಾಗಿ ಹೇಳಿದ್ದಾರೆ. ಇನ್ನು ಹೈಕಮಾಂಡ್ ಇತ್ತ ಗಮನಹರಿಸಿದ್ದು, ಖುದ್ದು ನರೇಂದ್ರ ಮೋದಿ ಅವರೇ ರಾಜ್ಯಕ್ಕೆ ಭೇಟಿ ನೀಡಿ ಚುನಾವಣಾ ಪ್ರಚಾರ ನಡೆಸುವ ಮಾತುಗಳು ಕೇಳಿ ಬರುತ್ತಿವೆ. ಒಟ್ಟಾರೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಅಧಿಕಾರ ಪಡೆಯಲು ಕರ್ನಾಟಕ ಪ್ರಮುಖವಾಗಿದ್ದು, ತಾವೇ ಅಧಿಕಾರ ಹಿಡಿಯಬೇಕೆಂಬ ಹಠಕ್ಕೆ ಎರಡು ಪಕ್ಷಗಳ ನಾಯಕರು ಬಿದ್ದಂತೆ ಕಂಡು ಬರುತ್ತಿದೆ. ಮುಂದಿನ ದಿನಗಳು ರಾಜಕೀಯ ಜಿದ್ದಾಜಿದ್ದಿಗೆ ಕರ್ನಾಟಕ ವೇದಿಕೆಯಾಗುವುದಂತು ಖಚಿತ.