ಚಿತ್ರಸಾಕ್ಷ್ಯ: ಭಾರತೀಯ ಗಡಿ ಪ್ರದೇಶದಲ್ಲಿ ಚೀನಾ ಆಡಿದ್ದೇ ಆಟ!
ನವದೆಹಲಿ, ಜೂನ್.25: ಭಾರತ-ಚೀನಾ ಗಡಿಭಾಗದ ಲಡಾಖ್ ಪೂರ್ವಭಾಗದಲ್ಲಿರುವ ಗಾಲ್ವಾನ್ ನದಿ ಕಣಿವೆಯಲ್ಲಿ ಭಾರತೀಯ ಪ್ರದೇಶಕ್ಕೆ ಚೀನೀ ಸೈನಿಕರು ನುಗ್ಗಿರುವುದುಕ್ಕೆ ಪ್ರಬಲ ಸಾಕ್ಷ್ಯ ಲಭ್ಯವಾಗಿದೆ.
ಗಾಲ್ವಾನ್ ಕಣಿವೆ ಬಳಿ ಭಾರತದ ವ್ಯಾಪ್ತಿಗೆ ಸೇರಿದ 423 ಮೀಟರ್ ಪ್ರದೇಶದೊಳಗೆ ಚೀನಾ ಸೇನೆಯು ಪ್ರವೇಶ ಮಾಡಿರುವುದು ಉಪಗ್ರಹದಲ್ಲಿ ಸೆರೆಯಾದ ಚಿತ್ರಗಳಲ್ಲಿ ಗೋಚರಿಸುತ್ತಿದೆ. ಕಳೆದ
ಜೂನ್.25ರಂದು ಸೆರೆಯಾದ ಚಿತ್ರದಲ್ಲಿ 16 ಚೀನೀ ಶಿಬಿರಗಳು, ಟರ್ಪಾಲಿನ್ ಗಳು ಹಾಗೂ ಒಂದು ದೊಡ್ಡ ವಸತಿ ಶಿಬಿರ, 14 ವಾಹನಗಳು ಭಾರತಕ್ಕೆ ಸೇರಿದ 423 ಮೀಟರ್ ಪ್ರದೇಶದಲ್ಲಿ ಕಂಡು ಬಂದಿವೆ.
ಗಾಲ್ವಾನ್ ಗಲಾಟೆ: ಚೀನಾಗೆ ಕಠಿಣ ಸಂದೇಶ ರವಾನಿಸಿದ ಪ್ರಧಾನಿ ಮೋದಿ!
ಈ ಪ್ರದೇಶದಲ್ಲಿ ಬೀಜಿಂಗ್ ತನ್ನ ಗಡಿ ಎಂದು ನಂಬಿದ್ದ ನಿಖರ ಅಕ್ಷಾಂಶ ಮತ್ತು ರೇಖಾಂಶವನ್ನು ಒಳಗೊಂಡಂತೆ 1960 ರ ಚೀನಾದ ಹಕ್ಕನ್ನು ಗಡಿ ಪ್ರಶ್ನೆಯಲ್ಲಿ ಭಾರತದ ಸರ್ಕಾರಗಳು ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಅಧಿಕಾರಿಗಳ ವರದಿಯಲ್ಲಿ ವಿವರಿಸಲಾಗಿದೆ.
ದಾಖಲೆಯಲ್ಲಿ ಭಾರತದ ಪ್ರಶ್ನೆಗೆ ಚೀನಾದ ಉತ್ತರ
ಉಭಯ ರಾಷ್ಟ್ರಗಳ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ 1960-61ನೇ ಸಾಲಿನಲ್ಲಿ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಭಾರತ ಕೇಳಿದ ಪ್ರಶ್ನೆ ಮತ್ತು ಚೀನಾದ ಉತ್ತರವನ್ನು ಪಟ್ಟಿ ಮಾಡಿದೆ. ಎರಡು ರಾಷ್ಟ್ರಗಳ ನಡುವಿನ ಕೆಲವು ಎತ್ತರ ಪ್ರದೇಶಗಳು, ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ಪ್ರಶ್ನೆಗೆ ಚೀನಾ ನೀಡಿದ ಉತ್ತರದ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಲಾಗಿದೆ.
ಚೀನಾದ ಕಡೆಯಿಂದ ಕೆಲವು ನಿರ್ದಿಷ್ಟ ಪ್ರದೇಶಗಳ ಮೇಲೆ ಹಕ್ಕು ಹೊಂದಿರುವ ಬಗ್ಗೆಯೂ ಇಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ ಈಗ ವಿವಾದಕ್ಕೆ ಕಾರಣವಾಗಿರುವ ಗಾಲ್ವಾನ್ ನದಿ ಕಣಿವೆ ಪ್ರದೇಶವೂ ಕೂಡಾ ಸೇರಿದೆ. ಇದರ ಪ್ರಕಾರ, ಎರಡು ಶಿಖರಗಳ ಮೇಲೆ ಜೋಡಣೆಯನ್ನು ಹಾದುಹೋದ ನಂತರ, ಅದು ಪರ್ವತದ ಉದ್ದಕ್ಕೂ ದಕ್ಷಿಣಕ್ಕೆ ಹೋಯಿತು, ಅಲ್ಲಿ ಗಾಲ್ವಾನ್ ನದಿಯನ್ನು ದಾಟಿತ್ತು. ಪೂರ್ವದಲ್ಲಿ 78° 13 ರೇಖಾಂಶ ಹಾಗೂ ಉತ್ತರದಲ್ಲಿ 34° 46 ಅಕ್ಷಾಂಶದವರೆಗೂ ಎಂದು ಗುರುತಿಸಲಾಗಿದೆ.
ಸತ್ಯವನ್ನು ತೋರಿದ ಗೂಗಲ್ ಅರ್ಥ್ ಪ್ರೋ ಸರ್ಚ್
ಉಭಯ ರಾಷ್ಟ್ರಗಳ ಗಡಿಗೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಗೂಗಲ್ ಅರ್ಥ್ ಪ್ರೋ ಸರ್ಚ್ ನಲ್ಲಿ ಹುಡುಕಿದರೆ ಸಾಕು ಸತ್ಯ ಗೋಚರಿಸುತ್ತದೆ. ಏಕೆಂದರೆ ಗಾಲ್ವಾನ್ ಕಣಿವೆಯ ಸಾಲಿನಲ್ಲಿರುವ ಕೆಲವು ಪ್ರದೇಶಗಳನ್ನು ನಿಖರವಾಗಿ ಸೂಚಿಸಲಾಗುತ್ತಿದೆ. ಹೀಗೆ ಸೂಚಿಸಿದ ಪ್ರದೇಶಗಳ ಉತ್ತರ ಭಾಗದಲ್ಲಿರುವ ಪ್ರದೇಶವು ಭಾರತದ ವ್ಯಾಪ್ತಿಗೆ ಸೇರುತ್ತದೆ. ಆದರೆ ಉಪಗ್ರಹದಲ್ಲಿ ಸೆರೆಯಾದ ಚಿತ್ರಗಳು ಸೂಚಿಸುವಂತೆ, ಚೀನಾ ಭಾರತದ ಪ್ರವೇಶದಲ್ಲಿ ನುಗ್ಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಗೂಗಲ್ ಅರ್ಥ್ ಪ್ರೊನಲ್ಲಿನ ಮಾಪನವು ಉತ್ತರದ ಗಾಲ್ವಾನ್ ನದಿ ತೀರದಲ್ಲಿ 423 ಮೀಟರ್ ಭಾರತೀಯ ಭೂಪ್ರದೇಶವನ್ನು ಚೀನಿಯರು ಆಕ್ರಮಿಸಿಕೊಂಡಿದ್ದಾರೆ ಎಂದು ಸೂಚಿಸುತ್ತದೆ.
ಚೀನಾ ವಿರುದ್ಧ ಗಂಭೀರ ಆರೋಪ ಮಾಡಿದ್ದ ಸಚಿವೆ
ಈ ಹಿಂದೆ ಕೂಡಾ ಗಡಿ ಪ್ರದೇಶದ ವಿಚಾರದಲ್ಲಿ ಚೀನಾ ಅಳತೆ ಮೀರಿ ವರ್ತಿಸಿತ್ತು. ನಿಗದಿತ ಪ್ರದೇಶಕ್ಕಿಂತ ಹೆಚ್ಚು ಗಡಿಯನ್ನು ಚೀನಾ ಪ್ರವೇಶಿಸುತ್ತಿದೆ ಎಂದು ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ತಮ್ಮ ಅವಧಿಯ ಶಾಂತಿ-ಮಾತುಕತೆ ವೇಳೆಯಲ್ಲಿ ಆರೋಪಿಸಿದ್ದರು. ಅಧಿಕೃತ ಚರ್ಚೆಯ ಸಂದರ್ಭದಲ್ಲಿ ನಮಗೆ ತಿಳಿಸಿದ ಗಡಿರೇಖೆಗಿಂತ ಹೆಚ್ಚು ಪ್ರದೇಶಕ್ಕೆ ಪ್ರವೇಶಿಸಲು ಚೀನಾ ಮುಂದಾಗಿದೆ ಎಂದು ದೂರಿದ್ದರು.
ಚೀನಾಗೆ ನೇರವಾಗಿ ಹೆಸರು ಉಲ್ಲೇಖಿಸದೇ ಎಚ್ಚರಿಕೆ
ಕಳೆದ ಜೂನ್.28ರಂದು ಮನ್ ಕೀ ಬಾತ್ ನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಚೀನಾ ಹೆಸರು ಉಲ್ಲೇಖಿಸದೇ ಎಚ್ಚರಿಕೆ ಸಂದೇಶ ರವಾನಿಸಿದ್ದರು. ಭಾರತದ ಮಣ್ಣಿನ ಮೇಲೆ ಯಾರೇ ಕಣ್ಣು ಹಾಕಿದರೂ ತಕ್ಕ ಉತ್ತರ ನೀಡಬೇಕಾಗುತ್ತದೆ. ಲಡಾಖ್ ನಲ್ಲಿ ಕಾಲ್ಕೆರೆದು ನಿಂತವರಿಗೂ ಈಗಾಗಲೇ ಪಾಠ ಕಲಿಸಲಾಗಿದೆ. ಭಾರತಕ್ಕೆ ಸ್ನೇಹ ಬೆಳೆಸುವುದೂ ಗೊತ್ತು, ಶತ್ರುಗಳನ್ನು ಮಟ್ಟ ಹಾಕುವುದೂ ಗೊತ್ತು ಎಂದು ಗುಡುಗಿದ್ದರು.
ಭಾರತೀಯ ರಾಯಭಾರಿಯಿಂದ ಚೀನಾಗೆ ಬುದ್ಧಿ
ಕಳೆದ 27ರಂದು ಬೀಜಿಂಗ್ ನಲ್ಲಿರುವ ಭಾರತೀಯ ರಾಯಭಾರಿ ವಿಕ್ರಮ್ ಮಿಸ್ತ್ರಿ, ಚೀನಾ ಸರ್ಕಾರಕ್ಕೆ ಬುದ್ಧಿಮಾತುಗಳನ್ನು ಹೇಳಿದ್ದರು. ಭಾರತೀಯ ಸೇನಾಪಡೆಯು ಸಾಮಾನ್ಯ ಮಾದರಿಯಲ್ಲಿ ಗಸ್ತು ತಿರುಗುತ್ತಿದ್ದಾರೆ. ಆದರೆ ಇದಕ್ಕೆ ಚೀನಾ ಸೈನಿಕರು ಪ್ರತಿರೋಧ ಒಡ್ಡುವುದು ಹಾಗೂ ಅಡೆತಡೆಗಳನ್ನು ಉಂಟು ಮಾಡುವುದು ಸೂಕ್ತ ನಡೆಯಲ್ಲ. ಇದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ತಿಳಿ ಹೇಳಿದ್ದರು.
ಗಾಲ್ವಾನ್ ಕಣಿವೆಯಿಂದ ಹಿಂದೆ ಸರಿದಿದ್ದ ಚೀನಾ
ಈ ಹಿಂದೆ 1962ರ ಅಕ್ಟೋಬರ್ ಅಂತ್ಯದ ವೇಳೆಗೆ, ಗಾಲ್ವಾನ್ ಪ್ರದೇಶದಲ್ಲಿ ನಿಯೋಜಿಸಲಾದ ಭಾರತೀಯ ಸೇನೆಯೊಂದಿಗೆ ತೀವ್ರವಾದ ಯುದ್ಧಗಳ ನಂತರ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಈ ವಲಯದಲ್ಲಿ ತಮ್ಮ 1960ರ ಹಕ್ಕನ್ನು ಪ್ರತಿಪಾದಿಸಿತು. ಆದರೆ 1962ರ ನವೆಂಬರ್ ಸಂದರ್ಭದಲ್ಲಿ ಚೀನಿಯರು ಏಕಪಕ್ಷೀಯ ಕದನ ವಿರಾಮ ಘೋಷಿಸಿದ ನಂತರ, ಚೀನಿ ಯೋಧರು ಈ ಪ್ರದೇಶದಿಂದ ಹಿಂದೆ ಸರಿದರು.
ದಶಕಗಳ ಕಾಲ ಗಾಲ್ವಾನ್ ಕಣಿವೆ ಬಗ್ಗೆ ಪ್ರಸ್ತಾಪವಿಲ್ಲ
ಇನ್ನು, ದಶಕಗಳಿಂದ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತೀಯ ಮತ್ತು ಚೀನೀ ಪಡೆಗಳ ಗಸ್ತು ಪ್ರಮಾಣ ಅಷ್ಟಕಷ್ಟೇ ಇತ್ತು. ಎರಡು ಸೇನಾ ಪಡೆಗಳ ನಡುವಿನ ಅಂತರವೂ ಹೆಚ್ಚಾಗಿತ್ತು. ಹೀಗಾಗಿಯೇ 90ರ ದಶಕದ ಆರಂಭದಲ್ಲಿ ನವದೆಹಲಿ ಮತ್ತು ಬೀಜಿಂಗ್ ನಲ್ಲಿ ನಾಯಕರ ಭೇಟಿ ಸಂದರ್ಭದಲ್ಲಿ ಗಾಲ್ವಾನ್ ನಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯ ಜೋಡಣೆಯ ಕುರಿತು ಚರ್ಚೆಗಳು ನಡೆದಿರಲಿಲ್ಲ. ಬದಲಿಗೆ ಅದನ್ನು ಗಡಿ ನಿಯಂತ್ರಣ ರೇಖೆ(LAC) ಎಂದು ನಂಬಲಾಗಿದೆ.
53 ವರ್ಷಗಳ ಬಳಿಕ ಭಾರತ-ಚೀನಾ ಸಂಘರ್ಷ
ಗಾಲ್ವಾನ್ ಕಣಿವೆ ವಿಚಾರಕ್ಕೆ ಕಳೆದ 53 ವರ್ಷಗಳ ಬಳಿ ಮೊದಲ ಬಾರಿಗೆ ಭಾರತ-ಚೀನಾ ಯೋಧರ ನಡುವೆ ಸಂಘರ್ಷ ನಡೆಯಿತು. ಜೂನ್.15 ಮತ್ತು 16ರಂದು ಚೀನಾ ಸೈನಿಕರು ತೋರಿದ ಕ್ರೌರ್ಯಕ್ಕೆ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, 76 ಯೋಧರು ಗಾಯಗೊಂಡಿರುವ ಬಗ್ಗೆ ಭಾರತೀಯ ಸೇನೆಯು ಬಹಿರಂಗವಾಗಿ ಸ್ಪಷ್ಟನೆ ನೀಡಿತು. ಆದರೆ ಚೀನಾ ಯಾವುದೇ ರೀತಿಯ ಮಾಹಿತಿಯನ್ನು ನೀಡಲಿಲ್ಲ. ಬದಲಿಗೆ ಅಮೆರಿಕಾದ ಗುಪ್ತಚರ ಇಲಾಖೆ ನೀಡಿದ ಅಂಕಿ-ಅಂಶಗಳ ಪ್ರಕಾರ ಭಾರತೀಯ ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಚೀನಾದ ಕನಿಷ್ಠ 35 ಸೈನಿಕರು ಹತರಾಗಿದ್ದಾರೆ ಎಂದು ತಿಳಿದು ಬಂದಿತ್ತು.
ಸಂಘರ್ಷಕ್ಕೆ ಗಾಲ್ವಾನ್ ಕಣಿವೆಯೊಂದೇ ಕಾರಣವಾಗಿರಲಿಲ್ಲ!
ಭಾರತ-ಚೀನಾ ಯೋಧರ ನಡುವಿನ ಸಂಘರ್ಷಕ್ಕೆ ಗಾಲ್ವಾನ್ ಕಣಿವೆಯೊಂದೇ ಕಾರಣವಾಗಿರಲಿಲ್ಲ. ಬದಲಿಗೆ ಗಾಲ್ವಾನ್ ಕಣಿವೆ ಬಳಿಯ 14ನೇ ಪೆಟ್ರೋಲ್ ಪಾಯಿಂಟ್ ಬಹುಮುಖ್ಯ ಅಂಶವಾಗಿದೆ. ಗಡಿ ನಿಯಂತ್ರಣ ರೇಖೆಗೆ ಹೊಂದಿಕೊಂಡಂತಿರುವ ಈ 14ನೇ ಪೆಟ್ರೋಲ್ ಪಾಯಿಂಟ್ ಭಾರತಿಯೀ ಸೇನಾ ಪಡೆಯು ಪಾಲಿಗೆ ಸಾಂಪ್ರದಾಯಿಕ ಗಸ್ತು ಪ್ರದೇಶವಾಗಿದೆ. 14ನೇ ಪೆಟ್ರೋಲ್ ಪಾಯಿಂಟ್ ವಿಶಾಲವಾದ ಪರ್ವತ ರೇಖೆಯನ್ನು ಗಾಲ್ವಾನ್ ಕಣಿವೆಯತ್ತ ಬಗ್ಗಿಸಿದ ರೀತಿ ಗೋಚರಿಸುವಂತೆ ಮಾಡುತ್ತದೆ. ಕಳೆದ ಜೂನ್.15ರಂದು ಇದೇ ಪರ್ವತ ಶ್ರೇಣಿಯಿಂದ ಭಾರತ ಮತ್ತು ಚೀನಾದ ಕೆಲವು ಯೋಧರು ಬಿದ್ದು ಪ್ರಾಣ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿತ್ತು.
ಚೀನಾವು ಗಡಿರೇಖೆ ಬಗ್ಗೆ ಹೊಸದಾಗಿ ಉಲ್ಲೇಖಿಸುತ್ತಿದೆ
ಗಾಲ್ವಾನ್ ಕಣಿವೆಯ ಗಡಿಯಲ್ಲಿ ಏನಾಗುತ್ತಿದೆಯೋ ಅದು ಭಾರತ-ಚೀನಾದ ಗಡಿಯುದ್ದಕ್ಕೂ ಪ್ರತಿಬಿಂಬಿಸುವ ಸಾಧ್ಯತೆಗಳಿವೆ. ಕಾರಣ ಚೀನಾವು ಗಡಿರೇಖೆಗೆ ಸಂಬಂಧಿಸಿದಂತೆ ಹೊಸದಾಗಿ ಉಲ್ಲೇಖಿಸುತ್ತಿದೆ ಎಂದು ಎಂ.ಎಸ್.ರಾವ್ ತಿಳಿಸಿದ್ದಾರೆ. ಚೀನಾವು ಈಗಾಗಲೇ ಲಡಾಖ್ ಬೆರಳ ತುದಿಗೆ ಇರುವ ಪ್ಯಾಂಗಾಂಗ್ ಕೆರೆ ಪ್ರದೇಶವನ್ನು ಮುಚ್ಚುವುದಕ್ಕೆ ಹೊರಟಿದೆ. ಇದರ ಜೊತೆಗೆ ಉತ್ತರದ ಕಾರಕೋರಂ ಪಾಸ್ ಬಳಿಯ ದೌಲತ್ ಬೇಗ್ ಓಲ್ಡಿನಲ್ಲಿರುವ ಭಾರತೀಯ ವಾಯುಪಡೆಯ ವಾಯು ಪಟ್ಟಿ ಸಮೀಪವಿರುವ ಪ್ರದೇಶವನ್ನು ಮುಚ್ಚಲು ಪ್ರಯತ್ನಿಸುತ್ತಿರಬಹುದು ಎಂದು ಉಲ್ಲೇಖಿಸಲಾಗಿದೆ.
ಗಡಿರೇಖೆಯಲ್ಲಿ ಕಾಮಗಾರಿ ನಡೆಸುತ್ತಿರುವ ಚೀನಾ
ಗಾಲ್ವಾನ್ ಕಣಿವೆಯಲ್ಲಿ ಚೀನಾದ ಆಕ್ರಮಿತ ಭಾರತದ ಭೂಪ್ರದೇಶದಲ್ಲಿ ನಿರಂತರವಾಗಿ ನಿರ್ಮಾಣ ಕಾಮಗಾರಿಯನ್ನು ನಡೆಸಲಾಗುತ್ತಿದೆ. ವಾಸ್ತವದಲ್ಲಿ ಗಾಲ್ವಾನ್ ಕಣಿವೆಗೆ ಸಂಬಂಧಿಸಿದ ಉಪಗ್ರಹ ಚಿತ್ರಗಳು ಗಾಲ್ವಾನ್ ನಲ್ಲಿ ಚೀನಾದ ತನ್ನ ಸ್ಥಾನವನ್ನು ಬಲವರ್ಧನೆ ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದು ಭಾರತದ ಭೂಪ್ರದೇಶದೊಳಗೆ ಮತ್ತು ವಾಸ್ತವಿಕ ನಿಯಂತ್ರಣ ರೇಖೆಗೆ ಹೊಂದಿಕೊಂಡಂತಿದೆ.
ಗಾಲ್ವಾನ್ ಗಡಿಯಲ್ಲಿ ಚೀನಾ ಶಿಬಿರಗಳ ಸ್ಥಾಪನೆ
ಭಾರತ ಚೀನಾದ ಪೂರ್ವ ಲಡಾಖ್ ಭಾಗದಲ್ಲಿರುವ ಗಾಲ್ವಾನ್ ಕಣಿವೆಯ 9 ಕಿಲೋಮೀಟರ್ ವ್ಯಾಪ್ತಿಯಲ್ಲಿ ಚೀನಾ ಸೇನಾಪಡೆಗೆ ಸೇರಿದ ಕನಿಷ್ಠ 16 ಶಿಬಿರಗಳನ್ನು ಸ್ಥಾಪಿಸಲಾಗಿದೆ. ಗಾಲ್ವಾನ್ ನದಿಯ ಮೇಲೆ ಕಲ್ವರ್ಟ್ ಗಳನ್ನು ರಚಿಸುವುದು (ಎಲ್ಎಸಿಯ ಬದಿಯಲ್ಲಿ) ಮತ್ತು ನೂರಾರು ಹೆವಿ ಟ್ರಕ್ಗಳು ಇಟ್ಟುಕೊಂಡಿರುವುದು ಕಾಣುತ್ತದೆ. ಇದರಿಂದ ಚೀನಾ ಸದ್ಯದ ಮಟ್ಟಿಗೆ ಗಡಿಯಿಂದ ಕಾಲ್ಕೀಳುವ ಲಕ್ಷಣಗಳಿಲ್ಲ ಎಂಬ ಅನುಮಾನವು ಹುಟ್ಟಿಕೊಳ್ಳುತ್ತದೆ.
ಗಾಲ್ವಾನ್ ಅಲ್ಲದೇ ವಿವಿಧ ಪ್ರದೇಶಗಳಲ್ಲಿ ಸೇನೆ ನಿಯೋಜನೆ
ಗಾಲ್ವಾನ್ ನದಿ ಕಣಿವೆಯಷ್ಟೇ ಅಲ್ಲದೇ ಲಡಾಖ್ ಪೂರ್ವದ ಹಲವು ಪ್ರದೇಶಗಳಲ್ಲಿ ಚೀನಾ ಸೇನೆಯು ನಿರ್ಮಾಣ ಕಾಮಗಾರಿಗಳನ್ನು ನಡೆಸುತ್ತಿದೆ. ಅದಕ್ಕಾಗಿ ಚೀನೀ ಸೈನಿಕರನ್ನು ನಿಯೋಜನೆ ಮಾಡಿದ್ದು, ಶಿಬಿರಗಳನ್ನು ಸ್ಥಾಪಿಸಲಾಗಿದೆ. ಈ ಪ್ರದೇಶದಲ್ಲಿ ಚೀನಾದ ವಾಯು ಚಟುವಟಿಕೆಗೆ ಪ್ರತಿಯಾಗಿ ಐಎಎಫ್ ಯುದ್ಧ ವಿಮಾನಗಳನ್ನು ಗಸ್ತು ಹಾರಿಸಲಾಗುತ್ತಿದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥರು ಹೇಳಿದ್ದಾರೆ.
ಭಾರತಕ್ಕೆ ಉಲ್ಟಾ ಹೊಡೆದ ನೇಪಾಳ; ಹೊಸ ನಕ್ಷೆಯಲ್ಲಿ ಇರುವುದಂಥಾ ಸುಳ್ಳು?