ಕರ್ನಾಟಕ ಹೆಸರು ಬಂದಿದ್ದರ ಹಿಂದಿದೆ ರೋಚಕ ಇತಿಹಾಸ
ಮೈಸೂರು, ನವೆಂಬರ್ 1: ಇಂದು ನವೆಂಬರ್ 1. ಕನ್ನಡ ರಾಜ್ಯೋತ್ಸವದ ದಿನ. ಆದರೆ ನಮ್ಮಲ್ಲಿರುವ ಅನೇಕರಿಗೆ ನವೆಂಬರ್ 1 ರಂದೇ ಕನ್ನಡ ರಾಜ್ಯೋತ್ಸವ ಏಕೆ ಆಚರಿಸುತ್ತೇವೆಂದು ಗೊತ್ತಿಲ್ಲ?. ಆದ್ದರಿಂದ ಈ ಲೇಖನದಲ್ಲಿ ಕರ್ನಾಟಕ ಎಂಬ ಹೆಸರು ಹೇಗೆ ಬಂತು ? ಎಂದು ಬಂತು? ಹೀಗೆ ಕನ್ನಡ, ಕರ್ನಾಟಕ ಕುರಿತಾದ ಅನೇಕ ಮಾಹಿತಿಗಳನ್ನು ಕೊಡುತ್ತಿದ್ದೇವೆ.
ಅಂದು 1956ನೇ ನವೆಂಬರ್ 1 ಮೈಸೂರು ರಾಜ್ಯ ನಿರ್ಮಾಣವಾಯಿತು. ರಾಜ್ಯಗಳ ಪುನರ್ ವಿಂಗಡನೆ ಕಾಯಿದೆಯ ಮೇರೆಗೆ ಜನ್ಮ ತಳೆದ ನವ ರಾಜ್ಯವು ಕೇವಲ ಕನ್ನಡ ಭಾಷಾ ಪ್ರದೇಶಗಳ ಒಂದುಗೂಡಿಕೆಯಾಗಿರಲಿಲ್ಲ. ಸುಮಾರು 2 ಸಾವಿರ ವರ್ಷಗಳ ಉಜ್ವಲ ಇತಿಹಾಸ ಪರಂಪರೆ ಹಾಗೂ ಸಂಸ್ಕೃತಿಯುಳ್ಳ ಜನತೆಯ ಹೃದಯವನ್ನು ಅದು ಒಂದುಗೂಡಿಸಿತು.
ಕನ್ನಡಿಗರಿಗೆ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ನಲ್ಲಿ ಶುಭಾಶಯ
ಮೈಸೂರು ರಾಜ್ಯವನ್ನು ಕರ್ನಾಟಕವೆಂಬ ಹೆಸರಿನಿಂದ ಕರೆಯಬೇಕೆಂದು ತೀವ್ರವಾದ ಚರ್ಚೆಯು 1972ರ ಜುಲೈಯಲ್ಲಿ ಆರಂಭವಾಗಿ, ಅದಕ್ಕೆ ಕರ್ನಾಟಕ ಎಂದು ನಾಮಕರಣವನ್ನು ಮಾಡುವಂತೆ ಮೈಸೂರು ವಿಧಾನಸಭೆಯು ಸರ್ವಾನುಮತದಿಂದ ಇತ್ಯರ್ಥ ಮಾಡಲಾಯಿತು. ಆದರೆ ಹೆಸರಿನಲ್ಲಿ ಏನಿದೆ? ಎಂಬ ಪ್ರಶ್ನೆಯು ಬಹು ಮುಖ್ಯವಾದುದು.
ಕರ್ನಾಟಕ ಎಂಬ ಹೆಸರು ಮಹಾಭಾರತದಲ್ಲಿ ಉಲ್ಲೇಖವಿದೆ. ಕ್ರಿ.ಶ. 450ರಲ್ಲಿ ದಕ್ಷಿಣದಲ್ಲಿ ಆಳಿದ (ಕೋಲಾರ್, ಅಲ್ಲಿಂದ ತಲಕಾಡ್) ಗಂಗ ಅರಸರ ಸಾಮ್ರಾಜ್ಯವು ಕರ್ನಾಟಕ ಎಂದೆನಿಸಿತು. ಜಗದ್ದಳ ಸೋಮನಾಥ (ಕ್ರಿ.ಶ. 1150) ಕರ್ನಾಟ ಕಲ್ಯಾಣ ಕಾರಕ ಎಂಬುವನು ಆಯುರ್ವೇದ ಗ್ರಂಥವನ್ನು ಬರೆದನು.
ಈ ವರ್ಷದ ಕನ್ನಡ ರಾಜ್ಯೋತ್ಸವ ದಿನದಿಂದಲಾದರೂ ಹೀಗಾಗಲಿ...
1571ರಲ್ಲಿ ವಿಜಯನಗರ ಸಂಸ್ಥಾನದ ಅರಸರು ಕರ್ನಾಟ ಸಾಮ್ರಾಜ್ಯದ ದೊರೆ ಎಂದು ಕರೆಯಲ್ಪಟ್ಟಿದ್ದಾರೆ. ಈ ಶಬ್ದವು ಸಂಸ್ಕೃತವು. ಅದು ಕನ್ನಡ ಎಂಬ ಶಬ್ದದಿಂದ ಹುಟ್ಟಿದೆ. ಅದು ಕನ್ನಾಡು ಅಥವ ಕನ್ನಡ ನಾಡು ಹಾಗೂ ಕನ್ನಡ ಎಂಬ ಶಬ್ದವನ್ನು ಸೂಚಿಸುತ್ತದೆ. ಆದ್ದರಿಂದ ಕರ್ನಾಟ ಎಂಬುವುದನ್ನು ಕರ್ನಾಟಕ ಎಂದು ಕರೆಯುವುದು ರೂಢಿಯಲ್ಲಿದೆ. ಮುಂದೆ ಓದಿ...
ಆಲೂರು ವೆಂಕಟರಾಯರು ಅಗ್ರಗಣ್ಯರು
ಕರ್ನಾಟಕತ್ವವೆಂದರೆ ಕೇವಲ ದೇಶಾಭಿಮಾನವಲ್ಲ, ಭಾಷಾಭಿಮಾನವಲ್ಲ, ಇತಿಹಾಸಾಭಿಮಾನವಲ್ಲ ಅದರಲ್ಲಿ ಇವು ಮೂರೂ ಅಡಗಿದೆ. ರಾಷ್ಟ್ರೀಯತ್ವಕ್ಕೆ ವಿರುದ್ಧವಾದುದು ಕರ್ನಾಟಕತ್ವವಲ್ಲ.ಕರ್ನಾಟಕತ್ವಕ್ಕೆ ವಿರುದ್ಧವಾದುದು ನಿಜವಾದ ರಾಷ್ಟ್ರೀಯತ್ವದಲ್ಲ, ಕರ್ನಾಟಕದ ಬಗ್ಗೆ ಅಭಿಮಾನವನ್ನು ತಾಳುವುದೇ ಕರ್ನಾಟಕತ್ವ.
ಇಂತಹ ಉಜ್ವಲ ಅಭಿಮಾನವನ್ನು ವ್ಯಕ್ತಪಡಿಸಿದವರಲ್ಲಿ ಕರ್ನಾಟಕದ ಅಭಿಮಾನಿಗಳಲ್ಲಿ ಆಲೂರು ವೆಂಕಟರಾಯರು ಅಗ್ರಗಣ್ಯರು.
1973 ನವೆಂಬರ್ 1ರಂದು ರಾಜ್ಯೋದಯದ ದಿನ. ಮೈಸೂರು ಎಂಬ ಹೆಸರಿನ ಬದಲಿಗೆ ಕರ್ನಾಟಕವೆಂದು ಅಧಿಕೃತವಾಗಿ ನಾಮಕರಣ ಮಾಡಿದ ದಿನ. ಈ ಒಂದು ಹೆಬ್ಬಯಕೆ ಈಡೇರಿದ ಚರಿತ್ರೆಯನ್ನು ಈ ಕೆಳಗೆ ಕೊಡಲಾಗಿದೆ.
ಅಂದಿನ ಕನ್ನಡ ರಾಜ್ಯಗಳು
1905-20ರವರೆಗಿನ ಕಾಲದಲ್ಲಿ ಭಾರತದ ರಾಜಕೀಯ ರಂಗದಲ್ಲಿ ಕಾಲಿಟ್ಟ ಕರ್ನಾಟಕ ಕಾರ್ಯಕರ್ತರು ಎರಡೂ ವಸ್ತುಗಳನ್ನು ಕಂಡರು. ಭಾರತದ ಸ್ವಾತಂತ್ರ್ಯ, ಕರ್ನಾಟಕದ ಏಕೀಕರಣ. ಈಗಿನ ಕರ್ನಾಟಕ ರಾಜ್ಯವು ಆ ದಿನಕ್ಕೆ 30 ವರ್ಷಗಳ ಹಿಂದೆ 20 ಆಡಳಿತಗಳಿಗೆ ಒಳಗಾಗಿತ್ತು.
ಹೀಗೆ ಹರಿದು ಹಂಚಿಹೋದ ಕರ್ನಾಟಕವೂ ಆಗ 19 ಜಿಲ್ಲೆಗಳಾಗಿ ಪರಿಣಮಿಸಿತ್ತು. ಇದರಲ್ಲಿ ಕೆಲವು ಭಾಗಗಳು ಹೈದರಾಬಾದಿನಿಂದಲೂ ಕೆಲವು ಮುಂಬಯಿ ಅಧಿಪತ್ಯದಿಂದಲೂ ಮತ್ತೆ ಕೆಲವು ಮದರಾಸು, ಡೆಲ್ಲಿ ಮತ್ತು ಹಳೆಯ ಮೈಸೂರು ಇವುಗಳಿಂದ ಸಂಘಟಿತವಾಗಿದೆ.
ಆದರೆ, ಇದಕ್ಕೆ ಮುಂಚೆ ಇವುಗಳಲ್ಲದೆ ನೀಲಗಿರಿ, ಸೇಲಂ ಕೃಷ್ಣಗಿರಿ, ಹೊಸೂರು, ಅನಂತಪುರದ ಮಡಕಸಿ ತಾಲೋಕು, ಮಧೋಳ, ಸೊಂಡೂರು, ರಾಮದುರ್ಗ, ಜಮಖಂಡಿ, ಕೊಲ್ಲಾಪುರ, ಇವೆ ಮೊದಲಾದವುಗಳು, ಕನ್ನಡ ರಾಜ್ಯವಾಗಿದ್ದವು.
ಕನ್ನಡ ರಾಜ್ಯೋತ್ಸವ: ನಮ್ಮ 'ಆಟೋ ರಾಜ'ರ ಪಾತ್ರ ಎಷ್ಟಿದೆ?
ಧಾರವಾಡದ ಕನ್ನಡ ಗ್ರಂಥಕರ್ತರ ಸಮ್ಮೇಳನ
1890ರಲ್ಲಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಆರಂಭಿಸಲಾಯಿತು. ಅದೇ ಸಮಯದಲ್ಲಿ ಮೈಸೂರಿನಲ್ಲಿ ಮಹಾರಾಜರ ಪ್ರೋತ್ಸಾಹ ಬೆನಗಲ್ ರಾಮರಾಯರು 1903ರಲ್ಲಿ ಧಾರವಾಡದಲ್ಲಿ ಏಕೀಕರಣದ ಕಲ್ಪನೆಯನ್ನು ಜನತೆಯ ಮುಂದೆ ಮಂಡಿಸಿ ಭಾಷಣವನ್ನು ಮಾಡಿದರು.
ಲಾರ್ಡ್ ಕರ್ಜನ್1905ರಲ್ಲಿ ಬಂಗಾಳದ ವಿಭಜನೆ ಮಾಡಲು ಯತ್ನಿಸಿದಾಗ ಬಂಗಾಳಿಯರು ಅದನ್ನು ಪ್ರತಿಭಟಿಸಿದ ಸ್ಫೂರ್ತಿ ಪಡೆದು ಆಲೂರು ವೆಂಕಟರಾಯರು ವಿದ್ಯಾವರ್ಧಕ ಸಂಘದ ಮುಖ ಪತ್ರ ವಾಗ್ಭೂಷಣದಲ್ಲಿ1907ರಲ್ಲಿ ಏಕೀಕರಣವನ್ನು ಸಮರ್ಥಿಸಿದರು. 1907ರಲ್ಲಿ ಧಾರವಾಡದ ಕನ್ನಡ ಗ್ರಂಥಕರ್ತರ ಸಮ್ಮೇಳನವೊಂದು ನಡೆಯಿತು.
ಕರ್ನಾಟಕದ ಏಕೀಕರಣದ ಅವಶ್ಯಕತೆ
1915ರಲ್ಲಿ ಬೆಂಗಳೂರಿನಲ್ಲಿ ಮೈಸೂರು ಮಹಾರಾಜರ ಬೆಂಬಲ, ವಿಶ್ವೇಶ್ವರಾಯರ ಕ್ರಿಯಾಶೀಲದಿಂದಾಗಿ ಮೊದಲನೆಯ ಕನ್ನಡ ಪರಿಷತ್ತಿನ ಸ್ಥಾಪನೆಯಾಯಿತು. ಮುಂದೆ 1915-20ರವರೆಗೆ ಮೈಸೂರು, ಧಾರವಾಡ, ಹಾಸನ ಹೊಸಪೇಟೆಗಳಲ್ಲಿ ಪರಿಷತ್ತುಗಳ ಸಭೆಯು ಜರುಗಿದವು.
ಅದೇ ವರ್ಷ (1920) ನಾಗಪುರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಕರ್ನಾಟಕ ಪರಿಷತ್ತು ಕಡಪ ರಾಘವೇಂದ್ರ ರಾವ್, ಮುದವೀಡು ಕೃಷ್ಣರಾವ್, ಗಂಗಾಧರರಾವ್ ದೇಶಪಾಂಡೆ, ಇವರೆಲ್ಲರ ಪ್ರಯತ್ನದಿಂದ800 ಕಾಂಗ್ರೆಸ್ ಪ್ರತಿನಿಧಿಗಳು ಕರ್ನಾಟಕದಿಂದ ನಾಗಪುರಕ್ಕೆ ತೆರಳಿದರು.
ಹೊಸದಾಗಿ ಸ್ಥಾಪಿತವಾದ ಕೆ.ಪಿ.ಸಿ.ಸಿ. ಗೆ ಗಂಗಾಧರರಾವ್ ದೇಶಪಾಂಡೆ ಅಧ್ಯಕ್ಷರಾದರು. ಕರ್ನಾಟಕದ ಏಕೀಕರಣದ ಅವಶ್ಯಕತೆಯು ಜನರಿಗೆ ಭಾಸವಾಯಿತು.
ಕನ್ನಡಾಭಿಮಾನಕ್ಕೆ ಫ್ಯಾಷನ್ ಟಚ್: ಟೀ ಶರ್ಟ್ ಗಳಲ್ಲಿ ರಾರಾಜಿಸುತ್ತಿವೆ ಕನ್ನಡ ಪದಮಾಲೆಗಳು
ದಾವಣಗೆರೆಯಲ್ಲಿ ಸತ್ಯಾಗ್ರಹ
1924ರಲ್ಲಿ ಬೆಳಗಾಂನಲ್ಲಿ ನಡೆದ ಕಾಂಗ್ರೆಸ್ ಸಮ್ಮೇಳನದಲ್ಲಿ ಗಾಂಧೀಜಿಯವರು ಅಧ್ಯಕ್ಷರಾದರು. ಅಲ್ಲಿ ಏಕೀಕರಣ ಸಮ್ಮೇಳನವು ನಡೆಯಿತು. ಇಂತಹದೆ ಸಮ್ಮೇಳನಗಳು 1926-46ರವರೆಗೂ ನಡೆಯಿತು. 1930ರಲ್ಲಿ ಕೊಡಗಿನ ಮಡಿಕೇರಿಯಲ್ಲಿ ಸಹ ಕರ್ನಾಟಕ ಪರಿಷತ್ ಸಭೆಯು ಜರುಗಿತು. 1937ರಲ್ಲಿ ಭಾರತದ ಎಲ್ಲಾ ಪ್ರಾಂತ್ಯಗಳಲ್ಲಿ ರಾಜಕೀಯ ಚುನಾವಣೆಯು ನಡೆಯಿತು.
ಕಾಂಗ್ರೆಸ್ ಪಕ್ಷವು ಈ ಏಕೀಕರಣವನ್ನು ಬೆಂಬಲಿಸಿತು. 1938ರಲ್ಲಿ ಹುಟ್ಟಿದ ಮೈಸೂರು ಕಾಂಗ್ರೆಸ್ ಸಹ ಏಕೀಕರಣವನ್ನು ಪುರಸ್ಕರಿಸಿತು. 1938ರಲ್ಲಿ ಬೆನಗಲ್ ರಾಮರಾವ್ ಅವರ ಅಧ್ಯಕ್ಷತೆಯಲ್ಲಿ ಬಿ. ಶಿವಮೂರ್ತಿ ಶಾಸ್ತ್ರಿಗಳ ಕಾರ್ಯದರ್ಶತೆಯಲ್ಲಿ ಬೆಂಗಳೂರಿನಲ್ಲಿ ಪರಿಷತ್ತು ಸ್ಥಾಪಿತವಾಯಿತು. 1946ರಲ್ಲಿ ಕರ್ನಾಟಕಸ್ಥರ ಮಹಾಸಭೆ ಏಕೀಕರಣವನ್ನು ಪ್ರತಿಪಾದಿಸಿತು.
ಮೈಸೂರಿನ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಸೇರಿದ ಮೈಸೂರು ಕಾಂಗ್ರೆಸ್ ಸಭೆಯು ಸಹ ಅದನ್ನು ಸಮರ್ಥಿಸಿತು. 1947ರಲ್ಲಿ ದಿವಾನರ ಅಧ್ಯಕ್ಷತೆಯಲ್ಲಿ ಏಕೀಕರಣ ಸಮ್ಮೇಳನವು ಏಕೀಕರಣವನ್ನು ಪುಷ್ಟೀಕರಿಸಿತು. ಆಂಧ್ರ ಪ್ರಾಂತ್ಯಕ್ಕೆ ಪ್ರಥಮ ಭಾಷಾವಾರು ರಾಜ್ಯವು 1953ರಲ್ಲಿ ಲಭಿಸಿತ್ತು.
ಅದೇ ವರ್ಷದಲ್ಲಿ ಕಾಂಗ್ರೆಸ್ ಅಧಿವೇಶನವು ಹೈದರಾಬಾದಿನಲ್ಲಿ ನಡೆದಾಗ ಕೆಂಗಲ್ ಹನುಮಂತಯ್ಯನವರು ಏಕೀಕರಣವನ್ನು ಸಮರ್ಥಿಸಿ ಭಾಷಣ ಮಾಡಿದರು. ಅದೇ ಸಮಯದಲ್ಲಿ ನಿಜಲಿಂಗಪ್ಪ ಅವರು ಕೆ.ಪಿ.ಸಿ.ಸಿ.ಯಲ್ಲಿ ಅಧ್ಯಕ್ಷರಾಗಿ ಕರ್ನಾಟಕದ ಏಕೀಕರಣದ ಬಗ್ಗೆ ಅಹೋರಾತ್ರಿಯೂ ದುಡಿದರು.
1953ರಲ್ಲಿ ಇದರ ಗುರಿಯನ್ನು ಸಾಧಿಸಲು ದಾವಣಗೆರೆಯಲ್ಲಿ ಸತ್ಯಾಗ್ರಹ ನಡೆಯಿತು.
1956, ನ.1ರಲ್ಲಿ ಏಕೀಕೃತ ರಾಜ್ಯದ ಉದಯ
ಹೀಗೆ 1953-56ರವರೆಗೂ ನಡೆದ ನಿರಂತರ ಪ್ರಯತ್ನದಿಂದಾಗಿ 1956 ನವೆಂಬರ್ 1ರಲ್ಲಿ ಏಕೀಕೃತ ರಾಜ್ಯದ ಉದಯವಾಯಿತು. ಆದರೆ, ಕಾಸರಗೋಡು, ತಾಳವಾಡಿ, ಮಡಾಕಶಿರಾ, ಜತ್ತ್, ಅಕ್ಕಲಕೋಟೆ, ಸೊಲ್ಲಾಪುರ, ಹೊಸೂರು, ಇವೆಲ್ಲವೂ ಏಕೀಕೃತ ರಾಜ್ಯದಿಂದ, ಹೊರಗುಳಿದವು.
ಆದರೂ ವಿಜಯನಗರ ಸಾಮ್ರಾಜ್ಯ 1565ರಲ್ಲಿ ಒಡೆದ ಕನ್ನಡ ನೆಲವೂ ಒಂದಾಯಿತು. ಈ 19 ಜಿಲ್ಲೆಗಳಿಗೆ ಆಗ ಮೈಸೂರು ಎಂದು ಹೆಸರಾಗಿತ್ತು.