ಬರದ ಕ್ಷೇತ್ರ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಪಾರಮ್ಯ ಮುರಿಯಲು ಸಾಧ್ಯವೆ?
ಬರದಿಂದ ಬೆಂಡಾದ ತಾಲ್ಲೂಕುಗಳನ್ನು ಒಟ್ಟಾಗಿ ಸೇರಿಸಿಕೊಂಡಿರುವ ಚಿಕ್ಕಬಳ್ಳಾಪುರ ಲೋಸಕಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಈ ವೆರಗೆ ಪಾರಮ್ಯ ಮೆರೆದಿದೆ. ಸಾಮಾನ್ಯ ಮೀಸಲಿನ ಈ ಕ್ಷೇತ್ರದ ಪ್ರಸ್ತುತ ಸಂಸದ ಕಾಂಗ್ರೆಸ್ನ ವೀರಪ್ಪ ಮೊಯ್ಲಿ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವು, ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಬೃಹತ್ ಲೋಕಸಭಾ ಕ್ಷೇತ್ರ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವು ವಿವಿಧತೆ ಇರುವ ಕ್ಷೇತ್ರವೂ ಹೌದು, ಇಲ್ಲಿ ಯಲಹಂಕದಂತಹಾ ನಗರ ಪ್ರದೇಶವೂ ಇದೆ, ಬಾಗೇಪಲ್ಲಿ ಅಂತಹ ಹಿಂದುಳಿದ ಪ್ರದೇಶವೂ ಇದೆ.
ಹಾವೇರಿ-ಗದಗ ಲೋಕಸಭಾ ಕ್ಷೇತ್ರ ಪರಿಚಯ
ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು, ಚಿಕ್ಕಬಳ್ಳಾಪುರ, ನೆಲಮಂಗಲ, ಯಲಹಂಕ ವಿಧಾನಸಭಾ ಕ್ಷೇತ್ರಗಳು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತವೆ. ಚಿಕ್ಕಬಳ್ಳಾಪುರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಬೆಂಗಳೂರು ನಗರ ಜಿಲ್ಲೆ ಮೂರು ಜಿಲ್ಲೆಗಳು ಸೇರಿದ ವೈವಿದ್ಯಮಯ ಕ್ಷೇತ್ರ ಇದು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಮೊದಲ ಚುನಾವಣೆ ನಡೆದದ್ದು 1977ರಲ್ಲಿ. ಅಲ್ಲಿಂದ 2014ರವರೆಗೆ 11 ಲೋಕಸಭಾ ಚುನಾವಣೆಗಳನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತದಾರರು ಕಂಡಿದ್ದಾರೆ. 11 ಲೋಕಸಭಾ ಚುನಾವಣೆಯಲ್ಲಿ 10 ಬಾರಿ ಕಾಂಗ್ರೆಸ್ ಗೆದ್ದಿದೆ. ಕೇವಲ ಒಂದು ಬಾರಿ ಮಾತ್ರ ಜೆಡಿಎಸ್ ಗೆದ್ದಿದೆ. ಬಿಜೆಪಿ ಈವರೆಗೆ ಖಾತೆ ತೆರೆದೇ ಇಲ್ಲ.
ಲೋಕಸಭೆ ಚುನಾವಣೆ 2019: ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಪರಿಚಯ
ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ಸತತ ನಾಲ್ಕು ಬಾರಿ ಚಿಕ್ಕಬಳ್ಳಾಪುರದಿಂದ ಗೆದ್ದು ಸಾಧನೆ ಮಾಡಿದ್ದಾರೆ, ಅವರು ಮೂರು ಬಾರಿ ಕಾಂಗ್ರೆಸ್ನಿಂದ ಒಮ್ಮೆ ಜೆಡಿಎಸ್ನಿಂದ ಆರಿಸಿ ಬಂದಿದ್ದರು. ಅದಕ್ಕೂ ಮುನ್ನ ಕಾಂಗ್ರೆಸ್ನ ವಿ.ಕೃಷ್ಣಪ್ಪ ಅವರು ಮೂರು ಬಾರಿ ಇದೇ ಕ್ಷೇತ್ರದಿಂದ ಗೆದ್ದಿದ್ದರು.
ರೇಷ್ಮೆ, ತರಕಾರಿ ಬೆಳೆ, ದ್ರಾಕ್ಷಿ ಪ್ರಧಾನ ಬೆಳೆಗಳಾದ ಚಿಕ್ಕಬಳ್ಳಾಪುರದ ಕ್ಷೇತ್ರದ ಮೂಲ ಸಮಸ್ಯೆ ನೀರಿನದ್ದು. ಕಳೆದ ಲೋಕಸಭೆ ಚುನಾವಣೆಯಲ್ಲಿ ನೀರು ಪ್ರಧಾನ ಪಾತ್ರ ವಹಿಸಿದೆ. ವೀರಪ್ಪ ಮೊಯ್ಲಿ ಅವರು ಆತುರಾತುರವಾಗಿ ಮಾಡಿದ ಎತ್ತಿನಹೊಳೆ ಯೋಜನೆ ಶಂಕುಸ್ಥಾಪನೆ ಅವರನ್ನು ಎರಡನೇ ಬಾರಿಗೆ ಈ ಕ್ಷೇತ್ರದಿಂದ ಸಂಸದರನ್ನಾಗಿ ಆಯ್ಕೆ ಮಾಡಲು ಬಹುವಾಗಿ ಸಹಾಯ ಮಾಡಿತ್ತು. ಈ ಚುನಾವಣೆಯಲ್ಲೂ ಸಹ ನೀರು ಪ್ರಧಾನ ವಿಷಯ ಆಗಲಿದೆ. ಆ ನಂತರದ ಸ್ಥಾನ ಜಾತಿಗೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ 2014ರ ಚುನಾವಣೆ ವೇಳೆಗೆ 1,658,342 ಮತದಾರರಿದ್ದರು. ಪುರುಷರ ಸಂಖ್ಯೆ 843,740 ಇದ್ದಿದ್ದರೆ, ಮಹಿಳೆಯರು 814,602. ಅದರಲ್ಲಿ ಒಕ್ಕಲಿಗರ ಸಂಖ್ಯೆ ಹೆಚ್ಚು. ನಂತರದ ಸ್ಥಾನ ಪರಿಶಿಷ್ಟರಿಗೆ ಇಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಬಹು ಕಡಿಮೆ. ಒಕ್ಕಲಿಗರು ಬಹುಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ ಕೂಡ ಅನ್ಯ ಜಾತಿಯ ವೀರಪ್ಪ ಮೊಯ್ಲಿ ಅವರು ಎರಡು ಅವಧಿಗೆ ಗೆದ್ದಿದ್ದಾರೆ. ಇದು ಈ ಕ್ಷೇತ್ರದಲ್ಲಿನ ಕಾಂಗ್ರೆಸ್ನ ಬಲವನ್ನು, ವೀರಪ್ಪ ಮೊಯ್ಲಿ ಅವರ ಚತುರತೆಯನ್ನು ತೋರುತ್ತದೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸ್ಥೂಲ ಪರಿಚಯ
ಈಗಿನ ಸಿಎಂ ಕುಮಾರಸ್ವಾಮಿ ಅವರು ಕಳೆದ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರಬಲ ಅಭ್ಯರ್ಥಿ ಬಚ್ಚೇಗೌಡರನ್ನು ಸೋಲಿಸುವುದು ಅವರ ಉದ್ದೇಶವಾಗಿತ್ತು. ಅವರ ಉದ್ದೇಶ ಸಫಲವಾಯಿತು ಆದರೆ ಬಚ್ಚೇಗೌಡರ ಜೊತೆ ಕುಮಾರಸ್ವಾಮಿ ಅವರೂ ಸೋತರು. ವೀರಪ್ಪ ಮೊಯ್ಲಿ ಸರಳ ಅಂತರದಿಂದ ಸಂಸದರಾಗಿ ಆಯ್ಕೆ ಆದರು.
ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎನ್ನುವ ರೀತಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಿತ್ತಾಟದಿಂದ ಕಾಂಗ್ರೆಸ್ ಲಾಭ ಪಡೆದು ಜಯಭೇರಿ ಬಾರಿಸಿತು. ಕರ್ನಾಟದ ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯ್ಲಿ ಅವರು 424,800 ಮತಗಳಿಸಿದ್ದರೆ, ಅವರ ಸಮೀಪದ ಸ್ಪರ್ಧಿ ಬಚ್ಚೇಗೌಡ ಅವರು 415,280 ಮತ ಪಡೆದು ಕೇವಲ 9,520 ಮತಗಳ ಅಂತರದಿಂದ ಸೋತಿದ್ದರು. ಕ್ಷೇತ್ರದಲ್ಲಿ ಬಚ್ಚೇಗೌಡರಿಗೆ ಉತ್ತಮ ಹೆಸರಿದ್ದರೂ, ರಾಜಕೀಯದ ಮೇಲಾಟದಿಂದ ಅವರು ಸೋಲಬೇಕಾಯಿತು.
ಕಾಂಗ್ರೆಸ್ ಅಧಿಪತ್ಯವಿರುವ ಕಲಬುರಗಿ ಲೋಕಸಭಾ ಕ್ಷೇತ್ರದ ಪರಿಚಯ
2014ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ನೀರಿಗೆ ಬರವಿರುವ ನಾಡಿನಲ್ಲಿ ಶೇ.76ರಷ್ಟು ಮತದಾನವಾಗಿತ್ತು. ಇಲ್ಲಿ ಆಯ್ಕೆಯಾದವರು ತಮ್ಮ ಬಾಯಾರಿಕೆಯನ್ನು ನೀಗಿಸುತ್ತಾರೆ ಎಂಬ ಮಹದುದ್ದೇಶದಿಂದ ಭಾರೀ ಸಂಖ್ಯೆಯಲ್ಲಿ ಮತದಾರರು ಬಂದು ಮತ ಚಲಾಯಿಸಿದ್ದರು. ಇವರಲ್ಲಿ ಪುರುಷರು 653,492 ಇದ್ದರೆ, ಮಹಿಳೆಯರು 609,782. ಒಟ್ಟು 1,263,274 ಮತದಾರರು ಮತ ಚಲಾವಣೆ ಮಾಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದ್ದರು. ಆದರೆ, ಅವರಿಗೆ ನ್ಯಾಯ ಸಿಕ್ಕಿದೆಯಾ?
ತೆಲುಗು ಭಾಷಿಕರು ಹೆಚ್ಚಾಗಿರುವ ಈ ಕ್ಷೇತ್ರ 2,170,097 ಜನಸಂಖ್ಯೆ ಹೊಂದಿದೆ. ಇದರಲ್ಲಿ ಶೇ.70.85ರಷ್ಟು ಗ್ರಾಮೀಣ ಜನತೆ ಇದ್ದರೆ, ನಗರ ವಾಸಿಗಳ ಸಂಖ್ಯೆ ಕೇವಲ ಶೇ.29.15ರಷ್ಟು ಮಾತ್ರ. ಇವರಲ್ಲಿ ಪರಿಶಿಷ್ಟ ಜಾತಿಯವರು ಶೇ.21.89ರಷ್ಟಿದ್ದರೆ, ಪರಿಶಿಷ್ಟ ಪಂಗಡದವರು ಶೇ.7.82ರಷ್ಟಿದ್ದಾರೆ. ಗ್ರಾಮೀಣ ಪ್ರದೇಶದ ಜನತೆಯೇ ಇಲ್ಲಿನ ನಿರ್ಣಾಯಕ ಮತದಾರರು. ಅವರನ್ನು ಒಲಿಸಿಕೊಳ್ಳಲು ವಿಫಲರಾದರೆ ಸೋಲು ಕಟ್ಟಿಟ್ಟಬುತ್ತಿ. ಈ ನಿಟ್ಟಿನಲ್ಲಿ ಯಾವ ಪಕ್ಷ ಏನು ಸ್ಟ್ರಾಟಜಿ ರೂಪಿಸುತ್ತದೆ ಎಂದು ಕುತೂಹಲಕರ ಸಂಗತಿಯಾಗಿದೆ.
ಆದರೆ ಈ ಬಾರಿ ಮೊಯ್ಲಿ ಅವರಿಗೆ ಸುಲಭದ ಹಾದಿ ಇಲ್ಲ. ಎರಡು ಬಾರಿ ನಿರಾಸೆ ಅನುಭವಿಸಿರುವ ಬಿಜೆಪಿಯ ಬಚ್ಚೇಗೌಡರು ಹಿಂದಿಗಿಂತಲೂ ಹೆಚ್ಚಿನ ಪ್ರತಿರೋಧವನ್ನು ಈ ಚುನಾವಣೆಯಲ್ಲಿ ತೋರಲಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮೂಲಕ ಸ್ಪರ್ಧಿಸಿದರೆ ಬಿಜೆಪಿಗೆ ಮತ್ತೆ ಕಷ್ಟವಾಗುತ್ತೆ ಆದರೂ ಮೊಯ್ಲಿ ಅವರ ಪ್ರಭಾವ ಕ್ಷೇತ್ರದಲ್ಲಿ ಕಡಿಮೆ ಆಗಿರುವುದರಿಂದ ಬಿಜೆಪಿಗೆ ಈ ಬಾರಿ ಹೆಚ್ಚಿನ ಅವಕಾಶ ಇದೆ. ಸ್ಥಳೀಯ ಕಾಂಗ್ರೆಸ್ ಮುಖಂಡರು ಸಹ ಮೊಯ್ಲಿ ಅವರ ಬದಲಿಗೆ ಹೊಸ ಮುಖವನ್ನು ಅಥವಾ ಸ್ಥಳೀಯ ಮುಖಂಡರಿಗೆ ಈ ಬಾರಿ ಚುನಾವಣಾ ಟಿಕೆಟ್ ನೀಡಬೇಕೆನ್ನುವ ಬೇಡಿಕೆಯನ್ನು ಕೆಪಿಸಿಸಿಯ ಮುಂದಿಟ್ಟಿದ್ದಾರೆ. ಬಿಜೆಪಿ ಪರ ಬಚ್ಚೇಗೌಡರಿಗೆ ಟಿಕೆಟ್ ಬಹುತೇಕ ಖಾಯಂ ಆಗಿದೆ.
ಈ ಕ್ಷೇತ್ರದಲ್ಲಿ ವೀರಪ್ಪ ಮೊಯ್ಲಿ ಅವರು ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರೂ ಕ್ಷೇತ್ರದ ಹಿತಾಸಕ್ತಿಗೆ ಸಂಬಂಧಿಸಿದಂತೆ ಅವರ ಭಾಗವಹಿಸುವಿಕೆ ಕಡಿಮೆ ಎಂದೇ ಹೇಳಬಹುದು. ಸಂಸತ್ತಿನಲ್ಲಿ ಅವರ ಅಟೆಂಡನ್ಸ್ ಶೇ.89ರಷ್ಟು ಇದ್ದರೂ, ಇಡೀ 5 ವರ್ಷದಲ್ಲಿ ಅವರು ಕೇಳಿದ್ದು ಬರೀ 10 ಪ್ರಶ್ನೆಗಳು ಮಾತ್ರ. ಒಬ್ಬ ಹಿರಿಯ ಸಂಸದನಾಗಿ ಅವರು ಭಾಗವಹಿಸಿದ್ದು 22 ಚರ್ಚೆಗಳಲ್ಲಿ. ಇದರಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಚರ್ಚೆಗಳು ಶೇ.45.6ರಷ್ಟಾದರೆ, ರಾಷ್ಟ್ರಕ್ಕೆ ಸಂಬಂಧಿಸಿದ ಚರ್ಚೆಗಳು ಶೇ.63.8ರಷ್ಟು.
ಚಿಕ್ಕಬಳ್ಳಾಪುರ ಲೋಕಸಭಾ ವ್ಯಾಪ್ತಿಗೆ ಒಳಪಡುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಗೌರಿಬಿದನೂರು, ಚಿಕ್ಕಬಳ್ಳಾಪುರ, ಹೊಸಕೋಟೆ, ದೊಡ್ಡಬಳ್ಳಾಪುರಗಳಲ್ಲಿ ಕಾಂಗ್ರೆಸ್ ಗೆದ್ದಿದ್ದರೆ, ನೆಲಮಂಗಲ, ದೇವನಹಳ್ಳಿಗಳಲ್ಲಿ ಜೆಡಿಎಸ್ ಆಡಳಿತ ಇದೆ. ಯಲಹಂಕದಲ್ಲಿ ಬಿಜೆಪಿ ಗೆದ್ದಿದ್ದರೆ ಬಾಗೇಪಲ್ಲಿಯಲ್ಲಿ ಸ್ವತಂತ್ರ್ಯ ಅಭ್ಯರ್ಥಿ ಗೆದ್ದಿದ್ದಾರೆ. ಕಾಂಗ್ರೆಸ್ ಪಾರಮ್ಯ ಇದ್ದರೂ ಸಹ ಈ ಬಾರಿಯ ಚುನಾವಣೆಯಲ್ಲಿ ಮೂರು ಪಕ್ಷಗಳಿಗೆ ಸಮಾನ ಅವಕಾಶಗಳೇ ಇವೆ ಎಂದೇ ಹೇಳಬೇಕು.