ಉಗ್ರರ ಪಾಲಿನ ಸಿಂಹಸ್ವಪ್ನ ಆಫ್ರಿಕನ್ನರ ಪಾಲಿನ ‘ಚೆಗುವಾರ’ ಇನ್ನಿಲ್ಲ
ಅದು ಉಗ್ರರ ಪಾಲಿನ ಸ್ವರ್ಗ, ಉಗ್ರರೇ ತುಂಬಿ ತುಳುಕುವ ಆಫ್ರಿಕಾದ ಪ್ರದೇಶ. ಅಂಥ ಜಾಗದಲ್ಲಿ ಹೊಸ ನಾಯಕತ್ವ ಕಟ್ಟಿ, ಸರ್ವಾಧಿಕಾರಿಯನ್ನು ತೊಲಗಿಸಿ ಪ್ರಜೆಗಳ ಪಾಲಿಗೆ ಹೀರೋ ಆಗಿದ್ದವನನ್ನು ಬಂಡುಕೋರರ ಗುಂಪು ಕೊಂದು ಹಾಕಿದೆ. ಹೌದು, ಇದು ಛಾದ್ ದೇಶದ ಅಧ್ಯಕ್ಷನ ಕರುಣಾಜನಕ ಸಾವಿನ ಕಥೆ.
ಆಫ್ರಿಕಾದ ರಾಜಕೀಯವೇ ರಕ್ತಸಿಕ್ತ. ಅದರಲ್ಲೂ ಮಧ್ಯ ಹಾಗೂ ಉತ್ತರ ಆಫ್ರಿಕಾ ಭಾಗ ಹಿಂಸೆಯನ್ನೇ ಹೊದ್ದು ಮಲಗಿದೆ. ಹೀಗಿರುವಾಗಲೇ ಉಗ್ರರ ನರಕದ ಮಧ್ಯೆ ಸ್ವರ್ಗದಂತಹ ದೇಶ ಸ್ಥಾಪಿಸಿ, ರಕ್ತಪಿಪಾಸುಗಳ ವಿರುದ್ಧ ಹೋರಾಡಿ ಜನರಿಗೆ ಧೈರ್ಯ ತುಂಬಿದ್ದ ನಾಯಕ ಇದ್ರಿಸ್ ಡೆಬಿ. ಆದರೆ ಬಂಡುಕೋರರ ಜೊತೆಗಿನ ಕಾಳಗದಲ್ಲಿ ಇದ್ರಿಸ್ ಡೆಬಿ ಮೃತಪಟ್ಟ ಸುದ್ದಿ ಆಫ್ರಿಕಾದ ದೇಶಗಳಿಗೆ ದೊಡ್ಡ ಶಾಕ್ ನೀಡಿದೆ.
ಉಗ್ರರ ಕೂಪವಾಗಿರುವ ನೈಜೀರಿಯಾ, ಲಿಬಿಯಾ ಸೇರಿದಂತೆ ಛಾದ್ನ ಮತ್ತಿತರ ನೆರೆಯ ರಾಷ್ಟ್ರಗಳಲ್ಲೂ ಶೋಕ ಮಡುಗಟ್ಟಿದೆ. 3 ದಶಕಗಳ ಕಾಲ ಛಾದ್ ಅಧ್ಯಕ್ಷರಾಗಿ ಆಳಿದ್ದ ಇದ್ರಿಸ್ ಡೆಬಿ, ಬಂಡುಕೋರರ ವಿರುದ್ಧ ಕಾಳಗಕ್ಕೆ ಇಳಿದಿದ್ದರು. ಆದರೆ ಏಪ್ರಿಲ್ 11ರ ಛಾದ್ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಬಿ ಗೆಲುವನ್ನು ಅಧಿಕೃತವಾಗಿ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಇದ್ರಿಸ್ ಡೆಬಿ ಸಾವಿನ ಸುದ್ದಿ ಹೊರಬಿದ್ದಿದೆ.
ಸರ್ವಾಧಿಕಾರಿ ವಿರುದ್ಧ ಹೋರಾಡಿದ್ದ ವೀರ
ಛಾದ್ ದೇಶದ ಸರ್ವಾಧಿಕಾರಿ ಆಡಳಿತದ ವಿರುದ್ಧ ದಂಗೆ ಎದ್ದು ಮಧ್ಯ ಹಾಗೂ ಉತ್ತರ ಆಫ್ರಿಕಾದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದ್ದು ಇದೇ ಇದ್ರಿಸ್ ಡೆಬಿ. ಇದು ಥೇಟ್ ಕ್ಯೂಬಾ ಹೋರಾಟವನ್ನೇ ನೆಪಿಸುತ್ತದೆ. ಅಲ್ಲಿ ಚೆಗುವಾರನ ಸೇನೆ ಸರ್ವಾಧಿಕಾರಿ ಫಲ್ಜೆಂಸಿಯೋ ಬಟಿಸ್ಟಾ ವಿರುದ್ಧ ಹೋರಾಟ ನಡೆಸಿದ್ದರೆ, ಛಾದ್ನಲ್ಲಿ ಹಿಸ್ಸೇನ್ ಹೆಬ್ರೆ ವಿರುದ್ಧ ಇದ್ರಿಸ್ ಡೆಬಿಯ ಸೇನೆ ಗೆಲುವು ಸಾಧಿಸಿತ್ತು. 1990ರಲ್ಲಿ ಮೊದಲ ಬಾರಿಗೆ ಛಾದ್ನ ಅಧ್ಯಕ್ಷೀಯ ಪಟ್ಟ ಅಲಂಕರಿಸಿದ್ದ ಡೆಬಿ ತಂದಿದ್ದ ಸುಧಾರಣೆಗಳು ನಿಜಕ್ಕೂ ರೋಚಕ ಹಾಗೂ ಆಫ್ರಿಕಾ ಜನರಿಗೆ ಹೊಸ ಹುರುಪು ತಂದಿದ್ದವು. ಆದರೆ ಆಫ್ರಿಕನ್ನರ ಪಾಲಿನ ‘ಚೆಗುವಾರ' ಈಗ ನೆನಪು ಮಾತ್ರ.
ಉತ್ತರಕ್ಕೆ ಹೋಗಿದ್ದು ಏಕೆ..?
ಛಾದ್ನ ಅಕ್ಕಪಕ್ಕದ ದೇಶಗಳಲ್ಲಿ ಉಗ್ರರು ಫುಲ್ ಆಕ್ಟಿವ್ ಆಗಿದ್ದಾರೆ. ಅದರಲ್ಲೂ ನೈಜೀರಿಯಾ, ಲಿಬಿಯಾದ ಗಡಿಗಳು ಉಗ್ರರ ಪಾಲಿನ ಸ್ವರ್ಗ. ಹೀಗಿರುವಾಗಲೇ ಛಾದ್ನ ಉತ್ತರದ ಗಡಿಯಲ್ಲಿ ಇದ್ರಿಸ್ ಡೆಬಿಯ ವಿರುದ್ಧ ಕುತಂತ್ರ ರೂಪಿಸಲಾಗಿತ್ತು. ಬಂಡುಕೋರರು ಛಾದ್ನ ನೆರೆಯ ರಾಷ್ಟ್ರವಾದ ಲಿಬಿಯಾದಲ್ಲಿ ತರಬೇತಿ ಪಡೆದು ಶಸ್ತ್ರಸಜ್ಜಿತರಾಗಿ ಉತ್ತರದ ಗಡಿಯೊಳಗೆ ನುಗ್ಗಿದ್ದರು. ಇವರನ್ನು ಎದುರಿಸಲು ಇದ್ರಿಸ್ ಡೆಬಿ ನೇರವಾಗಿ ಉತ್ತರಕ್ಕೆ ನುಗ್ಗಿದ್ದರು. ಆದರೆ ಇದೇ ನಿರ್ಧಾರ ಇದ್ರಿಸ್ ಡೆಬಿ ಜೀವಕ್ಕೆ ಮುಳುವಾಗಿತ್ತು. ಬಂಡುಕೋರರು ಇದ್ರಿಸ್ ಡೆಬಿ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.
ನೆರೆ ರಾಷ್ಟ್ರಗಳಿಗೆ ಹೀರೋ..!
ನಿಮಗೆ ನೆನಪಿರಬಹುದು, ನೈಜೀರಿಯಾದಲ್ಲಿ ಹೇಗೆ ಬೊಕೊ ಹರಾಮ್ ಉಗ್ರರು ನೆತ್ತರು ಹರಿಸುತ್ತಿದ್ದಾರೆಂದು. ಇಂತಹ ರಾಕ್ಷಸರ ವಿರುದ್ಧದ ಹೋರಾಟದಲ್ಲಿ ನೈಜೀರಿಯಾಗೆ ಸಾಥ್ ಕೊಟ್ಟವರು ಇದ್ರಿಸ್ ಡೆಬಿ. ಉಗ್ರರನ್ನು ಸದೆಬಡಿದು, ಶಾಂತ ವಾತಾವರಣ ನಿರ್ಮಾಣ ಮಾಡಲು ಇದ್ರಿಸ್ ಡೆಬಿ ಸಾಕಷ್ಟು ಶ್ರಮ ವಹಿಸಿದ್ದರು. ಇದೇ ಕಾರಣಕ್ಕೆ ಬೊಕೊ ಹರಾಮ್ ಉಗ್ರರ ವಿರೋಧವನ್ನೂ ಕಟ್ಟಿಕೊಂಡಿದ್ದರು ಡೆಬಿ. ಆದರೆ ಯಾವುದಕ್ಕೂ ಕೇರ್ ಮಾಡದೆ, ಉಗ್ರರ ವಿರುದ್ಧದ ಹೋರಾಟದಲ್ಲಿ ಛಾದ್ ಸೇನೆ ನೆರವಾಗಿತ್ತು. ಛಾದ್ ಸೇನೆಯ ಮುಖ್ಯಸ್ಥನಾಗಿ, ಛಾದ್ನ ಅಧ್ಯಕ್ಷನಾಗಿ ಇದ್ರಿಸ್ ಡೆಬಿ ಉಗ್ರರ ವಿರುದ್ಧ ಸಮರ ಸಾರಿದ್ದರು. ಆದರೆ ಅದೇ ಉಗ್ರರ ಕೈಯಲ್ಲೀಗ ನಿರ್ದಯವಾಗಿ ಕೊಲೆಯಾಗಿದ್ದಾರೆ ಇದ್ರಿಸ್ ಡೆಬಿ.
Recommended Video
ಆಫ್ರಿಕಾದಲ್ಲಿ ಅಲ್ಲೋಲ ಕಲ್ಲೋಲ..?
ಇದ್ರಿಸ್ ಡೆಬಿ ಹತ್ಯೆ ಸುದ್ದಿಯನ್ನು ಆಫ್ರಿಕಾದ ರಾಷ್ಟ್ರಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದು ದೊಡ್ಡ ಆಘಾತ ನೀಡಿದ್ದು, ಉಗ್ರರ ಅಟ್ಟಹಾಸಕ್ಕೆ ಮತ್ತೊಮ್ಮೆ ವೇದಿಕೆ ಸಿದ್ಧವಾದಂತಾಗಿದೆ. ಅದರಲ್ಲೂ ಮಧ್ಯ ಹಾಗೂ ಉತ್ತರದ ಭಾಗಗಳಲ್ಲಿ ಮತ್ತೊಮ್ಮೆ ಆತಂಕ ಮಡುಗಟ್ಟಿದೆ. ಬೊಕೊ ಹರಾಮಿಗಳು ಬಾಲ ಬಿಚ್ಚಿದರೆ ಆಫ್ರಿಕಾ ಖಂಡದ ಬಡ ರಾಷ್ಟ್ರಗಳ ಪರಿಸ್ಥಿತಿ ಮತ್ತಷ್ಟು ಅಲ್ಲೋಲ ಕಲ್ಲೋಲವಾಗಲಿದೆ. ಅಂತಾರಾಷ್ಟ್ರೀಯ ಸಮುದಾಯಗಳು ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿವೆ. ಉಗ್ರರಿಗೆ ಖೆಡ್ಡಾ ತೋಡಲು ಈಗಾಲಾದರೂ ಆಫ್ರಿಕಾ ಖಂಡ ಒಂದಾಗಬೇಕಿದೆ.