Profile: ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಬಗ್ಗೆ ನಿಮಗೆಷ್ಟು ಗೊತ್ತು?
ನವದೆಹಲಿ, ಜುಲೈ 07: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸವಾಲು ಎದುರಿಸುತ್ತಿರುವ ಸಂದರ್ಭದಲ್ಲಿ ದೇಶದ ಆರೋಗ್ಯ ಸಚಿವಾಲಯದ ಜವಾಬ್ದಾರಿಯನ್ನು ರಾಜ್ಯಸಭೆ ಸದಸ್ಯ ಮನ್ಸುಖ್ ಮಾಂಡವೀಯಾ ಹೆಗಲಿಗೆ ವಹಿಸಲಾಗಿದೆ. ಆರೋಗ್ಯ ಖಾತೆ ಜೊತೆಗೆ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆಯನ್ನು ನೀಡಲಾಗಿದೆ.
ದೇಶದ ರಾಜಕಾರಣದಲ್ಲಿ ಸರಳ, ಸಜ್ಜನ, ಜನಸ್ನೇಹಿ ಸ್ವಭಾವದಿಂದಲೇ ಪ್ರಸಿದ್ಧರಾಗಿರುವ ಮನ್ಸುಖ್ ಮಾಂಡವೀಯಾ ತಮ್ಮ ಸೌಮ್ಯಸ್ವಭಾವದಿಂದಲೇ ಸಾಕಷ್ಟು ಗಮನ ಸೆಳೆಯುತ್ತಾರೆ. ಕೇಂದ್ರ ಸಂಸತ್ ಕಲಾಪಗಳು ನಡೆಯುತ್ತಿರುವ ಸಂದರ್ಭದಲ್ಲಿ ಸೈಕಲ್ ಏರಿ ಬರುವುದು ಇವರ ಸರಳತೆಗೆ ಹಿಡಿದ ಕೈಗನ್ನಡಿ ಆಗಿದೆ.
ಭಾರತದ ನೂತನ ಆರೋಗ್ಯ ಸಚಿವರಾಗಿ ಮನ್ಸುಖ್ ಮಾಂಡವೀಯಾ
ಗುಜರಾತಿನಿಂದ ರಾಜ್ಯಸಭೆ ಸದಸ್ಯರಾಗಿ ಆಯ್ಕೆ ಆಗಿರುವ ಮನ್ಸುಖ್ ಮಾಂಡವೀಯಾ ಪಾದಯಾತ್ರೆಗಳ ಮೂಲಕ ಜಾಗೃತಿ ಮೂಡಿಸಿ ಜನಮನ ಸೆಳೆದಿದ್ದಾರೆ. ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಕಾರ್ಯದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಮಹಿಳಾ ಮುಟ್ಟಿನ ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ಸುರಕ್ಷತಾ ಕ್ರಮಗಳು ಹಾಗೂ ನೀಡಿರುವ ಕೊಡುಗೆಯನ್ನು ಗುರಿತಿಸಿ ಯುನಿಸೆಫ್ ಮತ್ತು ಇತರ ಸಂಸ್ಥೆಗಳು ಗೌರವಿಸಿವೆ. ಮನ್ಸುಖ್ ಮಾಂಡವೀಯಾ ಬಾಲ್ಯ, ಶಿಕ್ಷಣ, ರಾಜಕೀಯ ಬದುಕು ಹಾಗೂ ನಡೆದು ಬಂದ ದಾರಿಯ ಕುರಿತು ಒಂದು ವ್ಯಕ್ತಿಚಿತ್ರಕ್ಕಾಗಿ ಮುಂದೆ ಓದಿ.
ಮನ್ಸುಖ್ ಮಾಂಡವೀಯಾ ಬಾಲ್ಯ:
ಗುಜರಾತ್ ಭಾವಾನಗರ್ ಜಿಲ್ಲೆಯ ಪಲಿತಾನ ತಾಲೂಕಿನ ಹಾನೋಲ್ ಎಂಬ ಪುಟ್ಟ ಗ್ರಾಮದಲ್ಲಿ 1972ರ ಜೂನ್ 1ರಂದು ಮನ್ಸುಖ್ ಮಾಂಡವೀಯಾ ಜನಿಸುತ್ತಾರೆ. ಮಧ್ಯಮವರ್ಗದ ಕುಟುಂಬದಲ್ಲಿ ಹಿರಿಯನಾಗಿ ಜನಿಸಿದ ಇವರಿಗೆ ಮೂವರು ಸಹೋದರರಿದ್ದಾರೆ. ಹಾನೋಲ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆರಂಭಿಕ ಶಿಕ್ಷಣವನ್ನು ಪಡೆಯುತ್ತಾರೆ. ನಂತರ ಸೋನಾಗಢ್ ಗುರುಕುಲದಲ್ಲಿ ಪ್ರೌಢಶಿಕ್ಷಣವನ್ನು ಪೂರ್ಣಗೊಳಿಸುತ್ತಾರೆ.
ಮೋದಿ ಸರ್ಕಾರ್ 2.0: ಯಾರಿಗೆ ಯಾವ ಖಾತೆ?
ಭಾವಾನಗರ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆದುಕೊಳ್ಳುತ್ತಾರೆ. ಜನಸೇವೆಯ ಕನಸು ಕಂಡಿದ್ದ ಮನ್ಸುಖ್ ಮಾಂಡವೀಯಾ, 1992ರಲ್ಲಿ ತಮ್ಮ 20ನೇ ವಯಸ್ಸಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸೇರಿಕೊಳ್ಳುತ್ತಾರೆ. ತಮ್ಮ ಸಂಘಟನಾ ವೈಖರಿಯಿಂದ ಗುರುತಿಸಿಕೊಂಡ ಮನ್ಸುಖ್ ಗುಜರಾತಿನಲ್ಲಿ ರಾಜ್ಯ ಎಬಿವಿಪಿ ಕಾರ್ಯನಿರ್ವಾಹಕ ಸಮಿತಿ ಸದಸ್ಯರಾಗುತ್ತಾರೆ.
ಮನ್ಸುಖ್ ಮಾಂಡವೀಯ ರಾಜಕೀಯ ಬದುಕು:
ಯುವ ಮೋರ್ಚಾ ಮುಖಂಡರಾಗಿ ರಾಜಕೀಯ ಬದುಕು ಆರಂಭಿಸಿದ ಮನ್ಸುಖ್ ಮಾಂಡವೀಯ ತಮ್ಮ ಹಾದಿಯಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಪಲಿತಾನ ತಾಲೂಕಿನ ಬಿಜೆಪಿ ಘಟಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು 2002ರಲ್ಲಿ ಮೊದಲ ಬಾರಿಗೆ ಪಲಿತಾನ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗುತ್ತಾರೆ. ಗುಜರಾತಿನ ಅತಿಚಿಕ್ಕ ವಯಸ್ಸಿನ ಶಾಸಕರು ಎಂಬ ಹಿರಿಮೆ ಮನ್ಸುಖ್ ಮಾಂಡವೀಯ ಹೆಸರಿನಲ್ಲಿದೆ. ಇವರ ರಾಜಕೀಯ ಬದುಕಿನ ಮತ್ತಷ್ಟು ಪ್ರಮುಖ ಘಟ್ಟಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
- 2002-07 ರವರೆಗೆ ಪಲಿತಾನ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆ
- 2011-2012: ಗುಜರಾತ್ ಆಗ್ರೋ ಇಂಡಸ್ಟ್ರೀಸ್ ಕಾರ್ಪೊರೇಶನ್ ಲಿಮಿಟೆಡ್ ಅಧ್ಯಕ್ಷರಾಗಿ ಸೇವೆ
- 2012-2018: ರಾಜ್ಯಸಭಾ ಸದಸ್ಯರಾಗಿ ಆಯ್ಕೆ
- 2013: ಗುಜರಾತ್ನ ಬಿಜೆಪಿಯ ಕಿರಿಯ ರಾಜ್ಯ ಕಾರ್ಯದರ್ಶಿ
- 2015: ಗುಜರಾತ್ನ ಬಿಜೆಪಿಯ ಪ್ರಧಾನ ಕಾರ್ಯದರ್ಶಿ
- 2016-2019: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ, ಹಡಗು ಸಚಿವಾಲಯ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
- 2018: ರಾಜ್ಯಸಭಾ ಸದಸ್ಯರಾಗಿ ಮರು ಆಯ್ಕೆಯಾದರು
- 2019: ಸಾಗಣೆಗೆ ರಾಜ್ಯ ಸಚಿವರು (ಸ್ವತಂತ್ರ ಶುಲ್ಕ) ಮತ್ತು ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವರು
ಗುಜರಾತಿನ ಕಿರಿಯ ಶಾಸಕರ ಹೋರಾಟದ ಹಾದಿ:
ಗುಜರಾತಿನ ಪಲಿತಾನ ವಿಧಾನಸಭಾ ಕ್ಷೇತ್ರದಿಂದ 2002ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಮನ್ಸುಖ್ ಮಾಂಡವೀಯ ತಮ್ಮ ಹೋರಾಟ ಮನೋಭಾವದಿಂದಲೇ ಜನರಿಗೆ ಹೆಚ್ಚು ಹತ್ತಿರವಾಗಿದ್ದವರು. 2004ರಲ್ಲಿ ಭೇಟಿ ಬಚಾವೋ, ಭೇಟಿ ಪಡಾವೋ ಧ್ಯೇಯದೊಂದಿಗೆ 'ಕನ್ಯಾ ಕೇಲವಾಣಿ ಜ್ಯೋತ್ ಪಾದಯಾತ್ರೆ'ಯನ್ನು ನಡೆಸಿದರು. 123 ಕಿಲೋ ಮೀಟರ್ ದೂರದ ಪಾದಯಾತ್ರೆಯಲ್ಲಿ ಬುಡಕಟ್ಟು ಮತ್ತು ಹಿಂದುಳಿತ ಜನಾಂಗದವರು ವಾಸವಿರುವ ತಮ್ಮ ಕ್ಷೇತ್ರದ 43 ಗ್ರಾಮಗಳಿಗೆ ಭೇಟಿ ನೀಡಿದರು. 2006ರಲ್ಲಿ ಮತ್ತೊಮ್ಮೆ ಪಾದಯಾತ್ರೆ ನಡೆಸಿದ 127 ಕಿಲೋ ಮೀಟರ್ ಸುತ್ತಿ 52 ಗ್ರಾಮಗಳಿಗೆ ಭೇಟಿ ನೀಡಿದರು. ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಮತ್ತು ದುಶ್ಚಟಗಳನ್ನು ತೊಡೆದು ಹಾಕುವ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಿದರು.