ಶ್ರೀಲಂಕಾದಲ್ಲಿ ಚೀನೀ ಬೇಹುಗಾರಿಕೆ ನೌಕೆ; ಭಾರತಕ್ಕೆ ಅಪಾಯಗಳೇನು?
ಭಾರತ ಪದೇ ಪದೇ ಆಕ್ಷೇಪ ಎತ್ತಿದರೂ ಕಿವಿಗೊಡದೆ ಚೀನಾದ ಯುವಾನ್ ವಾಂಗ್ 5 (Yuan Wang 5) ಎಂಬ ಬೇಹುಗಾರಿಕೆ ಹಡಗು ಶ್ರೀಲಂಕಾಗೆ ಬಂದಿಳಿದಿದೆ. ಚೀನಾದ ಸುಪರ್ದಿಯಲ್ಲಿರುವ ಹಂಬನತೋಟ ಬಂದರನ್ನು ಯುವಾನ್ ವಾಂಗ್ ಹಡಗು ತಲುಪಿದೆ.
ಯುವಾನ್ ವಾಂಗ್ 5 ಹಡಗು ಜುಲೈ ಮಧ್ಯಭಾಗದಲ್ಲೇ ಚೀನಾದಿಂದ ಹೊರಟಿತ್ತು. ಆಗಿನಿಂದಲೂ ಭಾರತ ತನ್ನ ಆಕ್ಷೇಪಗಳನ್ನು ಹಲವು ಬಾರಿ ವ್ಯಕ್ತಪಡಿಸಿದೆ. ಶ್ರೀಲಂಕಾದಲ್ಲಿ ಚೀನಾದ ಈ ಹಡಗು ಇರುವುದರಿಂದ ತನ್ನ ಭದ್ರತೆಗೆ ಅಪಾಯ ಆಗುತ್ತದೆ ಎಂಬುದು ಭಾರತದ ಚಕಾರ. ಅಮೆರಿಕ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಭಾರತದ ಭದ್ರತೆ ಬಗ್ಗೆ ಕಳವಳ ಮೂಡಿಸಿದ್ದ ಚೀನಾ ಸಂಶೋಧನಾ ನೌಕೆಗೆ ಪ್ರವೇಶವಿಲ್ಲ ಎಂದ ಶ್ರೀಲಂಕಾ
ಸೆಪ್ಟೆಂಬರ್ ತಿಂಗಳವರೆಗೂ ಹಂಬನತೋಟದ ಬಂದರಿನಲ್ಲಿ ಬೀಡುಬಿಡುವ ಯುವಾನ್ ವಾಂಗ್ 5 ಹಡಗು ಕೇವಲ ಇಂಧನ ಮರುಪೂರಣಕ್ಕೆ ಮಾತ್ರ ಇರಲಿದೆ. ಭಾರತಕ್ಕೆ ಯಾವ ಅಪಾಯವನ್ನೂ ಉಂಟು ಮಾಡುವುದಿಲ್ಲ ಎಂದು ಚೀನಾ ಹೇಳಿದೆ. ಈ ಹಿನ್ನೆಲೆಯಲ್ಲಿ ಶ್ರೀಲಂಕಾ ಈ ಹಡಗು ಬಂದಿಳಿಯಲು ಅನುಮತಿ ಕೊಟ್ಟಿದೆ ಎಂದು ಹೇಳಲಾಗುತ್ತಿದೆ.
ಅಷ್ಟಕ್ಕೂ ಯುವಾನ್ ವಾಂಗ್ 5 ಹಡಗು ಏನು? ಅದರಿಂದ ಭಾರತದ ಭದ್ರತೆಗೆ ಏನು ಅಪಾಯ? ಶ್ರೀಲಂಕಾ ಜನರು ಈ ಬೆಳವಣಿಗೆ ಬಗ್ಗೆ ಏನು ಹೇಳುತ್ತಾರೆ? ಇತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಶ್ರೀಲಂಕಾ ಬಂದರಿನಲ್ಲಿ ಬಂದು ನಿಂತ ಚೀನಾ ಹಡಗಿನ ಕಣ್ಣು ಭಾರತದ ಕಡೆಗೆ!?
ಆಯಕಟ್ಟಿನ ಸ್ಥಳದಲ್ಲಿ ಹಡಗು
ಶ್ರೀಲಂಕಾದ ಹಂಬನತೋಟ ಬಂದರು ಭಾರತದ ಭದ್ರತೆಯಿಂದ ಬಹಳ ಆಯಕಟ್ಟಿನಲ್ಲಿರುವ ಸ್ಥಳವಾಗಿದೆ. ಈ ಸ್ಥಳದಲ್ಲಿ ಚೀನಾದ ಬೇಹುಗಾರಿಕೆ ಹಡಗಿನ ಉಪಸ್ಥಿತಿ ಇದ್ದರೆ ಭಾರತಕ್ಕೆ ಅಪಾಯ ಎಂದು ಭಾವಿಸಲಾಗಿದೆ.
ಚೀನಾದಿಂದ ಸಾಲದ ಮೇಲೆ ಸಾಲ ಪಡೆದು ಅನುಪಯುಕ್ತ ಯೋಜನೆಗಳಿಗೆ ಹಣ ಸುರಿದ ಶ್ರೀಲಂಕಾ ಸಾಲದ ಸುಳಿಗೆ ಸಿಲುಕಿಹೋಗಿದೆ. ಪರಿಣಾಮವಾಗಿ ಹಂಬನತೋಟ ಬಂದರನ್ನು ಚೀನಾ ವಶಕ್ಕೆ ತೆಗೆದುಕೊಂಡಿದೆ. ಭಾರತದ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸಬಹುದಾದ ಹಂಬನತೋಟ ಬಂದರು ವಶಕ್ಕೆ ತೆಗೆದುಕೊಂಡು ಚೀನಾ ಏನೆಲ್ಲಾ ಆಟ ಆಡಬಹುದು ಊಹಿಸಿ.
ಯುವಾನ್ ವಾಂಗ್ ಹಡಗು ಏನು?
ಚೀನಾ ಯುವಾನ್ ವಾಂಗ್ 5 ಹಡಗನ್ನು ಹಂಬನತೋಟಕ್ಕೆ ಯಾಕೆ ತರಲಾಗಿದೆ ಎಂಬುದು ಬಹಿರಂಗವಾಗಿಲ್ಲ. ಆದರೆ, ಈ ಜಲನೌಕೆ ಹಲವು ರೀತಿಯ ಸಾಮರ್ಥ್ಯಗಳನ್ನು ಹೊಂದಿದೆ. ಇದು ಕ್ಷಿಪಣಿ, ಉಪಗ್ರಹ ಇತ್ಯಾದಿ ಮೇಲೆ ಬೇಹುಗಾರಿಕೆ ನಡೆಸಬಲ್ಲುದು. ಭಾರತ ತನ್ನ ಕ್ಷಿಪಣಿ ಪ್ರಯೋಗ ಮಾಡಿದರೆ ಅದರ ಎಲ್ಲಾ ಮಾಹಿತಿಯನ್ನು ಗುರುತಿಸಿ ಪಡೆಯಬಲ್ಲ ಸೆನ್ಸಾರ್ಗಳು ಈ ಹಡಗಿನಲ್ಲಿವೆ. ಈ ಮೂಲಕ ಭಾರತೀಯ ಕ್ಷಿಪಣಿಗಳ ಶ್ರೇಣಿ, ನಿಖರತೆ ಇತ್ಯಾದಿ ಮಾಹಿತಿ ಚೀನಾಗೆ ಸಿಗಬಹುದು.
ಸಬ್ಮರೀನ್ಗೆ ವ್ಯವಸ್ಥೆ
ಯುವಾನ್ ವಾಂಗ್ನಿಂದ ಭಾರತಕ್ಕೆ ಎದುರಾಗಬಹುದಾದ ಮತ್ತೊಂದು ದೊಡ್ಡ ಅಪಾಯವೆಂದರೆ ಅದು ಸಬ್ಮರೀನ್ನದ್ದು. ಈ ಹಡಗನ್ನು ಉಪಯೋಗಿಸಿ ಚೀನಾ ಸಾಗರ ಸರ್ವೇಕ್ಷಣೆ ನಡೆಸಬಹುದು. ಈ ಸಾಗರ ಪ್ರದೇಶದಲ್ಲಿ ಸಬ್ಮರೀನ್ಗಳ ಕಾರ್ಯಾಚರಣೆಗೆ ಇದರಿಂದ ಅನುಕೂಲವಾಗಬಹುದು. ಕಳೆದ ವರ್ಷ ಸುಮಾತ್ರದ ಪಶ್ಚಿಮ ಭಾಗದಲ್ಲಿ ಚೀನಾದ ಇನ್ನೊಂದು ಹಡಗು ಇದೇ ರೀತಿಯ ಸರ್ವೇಕ್ಷಣೆ ಕೈಗೊಂಡಿತ್ತು. ಅಷ್ಟು ಮಾತ್ರವಲ್ಲ, 2014ರಲ್ಲಿ ಚೀನಾದ ಪರಮಾಣು ಶಕ್ತ ಸಬ್ಮರೀನ್ವೊಂದು ಶ್ರೀಲಂಕಾದ ಒಂದು ಬಂದರು ಬಳಿ ಬಂದು ನಿಂತಿದ್ದನ್ನು ಈಗ ಉಲ್ಲೇಖಿಸಬಹುದು.
ಒಂದು ವೇಳೆ, ಭಾರತದೊಂದಿಗೆ ಯುದ್ಧವಾದರೆ ಚೀನಾ ಶ್ರೀಲಂಕಾದ ಮೂಲಕ ಸಬ್ಮರೀನ್ಗಳನ್ನು ಬಳಸಿ ಭಾರತದ ಮೇಲೆ ದಾಳಿ ಎಸಗಲು ಅನುಕೂಲವಾಗುತ್ತದೆ. ಇದು ಯುದ್ಧ ಸಂದರ್ಭದಲ್ಲಿ ಭಾರತಕ್ಕೆ ಮರ್ಮಾಘಾತವಾಗಿ ಪರಿಣಮಿಸಬಹುದು.
ಸರ್ವೇಕ್ಷಣೆಗೆ ಅವಕಾಶ ಇಲ್ಲ ಎಂದ ಲಂಕಾ
ಜುಲೈ 14ರಂದು ಹೊರಟು ಇದೀಗ ಹಂಬನತೋಟಕ್ಕೆ ಬಂದಿರುವ ಯುವಾನ್ ವಾಂಗ್ 5 ಹಡಗು ಆಗಸ್ಟ್ 22ರವರೆಗೂ ಅಲ್ಲಿ ಇರಲಿದೆಯಂತೆ. ಆದರೆ, ಅದು ಕೇವಲ ಇಂಧನ ಮರುಪೂರಣಕ್ಕೆ ಮಾತ್ರ ಇಲ್ಲಿ ಇರಲಿದೆ ಹೊರತು ಬೇರೆ ವೈಜ್ಞಾನಿಕ ಸಂಶೋಧನೆಗೆ ಅವಕಾಶ ಕೊಡಲಾಗಿಲ್ಲ. ಅದರ ಆಟೊಮ್ಯಾಟಿಕ್ ಐಡೆಂಟಿಫಿಕೇಶನ್ ಸಿಸ್ಟಂ ಅನ್ನು ಈ ಹಡಗು ಚಾಲನೆಯಲ್ಲಿ ಇಟ್ಟಿರಬೇಕು ಎಂದು ಶ್ರೀಲಂಕಾ ಸಮಜಾಯಿಷಿ ನೀಡಿದೆ.
ಆದರೆ, ಹಂಬತೋಟ ಪೋರ್ಟ್ನ ನಿರ್ವಹಣೆ ಹಕ್ಕು ಈಗ ಚೀನೀ ಸಂಸ್ಥೆಯೊಂದರ ಕೈಯಲ್ಲಿದೆ. ಯಾವುದೇ ನಿರ್ವಹಣೆ ಸಮಸ್ಯೆ ಇದ್ದರೂ ಅದರು ಈ ಸಂಸ್ಥೆಯ ಸುಪರ್ದಿಗೆ ಬರುತ್ತದೆ. ಇದರಲ್ಲಿ ಶ್ರೀಲಂಕಾದ ನಿಯಂತ್ರ ಇರುವುದಿಲ್ಲ. ಈ ಬಂದರನ್ನು ಚೀನಾ ಸಂಸ್ಥೆ 99 ವರ್ಷಗಳ ಕಾಲ ಗುತ್ತಿಗೆ ಪಡೆದುಕೊಂಡಿದೆ.
ಭಾರತ-ಲಂಕಾ ಸಂಬಂಧ ಹಳಸುತ್ತದೆಯಾ?
ಭಾರತ ಮತ್ತು ಚೀನಾ ಮಧ್ಯೆ ಸದಾ ಸೂಕ್ಷ್ಮ ಪರಿಸ್ಥಿತಿ ಇದೆ. ಯಾವಾಗ ಬೇಕಾದರೂ ಎರಡೂ ದೇಶಗಳ ಮಧ್ಯೆ ಪೂರ್ಣಪ್ರಮಾಣದ ಯುದ್ಧ ನಡೆಯುವ ಸಾಧ್ಯತೆ ಇದೆ. ಈ ಯುದ್ಧಕ್ಕಾಗಿ ಚೀನಾ ಹಲವು ವರ್ಷಗಳಿಂದ ಸಿದ್ಧತೆ ನಡೆಸುತ್ತಿರುವಂತೆ ತೋರುತ್ತಿದೆ. ಶ್ರೀಲಂಕಾವನ್ನು ಹಿಡಿತಕ್ಕೆ ತೆಗೆದುಕೊಂಡಿರುವುದು ಚೀನಾದ ಆ ಸಂಚಿನ ಒಂದು ಭಾಗ ಎಂದು ಪರಿಣಿತರು ಹೇಳುತ್ತಾರೆ.
ಭಾರತ ಬೇಡವೆಂದರೂ ಕೇಳದೆ ಶ್ರೀಲಂಕಾ ಚೀನಾದ ಸಹವಾಸ ಮಾಡಿ ಈಗ ಶೂಲಕ್ಕೆ ಸಿಲುಕಿಕೊಂಡಿದೆ. ಚೀನಾದ ಹಡಗನ್ನು ಬರಲು ಬಿಡಬೇಡಿ ಎಂದು ಭಾರತ ಸ್ಪಷ್ಟವಾಗಿ ಹೇಳಿದರೂ ಅದನ್ನು ಕೇಳುವಷ್ಟು ಸಾಧ್ಯವಾಗದ ಅಸಹಾಯಕ ಸ್ಥಿತಿಯಲ್ಲಿ ಲಂಕನ್ನರು ಇದ್ದಾರೆ. ಅವರಿಗೆ ಈಗ ಆರ್ಥಿಕ ಸಂಕಷ್ಟದಿಂದ ಹೊರಬರುವುದೇ ಹೆಚ್ಚು ಮುಖ್ಯವಾಗಿದೆ.
ಆದರೂ ಶ್ರೀಲಂಕಾದ ಅನೇಕ ರಾಜಕೀಯ ಮುಖಂಡರು ಮತ್ತು ಜನಸಾಮಾನ್ಯರು ಭಾರತದ ಪರವಾಗಿ ಧ್ವನಿ ಎತ್ತಿದ್ದಾರೆ. ಶ್ರೀಲಂಕಾಗೆ ಕಷ್ಟಕಾಲದಲ್ಲಿ ಸಹಾಯ ಮಾಡಿದ ಭಾರತಕ್ಕೆ ದ್ರೋಹ ಎಸಗುವುದು ತಪ್ಪು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
"ಶ್ರೀಲಂಕಾ ಬೇಹುಗಾರಿಕೆ ಹಡಗು ಲಂಕಾ ಬಳಿ ಬರುತ್ತಿರುವುದು ಶುದ್ಧ ತಪ್ಪು. ಚೀನಾಗಿಂತ ಭಾರತ ನಮಗೆ ಹತ್ತಿರ ಇದೆ. ಭಾರತ ತನ್ನ ರಾಷ್ಟ್ರೀಯ ಭದ್ರತೆಗೆ ಅಪಾಯ ಎಂದು ಹೇಳುತ್ತಿರುವುದು ಸರಿ ಅನಿಸುತ್ತದೆ. ಅಲ್ಲದೇ, ನಮಗೆ ಸಂಕಷ್ಟ ಕಾಲದಲ್ಲಿ ಭಾರತ 4 ಬಿಲಿಯನ್ ಡಾಲರ್ ಧನಸಹಾಯ ಮಾಡಿದೆ" ಎಂದು ಶ್ರೀಲಂಕಾ ಪ್ರೋಗ್ರೆಸಿವ್ ಅಲಯನ್ಸ್ ಮೈತ್ರಿಕೂಟದ ನಾಯಕ ಹಾಗು ಸಂಸದ ಮನು ಗಣೇಶನ್ ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)