ಸಾಮಾನ್ಯ ಕಾರ್ಯಕರ್ತನಾಗಿ ಕೇಂದ್ರ ಮಂತ್ರಿಯಾದ ಎ. ನಾರಾಯಣಸ್ವಾಮಿ ವ್ಯಕ್ತಿ ಚಿತ್ರ
ಚಿತ್ರದುರ್ಗ, ಜುಲೈ 7: ಬೃಹತ್ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಕ್ಯಾಬಿನೆಟ್ ವಿಸ್ತರಣೆಯಾಗಿದ್ದು, ಕರ್ನಾಟಕದ ಚಿತ್ರದುರ್ಗ ಬಿಜೆಪಿ ಸಂಸದ ಎ. ನಾರಾಯಣಸ್ವಾಮಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.
Recommended Video
ಈಗಾಗಲೇ ಕುಟುಂಬ ಸಮೇತ ಸಂಸದ ಎ. ನಾರಾಯಣಸ್ವಾಮಿ ದೆಹಲಿಗೆ ತೆರಳಿದ್ದು, ಬುಧವಾರ ನಡೆದ ಮೋದಿ ನೇತೃತ್ವದ ಸಭೆಯಲ್ಲಿ ಭಾಗವಹಿಸಿದ್ದರು. 2019ರ ಚುನಾವಣೆಯ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ಅವರ ವಿರುದ್ಧ ಅನೇಕಲ್ ನಾರಾಯಣಸ್ವಾಮಿ ಭರ್ಜರಿ ಜಯ ಸಾಧಿಸಿದ್ದರು.
ನಾರಾಯಣಸ್ವಾಮಿ ಹಿನ್ನೆಲೆ
ಅಬ್ಬಯ್ಯ ಮತ್ತು ತಿಮ್ಮಕ್ಕ ದಂಪತಿಯ ಪುತ್ರನಾಗಿ 1957 ರಂದು ಅನೇಕಲ್ನಲ್ಲಿ ಜನಿಸಿದ ನಾರಾಯಣಸ್ವಾಮಿ, ಬಿ.ಎ ಪದವಿ ಪಡೆದಿದ್ದಾರೆ. ವಿಜಯಲಕ್ಷ್ಮಿ ಎಂಬುವರೊಂದಿಗೆ ವಿವಾಹವಾಗಿದ್ದು, ಮೂರು ಜನ ಮಕ್ಕಳಿದ್ದಾರೆ. ಕೃಷಿ ಮತ್ತು ವ್ಯಾಪಾರ ಮಾಡಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ 1985ರಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಪಕ್ಷಕ್ಕೆ ಸೇರಿಕೊಂಡರು.
ಸಾಮಾನ್ಯ ಕಾರ್ಯಕರ್ತನನ್ನು ಪಕ್ಷ ಗುರುತಿಸಿದೆ; ಎ. ನಾರಾಯಣಸ್ವಾಮಿ ಭಾವುಕ
ವಿದ್ಯಾರ್ಥಿ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತನ್ನದೇ ಆದ ಶೈಲಿಯಲ್ಲಿ ಜನ ಬೆಂಬಲ ಗಳಿಸಿದರು. 1996ರಲ್ಲಿ ಪುರಸಭೆಗೆ ಆಯ್ಕೆಯಾಗುವ ಮೂಲಕ ರಾಜಕೀಯ ರಂಗ ಪ್ರವೇಶ ಮಾಡಿದರು. ನಂತರ ಮೊದಲ ಬಾರಿಗೆ 1996ರಲ್ಲಿ ಅನೇಕಲ್ ಪುರಸಭೆ ಸದಸ್ಯರಾಗುವ ಮೂಲಕ ರಾಜಕೀಯಕ್ಕೆ ಧುಮುಕಿದ ಎ. ನಾರಾಯಣಸ್ವಾಮಿ, ಈಗ ಮೋದಿ ನೇತೃತ್ವದ ಕೇಂದ್ರ ಸಂಪುಟದಲ್ಲಿ ಸ್ಥಾನ ಗಳಿಸಿದ್ದಾರೆ.
ರಾಜಕೀಯ ಜೀವನ
1997 ಮೊದಲ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ನಾರಾಯಣಸ್ವಾಮಿ, ನಂತರ 1999ರಲ್ಲಿ ಮೊದಲ ಬಾರಿ ವಿಧಾನಸಭೆ ಪ್ರವೇಶ ಮಾಡಿದರು. 2004ರಲ್ಲಿ ಎರಡನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. 2008ರಲ್ಲಿ ಮೂರನೇ ಬಾರಿಗೆ ವಿಧಾನಸಭೆ ಚುನಾವಣೆ ಗೆದ್ದು, ಸೆಪ್ಟೆಂಬರ್ 22, 2010 ರಂದು ಸಮಾಜ ಕಲ್ಯಾಣ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ನಂತರ ನವೆಂಬರ್ 12, 2010 ರಂದು ಬಂದೀಖಾನೆ ಖಾತೆಯನ್ನು ಹೆಚ್ಚುವರಿಯಾಗಿ ವಹಿಸಿಕೊಂಡು ಸಚಿವರಾಗಿ ಕೆಲಸ ಮಾಡಿದ್ದಾರೆ.
ಇದಲ್ಲದೆ ರಾಷ್ಟ್ರೀಯ ಭಾರತೀಯ ಜನತಾ ಪಾರ್ಟಿ ಎಸ್ಸಿ ಮೋರ್ಚಾ ಘಟಕ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ, ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯಾಧ್ಯಕ್ಷರಾಗಿ ಪಕ್ಷ ಸಂಘಟಿಸುವ ಮೂಲಕ ರಾಜಕೀಯ ವಲಯದಲ್ಲಿ ನಾನೊಬ್ಬ ಎಡಗೈ ದಲಿತ ಸಮುದಾಯದ ನಾಯಕನೆಂದು ತೋರಿಸಿದ್ದಾರೆ. ನಂತರ ೨೦೧೩ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು.
ಕುಟುಂಬ ಸಮೇತ ದೆಹಲಿಗೆ ತೆರಳಿದ್ದರು
2019ರಲ್ಲಿ ನಡೆದ 17ನೇ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಸುಮಾರು 85 ಸಾವಿರ ಮತಗಳ ಅಂತರದಿಂದ ಸೋಲಿಸಿ, ಸಂಸತ್ ಸದಸ್ಯರಾಗಿ ಆಯ್ಕೆಯಾದರು. ರಾಜ್ಯದಿಂದ ಕೇಂದ್ರ ಸರ್ಕಾರದ ಸಚಿವರಾಗಿ ಸಂಸದ ಎ. ನಾರಾಯಣಸ್ವಾಮಿ ಎಂಟ್ರಿ ಕೊಟ್ಟಿದ್ದು, ಮಂಗಳವಾರ ದೆಹಲಿ ವರಿಷ್ಠರಿಂದ ಕರೆ ಬಂದ ಹಿನ್ನೆಲೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣದಿಂದ ಕುಟುಂಬ ಸಮೇತ ದೆಹಲಿಗೆ ತೆರಳಿದ್ದರು.
ನರೇಂದ್ರ ಮೋದಿ ನಿವಾಸಕ್ಕೆ ಎ. ನಾರಾಯಣಸ್ವಾಮಿ
ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ಖಚಿತವಾದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ನಿವಾಸಕ್ಕೆ ಎ. ನಾರಾಯಣಸ್ವಾಮಿ ಆಗಮಿಸಿದ್ದರು. ನಿವಾಸದಿಂದ ಹೊರ ಬರುತ್ತಲೇ ಕೇಂದ್ರದ ಸಚಿವನಾಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಎ. ನಾರಾಯಣಸ್ವಾಮಿ, "ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ, ಪಕ್ಷ ಅವಕಾಶ ನೀಡಿದೆ. ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ,'' ಎಂದು ಭಾವುಕರಾಗಿ ಹೇಳಿದರು.