ಮಗುವಿನ ನಾಮಕರಣವೆಂಬ ಸವಾಲು, ಖುಷಿ ಹಾಗೂ ಹುಡುಕಾಟ
"ನನ್ನ ತಾತನ ಹೆಸರನ್ನೇ ಮಗುವಿಗೆ ಇಡ್ತೀನಿ. ಅದನ್ನು ಈಗಾಗಲೇ ಬರ್ತ್ ಸರ್ಟಿಫಿಕೇಟ್ ನಲ್ಲಿ ಬರೆಸಿಯಾಗಿದೆ. ಈ ವಿಚಾರದಲ್ಲಿ ನನ್ನ ಮಾತೇ ಆಗಬೇಕು" ಎಂದು ಆತ ತನ್ನ ಪತ್ನಿ ಜತೆಗೆ ಹಟಕ್ಕೆ ಇಳಿದಿದ್ದ. "ಅದೆಲ್ಲ ಆಗಲ್ಲ. ನನ್ನ ಅಪ್ಪನಿಗೆ ಮೊಮ್ಮಗನನ್ನ ನೊಡಬೇಕು. ಅವನನ್ನು ಹೆಗಲ ಮೇಲೆ ಹೊತ್ತು ಆಡಿಸಬೇಕು ಎಂಬ ಆಸೆ ಇತ್ತು. ಅವರ ಹೆಸರೇ ಮಗುವಿಗೆ ಇಡೋಣ" ಆಕೆ ಕೂಡ ಹಟ ಬಿಡುವಂಥ ಸ್ಥಿತಿಯಲ್ಲಿ ಇರಲಿಲ್ಲ.
ಮಗುವಿಗೊಂದು ಹೆಸರು ಇಡುವ ನಾಮಕರಣ ಅನ್ನೋದು ದೊಡ್ಡ ಕಾರ್ಯಕ್ರಮವೂ ಆಗಿರಬಹುದು ಅಥವಾ ಮನೆ ಮಟ್ಟಿಗೆ ಕೂಡ ಮಾಡಬಹುದು. ಆದರೆ ಮಗುವಿಗೊಂದು ಹೆಸರು ಹುಡುಕುವುದು ಇದೆಯಲ್ಲಾ, ಅದೇ ಬಹಳ ಖುಷಿಯಾದ ಹಾಗೂ ಸವಾಲು ಮತ್ತು ಎಷ್ಟೋ ಸಲ ಮಾತು ಬಿಡುವಂಥ ಮಟ್ಟಕ್ಕೆ ಹೋಗಿಬಿಡುತ್ತದೆ.
ಹೆಂಡತಿ ಊರಿಗೆ ಹೋದರೆ ಎಂಬ ಅದ್ಭುತ ಸಬ್ಜೆಕ್ಟಿನ ಸುತ್ತ...
ಜನ್ಮರಾಶಿಗೆ ತಕ್ಕಂತೆ ಹೆಸರು ಇಡೋಣ ಅಂತ ನಿರ್ಧರಿಸಿ, ಜ್ಯೋತಿಷಿಗಳ ಬಳಿ ಹೋದರೆ, 'ಡ'ಯಿಂದ ಹೆಸರಿಡಬೇಕು ಅಂತ ಹೇಳಿಬಿಡ್ತಾರೆ. ಅದೇನು ಹೆಸರು ಇಡೋದು ಅಂತ ಫುಲ್ ತಲೆ ಕೆಡಿಸಿಕೊಂಡು ಕೊನೆಗೆ ಡಾಂಬಿಕೇಶ್ವರ ಅಂತ ದೇವರ ಹೆಸರನ್ನು ಇಟ್ಟರೆ, ಮಗ ದೊಡ್ಡವನಾದ ಮೇಲೆ ಅವಕಾಶ ಸಿಕ್ಕಾಗಲೆಲ್ಲ ಅದೆಂಥ ಹೆಸರಿಟ್ಟರಿ ಅಂತ ಬೈತಾನೆ ಇರ್ತಾನೆ.
ಗಂಡ- ಹೆಂಡತಿಯ ಹೆಸರಿಂದ ಒಂದಕ್ಷರ ಆರಿಸಿಕೊಂಡು ಮಗ ಅಥವಾ ಮಗಳಿಗೆ ಹೆಸರಿಡುವುದು ಕೂಡ ಒಂದು ವಿಧ. ಸ್ವಾತಿ ಹಾಗೂ ರಂಜನ್ ಗಂಡ-ಹೆಂಡತಿ ಮಗುವಿಗೆ ಸ್ವರ ಅಂತ ಹೆಸರಿಟ್ಟು ತೃಪ್ತರಾಗಿದ್ದಾರೆ.
ನೇರಳೆಯ ರಾಘವೇಂದ್ರ ಭಟ್ಟರು ಪೌರೋಹಿತ್ಯವನ್ನೇಕೆ ಬಿಟ್ಟರು?
ಆದರೆ, ಘನಶ್ಯಾಮರ ವಿಷಯದಲ್ಲಿ ಹಾಗಾಗಲಿಲ್ಲ. ಅವರಿಗೆ ಮಗನಿಗೆ ಹೃಷಿಕೇಶ ಎಂದು ಹೆಸರಿಡುವ ಇಚ್ಛೆ. ಪತ್ನಿ ಮಾಲಾ ಅವರಿಗೆ ಶ್ರೀರಾಮ ಎಂದು ಹೆಸರಿಡುವ ಆಸೆ. ಕೊನೆಗೆ ಗೆದ್ದಿದ್ದು ಘನಶ್ಯಾಮ್ ಹಠವೇ. "ಅವನು ಹುಟ್ಟಿದಾಗ ನಾನು ಎಂಥ ಚೆನ್ನಾಗಿರುವ ಹೆಸರು ಹೇಳಿದ್ದೆ. ಆಗ ಅದನ್ನು ಅವನು ಇಡಲಿಲ್ಲ" ಅಂತ ಘನಶ್ಯಾಮ್ ಅವರ ತಂಗಿ ಅಶ್ವಿನಿ ಅವರಿಗೂ ಸಿಟ್ಟು ಬಂದಿತ್ತು.
ಅರ್ಜೆಂಟ್ ಗೆ ಹೆಸರು ನೆನಪಿಗೆ ಬರಲ್ಲ
ಇನ್ನು ನಾಗೇಶ್ ಅವರು ತಮ್ಮ ಮಗನಿಗೆ ಪರಿತೋಷ್ ಗೌಡ ಅಂತ ಹೆಸರಿಟ್ಟಿದ್ದಾರೆ. ಅವರಿಗೇ ಆ ಹೆಸರು ಅರ್ಜೆಂಟ್ ಗೆ ನೆನಪಿಗೆ ಬರುವುದಿಲ್ಲ. ಆದರೆ ಹೋಮ್ ಮಿನಿಸ್ಟರ್ ಅವರು ಆಯ್ಕೆ ಮಾಡಿದ್ದು ಮತ್ತು ಹೊಸ ರೀತಿಯಲ್ಲಿ ಇರುವುದರಿಂದ ಅದೇ ಹೆಸರು ನಿಕ್ಕಿ ಮಾಡಿದ್ದಾರೆ. ನಿಮಗೂ ಪರಿಚಯ ಇರಬಹುದಾದ ಒಬ್ಬ ಲೇಖಕರ ಉದಾಹರಣೆ ಹೇಳ್ತೀನಿ ಕೇಳಿ. ತಮ್ಮ ಮಗನಿಗೆ ಅವರು ಇಟ್ಟಿರುವ ಹೆಸರು 'ಆದಿತ್ಯೋದಯ ಕರ್ಣ ರವಿ ಬೆಳಗೆರೆ'. ಹೌದು, ಇದು ಪತ್ರಕರ್ತ-ಲೇಖಕ ರವಿ ಬೆಳಗೆರೆ ಅವರ ಮಗ ಕರ್ಣ ಪೂರ್ತಿ ಹೆಸರು. ಅವರ ಹೆಸರನ್ನು ಪಾಸ್ ಪೋರ್ಟ್ ನಲ್ಲಿ ಇಂಗ್ಲಿಷ್ ನಲ್ಲಿ ಹೇಗೆ ಅಚ್ಚು ಹಾಕಿಸಿರಬಹುದು?
ಅಜ್ಜ- ಅಜ್ಜಿ ಹೆಸರೇ ಪುನರಾವರ್ತನೆ
ಮಲೆನಾಡಿನ ಭಾಗದಲ್ಲಿ ಸ್ವಲ್ಪ ವಿಭಿನ್ನ, ವಿಶಿಷ್ಟ ಅನಿಸುವ ಹೆಸರಿಡುತ್ತಾರೆ. ಕುವೆಂಪು ಅವರು ತಮ್ಮ ಮಗನಿಗೆ ಇಟ್ಟ ಹೆಸರು ಕೋಕಿಲೋದಯ ಚೈತ್ರ, ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ಮಗಳು ಹೂ ಪಟ್ಟಣಶೆಟ್ಟಿ. ಶಿರಾ ಮೂಲದ ಲೇಖಕರಾದ ಮಂಜುನಾಥ್ ಅವರು ತಮ್ಮ ಮಗಳಿಗೆ 'ಗಿಳಿ' ಅಂತ ಹೆಸರಿಟ್ಟಿದ್ದಾರೆ. ಸಂಖ್ಯಾಶಾಸ್ತ್ರ, ಜ್ಯೋತಿಷ್ಯ ಮತ್ತೊಂದು ಈ ಪರಿ ಜನರ ಮನ-ಮನೆಗಳ ಒಳಗೆ ಹೋಗದ ಕಾಲದಲ್ಲಿ ತಲೆಮಾರುಗಳ ಹಿರಿಯರ ಹೆಸರು ಹಾಗೇ ಪುನರಾವರ್ತನೆ ಆಗ್ತಿತ್ತು. ಅಜ್ಜಿ ಹೆಸರು ಮೊಮ್ಮಗಳಿಗೂ ತಾತನ ಹೆಸರು ಮೊಮ್ಮಗನಿಗೂ ಬಳುವಳಿಯಂತೆ ಬರುತ್ತಿತ್ತು.
ಆ ಊರಿನ ತುಂಬ ಅದೇ ಹೆಸರಿನವರು
ಇನ್ನು ಊರ ದೇವರ ಹೆಸರ ಆ ಇಡೀ ಊರಿನ ಮಂದಿಯದಾಗಿರುತ್ತಿತ್ತು. ಈಗಲೂ ಚಳ್ಳಕೆರೆ ಸುತ್ತಮುತ್ತ ತಿಪ್ಪೇಸ್ವಾಮಿ ಅನ್ನೋ ಹೆಸರು ಬಹಳ ಸಾಮಾನ್ಯವಾಗಿ ಕೇಳಿಬರುತ್ತಿದೆ. ದೊಡ್ಡ ತಿಪ್ಪೇಸ್ವಾಮಿ, ಚಿಕ್ಕ ತಿಪ್ಪೇಸ್ವಾಮಿ ಅಂತ ಸ್ವಲ್ಪ ಸೇರ್ಪಡೆ ಆಗಬಹುದೇ ವಿನಾ ಎಲ್ಲರೂ ತಿಪ್ಪೇಸ್ವಾಮಿಯೇ. ಅಷ್ಟೇ ಏಕೆ, ಹೈದರಾಲಿ ತಿಪ್ಪೇಸ್ವಾಮಿಗೆ ಹರಕೆ ಹೊತ್ತ ಮೇಲೆ ಟಿಪ್ಪು ಸುಲ್ತಾನ್ ಹುಟ್ಟಿದ್ದು. ಅಂದರೆ ಇದೇ ತಿಪ್ಪೇಸ್ವಾಮಿ ದೇವರ ಕೃಪೆಯಿಂದ. ಆತನ ಮೂಲ ಹೆಸರು 'ತಿಪ್ಪೇ ಸುಲ್ತಾನ್'. ಆ ನಂತರ ಆತ ಟಿಪ್ಪು ಸುಲ್ತಾನ್ ಆಗಿದ್ದು.
ಎಷ್ಟೊಂದು ಸಚಿನ್, ಶ್ರೀದೇವಿ, ಮಾಲಾಶ್ರೀ ಹೆಸರು!
ಇನ್ನೂ ಕೆಲವರಿಗೆ ತಾವು ಆರಾಧಿಸುವ, ಇಷ್ಟಪಡುವ ವ್ಯಕ್ತಿಗಳ ಹೆಸರನ್ನು ಮಕ್ಕಳಿಗೆ ಇಡಬೇಕು ಅನ್ನೋದು ಇಚ್ಛೆ. ಆ ಕಾರಣಕ್ಕೆ ಸಚಿನ್, ಶ್ರೀದೇವಿ, ಮಂಜುಳಾ, ಮಾಲಾಶ್ರೀ ಅನ್ನೋ ಹೆಸರುಗಳು ತುಂಬ ಜಾಸ್ತಿಯಾದವು. ಕೆಲವರಿಗೆ ತಮ್ಮ್ ನೆಚ್ಚಿನ ಲೇಖಕರ ಹೆಸರಿಡಬೇಕು ಅಂತ ಆಸೆಯಿರುತ್ತದೆ. ಹಾಗೊಬ್ಬರು ಇಟ್ಟಿರುವ ಹೆಸರು ನೈಜೀರಿಯಾ ಬರಹಗಾರ ಚಿನುವಾ ಅಚಿಬೆ. ತಮ್ಮ ಮಗನಿಗೆ ಚಿನುವಾ ಅಂತ ಹೆಸರಿಟ್ಟಿದ್ದಾರೆ. ಆದರೆ ಮಕ್ಕಳು ಬೆಳೆದಂತೆ, ತಮ್ಮದೇ ವಯಸ್ಸಿನವರ ಜತೆಗೆ ಆಟವಾಡುವಾಗ ತಾವು ಇಷ್ಟಪಡುವ ಹೆಸರಿನಿಂದ ಕರೆಸಿಕೊಳ್ಳಲು ಇಷ್ಟಪಡುತ್ತವೆ. ಎಷ್ಟು ಖರ್ಚು ಮಾಡಿ, ಎಷ್ಟು ಅದ್ಧೂರಿಯಾಗಿ ನಾಮಕರಣ ಮಾಡಿದ್ದರೇನು, ಆ ಮಗುವಿಗೆ ಹೆಸರು ಇಷ್ಟವಾಯಿತಾ ಅಂತ ಕೇಳುವುದು ಸಾಧ್ಯವಿದೆಯಾ?