ಅನಂತ ಕುಮಾರ್ ಬಾಲ್ಯದಲ್ಲಿ ಹೀಗಿದ್ದರು: ಅಪರೂಪದ ಫೋಟೊಗಳು
ಬೆಂಗಳೂರು, ನವೆಂಬರ್ 12: ಕೇಂದ್ರ ಸಚಿವ ಅನಂತ ಕುಮಾರ್ ಅವರು ಸದಾ ಹಸನ್ಮುಖಿ. ಹಾಸ್ಯ ಪ್ರವೃತ್ತಿಯವರಾಗಿದ್ದ ಅವರು ಯಾವಾಗಲೂ ನಗುತ್ತಿದ್ದರು ಮತ್ತು ಸುತ್ತಲಿನವರನ್ನೂ ನಗಿಸುತ್ತಿದ್ದರು.
ಕಾಲೇಜು ದಿನಗಳಿಂದಲೇ ಎಬಿವಿಪಿ ಮತ್ತು ಬಳಿಕ ಆರೆಸ್ಸೆಸ್ಗಳಲ್ಲಿ ಸಕ್ರಿಯರಾಗಿದ್ದ ಅವರು, ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದರು. ಅವರ ರಾಜಕೀಯದ ಆಕಾಂಕ್ಷೆಗಳು ಮತ್ತು ನಾಯಕತ್ವದ ಗುಣ ಈ ಹಂತದಲ್ಲಿಯೇ ಚಿಗುರೊಡೆದಿತ್ತು.
ಅನಂತ ಕುಮಾರ್ ಬಿಜೆಪಿ ಸೇರ್ಪಡೆಯಾಗಿದ್ದು 1987ರಲ್ಲಿ. ನಂತರ ಅವರು ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ, ಯುವ ಮೋರ್ಚಾದ ರಾಜ್ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.
ಅನಂತ ಕುಮಾರ್ ಮಾಡಿದ ಮಹತ್ವದ ಸಾಧನೆಗಳೇನು? ವಿವರ ಇಲ್ಲಿದೆ...
1989-1994ರ ಅವಧಿಯಲ್ಲಿ ರಾಜ್ಯದಲ್ಲಿ ಪಕ್ಷವನ್ನು ಯಡಿಯೂರಪ್ಪ ಅವರ ಜತೆಗೂಡಿ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡರು. 1995ರಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾದರು.
1996 ಅವರ ರಾಜಕೀಯ ಜೀವನಕ್ಕೆ ತಿರುವು ನೀಡಿದ ವರ್ಷ. ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದ ಅವರು ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಪತ್ನಿ ವಿರುದ್ಧ ಭರ್ಜರಿ ಜಯಗಳಿಸಿ ಸಂಸತ್ ಪ್ರವೇಶಿಸಿದರು. ಅಂದಿನಿಂದ ಅವರು ಮತ್ತೆ ಸೋಲು ಕಾಣಲಿಲ್ಲ.
ಸ್ನೇಹಜೀವಿ ಅನಂತ್ ಕುಮಾರ್ ವ್ಯಕ್ತಿಚಿತ್ರ: ಸಚಿತ್ರ ವಿವರ
1998ರಲ್ಲಿ ವಾಜಪೇಯಿ ಸರ್ಕಾರದ ಸಚಿವ ಸಂಪುಟದ ಅತಿ ಕಿರಿಯ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆಗ ಅವರು ನಾಗರಿಕ ವಿಮಾನಯಾನ ಖಾತೆ ಸಚಿವರಾಗಿದ್ದರು.
ಚಿತ್ರ ಕೃಪೆ: ಅನಂತ್ ಡಾಟ್ ಒಆರ್ಜಿ ವೆಬ್ಸೈಟ್
ತಾಯಿಯೇ ಗುರು
1959ರಲ್ಲಿ ಜುಲೈ 22ರಂದು ಬೆಂಗಳೂರಿನಲ್ಲಿ ಜನಿಸಿದ ಅನಂತ್ ಕುಮಾರ್ ಸಾಂಪ್ರದಾಯಿಕ ಕುಟುಂಬದ ವಾತಾವರಣದಲ್ಲಿ ಬೆಳೆದವರು. 1950ರ ದಶಕದಲ್ಲೇ ಮಹಾರಾಣಿ ಕಾಲೇಜಿನಲ್ಲಿ ಪದವಿ ಪಡೆದವರಾಗಿದ್ದ ತಾಯಿ ಗಿರಿಜಾ ಶಾಸ್ತ್ರಿ ಅವರೇ ಮೊದಲ ಗುರು. ಅವರ ಮಾರ್ಗದರ್ಶನದಲ್ಲಿಯೇ ಅನಂತ ಕುಮಾರ್ ಬಾಲ್ಯದ ಶಿಕ್ಷಣ ಪೂರೈಸಿದರು.
ತುರ್ತು ಪರಿಸ್ಥಿತಿಯಲ್ಲಿ ಬಂಧನ
ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದ ಸಂದರ್ಭದಲ್ಲಿ ಅನಂತ್ ಕುಮಾರ್ 16ರ ತರುಣ. ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಜಯಪ್ರಕಾಶ್ ನಾರಾಯಣ್ ನೀಡಿದ ಹೋರಾಟದ ಕರೆಗೆ ಕಿವಿಗೊಟ್ಟ ಲಕ್ಷಾಂತರ ಮಂದಿಯಲ್ಲಿ ಅನಂತ್ ಕುಮಾರ್ ಕೂಡ ಒಬ್ಬರು.
ಈ ಸಂದರ್ಭದಲ್ಲಿ ಅನಂತ ಕುಮಾರ್ ಬಂಧನಕ್ಕೆ ಒಳಗಾಗಿ 30 ದಿನ ಸೆರೆವಾಸವನ್ನೂ ಅನುಭವಿಸಿದ್ದರು. ವಿದ್ಯಾರ್ಥಿ ದೆಸೆಯಿಂದಲೇ ಅವರು ಹೋರಾಟದ ವಾತಾವರಣವನ್ನು ಚೆನ್ನಾಗಿ ಅರಿತಿದ್ದರು.
ಮಾಜಿ ಸಿಎಂ ಪತ್ನಿಯನ್ನು ಸೋಲಿಸಿ ರಾಜಕೀಯ ಬದುಕು ಆರಂಭಿಸಿದ್ದ ಅನಂತ್ ಕುಮಾರ್
ಭಗವದ್ಗೀತೆಯ ಪಠಣ
ಅನಂತ್ ಕುಮಾರ್ ಅವರ ತಂದೆ ನಾರಾಯಣ ಶಾಸ್ತ್ರಿ ಅವರು ರೈಲ್ವೆ ಉದ್ಯೋಗಿಯಾಗಿದ್ದರು. ಅವರ ಪ್ರಭಾವ ಅನಂತ್ ಅವರ ಮೇಲೆ ದಟ್ಟವಾಗಿತ್ತು. ಪ್ರಸಿದ್ಧ ಎಂಜಿನಿಯರ್ ಸರ್. ಎಂ. ವಿಶ್ವೇಶ್ವರಯ್ಯ ಮತ್ತು ಖ್ಯಾತ ಜೋತಿಷಿ ಬಿವಿ ರಾಮನ್ ಅವರ ಸಂಬಂಧಿಕರು.
ಭಗವದ್ಗೀತೆಯನ್ನು ಪ್ರತಿನಿತ್ಯ ಪಠಿಸುತ್ತಿದ್ದ ಅವರು, ಸಚಿವರಾದ ನಂತರವೂ ಪ್ರತಿ ದಿನದ ಕೆಲಸದ ಆರಂಭಕ್ಕೂ ಮುನ್ನ ಕೆಲವು ಶ್ಲೋಕಗಳನ್ನು ಪಠಿಸುತ್ತಿದ್ದರು.
ಎಬಿವಿಪಿಯಲ್ಲಿ ಸಕ್ರಿಯ ಸದಸ್ಯ
1977-1987ರ ಅವಧಿಯಲ್ಲಿ ಶಾಲೆ-ಕಾಲೇಜು ಶಿಕ್ಷಣದ ಜತೆಯಲ್ಲಿ ಎಬಿವಿಪಿಯ ಸದಸ್ಯನಾಗಿ ಕರ್ನಾಟಕದ ಉದ್ದಗಲಕ್ಕೂ ಅವರು ಓಡಾಡಿದ್ದರು. ಎಬಿವಿಪಿಯನ್ನು ಸಂಘಟಿಸುವ ಸಲುವಾಗಿ ಅನೇಕ ಶಾಲೆ ಕಾಲೇಜುಗಳಿಗೆ ಭೇಟಿ ನೀಡಿದ್ದರು.
1977ರಲ್ಲಿ ಹುಬ್ಬಳ್ಳಿಯಲ್ಲಿ ಸಾಮಾನ್ಯ ಎಬಿವಿಪಿ ಕಾರ್ಯಕರ್ತರನಾಗಿ ಈ ಹೋರಾಟದ ನಂಟು ಅಂಟಿಸಿಕೊಂಡ ಅವರು, ಹಂತ ಹಂತವಾಗಿ ಅದರಲ್ಲಿ ಮೇಲೇರಿದವರು.
ವಿಶ್ವವಿದ್ಯಾಲಯ ಮಟ್ಟದಲ್ಲಿ ಕ್ಯಾಂಪಸ್ ಉಳಿಸಿ, ಅಸ್ಸಾಂ ಉಳಿಸಿ ಚಳವಳಿಗಳ ಸಂಚಾಲಕರಾಗಿ, ಆರೆಸ್ಸೆಸ್ನ ಬರ ಪರಿಹಾರ ಸಮಿತಿಯ ರಾಜ್ಯ ಸಂಚಾಲಕರಾಗಿ ಹೊಣೆಗಾರಿಕೆ ನಿರ್ವಹಿಸಿದ್ದರು. ಎಬಿವಿಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೊನೆಗೆ ರಾಷ್ಟ್ರೀಯ ಕಾರ್ಯದರ್ಶಿಯೂ ಆಗಿದ್ದರು.